Advertisement

ಅಂಬಿ ಕುರಿತು ಆಪ್ತರ ಮಾತು

11:40 AM Nov 25, 2018 | |

ಒಂದು ಬಾರಿ ಕಾರ್ಯಕ್ರಮವೊಂದರ ನಿರೂಪಣೆ ಮುಗಿಸಿ ಹೊರಬರುತ್ತಿದೆ. ಆಗ ಅಂಬರೀಶ್‌ ಅವರೇ ನನ್ನನ್ನು ಕರೆದು, ಏ ಅಪರ್ಣಾ, ನನ್ನಲ್ಲೇಕೆ ಮಾತಾಡಿಸಿಲ್ಲ, ನನ್ನನ್ನೇನು ಮರೆತೇ ಬಿಟ್ಯಾ ಎಂದು ಪ್ರಶ್ನಿಸುತ್ತಾ ಬಳಿ ಬಂದರು. ಅವರು ನನ್ನನ್ನು ಗುರುತಿಸಿ, ಮಾತನಾಡಿಸಿದ್ದು ನನಗೆ ಅಚ್ಚರಿ ಮೂಡಿಸಿತ್ತು. ಆ ದಿನವನ್ನು ಎಂದಿಗೂ ಮರೆಯಲಾಗದು.
-ಅಪರ್ಣಾ, ನಟಿ/ನಿರೂಪಕಿ

Advertisement

ವಿಷ್ಣುವರ್ಧನ್‌, ಅಂಬರೀಶ್‌ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದೆವು. ಮೊದಲು ವಿಷ್ಣು ಅಗಲಿದರು, ಈಗ ಅಂಬರೀಶ್‌ ಕೂಡ ಇಹಲೋಕ ತ್ಯಜಿಸಿದರು. ಅತ್ಯುತ್ತಮ ಸ್ನೇಹಿತರನ್ನು ಕಳೆದುಕೊಂಡ ನನಗೆ ಆಘಾತವಾಗಿದೆ.
-ರಾಜೇಂದ್ರ ಸಿಂಗ್‌ ಬಾಬು, ನಿರ್ದೇಶಕರು

ಅಂಬರೀಶ್‌ ಅಜಾತಶತ್ರುವಾಗಿದ್ದರು. ಅವರನ್ನು ಕಳೆದುಕೊಂಡು ಚಿತ್ರರಂಗ ಅನಾಥವಾಗಿದೆ. ಅವರ ಜೊತೆಯಲ್ಲಿ 10-12 ಚಿತ್ರಗಳಲ್ಲಿ ನಟಿಸಿದ್ದೆ. ಅವರ ಜೊತೆ ಸ್ನೇಹ ಮೀರಿದ ಸಂಬಂಧವಿತ್ತು. ಅವರೊಬ್ಬ ಅದ್ಭುತ ವ್ಯಕ್ತಿ.
-ಅವಿನಾಶ್‌, ನಟ

ಅಂಬರೀಶ್‌ ಹೃದಯಶ್ರೀಮಂತಿಕೆಯುಳ್ಳ ವ್ಯಕ್ತಿ ಹಾಗೂ ಕಲಿಯುಗ ಕರ್ಣನಂತಿದ್ದರು. ಅವರು ಚುನಾವಣೆಗೆ ನಿಲ್ಲುವವರೆಗೆ ಮಾತ್ರ ಪಕ್ಷ. ಬಳಿಕ ಎಲ್ಲ ಜನರೂ ಅವರನ್ನು ಪ್ರೀತಿಸುತ್ತಿದ್ದರು. ವಿಷ್ಣುವರ್ಧನ್‌ ನಿಧನದಿಂದ ಮಾನಸಿಕವಾಗಿ ಕುಗ್ಗಿದ್ದರು.
-ತೇಜಸ್ವಿನಿ, ಬಿಜೆಪಿ ಎಂಎಲ್‌ಸಿ

