Advertisement

ಅನಧಿಕೃತ ಶಾಲೆಗಳ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಲಿ

12:46 AM Feb 15, 2023 | Team Udayavani |

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಕಾರ ರಾಜ್ಯದಲ್ಲಿ 1,316 ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಆತಂಕಕ್ಕೆ ಕಾರಣವಾಗುವ ಅಂಶವಾಗಿದೆ. ಅಂದರೆ ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು, ಇತರ ಪಠ್ಯಕ್ರಮದಲ್ಲಿ ಬೋಧನೆ ಮಾಡುತ್ತಿರುವ 95 ಶಾಲೆಗಳು, ಒಂದು ಮಾಧ್ಯಮಕ್ಕೆ ಅನುಮತಿ ಪಡೆದು ಮತ್ತೂಂದು ಮಾಧ್ಯಮದಲ್ಲಿ ಬೋಧಿಸುತ್ತಿರುವ 294 ಶಾಲೆಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಅನುಮತಿಯನ್ನೇ ಪಡೆಯದೆ 63 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಅಂಶಗಳು ಬಹಿರಂಗವಾಗಿವೆ.

Advertisement

ಇನ್ನೇನು ಕೆಲವೇ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದ್ದು, ಈ ಹೊತ್ತಿನಲ್ಲಿ ಅನಧಿಕೃತವಾಗಿ ಶಾಲೆ ನಡೆಸುತ್ತಿರುವ ಅಂಶ ಬಹಿರಂಗವಾಗಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂಥ ಹೊತ್ತಿನಲ್ಲಿ ಶಾಲೆಗಳ ಮೇಲೆ ಸರ್ಕಾರವೇನಾದರೂ ಕಠಿನ ಕ್ರಮ ಕೈಗೊಂಡರೆ ಮುಂದೇನು ಎಂಬುದು ಅವರ ಚಿಂತೆಗೆ ಕಾರಣ. ಹೀಗಾಗಿ ರಾಜ್ಯ ಸರಕಾರ ಮುಂದೇನು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಶೀಘ್ರದಲ್ಲೇ ಜನರಿಗೆ ತಿಳಿಸಿ ಹೇಳಬೇಕು.

ಈಗ ಪತ್ತೆಯಾಗಿರುವ ಒಟ್ಟು 1,316 ಶಾಲೆಗಳಲ್ಲಿ, ಬೆಂಗಳೂರಿನಲ್ಲೇ 871 ಶಾಲೆಗಳಿವೆ ಎಂಬುದು ಕಳವಳಕಾರಿ ವಿಚಾರ. ಬೆಂಗಳೂರು ದಕ್ಷಿಣದಲ್ಲಿ 386 ಶಾಲೆಗಳು ಮತ್ತು ಬೆಂಗಳೂರು ಉತ್ತರದಲ್ಲಿ 485 ಅನಧಿಕೃತ ಶಾಲೆಗಳು ಪತ್ತೆಯಾಗಿದೆ. ರಾಜ್ಯದ ಒಟ್ಟು ಅನಧಿಕೃತ ಶಾಲೆಗಳಲ್ಲಿ ಶೇ. 66 ಬೆಂಗಳೂರಿನಲ್ಲೇ ಇದೆ. ಉಳಿದಂತೆ ತುಮಕೂರು 109, ಬೆಂಗಳೂರು ಗ್ರಾಮಾಂತರ 66, ಚಿಕ್ಕಬಳ್ಳಾಪುರ 59, ಬೀದರ್‌ 50, ಕೋಲಾರ 32, ಚಿಕ್ಕಮಗಳೂರು 21, ಕಲಬುರಗಿ 17, ಧಾರವಾಡ 14, ಮಂಡ್ಯ ಜಿಲ್ಲೆಯಲ್ಲಿ 10 ಶಾಲೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಇದೆ. ವಿಶೇಷವೆಂದರೆ 14 ಜಿಲ್ಲೆಗಳಲ್ಲಿ ಒಂದೂ ಅನಧಿಕೃತ ಶಾಲೆ ಇಲ್ಲ ಎಂಬುದು ಸಮಾಧಾನದ ಸಂಗತಿ. ಅಂದರೆ ದಕ್ಷಿಣ ಕನ್ನಡ, ಗದಗ, ಶಿರಸಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಕೊಡಗು, ಕೊಪ್ಪಳ, ಯಾದಗಿರಿ, ವಿಜಯನಗರ, ರಾಮನಗರ, ದಾವಣಗೆರೆ, ಶಿವಮೊಗ್ಗ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳು ಕಂಡು ಬಂದಿಲ್ಲ.

ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ವಾಣಿಜ್ಯೀಕರಣಗೊಂಡಿದ್ದು, ಜನರೂ ಲಕ್ಷ ಲಕ್ಷ ಶುಲ್ಕ, ಡೊನೇಶನ್‌ ಪಾವತಿಸಿ ಶಾಲೆಗೆ ಸೇರಿಸಿರುತ್ತಾರೆ. ಈ ಅನಧಿಕೃತ ಶಾಲೆಯಲ್ಲಿ ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆಗಳೇನಾದರೂ ಇವೆಯೇ ಎಂಬ ಆತಂಕ ಜನರಲ್ಲಿ ಬರುವಂಥಾಗಬಾರದು. ಇದಕ್ಕೆ ಬದಲಾಗಿ, ಅನಧಿಕೃತವಾಗಿ ಶಾಲೆ ನಡೆಸುತ್ತಿರುವವರ ವಿವರಗಳನ್ನೂ ಬಹಿರಂಗ ಮಾಡಬೇಕು.

ಇದರ ಮಧ್ಯೆಯೇ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾಸಗಿ ಶಾಲೆಗಳ ನೋಂದಣಿ, ಮಾನ್ಯತೆ ನವೀಕರಣ ಹಾಗೂ ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮ ಸಂಯೋಜನೆಗೆ ನಿರಾಕ್ಷೇಪಣಾ ಪತ್ರ ಮಂಜೂರಾತಿ ಪ್ರಕ್ರಿಯೆಗಳಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವುದು ಉತ್ತಮ ನಿರ್ಧಾರ. ಅಲ್ಲದೆ ಸುಳ್ಳು ಮಾಹಿತಿ ನೀಡಿದಂತಹ ಶಾಲೆಗಳ ಮಾನ್ಯತೆಯನ್ನು 2 ವರ್ಷಗಳ ಅವಧಿಗೆ ಡಿಬಾರ್‌ ಮಾಡಲಿದೆ ಎಂಬ ವಿಚಾರವೂ ಸ್ವಾಗತಾರ್ಹವೇ ಆಗಿದೆ.

Advertisement

ಮೊದಲೇ ಹೇಳಿದ ಹಾಗೆ, ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಟ್ಟದ ಪರೀಕ್ಷೆಗಳು ಆರಂಭವಾಗಲಿವೆ. ಈ ಪರೀಕ್ಷೆಗಳು ಮುಗಿದ ಬಳಿಕ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ಶುರುವಾಗಲಿದೆ. ಈ ಬೇಸಗೆ ರಜೆಯ ಎರಡು ತಿಂಗಳ ಅವಧಿಯಲ್ಲಿ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿಯಮ ಮೀರಿ ಶಾಲೆ ನಡೆಸುತ್ತಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿಯೇ ಕಠಿನ ಕ್ರಮಕ್ಕೆ ಮುಂದಾಗಬೇಕು. ಸದ್ಯದ ಮಾಹಿತಿ ಪ್ರಕಾರ, ಶಾಲೆಗಳಿಗೆ ನೋಟಿಸ್‌ ನೀಡಲಾಗಿದ್ದು, ಪ್ರತಿಕ್ರಿಯೆ ಬಂದ ಬಳಿಕ ಕ್ರಮ ವಿಚಾರ ಎಂದು ಸರಕಾರ ಹೇಳುತ್ತಿದೆ. ಇಂಥ ಕ್ರಮಗಳು ತ್ವರಿತವಾಗಿ ನಡೆಯಬೇಕು. ಪೋಷಕರಲ್ಲೂ ಯಾವುದೇ ಕಾರಣಕ್ಕೂ ಗೊಂದಲವಾಗಬಾರದು.

Advertisement

Udayavani is now on Telegram. Click here to join our channel and stay updated with the latest news.

Next