Advertisement

ಸುಸ್ತಿ ಸಾಲ ವಸೂಲಿ ಆದೇಶ ವಾಪಸ್‌

10:58 PM Jan 22, 2020 | Team Udayavani |

ಬೆಂಗಳೂರು: ರೈತರಿಂದ ಕೃಷಿ ಸುಸ್ತಿ ಸಾಲಗಳನ್ನು ವಸೂಲಿ ಮಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಕಾಸ್ಕಾರ್ಡ್‌ ಬ್ಯಾಂಕ್‌ಗಳಿಂದ ರೈತರು ಪಡೆದಿದ್ದ ಸಾಲ ಮರು ಪಾವತಿಸದೇ ಸುಸ್ತಿಯಾಗಿದ್ದರಿಂದ ವಸೂಲಾತಿ ಕ್ರಮ ಕೈಗೊಳ್ಳುವಂತೆ ಸಹಕಾರ ಸಂಘಗಳ ನಿಬಂಧಕರು 2019ರ ಡಿಸೆಂಬರ್‌ 27ರಂದು ಆದೇಶ ಹೊರಡಿಸಿದ್ದರು.

Advertisement

ರಾಜ್ಯದಲ್ಲಿ ಪ್ರವಾಹ ಹಾಗೂ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂದರ್ಭದಲ್ಲಿ ಸಾಲ ವಸೂಲಿ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ರೈತರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಈ ನಿರ್ಧಾರ ವಾಪಸ್‌ ಪಡೆಯದಿದ್ದರೆ, ರೈತರೊಂದಿಗೆ ಬೀದಿಗಿಳಿದು ಪ್ರತಿಭಟನೆ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು.

ತೀವ್ರ ವಿರೋಧ ವ್ಯಕ್ತವಾದ ಬಳಿಕ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಸಹಕಾರ ಸಂಘಗಳ ನಿಬಂಧಕರಿಗೆ ತಕ್ಷಣ ಸಾಲ ವಸೂಲಾತಿ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ಸಚಿವರ ಸೂಚನೆಯ ಮೇರೆಗೆ ಸಹಕಾರ ಸಂಘಗಳ ನಿಬಂಧಕ ಎನ್‌.ಎಸ್‌.ಪ್ರಸನ್ನಕುಮಾರ್‌, ಸುಸ್ತಿ ಸಾಲಗಳ ವಸೂಲಾತಿಗೆ ಡಿಸೆಂಬರ್‌ 27ರಂದು ಹೊರಡಿಸಿರುವ ಆದೇಶವನ್ನು ತಡೆ ಹಿಡಿಯಲು ಆದೇಶಿಸಿದ್ದಾರೆ. ಅಲ್ಲದೇ ಮುಂದಿನ ಆದೇಶದವರೆಗೂ ರೈತರಿಗೆ ಒತ್ತಾಯ ಪೂರ್ವಕವಾಗಿ ಸಾಲ ವಸೂಲಿಗೆ ಆಗ್ರಹಿಸದಂತೆ, ನೋಟಿಸ್‌ ನೀಡದಂತೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next