ಅಂಬರೀಶ್‌ ನಿಧನದಿಂದ ಕನ್ನಡ ಚಿತ್ರರಂಗದ ಶಕ್ತಿ ಇಲ್ಲದಂತಾಗಿದೆ. ಅವರು ಎಲ್ಲರ ಪ್ರೀತಿ, ಸ್ನೇಹ ಸಂಪಾದಿಸಿದ್ದರು. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಅವರು.
-ರಾಮ್‌ಕುಮಾರ್‌, ನಟ

Advertisement

ಅಮರ…. ನೀವೆಂದೆಂದೂ ನಮಗೆ ಅಮರ….. ನಿಮ್ಮೊಂದಿಗಿನ ಒಡನಾಟ ಅಮರ… ನಿಮ್ಮೊಂದಿಗೆ ಕಳೆದ ದಿನಗಳು ಅಮರ….ನೆನಪುಗಳು ಅಮರ…ಚಿತ್ರರಂಗಕ್ಕೆ ನೀವು, ನಿಮ್ಮ ನೇರ ನಡೆ ನುಡಿಗಳು ಎಂದೆಂದೂ ಅಮರ..
-ಉಪೇಂದ್ರ, ನಟ

ಇದೊಂದು ದೊಡ್ಡ ಆಘಾತ, ಪದಗಳಲ್ಲಿ ಹೇಳಲಾಗುತ್ತಿಲ್ಲ. ನಾನು ಕೇಳಿದ ಸುದ್ದಿ ಸುಳ್ಳಾಗಿರಲಿ. ಅದ್ಭುತ ಗೆಳೆಯ ಅಂಬರೀಶ್‌ ನಮ್ಮನ್ನು ಅಗಲಿದ್ದಾರೆ ಎಂದು ಕೇಳಿ ಹೃದಯ ಒಡೆದುಹೋದಂತಾಗಿದೆ. ಸುಮ ಮತ್ತು ಅಭಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. 
-ಖುಷ್ಬೂ ಸುಂದರ್‌, ನಟಿ

ಅಂಬರೀಶ್‌ನಂಥ ಅದ್ಭುತ ಮನುಷ್ಯ, ಅತ್ಯತ್ತುಮ ಗೆಳೆಯನನ್ನು ಕಳೆದುಕೊಂಡಿದ್ದು ಅತ್ಯಂತ ದುಃಖದ ವಿಷಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ರಾಧಿಕಾ ಶರತ್‌ಕುಮಾರ್‌, ನಟಿ

ಪ್ರಖ್ಯಾತ ನಟ, ಮಾಜಿ ಸಂಸದ ಅಂಬರೀಶ್‌ ನಿಧನದ ಸುದ್ದಿ ಕೇಳಿ ನೋವಾಗಿದೆ. ಅವರ ಕುಟುಂಬ, ಕೋಟ್ಯಂತರ ಅಭಿಮಾನಿಗಳು ಮುಖ್ಯವಾಗಿ ಮಂಡ್ಯದ ಜನತೆಗೆ ನನ್ನ ಸಾಂತ್ವನ.
-ರಣ್‌ದೀಪ್‌ ಸುರ್ಜೆವಾಲ, ಕಾಂಗ್ರೆಸ್‌ ವಕ್ತಾರ

ಪುಟ್ಟಣ್ಣ ಕಣಗಾಲ್‌ ನಮಗೆಲ್ಲ ಪರಿಚಯಿಸಿದ್ದ “ಜಲೀಲ’ ಇನ್ನಿಲ್ಲ. ಅಂಬರೀಶ್‌(ಅಮರನಾಥ್‌)ರವರ ಆತ್ಮಕ್ಕೆ ಶಾಂತಿ ದೊರಕಲಿ.
-ಸುರೇಶ್‌ಕುಮಾರ್‌, ಬಿಜೆಪಿ ನಾಯಕ

ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್‌ನಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್‌ ರದ್ದುಗೊಳಿಸಿ, ಇಡೀ ತಂಡ ಆದಷ್ಟು ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.
-ದರ್ಶನ್‌ ತೂಗುದೀಪ, ನಟ

ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ, ನನ್ನ ಗೆಳೆಯ ಅಂಬರೀಶ್‌ ಅವರ ನಿಧನದ ಸುದ್ದಿ ತಿಳಿದು ತುಂಬಾ ನೋವಾಗಿದೆ. ಇವರ ಅಗಲಿಕೆಯಿಂದ ಕರ್ನಾಟಕವು ಸರಳ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ, ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ.
-ಕೆ.ಜೆ.ಜಾರ್ಜ್‌, ಸಚಿವ

ಚಿತ್ರರಂಗವನ್ನು ಅಂಬರೀಶ್‌ ಕಟ್ಟುನಿಟ್ಟಿನಲ್ಲಿ ಇಟ್ಟುಕೊಂಡಿದ್ದರು. ಮನೆಯ ಯಜಮಾನ ಇನ್ನಿಲ್ಲ. ಅಂಬರೀಶ್‌ ಪ್ರತಿಯೊಬ್ಬರ ಮನಸ್ಸಿನಲ್ಲೂ ನೆಲೆಸಿದ್ದರು. ಅವರು ಬೈದರೆ ಯಾರೂ ಬೇಜಾರಾಗುತ್ತಿರಲಿಲ್ಲ.
-ಸುಂದರ್‌ರಾಜ್‌, ನಟ

ಅಂಬಿ ಅವರೊಂದಿಗೆ ವೈಯಕ್ತಿಕ ಗೆಳೆತನ ಇತ್ತು. ನಾವು ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರು ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆಯುತ್ತಿದ್ದರು. ಎಷ್ಟೇ ತೊಂದರೆ ಇದ್ದರೂ ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆಯುತ್ತಿದ್ದರು.  ಸಾವಿನ ಕುರಿತು ಏನೂ ಹೇಳಲು ಆಗುತ್ತಿಲ್ಲ. ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿರುವುದು ವಿಷಾದಕರ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡ

ಕನ್ನಡ ಚಿತ್ರ ರಂಗದಲ್ಲಿ ಎಷ್ಟೋ ಮಂದಿಗೆ ಸಹಾಯ ಮಾಡಿದ್ದಾರೆ. ಯಾವಾಗಲೂ ನೇರ ನುಡಿಯಿಂದಲೇ ಇರುತ್ತಿದ್ದರು. ಯಾರಿಗೂ ಕ್ಯಾರೆ ಎನ್ನುತ್ತಿರಲಿಲ್ಲ. ಈ ಸಾವಿನಿಂದ ತುಂಬಾ ಬೇಜಾರಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದೇ ಒಂದು ಧ್ವನಿ. ಆ ಧ್ವನಿ ಇಲ್ಲದಾಯಿತು.
-ಜಗ್ಗೇಶ್‌, ಹಿರಿಯ ನಟ

ಗಂಭೀರ ಪರಿಸ್ಥಿತಿ ಇದೆ. ಅಂಬರೀಶ್‌ರ ಕುಟುಂಬದೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ಅವರ ಸಾವಿನಿಂದ ಇಡೀ ರಾಜ್ಯಕ್ಕೆ ನಷ್ಟವಾಗಿದೆ.
-ಡಿ.ಕೆ.ಶಿವಕುಮಾರ್‌, ಸಚಿವ

ಅಂಬರೀಷ್‌ ಅಂಕಲ್‌ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರು ಯಾವತ್ತೂ ನಮ್ಮ ಮನಸ್ಸಲ್ಲಿ ಉಳಿಯುತ್ತಾರೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ.
-ದಿವ್ಯಸ್ಪಂದನ/ರಮ್ಯಾ

