Advertisement

ಟ್ಯಾಗೋರರ ಶಾಂತಿನಿಕೇತನ ಮಾದರಿ ಶಾಲೆ ; ಸರ್ವಾಂಗೀಣ ಶಿಕ್ಷಣದ ಮಡಿಲು

11:17 AM Jun 23, 2022 | Team Udayavani |

ಧಾರವಾಡ: ಈ ಶಾಲೆಯ ಕೊಠಡಿಗಳಿಗೆ ಬಾಗಿಲು ಮತ್ತು ಕದಗಳೇ ಇಲ್ಲ. ಮನೆಗೆಲಸ ಮಾಡದ ಮಕ್ಕಳಿಗೆ ಹೊಡೆಯಲು ಇಲ್ಲಿ ಕೋಲಿಲ್ಲ. ಮಕ್ಕಳಿಗೆ ಶಿಕ್ಷಕರು ಕೊಡುವ ದೊಡ್ಡ ಶಿಕ್ಷೆ ಮುಗುಳ್ನಗೆ ಮತ್ತು ಚಟಾಕಿಗಳು. ಮಕ್ಕಳಿಗೆ ಸಮಸ್ತ್ರದ ಹಂಗಿಲ್ಲ, ಶಿಸ್ತಿನ ನೆಪದಲ್ಲಿ ನೀಡುವ ಶಿಕ್ಷೆಗಳ ಸಂಗವೂ ಇಲ್ಲ. ಆದರೆ ಖಾದಿ ಧರಿಸುವುದು ಮಾತ್ರ ಕಡ್ಡಾಯ. ಒಟ್ಟಿನಲ್ಲಿ ಇದು ಟ್ಯಾಗೋರರ ಶಾಂತಿ ನಿಕೇತನದ ತುಣುಕು.

Advertisement

ಹೌದು. ಎಲ್‌ಕೆಜಿಗೆ 50 ಸಾವಿರ ಡೋನೇಷನ್‌ ಕೇಳುವ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಾವಿರ ಸಾವಿರ ಹಣ ಪೀಕುವ ಖಾಸಗಿ ಶಾಲೆಗಳ ಬಗ್ಗೆ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಸರ್ವಾಂಗೀಣ ಶಿಕ್ಷಣ, ಮಕ್ಕಳ ಮನೋವಿಕಾಸ, ಹೊಸ ಆಯಾಮಗಳಿಗೆ ಮಕ್ಕಳನ್ನು ಸಜ್ಜುಗೊಳಿಸುವಿಕೆ ಮತ್ತು ದೇಶಿ ಸೊಗಡಿನ ಸಂಸ್ಕಾರ ಬಿತ್ತುವ ಶಾಲೆಯೊಂದು ಕಳೆದ 25 ವರ್ಷಗಳಿಂದ ಸದ್ದಿಲ್ಲದೇ ತನ್ನ ಕೆಲಸ ಮಡುತ್ತಿದೆ.

ಧಾರವಾಡ ನಗರ ಪಶ್ಚಿಮ ಭಾಗದಲ್ಲಿರುವ ಛೋಟಾ ಮಹಾಬಲೇಶ್ವರ ಬೆಟ್ಟವೆಂದೇ ಕರೆಯಲ್ಪಡುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ಅತ್ತಿಕೊಳ್ಳದಲ್ಲಿರುವ ಬಾಲ ಬಳಗ ಸೃಜನಶೀಲ ಶಿಕ್ಷಣ ಟ್ರಸ್ಟ್‌ನ ಬಾಲ ಬಳಗ ಶಾಲೆ ತನ್ನ ಕಲಿಕೆ, ಮಕ್ಕಳ ಮನೋವಿಕಾಸ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಿಸರ್ಗ ರಮ್ಯ ಶಾಲೆ. ಸಾಮಾನ್ಯವಾಗಿ ಇಂದಿನ ಖಾಸಗಿ ಶಾಲೆಗಳು ದೈತ್ಯ ಕಟ್ಟಡ ಮತ್ತು ಹೈಟೆಕ್‌ ಸ್ವರೂಪದಲ್ಲಿರುತ್ತವೆ. ಜೋರಾಗಿ ತಿರುಗುವ ಒಂದಿಷ್ಟು ಪ್ಯಾನುಗಳು, ಕುಳಿತುಕೊಳ್ಳಲು ಹೈಟೆಕ್‌ ಡೆಸ್ಕ್, ಖುರ್ಚಿಗಳು, ಶಿಕ್ಷಕರಿಗೆ ಬೋಧಿಸಲು ಎಲೆಕ್ಟ್ರಾನಿಕ್‌ ಫಲಕಗಳು, ಪಿಟಿಪಿಗೆ ಅಗತ್ಯವಾದ ಫಲಕ, ಅವರು ಹೇಳಿದ ಅಂಗಡಿಗಳಿಂದಲೇ ಸಮವಸ್ತ್ರ ಖರೀದಿ ಒಟ್ಟಿನಲ್ಲಿ ಶಾಲೆಯ ಖರ್ಚುಗಳೆಲ್ಲವನ್ನೂ ಪೋಷಕರಿಂದಲೇ ಕೀಳುವ ವ್ಯವಸ್ಥೆ ಕಣ್ಣ ಮುಂದಿದೆ.

