Advertisement

ಟಿ20: ಭಾರತಕ್ಕೆ ಅಜೇಯ ಕಿವೀಸ್‌ ಸವಾಲು

06:25 AM Nov 01, 2017 | Harsha Rao |

ಹೊಸದಿಲ್ಲಿ: ಏಕದಿನ ಸರಣಿಯಲ್ಲಿ ನ್ಯೂಜಿಲ್ಯಾಂಡಿನಿಂದ ತೀವ್ರ ಪೈಪೋಟಿ ಎದುರಿಸಿದ ಭಾರತ, ಬುಧವಾರದಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲೂ ಜಿದ್ದಾಜಿದ್ದಿ ಹಣಾಹಣಿ ಯೊಂದಕ್ಕೆ ಅಣಿಯಾಗಬೇಕಿದೆ. ನ್ಯೂಜಿಲ್ಯಾಂಡ್‌ ವಿಶ್ವದ ಅಗ್ರಮಾನ್ಯ ಟಿ20 ತಂಡವಾಗಿರುವುದೇ ಇದಕ್ಕೆ ಕಾರಣ.

Advertisement

ಬುಧವಾರದ ಮೊದಲ ಟಿ20 ಪಂದ್ಯದ ತಾಣ ಹೊಸದಿಲ್ಲಿಯ “ಫಿರೋಜ್‌ ಷಾ ಕೋಟ್ಲಾ’ ಅಂಗಳ. ಈ ಪಂದ್ಯ ಭಾವುಕ ಕ್ಷಣವೊಂದಕ್ಕೂ ಸಾಕ್ಷಿಯಾಗಲಿದೆ. ಕಳೆದೆರಡು ದಶಕಗಳಿಂದ ಭಾರತವನ್ನು ಪ್ರತಿನಿಧಿಸುತ್ತಲೇ ಬಂದಿದ್ದ ಎಡಗೈ ವೇಗಿ ಆಶಿಷ್‌ ನೆಹ್ರಾ ಇಲ್ಲಿ ಕೊನೆಯ ಸಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಇಳಿಯಲಿದ್ದಾರೆ. ತವರಿನಂಗಳದಲ್ಲಿ, ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ಅಂತಿಮ ಓವರ್‌ ಎಸೆಯಲಿದ್ದಾರೆ. ನೆಹ್ರಾ ಅವರ ಈ ಕೋರಿಕೆಯನ್ನು ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಪರಿಗಣಿಸಿದ್ದು, ದಿಲ್ಲಿ ಪಂದ್ಯಕ್ಕಾಗಿ ಮಾತ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

38ರ ಹರೆಯದ ಆಶಿಷ್‌ ನೆಹ್ರಾ ಕಳೆದ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿದ್ದರು. ಆದರೆ ಅಲ್ಲಿ ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸಿರಲಿಲ್ಲ. ದಿಲ್ಲಿ ಪಂದ್ಯದಲ್ಲಿ ನೆಹ್ರಾ ಅವರನ್ನು ಆಡಿಸುವುದು, ಬಿಡುವುದು ತಂಡದ ಆಡಳಿತ ಮಂಡಳಿಗೆ ಬಿಟ್ಟ ವಿಚಾರ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಹೇಳಿದ್ದಾರೆ. ದಿಲ್ಲಿಯಲ್ಲಿ ಆಡಿಸದಿದ್ದರೂ ತನ್ನ ನಿವೃತ್ತಿ ನಿರ್ಧಾರ ಬದಲಾಗದು ಎಂಬುದು ನೆಹ್ರಾ ಪ್ರತಿಕ್ರಿಯೆ. 

