Advertisement

ಶೂನ್ಯತ್ವ ವಚನ ಸಾಹಿತ್ಯದ ಕೇಂದ್ರ ಬಿಂದು

08:36 PM Apr 07, 2021 | Team Udayavani |

ಚಿತ್ರದುರ್ಗ: ಶೂನ್ಯತ್ವ ಇಡೀ ವಚನ ಸಾಹಿತ್ಯದ ಕೇಂದ್ರಬಿಂದು. ವೈದಿಕ ವ್ಯವಸ್ಥೆಯ ವಿಷಮತೆಗಳನ್ನು ನಿವಾರಿಸಲು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಯಶಸ್ವಿಯಾದವರು ಬಸವಾದಿ ಶರಣರು ಎಂದು ಪ್ರೊ| ಮಲ್ಲಿಕಾರ್ಜುನ ಆರ್‌. ಹಲಸಂಗಿ ಹೇಳಿದರು.

Advertisement

ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ ಸಹಯೋಗದಲ್ಲಿ ನಡೆದ “ಶರಣ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘರ್ಷ ಮಾನವ ಇತಿಹಾಸದ ಆಯಾಮವಾಗಿಯೇ ಬೆಳೆದುಕೊಂಡು ಬಂದಿರುವ ವಿದ್ಯಮಾನ. ಸಂಘರ್ಷದ ಮೂಲ ಉದ್ದೇಶ ಸರಿಪಡಿಸುವಿಕೆ. ವರ್ಣ ವ್ಯವಸ್ಥೆ ಜಾತಿ ವ್ಯವಸ್ಥೆಯ ಬುನಾದಿ.

ಅಂದು ಜಾತಿ ವ್ಯವಸ್ಥೆಗೆ ಧಾರ್ಮಿಕ ಸ್ವರೂಪ ಕೊಡಲಾಯಿತು. ಅಂದಿನಿಂದ ಸಂಘರ್ಷ ಪ್ರಾರಂಭವಾಯಿತು. ಧಾರ್ಮಿಕ ಸಾಂಸ್ಕೃತಿಕ ಆಯಾಮಗಳನ್ನು ಕೊಟ್ಟು ಗಟ್ಟಿಗೊಳಿಸಿ ಯಜಮಾನಿಕೆ ವ್ಯವಸ್ಥೆ ಉಂಟುಮಾಡಿದರು. ಶರಣ ಸಂಕುಲ ಇದರ ನಿರ್ಮೂಲನೆಗಾಗಿ ಹುಟ್ಟಿಕೊಂಡಿತು ಎಂದರು. ಮೊದಲ ಬಾರಿಗೆ ಮೇಲು ಕೀಳು ಸೋಂಕಿಲ್ಲದ, ತಾರತಮ್ಯವಿಲ್ಲದ ಮಾನವ ಪ್ರೇಮದ ಶರಣ ಸಂಕುಲ ಪ್ರಾರಂಭಿಸಿ ಕಾಯಕ ತತ್ವವನ್ನು ಹುಟ್ಟು ಹಾಕಿದರು. ಎಲ್ಲರಲ್ಲೂ ಕಾಯಕ ಪ್ರೀತಿ ಮೂಡಿಸಿದರು.

ಬಸವಣ್ಣನವರು ವೈದಿಕ ವ್ಯವಸ್ಥೆಯ ಹುಳುಕುಗಳನ್ನು ಕಂಡು ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದರು. ಸಾಧ್ಯವಾಗದಾದಾಗ ಶರಣ ತತ್ವದ ಕಡೆ ಬಂದರು. ಬಸವಣ್ಣನವರ ಪ್ರೀತಿ ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಳ್ಳುವುದು. ಅದು ಸಾಂಸ್ಥಿಕ ಸ್ವರೂಪವನ್ನು ಸ್ಥಾಪಿಸುವುದು ಆಗಿತ್ತು. ವ್ಯಷ್ಟಿಯಲ್ಲಿ ಸಮಷ್ಟಿಯನ್ನು ಕಂಡವರು ಬಸವಣ್ಣನವರು. ಅವರು ಭಾರತದ ಶರಣ ಸಂಸ್ಕೃತಿ ಸಂಸ್ಥಾಪಕರು ಎಂದು ಬಣ್ಣಿಸಿದರು. ಒಳಗೊಳ್ಳುವಿಕೆಯ ಲಕ್ಷಣ ಬಸವಾದಿ ಶರಣರಲ್ಲಿತ್ತು. ಎಲ್ಲಿ ನಾಗರಿಕ ಸಮಾಜ ಇದೆಯೋ ಅಲ್ಲಿ ಶೋಷಣೆ ಇರುವುದಿಲ್ಲ. ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ಕಾಯಕ ಕೈಲಾಸವಾಗಬೇಕು.