ಮತ್ತೂಂದು ಆಘಾತಕಾರಿ ಸುದ್ದಿ. ಜಂಟಲ್‌ಮಾನ್‌ ನಟ, ಎಲ್ಲರ ಪ್ರೀತಿಪಾತ್ರರಾಗಿದ್ದ, ಕೇಂದ್ರದ ಮಾಜಿ ಸಚಿವ ಅಂಬರೀಷ್‌ ಅವರು ಇನ್ನಿಲ್ಲ. ತಮ್ಮ ಔದಾರ್ಯತೆಯಿಂದ ಹಲವರ ಬದುಕು ಬೆಳಗಿದ್ದ ನಾಯಕ.
-ಸದಾನಂದ ಗೌಡ, ಕೇಂದ್ರ ಸಚಿವ

ನಮ್ಮ ಪ್ರೀತಿಯ ನಾಯಕ, ರೆಬೆಲ್‌ ಸ್ಟಾರ್‌ ಅಂಬರೀಷ್‌ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಕರ್ನಾಟಕದ ಮೇರು ನಟ ಹಾಗೂ ಎಲ್ಲರ ಪ್ರೀತಿಪಾತ್ರ ವ್ಯಕ್ತಿ.
-ದಿನೇಶ್‌ ಗುಂಡೂರಾವ್‌

ಕನ್ನಡ ಚಿತ್ರ ರಂಗದ ಒಂದು ಯುಗಾಂತ್ಯ. ಅಂಬರೀಷ್‌ರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ.
-ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕಿ

ಹಿರಿಯ ನಟ, ರಾಜಕಾರಣಿ ಅಂಬರೀಷ್‌ರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ. ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟುಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಅಪಘಾತದ ನೋವನ್ನು ಜೀರ್ಣಿಸಿಕೊಳ್ಳುತ್ತಿರುವಾಗಲೇ ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್‌ ಅವರ ನಿಧನ ಆಘಾತವನ್ನುಂಟು ಮಾಡಿದೆ. ರಾಜ್ಯ ಹಾಗೂ ಮಂಡ್ಯದ ಪಾಲಿಗೆ ಇದು ಕರಾಳ ದಿನ. ಅಂಬರೀಶ್‌ ಅವರ ಕುಟುಂಬಕ್ಕೆ ಭಗವಂತ ನೋವನ್ನು ಸಹಿಸುವ ಶಕ್ತಿ ನೀಡಲಿ. ಚಿತ್ರರಂಗ ಹಾಗೂ ರಾಜ್ಯ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ.
-ಡಾ. ಜಿ. ಪರಮೇಶ್ವರ್‌, ಉಪಮುಖ್ಯಮಂತ್ರಿ

ಹಿರಿಯ ನಟ, ಮಾಜಿ ಸಚಿವ ಮತ್ತು ನನ್ನ ದೀರ್ಘ‌ಕಾಲದ ಗೆಳೆಯ ಅಂಬರೀಶ್‌ ಅವರ ಸಾವು ದಿಗ್ಭ್ರಮೆ ಉಂಟುಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯ ರಂಗಗಳೆರಡರಲ್ಲೂ ಜನಮನ ಗೆದ್ದ ನಾಯಕ ಅಂಬರೀಶ್‌. ನಿಜವಾದ ಅರ್ಥದಲ್ಲಿ ಅಜಾತಶತ್ರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

15 ದಿನಗಳ ಹಿಂದಷ್ಟೇ ಅಂಬರೀಶ್‌ರನ್ನು ಭೇಟಿಯಾಗಿದ್ದೆ. ಇದೀಗ ಅವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ಅವರು ಸ್ನೇಹ ಜೀವಿ. ವಿಷ್ಣು ಮತ್ತು ಅಂಬಿಯವರದ್ದು ಅಪರೂಪದ ಸ್ನೇಹ.
-ಭಾರತಿ ವಿಷ್ಣುವರ್ಧನ್‌, ನಟಿ

Advertisement

Udayavani is now on Telegram. Click here to join our channel and stay updated with the latest news.

Next