Advertisement

ಬ್ಯಾಂಕಿಂಗ್‌ನಿಂದ ಬಿ ಸ್ಕೂಲ್‌ಗೆ ನೆಗೆದ ದಿಗ್ಗಜ

01:52 AM Jan 17, 2022 | Team Udayavani |

ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿ ಟಿ.ಎ. ಪೈ ಅವರು ಹಲವು ಸಾಮಾಜಿಕ ಅಗತ್ಯದ ಉಪಕ್ರಮಗಳನ್ನು ಆರಂಭಿಸಿದರು. ಇದರಲ್ಲಿ ಒಂದು 1962ರಲ್ಲಿ ಮಹಿಳಾ ಸಬಲೀಕರಣ. ಬೆಂಗಳೂರಿನ ಶೇಷಾದ್ರಿಪುರಂ ಶಾಖೆಯಲ್ಲಿ ಮಹಿಳಾ ಶಾಖೆಯನ್ನು ತೆರೆದು ಎಲ್ಲ ಹುದ್ದೆಗಳಿಗೆ ಮಹಿಳೆಯರನ್ನು ನಿಯೋ ಜಿಸಿದರು. ಅನಂತರ ದೇಶದ ವಿವಿಧೆಡೆ ಒಂಬತ್ತು ಮಹಿಳಾ ಶಾಖೆಗಳು ತೆರೆದವು.

Advertisement

ವಿದೇಶಕ್ಕೆ ತೆರಳಿ ಶಿಕ್ಷಣ ಪಡೆಯುವವರಿಗೆ ಹಣಕಾಸು ಒದಗಣೆಯನ್ನು ಆರಂಭಿಸಿದ್ದು ಟಿ.ಎ. ಪೈಯವರು. ಸುಮಾರು 5,400 ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಇಲ್ಲದೆ ವಿದೇಶದ ಶಿಕ್ಷಣ ಕೊಡಿಸಲು ಕಾರಣರಾದರು. ಆದರೆ ಇಷ್ಟೊಂದು ಸಾಲವೂ ಶೇ.100 ಮರುಪಾವತಿಯಾದ ದಾಖಲೆ ನಿರ್ಮಾಣವಾಯಿತು.

ಅವರು ಎಲ್ಲ ಶಾಖೆ ಗಳಿಗೆ ಭೇಟಿ ನೀಡಿ ದಾಗಲೂ “ಮಹಿಳೆಯರ ಶಕ್ತಿಯನ್ನು ಕೀಳಂದಾಜಿಸಬೇಡಿ’ ಎಂಬ ಒಂದು ವಾಕ್ಯದ ಬೀಜಮಂತ್ರವನ್ನು ಹೇಳುತ್ತಿದ್ದರು. ಬೆಳಗಾವಿಯ ತರಕಾರಿ ಮಾರುವ ಮಹಿಳೆಯರೇ ಇರಬಹುದು, ಕರಾ ವಳಿಯ ಮೀನು ಮಾರುವ ಮಹಿಳೆಯರೇ ಇರಬಹುದು, ಮಹಿಳೆಯರ ಈ ಶಕ್ತಿಯನ್ನು ಕುಟುಂಬದ ಅಭಿವೃದ್ಧಿಗೆ ಹೇಗೆ ಮಾರ್ಪಡಿಸಬಹುದು ಎಂಬ ಚಿಂತನೆ ಅವರಲ್ಲಿತ್ತು. ಮಹಿಳೆಯರು ಮತ್ತು ಯುವಜನರು ಸಮಾಜವನ್ನು ಪರಿವರ್ತಿಸುವ ಏಜೆಂಟರು ಎಂದು ಅವರು ಹೇಳುತ್ತಿದ್ದರು.

ಬ್ಯಾಂಕ್‌ ಒಂದು ಹಣಕಾಸು ಒದಗಿಸುವ ಸಂಸ್ಥೆ ಎಂದು ಪರಿಗಣಿಸದೆ, ಠೇವಣಿದಾರರು ಮತ್ತು ಮುಂಗಡ ಪಡೆಯುವ ವರನ್ನು ಸಂರಕ್ಷಿಸುವ ಸಂಸ್ಥೆ ಎಂದು ನಂಬಿದ್ದರು.

