Advertisement

ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಿ

09:31 PM Nov 29, 2019 | Team Udayavani |

ಚಿಕ್ಕಬಳ್ಳಾಪುರ: ಯಾವುದೇ ಪಕ್ಷ ಇರಲಿ, ಅಭ್ಯರ್ಥಿ ಆಗಿರಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನವನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಖರ್ಚು, ವೆಚ್ಚಗಳ ಮೇಲೆ ನಿಗಾ ವಹಿಸಿ, ಕಾಲಕಾಲಕ್ಕೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವರದಿ ಕೊಡಿ. ಉಪ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಿ..

Advertisement

ಇದು, ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ಪ್ರಯುಕ್ತ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ನೇಮಕಗೊಂಡಿರುವ ವಿಶೇಷ ಅಧಿಕಾರಿ ಹಾಗೂ ಖಡಕ್‌ ಐಎಎಸ್‌ ಅಧಿಕಾರಿ ಎಂದೇ ಖ್ಯಾತಿಯಾಗಿರುವ ಮುನೀಷ್‌ ಮೌದ್ಗಿಲ್‌, ಜಿಲ್ಲಾಡಳಿತ ಹಾಗೂ ಉಪ ಚುನಾವಣೆಗೆ ನೇಮಕಗೊಂಡಿರುವ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು. ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಶುಕ್ರವಾರ ಮಧ್ಯಾಹ್ನ ದಿಢೀರನೆ ಆಗಮಿಸಿ ಉಪ ಚುನಾವಣೆಯ ಸಿದ್ಧತೆಗಳ ಜೊತೆಗೆ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.

ನಿರ್ಲಕ್ಷ್ಯ ತೋರಿದರೆ ಕ್ರಮ: ಯಾವುದೇ ಲೋಪದೋಷಗಳು ಇಲ್ಲದಂತೆ ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸುವಂತೆ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ವಿವಿಧ ತಂಡಗಳ ಮುಖ್ಯಸ್ಥರಿಗೆ ಆದೇಶಿಸಿದರು. ನೀತಿ ಸಂಹಿತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿತಾಸಕ್ತಿಗೆ ಒಳಗಾಗದಿರಿ: ಸಭೆಯಲ್ಲಿ ಉಪ ಚುನಾವಣೆ ಸಂಬಂಧ ರಚಿಸಲಾಗಿರುವ ವಿವಿಧ ಮಾದರಿ ನೀತಿ ಸಂಹಿತೆಯ ಅನುಷ್ಠಾನ ತಂಡಗಳಾದ ಎಸ್‌ಎಸ್‌ಟಿ, ಎಫ್ಎಸ್‌ಟಿ, ಅಬಕಾರಿ ಹಾಗೂ ಇತರೆ ತಂಡಗಳ ಕಾರ್ಯ ಚಟುವಟಿಕೆಯನ್ನು ಪ್ರತಿ ದಿನದ ಮೇಲ್ವಿಚಾರಣೆ ಮಾಡುತ್ತೇನೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಹಿತಾಸಕ್ತಿಗೆ ಒಳಗಾಗದೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು.

ಉಪಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ 387 ರೇಡ್‌ಗಳನ್ನು ಮಾಡಲಾಗಿದ್ದು, 136 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಘೋರ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಸಭೆಯಲ್ಲಿ ಅಬಕಾರಿ ಇಲಾಖೆಯ ಉಪಆಯುಕ್ತರು ನರೇಂದ್ರ ಕುಮಾರ್‌ ಸಭೆಗೆ ತಿಳಿಸಿದರು.

Advertisement

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ಲತಾ, ಚುನಾವಣಾ ವೆಚ್ಚ ವೀಕ್ಷಕರಾದ ರಣವಿಜಯ್‌ಕುಮಾರ್‌, ಚುನಾವಣಾ ವೀಕ್ಷಕರಾದ ವೆಂಕಟಮುರಳಿ, ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ, ಉಪವಿಭಾಗಾಧಿಕಾರಿ ಎ.ಎನ್‌.ರಘುನಂದನ್‌, ಸಹಾಯಕ ಚುನಾವಣಾ ಅಧಿಕಾರಿಗಳಾದ ಕೆ.ನರಸಿಂಹಮೂರ್ತಿ, ಶ್ರೀನಿವಾಸ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಏಜೆಂಟರು ಉಪಸ್ಥಿತರಿದ್ದರು.

ದೂರುಗಳಿಗೆ 990009911 ಕರೆ ಮಾಡಿ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಚಾರವಾಗಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವಾ ಏಜೆಂಟರು ಹಾಗೂ ಸಾರ್ವಜನಿಕರು ದೂರುಗಳನ್ನು ನೀಡಬಹುದು. ಇದಕ್ಕಾಗಿ ದೂರವಾಣಿ ಸಂಖ್ಯೆ 990009911 ಗೆ ಸಂಪರ್ಕಿಸಬಹುದು ಎಂದು ಮಾದರಿ ನೀತಿ ಸಂಹಿತೆಯ ವಿಶೇಷ ಅಧಿಕಾರಿಗಳಾಗಿರುವ ಮುನೀಷ್‌ ಮೌದ್ಗಿಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next