ಕಿವೀಸ್‌ ವಿರುದ್ಧ ಭಾರತ ಗೆದ್ದಿಲ್ಲ!
ಏಕದಿನದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿ ಯಕ್ಕಿಂತಲೂ ಉತ್ತಮ ಪ್ರದರ್ಶನ ನೀಡಿದ್ದು ನ್ಯೂಜಿಲ್ಯಾಂಡಿನ ಹೆಗ್ಗಳಿಕೆ. ಕಾನ್ಪುರದಲ್ಲಿ ಅದೃಷ್ಟ ಇನ್ನೂ ಸ್ವಲ್ಪ ಗಟ್ಟಿಯಾಗಿದ್ದರೆ ವಿಲಿಯಮ್ಸನ್‌ ಪಡೆ ಸರಣಿಯನ್ನೂ ವಶಪಡಿಸಿಕೊಳ್ಳುತ್ತಿತ್ತು. ಆದರೆ ಭಾರತದ ನಸೀಬು ಚೆನ್ನಾಗಿತ್ತು!

ಟಿ20 ವಿಷಯಕ್ಕೆ ಬಂದಾಗ ಭಾರತ ಆತಂಕಪಡುವ ಅಂಶಗಳೇ ತುಂಬಿರುವುದನ್ನು ಗಮನಿಸಬೇಕಾಗುತ್ತದೆ. ಮುಖ್ಯವಾದುದು, ನ್ಯೂಜಿಲ್ಯಾಂಡ್‌ ವಿಶ್ವದ ನಂ.1 ತಂಡ ಆಗಿರುವುದು. ಇದಕ್ಕಿಂತ ಮಿಗಿಲಾದದ್ದು, ಭಾರತ ಈವರೆಗೆ ನ್ಯೂಜಿಲ್ಯಾಂಡ್‌ ವಿರುದ್ಧ ಒಂದೂ ಟಿ20 ಅಂತಾರಾಷ್ಟ್ರೀಯ ಪಂದ್ಯ ಗೆದ್ದಿಲ್ಲ ಎಂಬುದು!

Advertisement

ಹೌದು, ಭಾರತ-ನ್ಯೂಜಿಲ್ಯಾಂಡ್‌ ಈವರೆಗೆ 6 ಟಿ20 ಪಂದ್ಯಗಳನ್ನಾಡಿವೆ. ಐದರಲ್ಲಿ ಕಿವೀಸ್‌ ಗೆದ್ದಿದೆ. ಒಂದು ಪಂದ್ಯ ರದ್ದಾಗಿದೆ. ಐದರಲ್ಲಿ 2 ಗೆಲುವು ಭಾರತದ ನೆಲದಲ್ಲೇ ಒಲಿದಿತ್ತು. 2012ರ ಚೆನ್ನೈ ಪಂದ್ಯವನ್ನು ಒಂದು ರನ್ನಿನಿಂದ ರೋಮಾಂಚಕಾರಿಯಾಗಿ ಗೆದ್ದ ನ್ಯೂಜಿಲ್ಯಾಂಡ್‌, 2016ರಲ್ಲಿ ಕೊನೆಯ ಸಲ ನಾಗ್ಪುರದಲ್ಲಿ ಎದುರಾದಾಗ 47 ರನ್‌ ಜಯ ಸಾಧಿಸಿತ್ತು. ಇದು ವಿಶ್ವಕಪ್‌ ಕೂಟದ ಪಂದ್ಯವೆಂಬುದನ್ನು ಮರೆಯುವಂತಿಲ್ಲ. ನಂ.1 ಹಾದಿಯಲ್ಲಿ ಅದು ಆಸ್ಟ್ರೇಲಿಯ, ಇಂಗ್ಲೆಂಡ್‌, ಶ್ರೀಲಂಕಾ ಮೊದಲಾದ ತಂಡಗಳಿಗೆ ನೀರು ಕುಡಿಸಿತ್ತು. ಇದನ್ನೆಲ್ಲ ಗಮನಿಸಿದಾಗ ವಿಲಿಯಮ್ಸನ್‌ ಪಡೆಯನ್ನೇ ಈ ಸರಣಿಯ ನೆಚ್ಚಿನ ತಂಡವೆಂದು ಪರಿಗಣಿಸಬೇಕಾಗುತ್ತದೆ.