ಆತ್ಮಾನುಸಂಧಾನ ಮಾಡಿಕೊಳ್ಳಬೇಕು. ದೇವರನ್ನು ಒಳಗಿನಿಂದ ಹುಡುಕುತ್ತ ನಾಗರಿಕ ಸಮಾಜದ ಸ್ಥಾಪಕ ಮನುಷ್ಯನೇ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಚಳವಳಿ, ಹೋರಾಟಕ್ಕೆ ಉದಾತ್ತ ಧ್ಯೇಯಗಳಿವೆ. ಅದು ಸ್ವಾತಂತ್ರ್ಯ ಸಂಗ್ರಾಮವಾಗಿರಬಹುದು, ಇನ್ನಿತರೆ ಹಲವು ಹೋರಾಟಗಳಿರಬಹುದು. ಚಳವಳಿಗಿಂತಲೂ ತೀವ್ರತರವಾದದ್ದು ಕ್ರಾಂತಿ. ರಷ್ಯಾ, ಅಮೆರಿಕ, ಫ್ರಾನ್ಸ್‌ ಕ್ರಾಂತಿಯಂತೆ ಕರ್ನಾಟದಲ್ಲು ಕಲ್ಯಾಣ ಕ್ರಾಂತಿಯಾಯಿತು.

Advertisement

ಕುಟುಂಬದಲ್ಲಿದ್ದುಕೊಂಡು ಹಣ, ಆಸ್ತಿ, ಅನ್ನ, ಅರಿವೆ, ಆಶ್ರಯಕ್ಕಾಗಿ ಸಂಘರ್ಷ ಮಾಡುವವರು ಜನಸಾಮಾನ್ಯರು. ಇವರದು ಭೌತಿಕವಾಗಿರುವ ಸಂಘರ್ಷ. ಎಲ್ಲ ಕಾಲದಲ್ಲೂ ಸಾಮಾಜಿಕ ಅಸಮಾನತೆ ಇರುತ್ತದೆ. ಇದು ರಾಜಕೀಯ ಅಸಮಾನತೆಗೂ ಕಾರಣವಾಗುತ್ತದೆ ಎಂದು ತಿಳಿಸಿದರು. ಬಸವಣ್ಣನವರದು ವೈಚಾರಿಕ ಕ್ರಾಂತಿ. ಆ ಸಂದರ್ಭದಲ್ಲಿ ಅನೇಕ ಸವಾಲುಗಳಿದ್ದವು. ಶರಣರು ವಿಚಾರದ ಮೂಲಕ ಕ್ರಾಂತಿ ಮಾಡಿದರು. ಶಿವಶರಣರು ಸತ್ಯವೆಂಬ ಕತ್ತಿಯನ್ನು ಹಿಡಿದು ಹೋರಾಡಿದರು. ಕೊಲ್ಲುವ ಹೃದಯವನ್ನು ಗೆಲ್ಲುತ್ತೇವೆಂಬುದು ಶರಣರ ತತ್ವ. ಸತ್ಯ, ಕರುಣೆ, ಮಮತೆ, ಪ್ರೀತಿ ಇವು ಶರಣ ತತ್ವದ ಜೀವಾಳ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಶಿಧರ ಉಬ್ಬಳಗುಂಡಿ ರಚನೆಯ “ಮರಣ ಮೃದಂಗ’ ಕೃತಿ ಬಿಡುಗಡೆ ಮಾಡಲಾಯಿತು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಬಸವರಾಜ ಐರಣಿ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next