Advertisement

ಉಗ್ರ ಕೃತ್ಯ ಶಂಕೆ: ಮೂವರ ಮೇಲಿನ ಆರೋಪ ಸಾಬೀತು

03:50 AM Apr 11, 2017 | Team Udayavani |

ಮಂಗಳೂರು: ಒಂಬತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಶಂಕಿತ ಉಗ್ರಗಾಮಿ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಿಚಾರಣೆ ನಡೆಸಿದ 7 ಮಂದಿ ಆರೋಪಿಗಳ ಪೈಕಿ ಮೂವರ ಅಪರಾಧ ಸಾಬೀತಾಗಿದೆ ಹಾಗೂ ನಾಲ್ವರು ಬಿಡುಗಡೆಗೊಂಡಿದ್ದಾರೆ.

Advertisement

1ನೇ ಆರೋಪಿ ಪಾಂಡೇಶ್ವರ ಸುಭಾಸ್‌ನಗರದ ಸೈಯದ್‌ ಮೊಹಮದ್‌ ನೌಶಾದ್‌ (25), 2ನೇ ಆರೋಪಿ ಹಳೆಯಂಗಡಿಯ ಅಹ್ಮದ್‌ ಬಾವಾ ಅಬೂಬಕರ್‌ (33) ಮತ್ತು 6ನೇ ಆರೋಪಿ ಪಡುಬಿದ್ರಿ ಉಚ್ಚಿಲದ ಫಕೀರ್‌ ಅಹ್ಮದ್‌ ಬಾವಾ (46) ಅಪರಾಧ ಸಾಬೀತಾದವರು.

3ನೇ ಆರೋಪಿ ಮಹಮದ್‌ ಅಲಿ, 4ನೇ ಆರೋಪಿ ಜಾವೇದ್‌ ಅಲಿ, 5ನೇ ಆರೋಪಿ ಮಹಮದ್‌ ರಫೀಕ್‌ ಮತ್ತು 13ನೇ ಆರೋಪಿ ಶಬೀರ್‌ ಭಟ್ಕಳ ಯಾನೆ ಶಬೀರ್‌ ಮೌಲವಿ ಆರೋಪ ಮುಕ್ತಗೊಂಡವರು. ಸಾಕ್ಷಾಧಾರಗಳ ಕೊರತೆಯಿಂದ ಇವರನ್ನು ಖುಲಾಸೆಗೊಳಿಸಲಾಗಿದೆ. ಆರೋಪ ಸಾಬೀತಾದ ಮೂವರಿಗೆ ಶಿಕ್ಷೆಯ ಪ್ರಮಾಣ ಎ. 12ರಂದು ಪ್ರಕಟವಾಗಲಿದೆ.

ಸಾಬೀತಾದ ಆರೋಪಗಳು
ಸೈಯದ್‌ ಮೊಹಮದ್‌ ನೌಶಾದ್‌, ಅಹ್ಮದ್‌ ಬಾವಾ ಅಬೂಬಕರ್‌ ಮತ್ತು ಫಕೀರ್‌ ಅಹ್ಮದ್‌ ಬಾವಾ ಅವರ ವಿರುದ್ಧ ಅಕ್ರಮ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್‌ 16, 17, 18, ಸ್ಫೋಟಕ ವಸ್ತು ಕಾಯ್ದೆ 5ಬಿ ಮತ್ತು 9ಬಿಬಿ, ಐಪಿಸಿ 120 ಬಿ (ಕ್ರಿಮಿನಲ್‌ ಒಳಸಂಚು), ಶಸ್ತ್ರಾಸ್ತ್ರ ಕಾಯ್ದೆ 25 (ಎ) (ಎ) ಅನ್ವಯ ಆರೋಪಗಳು ಸಾಬೀತಾಗಿವೆ. ಅಲ್ಲದೆ 1ನೇ ಆರೋಪಿಯ ವಿರುದ್ಧ ಐಪಿಸಿ 420 (ವಂಚನೆ), 468 (ದಾಖಲೆ ಪತ್ರಗಳ ನಕಲು ಮಾಡುವುದು), 471 (ನಕಲಿ ದಾಖಲೆ ಪತ್ರ ಹೊಂದುವುದು) ಮತ್ತು 6ನೇ ಆರೋಪಿ ವಿರುದ್ಧ ಸ್ಫೋಟಕ ವಸ್ತು ತಡೆ ಕಾಯ್ದೆಯನ್ವಯ ಆರೋಪ ಸಾಬೀತಾಗಿದೆ.

3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌.ಎಚ್‌. ಪುಷ್ಪಾಂಜಲಿ ದೇವಿ ಅವರು ಸೋಮವಾರ ಮೂವರು ಆರೋಪಿಗಳ ಮೇಲಣ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಅವರು ಶಿಕ್ಷಾರ್ಹರು ಎಂದು ಘೋಷಿಸಿದರು.

Advertisement

13 ಮಂದಿ ವಿರುದ್ಧ ಆರೋಪ ಪಟ್ಟಿ
ಈ ಪ್ರಕರಣದಲ್ಲಿ ಒಟ್ಟು 13 ಮಂದಿಯ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ರಿಯಾಜ್‌ ಭಟ್ಕಳ, ಇಕ್ಬಾಲ್‌ ಭಟ್ಕಳ, ಗುಜರಾತ್‌ ಮೂಲದವರಾಗಿದ್ದು ಮಂಗಳೂರಿನ ಸುಭಾಸ್‌ನಗರದಲ್ಲಿದ್ದ ಮುದಸ್ಸಿರ್‌ ಯಾಸಿನ್‌, ಬರೋಡಾದ ಖಯಾಮುದ್ದೀನ್‌ ಶಫುìದ್ದೀನ್‌ ಕಪಾಡಿಯಾ ಯಾನೆ ಮೂಸಾ, ಮಹಾರಾಷ್ಟ್ರದ ಮಹಮದ್‌ ಇಕ್ಬಾಲ್‌ ಇಸ್ಮಾಯಿಲ್‌ ಚೌಧುರಿ ಯಾನೆ ಸಯೀದ್‌, ಅಹ್ಮದ್‌ ಯಾಸಿನ್‌ ಭಟ್ಕಳ ಆರೋಪ ಪಟ್ಟಿಯಲ್ಲಿ ಹೆಸರಿರುವ ಇತರ ಆರೋಪಿಗಳು.