ಆದರೆ ಚುಟುಕು ಕ್ರಿಕೆಟ್‌ ಎಂಬುದು “ಡಿಫ‌ರೆಂಟ್‌ ಬಾಲ್‌ ಗೇಮ್‌’ ಆಗಿರುವುದರಿಂದ ಹಾಗೂ ಭಾರತ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿರುವುದರಿಂದ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯನ್ನು ಧಾರಾಳವಾಗಿ ಇರಿಸಿಕೊಳ್ಳಬಹುದು. ಇದು ಕೋಟ್ಲಾದಲ್ಲೇ ತೆರೆಯಲ್ಪಟ್ಟರೆ ಅರ್ಥಪೂರ್ಣವೆನಿಸಲಿದೆ. ಆಗ ನೆಹ್ರಾಗೆ ಪರಿಪೂರ್ಣ ವಿದಾಯವನ್ನೂ ಸಲ್ಲಿಸಿದಂತಾಗುತ್ತದೆ!

ಭಾರತ ಸ್ಪೆಷಲಿಸ್ಟ್‌  ತಂಡ
ಟಿ20 ಸರಣಿಗಾಗಿ ಭಾರತ ಸ್ಪೆಷಲಿಸ್ಟ್‌ ತಂಡ ವನ್ನೇ ಆರಿಸಿದೆ. ಬ್ಯಾಟಿಂಗ್‌ ವಿಭಾಗದಲ್ಲಂತೂ ತೀವ್ರ ಪೈಪೋಟಿ ಇದೆ. ರೋಹಿತ್‌-ಧವನ್‌, ಕೊಹ್ಲಿ ಬಳಿಕ ಯಾರು ಎಂಬುದು ಬಹಳ ಜಟಿಲವಾದ ಪ್ರಶ್ನೆ. ಇಲ್ಲಿ ರಾಹುಲ್‌, ಪಾಂಡೆ, ಅಯ್ಯರ್‌, ಕಾರ್ತಿಕ್‌ ರೇಸ್‌ನಲ್ಲಿದ್ದಾರೆ.

ತಂಡದ ಬೌಲಿಂಗ್‌ ಹಾಗೂ ಆಲ್‌ರೌಂಡ್‌ ವಿಭಾಗವೂ ಸಶಕ್ತವಾಗಿದೆ. ಪಾಂಡ್ಯ, ಕುಲದೀಪ್‌, ಭುವನೇಶ್ವರ್‌, ನೆಹ್ರಾ, ಚಾಹಲ್‌, ಬುಮ್ರಾ ಜತೆಗೆ ಹೊಸಬ ಮೊಹಮ್ಮದ್‌ ಸಿರಾಜ್‌ ಇದ್ದಾರೆ. ನೆಹ್ರಾಗೆ ಜಾಗ ಬಿಡುವವರು ಯಾರೆಂಬುದೊಂದು ಕುತೂಹಲ.

ನ್ಯೂಜಿಲ್ಯಾಂಡ್‌ ಕೂಡ ಬಲಿಷ್ಠ ಪಡೆಯನ್ನೇ ಹೊಂದಿದೆ. ವಿಲಿಯಮ್ಸನ್‌, ಮುನ್ರೊ, ಗಪ್ಟಿಲ್‌, ಟಯ್ಲರ್‌, ಲ್ಯಾಥಂ, ಸ್ಯಾಂಟ್ನರ್‌, ಬೌಲ್ಟ್ ಜತೆಗೆ ಕೆಲವು ಯುವ ಆಟಗಾರರೂ ತಂಡದಲ್ಲಿದ್ದಾರೆ. ಇವರೆಲ್ಲ ಸೇರಿಕೊಂಡು ಗೆಲುವಿನ ಅಭಿಯಾನ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಇದಕ್ಕೆ ಟೀಮ್‌ ಇಂಡಿಯಾ ಬ್ರೇಕ್‌ ಹಾಕಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next