Advertisement

 ಇಂದಿನಿಂದ ಉತ್ತರಾಧಿವೇಶನ; ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲ ಕಲಾಪ

12:35 AM Dec 19, 2022 | Team Udayavani |

ಬೆಳಗಾವಿ: ಕುಂದನಗರಿಯ ಸುವರ್ಣಸೌಧದಲ್ಲಿ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಬೆಳಗಾವಿ ಗಡಿ ವಿವಾದ, ಮತದಾರರ ಮಾಹಿತಿ ಕಳವು, 40 ಪರ್ಸೆಂಟ್‌ ಕಮಿಷನ್‌, ಕುಕ್ಕರ್‌ ಬ್ಲಾಸ್ಟ್‌ ವಿವಾದಾತ್ಮಕ ಹೇಳಿಕೆ, ಕಬ್ಬು ಬೆಳೆಗಾರರ ಪ್ರತಿಭಟನೆ ಬಲವಾದ ಸದ್ದು ಮಾಡುವ ಲಕ್ಷಣಗಳು ಕಂಡುಬರುತ್ತಿವೆ.

Advertisement

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಡೆ ಯುತ್ತಿರುವ ಈ ಬಾರಿಯ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ರಾಜಕೀಯ ಜಿದ್ದಾ ಜಿದ್ದಿ ವಿಚಾರಗಳೇ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದ ಕಿರಿಕಿರಿ, ಮತದಾರರ ಮಾಹಿತಿ ಕಳವು, 40 ಪರ್ಸೆಂಟ್‌ ಕಮಿಷನ್‌, ಪಿಎಸ್‌ಐ ಹಗ ರಣದ ಆಡಿಯೋ ವಿಚಾರದ ಬಗ್ಗೆ ತನಿಖೆಗೆ ಒತ್ತಾಯಿಸಿ ಸರಕಾರದ ಮೇಲೆ ಮುಗಿ ಬೀಳಲು ಕಾಂಗ್ರೆಸ್‌ ಸಜ್ಜಾಗುತ್ತಿದೆ.

ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಹಾಗೂ ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ನಡುವೆ ಆಪರೇಷನ್‌ ಕಮಲ ಸಂದರ್ಭದಲ್ಲಿ ಕೋಟ್ಯಂತರ ರೂ. ಹಣದ ವಹಿವಾಟು ನಡೆದಿರುವ ಬಗ್ಗೆ ಬಹಿರಂಗ ಹೇಳಿಕೆಗಳನ್ನು ಪ್ರಸ್ತಾವಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ತೀರ್ಮಾ ನಿಸಿದೆ. ಇದಕ್ಕೆ ಪ್ರತಿಯಾಗಿ ಕೆಪಿಸಿಸಿ ಅಧ್ಯಕ್ಷರ ಕುಕ್ಕರ್‌ ಬ್ಲಾಸ್ಟ್‌ ಹೇಳಿಕೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆದಿದೆ ಎನ್ನಲಾದ ಹಗರಣ-ನೇಮಕಾತಿ ಮುಂದಿಟ್ಟು ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಸದ್ದು-ಗದ್ದಲ
ಕುಕ್ಕರ್‌ ಬ್ಲಾಸ್ಟ್‌ ವಿಚಾರಕ್ಕೆ ಸಂಬಂಧಿಸಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್‌ ವಿರುದ್ಧ ಸೋಮ ವಾರ ದಿಂದ ಬುಧವಾರದ ವರೆಗೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಹೀಗಾಗಿ ಅಧಿವೇಶನ ವಾಕ್ಸಮರಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ.

Advertisement

ಪಂಚರತ್ನ ಯಾತ್ರೆಯಲ್ಲಿರುವ ಎಚ್‌.ಡಿ. ಕುಮಾರಸ್ವಾಮಿ ಅಧಿವೇಶನಕ್ಕೆ ಬರುವುದಿಲ್ಲ ಎಂದು ಹೇಳಿದ್ದು, ಉಪ ನಾಯಕ ಬಂಡೆಪ್ಪ ಕಾಶೆಂಪುರ್‌ ಜೆಡಿಎಸ್‌ ಶಾಸಕರಿಗೆ ಈ ಬಾರಿ ನಾಯಕ. ಸರಕಾರದ ವಿರುದ್ಧ ಹೋರಾಟದಲ್ಲಿ ಕಾಂಗ್ರೆಸ್ಸಿಗೆ ಜೆಡಿಎಸ್‌ ಸಾಥ್‌ ನೀಡುತ್ತದೆಯೇ ಅಥವಾ ಪ್ರತ್ಯೇಕವಾಗಿ ಹೋರಾಟ ಮಾಡುತ್ತದೆಯೇ ಕಾದು ನೋಡಬೇಕಾಗಿದೆ.

ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ, ಒಳ ಮೀಸಲಾತಿಗಾಗಿ ಸಂಪುಟ ಉಪ ಸಮಿತಿ ರಚನೆ, ನೇಕಾರ ಸಮುದಾಯಕ್ಕೆ ಪ್ಯಾಕೇಜ್‌, ಸರಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಂಕಿ ಅಂಶಗಳೊಂದಿಗೆ ಅಧಿವೇಶನದಲ್ಲಿ ಪ್ರಸ್ತಾವಿಸಿ ವಿಪಕ್ಷಗಳ ಬಾಯಿ ಮುಚ್ಚಿಸಲು ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಕಬ್ಬು ಬೆಳೆಗಾರರ ಹೋರಾಟ
ಕಬ್ಬು ಬೆಳೆಗಾರರ ಸಮಸ್ಯೆ ಈ ಬಾರಿಯ ಅಧಿವೇಶನದಲ್ಲೂ ಪ್ರತಿಧ್ವನಿಸಲಿದ್ದು, ಪ್ರತೀ ಟನ್‌ಗೆ ಕೇಂದ್ರ ಸರಕಾರ ಘೋಷಿಸಿರುವ 3,050 ರೂ. ಜತೆಗೆ 500 ರೂ. ರಾಜ್ಯ ಸರಕಾರ ಕೊಡಬೇಕು ಎಂಬುದು ಅವರ ಬೇಡಿಕೆ. ಡಿ. 26ರಂದು ಸುವರ್ಣಸೌಧ ಮುತ್ತಿಗೆ ಹಾಕಲು ಕಬ್ಬು ಬೆಳೆಗಾರರು ಮುಂದಾಗಿದ್ದಾರೆ.