ಮಣ್ಣು ಪರೀಕ್ಷೆಯಂತಹ ಅನೇಕ ಪ್ರಗತಿಪರ ಉಪಕ್ರಮಗಳಿಗೆ ಮುಂದಾದ ಅವರು, ಮೀನುಗಾರಿಕೆ, ಬೇಸಾಯ, ಗ್ರಾಮ ಕೈಗಾರಿಕೆಗಳ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಟ್ಟರು. ಜಗತ್ತು ತಿಳಿಯುವ ಸಾಕಷ್ಟು ಮುನ್ನವೇ ಪ್ರಯೋಗವನ್ನು ಮಾಡಿದ್ದ ಸಾಧಕ ಇವರಾಗಿದ್ದರು.

Advertisement

ಟಿ.ಎ. ಪೈಯವರು ಸಿಂಡಿಕೇಟ್‌ ಬ್ಯಾಂಕ್‌ನೊಂದಿಗೆ 20 ದೊಡ್ಡಮತ್ತು ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದರು. ಆಗ ಉದ್ಭವಿಸಿದ ಅನೇಕ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಅವರ ಮುನ್ನೋಟ, ತಾಳ್ಮೆ ಗಮನೀಯವಾಗಿದೆ. ಸಿಂಡಿಕೇಟ್‌ ಬ್ಯಾಂಕ್‌ನ ಸಂಸ್ಕೃತಿಗೆ ಒಗ್ಗಿ ಜನ ಸೇವೆ ಮಾಡಲು ಅವರು ಸಿಬಂದಿಗೆ ವಿಶೇಷ ತರಬೇತಿ ಕೊಡುತ್ತಿದ್ದರು.

1969ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕ್‌ನ ಕಸ್ಟೋಡಿಯನ್‌ ಆಗಿ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಬ್ಯಾಂಕ್‌ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸುವಲ್ಲಿ ವಿಶೇಷವಾಗಿ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈಯವರ ದೂರದೃಷ್ಟಿ ಉಲ್ಲೇಖನೀಯ.
ಜನಜೀವನವನ್ನು ಬಲಗೊಳಿಸುವ ಬ್ಯಾಂಕಿಂಗ್‌ ವ್ಯವಸ್ಥೆ ಬಗೆಗೆ ಅಭಿಪ್ರಾಯಹೊಂದಿದ್ದ ಸ್ವಾತಂತ್ರ್ಯ ಹೋರಾಟ
ಗಾರ ಸಿ. ರಾಜ ಗೋಪಾಲಾಚಾರಿ ಅವರ ಆಶಯವನ್ನು ಟಿ.ಎ. ಪೈ ಸುಪುಷ್ಟಿಗೊಳಿಸಿದ್ದರು.

1970ರ ಬಳಿಕ ಟಿ.ಎ. ಪೈಯವರು ಭಾರತೀಯ ಜೀವವಿಮಾ ನಿಗಮದಅಧ್ಯಕ್ಷತೆ ವಹಿಸಿಕೊಂಡು ಹಣಕಾಸು
ಸೇವೆಯನ್ನು ಮುಂದುವರಿಸಿದರು. 1980 ರಲ್ಲಿ ಅವರು ಇನ್ನಿಲ್ಲವಾಗುವ ಮುನ್ನ ಬಿಸಿನೆಸ್‌ ಸ್ಕೂಲ್‌ ಆರಂಭಿಸಿದ್ದು ಜೀವಿತದ ಕೊನೆಯ ಕೊಡುಗೆ ಯಾಗಿದೆ. ಸ್ಥಾಪಕರ ಸದಾಶಯದಂತೆ ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ) ಮಣಿಪಾಲ ಹೊರವಲಯದ 80 ಬಡಗಬೆಟ್ಟು ಗ್ರಾಮದಲ್ಲಿ ನೆಲೆ ನಿಂತು ಬ್ಯಾಂಕಿಂಗ್‌, ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿ ಸ್ನಾತಕೋತ್ತರ ಪದವಿ (ಎಂಬಿಎ) ನೀಡುವ ಭಾರತದ ಶ್ರೇಷ್ಠ ಬಿ ಸ್ಕೂಲ್‌ ಆಗಿ ಹೊರಹೊಮ್ಮಿದೆ.

-ಪ್ರೊ| ಮಧು ವೀರರಾಘವನ್‌
(ಟ್ಯಾಪ್ಮಿ ನಿರ್ದೇಶಕರು. ಹಣಕಾಸು, ನಿರ್ವಹಣ ವಿಷಯ ತಜ್ಞರು)

 

Advertisement

Udayavani is now on Telegram. Click here to join our channel and stay updated with the latest news.

Next