ಆದರೆ ಬಾಲ ಬಳಗ ಶಾಲೆಯಲ್ಲಿ ಇದೆಲ್ಲದಕ್ಕೂ ಜಾಗವೇ ಇಲ್ಲ. ಇಲ್ಲೇನಿದ್ದರೂ ತೆರೆದ ಶಾಲಾ ಕೊಠಡಿಗಳು, ಅಚ್ಚುಕಟ್ಟಾಗಿ ನಿರ್ಮಿಸಿದ ದೇಶಿ ಸೊಗಡಿನ ಶಾಲಾ ಆವರಣ. ಮಧ್ಯದಲ್ಲಿ ಬಯಲು ರಂಗಮಂದಿರ, ಸುತ್ತಲೂ ಹಸಿರು ಹೊನ್ನಿನ ಸುರಿಮಳೆ. ನಾನಾ ಜಾತಿಯ ಗಿಡಮರಗಳು. ಮಳೆಗಾಲದಲ್ಲಂತೂ ದಟ್ಟ ಕಾಡಿನ ಮಧ್ಯೆ ಕುಳಿತು ಶಾಲೆ ಕಲಿಯುವ ಗುರುಕುಲವೇನೋ ಎನ್ನುವಷ್ಟು ಅಪ್ಯಾಯಮಾನ ವಾತಾವರಣ. ಇಡೀ ಶಾಲೆಯ ಆವರಣದಲ್ಲಿ ಹತ್ತಾರು ಚಿಕ್ಕ ಚಿಕ್ಕ ಕಟ್ಟಡಗಳ ಗುತ್ಛ. ಎಲ್ಲಾ ಕಟ್ಟಡಗಳ ಮೇಲೂ ದೇಶಿಯ ಕಲೆಯ ಅನಾವರಣ. ಕಣ್ಣಿಗೆ ಹಿತವೆನಿಸುವ ಬಣ್ಣಗಳ ಲೇಪನ.

Advertisement

ವಿಭಿನ್ನ ಕಲಿಕಾ ಪದ್ಧತಿ : ಇತರೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಲಿಕೆ ಮತ್ತು ಬೋಧನೆ ಒಂದೇ ತೆರನಾಗಿರುತ್ತದೆ. ಆದರೆ ಬಾಲಬಳಗ ಶಾಲೆಯಲ್ಲಿ ಮಾತ್ರ ಸಮಗ್ರ ಶಿಕ್ಷಣ ಪದ್ಧತಿ ಅಳವಡಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಜತೆಗೆ ಅವರ ಆಸಕ್ತಿದಾಯಕ ವಿಷಯಗಳ ಪೋಷಣೆ ಮತ್ತು ಸ್ಫೂರ್ತಿದಾಯಕ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತದೆ. ಮಗು ಕಲಿಕೆ ಕುರಿತು ಶಿಕ್ಷಕರು ವಿಚಾರಿಸುವುದು ಕಡಿಮೆ. ಇದೇನಿದ್ದರೂ ವಿದ್ಯಾರ್ಥಿಯ ಆಸಕ್ತಿಯ ಮೇಲೆ ಹೋಗುತ್ತದೆ. ಮನೆಗೆಲಸವೂ ಅಷ್ಟೇ. ಒತ್ತಾಯ, ಒತ್ತಡವಿಲ್ಲ. ನಗು ನಗುತ್ತಲೇ ಅವರಿಂದಲೇ ಕೆಲಸ ಮಾಡಿಸುವ ಬೋಧನಾ ತಂತ್ರಗಾರಿಕೆ ಗಮನ ಸೆಳೆಯುವಂತಿದೆ.

ಕಸದಲ್ಲಿ ಸರ, ಬದುಕು ನೀತಿ : ಶಾಲೆಯಲ್ಲಿ ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಬದಲು, ಅವರ ಬದುಕಿಗೆ ಅನುಕೂಲವಾಗುವ ಶಿಕ್ಷಣ ಮೂಲಗಳನ್ನು ಇಲ್ಲಿ ಶೋಧಿಸಲಾಗುತ್ತಿದೆ. ಹಣ ಕೊಟ್ಟು ಹಾಸ್ಟೇಲ್‌ ಫೀ ಕಟ್ಟಿ ಕೈ ತೊಳೆದುಕೊಳ್ಳುವ ಪೋಷಕರು ತಮ್ಮ ಮಗ, ಡಾಕ್ಟರ್‌, ಇಂಜಿನಿಯರ್‌ ಆಗಬೇಕು ಎಂದು ಬಯಸುವುದೇ ಹೆಚ್ಚು. ಆದರೆ ಇಂತಹ ಪರಿಕಲ್ಪನೆಗಳಿಗೆ ಇಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಬದಲಿಗೆ ಪೋಷಕರು, ಬೋಧಕರು, ಸಮಾಜದ ವಿವಿಧ ಮಜಲುಗಳನ್ನು ತಿಳಿಸುವ ಆತ್ಮವಿಶ್ವಾಸದ ಕುಡಿಗಳನ್ನು ಬಾಲ ಬಳಗ ಹಬ್ಬಿಸುತ್ತಿದೆ.