ಹಗರಣ, ಭ್ರಷ್ಟಾಚಾರ ಪ್ರಸ್ತಾವ
ಅಧಿವೇಶನದಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರ, ಹಗರಣ ಪ್ರಸ್ತಾವಿಸಲಿದ್ದೇವೆ. ಜತೆಗೆ ಮೂರು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಸ್ಪಂದಿಸದ ಬಗ್ಗೆಯೂ ವಾಸ್ತವಾಂಶ ತಿಳಿಸುತ್ತೇವೆ ಎಂದು ವಿಪಕ್ಷ ನಾಯಕ  ಸಿದ್ದರಾಮಯ್ಯ ಹೇಳಿದ್ದಾರೆ.

ಸುಮ್ಮನೆ ಬಿಡುವುದಿಲ್ಲ
ಪ್ರತೀ ಅಧಿವೇಶನದಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ವೈಯಕ್ತಿಕ ಅಜೆಂಡಾಗಳ ಮೇಲೆ ಕಿತ್ತಾಡಿಕೊಂಡು ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸದೆ ಅನ್ಯಾಯ ಮಾಡುತ್ತಿವೆ. ಈ ಬಾರಿ ನಾವು ಸುಮ್ಮನೆ ಬಿಡುವುದಿಲ್ಲ. ನಮ್ಮ ಭಾಗದ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಸಿಗಲೇಬೇಕು ಎಂದು ಜೆಡಿಎಸ್‌ ಉಪ ನಾಯಕ  ಬಂಡೆಪ್ಪ ಕಾಶೆಂಪುರ್‌ ಹೇಳಿದ್ದಾರೆ.

ಬೆಳಗಾವಿ ಗಡಿ ತಂಟೆ ಚರ್ಚೆ
ಅಧಿವೇಶನ ಸಂದರ್ಭದಲ್ಲೇ ಮಹಾ ರಾಷ್ಟ್ರ ಗಡಿ ವಿಚಾರದಲ್ಲಿ ತಂಟೆ ತೆಗೆದಿದೆ. ಅಲ್ಲಿನ ಸಚಿವರು, ಸಂಸದರು ಬೆಳಗಾವಿಗೆ ಬರುವುದಕ್ಕೆ ರಾಜ್ಯ ಸರಕಾರ ನಿರ್ಬಂಧ ಹೇರಿದೆ. ಆದರೂ ಸೋಮವಾರ ಎಂಇ ಎಸ್‌ ಮಹಾಮೇಳಾವ ಹಮ್ಮಿಕೊಂಡಿದ್ದು, ಅಲ್ಲಿ ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ಪ್ರಚೋದನಕಾರಿ ಮಾತು ಹೊರಬಿದ್ದರೆ ಅಧಿವೇಶನದಲ್ಲಿ ಬಿಸಿ ಏರಬಹುದು. ಜತೆಗೆ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಆಡಳಿತದಲ್ಲಿರುವುದರಿಂದ ವಿವಾದವನ್ನು ಬೇಗ ಇತ್ಯರ್ಥ ಮಾಡಿಕೊಳ್ಳಿ ಎಂದು ವಿಪಕ್ಷಗಳು ಒತ್ತಾಯಿಸಬಹುದು.

ಸದನದ ಒಳಗೆ ಸಾವರ್ಕರ್‌ ಭಾವಚಿತ್ರ?
ಅಧಿವೇಶನ ಸಂದರ್ಭದಲ್ಲಿ ಸುವರ್ಣಸೌಧ ಸದನದೊಳಗೆ ಕೆಲವು ಮಹ ನೀಯರ ಭಾವಚಿತ್ರ ಅನಾವರಣ ನಡೆಯಲಿದ್ದು, ಸಾವರ್ಕರ್‌ ಭಾವಚಿತ್ರವೂ ಸೇರಿದೆ ಎನ್ನಲಾಗುತ್ತಿದೆ. ನಿರ್ಣಯ ಆಗಿರುವಂತೆ ಮಹಾಪುರುಷರ ಭಾವಚಿತ್ರ ಅನಾವರಣವಾಗಲಿದೆ. ಯಾರ ಭಾವಚಿತ್ರ ಎಂಬುದು ಅನಂತರ ತಿಳಿಯಲಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಪರಿಷತ್‌ನಲ್ಲಿ ಸಾವರ್ಕರ್‌ ಭಾವಚಿತ್ರ ಅನಾವರಣವಾಗುತ್ತಿಲ್ಲ ಎಂದು ಸಭಾಪತಿ ರಘುನಾಥ್‌ ರಾವ್‌ ಮಲ್ಕಾಪುರೆ ಹೇಳಿದರೆ, ಸಾವರ್ಕರ್‌ ಚಿತ್ರ ಅನಾವರಣ ಆಗಲಿದೆ ಎಂದು ಮೇಲ್ಮನೆ ಸದಸ್ಯ ರವಿಕುಮಾರ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next