ರಜತ ಮಹೋತ್ಸವ ಸಂಭ್ರಮ ತಮ್ಮ ಮಗನನ್ನು ಕಠು ಶಿಸ್ತಿನ ಶಾಲೆಗೆ ಕಳುಹಿಸಲಾರದೇ ಅವನಿಗಾಗಿ ಪೋಷಕರೇ ಶಿಕ್ಷಕರಾಗಿ 25 ವರ್ಷಗಳ ಹಿಂದೆ ತಮ್ಮ ಮನೆಯ ಪಡಸಾಲೆಯಲ್ಲಿ ಶಿಶುವಿಹಾರದಿಂದ ಆರಂಭಗೊಂಡ ಬಾಲಬಳಗ ಇದೀಗ 1-10ನೇ ತರಗತಿವರೆಗೂ ಸಾವಿರ ಸಾವಿರ ಮಕ್ಕಳಿಗೆ ಶಿಕ್ಷಣ ನೀಡಿದೆ. ಇಂದು ಅವರೆಲ್ಲ ದೇಶ-ವಿದೇಶಗಳಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ ಕೂಡ. ವೈದ್ಯರಾದ ಡಾ|ಸಂಜೀವ ಕುಲಕರ್ಣಿ ಮತ್ತು ಪ್ರತಿಭಾ ಕುಲಕರ್ಣಿ ತಮ್ಮ ಮನೆಯನ್ನೇ ಶಾಲೆ ಮಾಡಿ ಮಕ್ಕಳಿಗೆ ವಿದ್ಯೆ ಕಲಿಸಿ ಸೈ ಎನಿಸಿಕೊಂಡವರು. 25 ವರ್ಷ ಕಳೆದಿದ್ದು, ಇದೀಗ ಬಾಲಬಳಗ ಶಾಲೆ ರಜತಮಹೋತ್ಸವ ಆಚರಣೆ ಸಂಭ್ರಮದಲ್ಲಿದೆ.

ಆಟವಾಡುತ್ತ, ಚಟಾಕಿ ಹಾರಿಸುತ್ತ, ಮುಗುಳ್ನಗುತ್ತಲೇ ನಮಗೆ ಪಾಠ ಹೇಳಿಕೊಡುವ ಬಾಲಬಳಗದ ಶಿಕ್ಷಣ ಪದ್ಧತಿ ನಿಜಕ್ಕೂ ಖುಷಿ ಕೊಡುತ್ತದೆ. ಅಷ್ಟೇಯಲ್ಲ, ಪ್ರತಿ ಕ್ಲಾಸಿನಲ್ಲೂ ಪ್ರತಿಯೊಬ್ಬ ಶಿಕ್ಷಕರನ್ನು ನಾವು ಪ್ರಶ್ನಿಸುವ ಹಕ್ಕು ಮತ್ತು ಸ್ವಾತಂತ್ರ್ಯವಿರುವುದಕ್ಕೆ ಶಾಲೆ ಬಗ್ಗೆ ಹೆಮ್ಮೆ ಅನಿಸುತ್ತದೆ. zಪಿ.ವಿ. ಭಟ್‌, ಬಾಳ ಬಳಗ ವಿದ್ಯಾರ್ಥಿ.

ಪ್ರಸ್ತುತ ಸ್ಕಾಟ್‌ ಲ್ಯಾಂಡ್‌ ನಿವಾಸಿ. ಜಪಾನಿನ ಲೇಖಕ ತೊತಾಚಾನ್‌ ತೆತಸ್ಕೋಕೂರ ಹಾಗೂ ಗೀಜುಬಾಯಿ ಬಧೇಕಾ ಅವರ ಶಿಕ್ಷಣ ತತ್ವಗಳ ಆಧಾರದ ಮೇಲೆ ಬಾಲಬಳಗ ಶಾಲೆ ನೆಲೆ ನಿಂತಿದೆ. ಮಕ್ಕಳು ಅಂಕ ಪಡೆದರಷ್ಟೇ ಶ್ರೇಷ್ಠರಲ್ಲ, ಅವರಲ್ಲಿರುವ ವಿಭಿನ್ನ ಪ್ರತಿಭೆಗೆ ಶಿಕ್ಷಣ ಪೂರಕವಾಗಬೇಕು. –ಡಾ|ಸಂಜೀವ ಕುಲಕರ್ಣಿ, ಬಾಳ ಬಳಗ ಟ್ರಸ್ಟ್‌ ಮುಖ್ಯಸ್ಥರು

-ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next