ಇವರಲ್ಲಿ ರಿಯಾಜ್‌ ಭಟ್ಕಳ, ಇಕ್ಬಾಲ್‌ ಭಟ್ಕಳ ಮತ್ತು ಮುದಸ್ಸಿರ್‌ ಯಾಸಿನ್‌ ತಲೆಮರೆಸಿಕೊಂಡಿದ್ದು, ಇನ್ನಷ್ಟೇ ಬಂಧನ ಆಗಬೇಕಿದೆ.
ರಿಯಾಜ್‌ ಭಟ್ಕಳನ ಸಹಚರ ಎನ್ನಲಾದ ಶಬೀರ್‌ನನ್ನು 2009ರಲ್ಲಿ ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತ ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಘಟನೆಯ ಹಿನ್ನೆಲೆ
ದೇಶದ ವಿವಿಧೆಡೆ ನಡೆದ ಬಾಂಬ್‌ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ 2008 ಅಕ್ಟೋಬರ್‌ 3ರಂದು ಮುಂಜಾನೆ ಮಂಗಳೂರು ಮತ್ತು ಮುಂಬಯಿ ಪೊಲೀಸರು ಕರ್ನಾಟಕ ನಕ್ಸಲ್‌ ನಿಗ್ರಹ ಪಡೆಯ ಸಹಕಾರದಲ್ಲಿ ಮುಂಜಾನೆ ವೇಳೆಗೆ ದಾಳಿ ಕಾರ್ಯಾಚರಣೆ ನಡೆಸಿದ್ದರು. ಪ್ರಥಮವಾಗಿ ಉಳ್ಳಾಲದ ಮುಕ್ಕಚ್ಚೇರಿಯ ಮಹಮದ್‌ ಅಲಿ ಮತ್ತು ಅವರ ಪುತ್ರ ಜಾವೇದ್‌ ಅಲಿ ಅವರ ಮನೆಗೆ ದಾಳಿ ಮಾಡಿ ಅವರಿಬ್ಬರನ್ನು ಬಂಧಿಸಿದ್ದರು.

ಬಳಿಕ ಮಹಮದ್‌ ಅಲಿ ಮತ್ತು ಜಾವೇದ್‌ ಅಲಿ ಅವರ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿರುವ ರಿಯಾಜ್‌ ಭಟ್ಕಳನ ಬಾಡಿಗೆ ಮನೆಗೆ ದಾಳಿ ನಡೆಸಿದ್ದರು. ಆದರೆ ಅಷ್ಟರಲ್ಲಿ ಮಾಹಿತಿ ಲಭಿಸಿದ್ದರಿಂದ ರಿಯಾಜ್‌ ಭಟ್ಕಳ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಅನಂತರ ಮಂಗಳೂರಿನ ಪಾಂಡೇಶ್ವರದ ಸುಭಾಸ್‌ ನಗರ ಹಾಗೂ ಇತರ ಕಡೆಗೆ ದಾಳಿ ಮಾಡಿ ಫಕೀರ್‌ ಅಹ್ಮದ್‌, ಶಬೀರ್‌ ಮೌಲಾನಾ, ಮಹಮದ್‌ ರಫೀಕ್‌, ಅಹ್ಮದ್‌ ಬಾವಾ ಯಾನೆ ಅಬೂಬಕರ್‌ ಮತ್ತು ಸೈಯದ್‌ ಮಹಮದ್‌ನನ್ನು ಬಂಧಿಸಿದ್ದರು. ಬಂಧಿತ 7 ಮಂದಿಯಲ್ಲಿ 4 ಮಂದಿ ಕ್ರಮೇಣ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಶಬೀರ್‌ನ ಜಾಮೀನು ಅರ್ಜಿಯನ್ನು ನ್ಯಾಯಾ ಲಯ ತಿರಸ್ಕರಿಸಿತ್ತು.ದಾಳಿ ಕಾರ್ಯಾಚರಣೆ ಸಂದರ್ಭದಲ್ಲಿ ಮಹಮ್ಮದ್‌ ಅಲಿ, ಆತನ ಪುತ್ರ ಜಾವೇದ್‌ ಅಲಿ, ನೌಶಾದ್‌ ಮತ್ತು ಅಹ್ಮದ್‌ ಬಾವಾ ಅವರಿಂದ 5 ಬಾಂಬ್‌, 11.39 ಲಕ್ಷ ರೂ. ನಗದು, 1 ಬೈಕ್‌, ಗುಜರಾತ್‌ನ ನಕ್ಷೆ, 21 ಮೊಬೈಲ್‌ ಫೋನ್‌ ಸೆಟ್‌, ಅನೇಕ ಸಿಮ್‌ ಕಾರ್ಡ್‌ಗಳು, ಜೆಹಾದ್‌ ಸಾಹಿತ್ಯ, ಲಾಪ್‌ಟಾಪ್‌, ಹಾರ್ಡ್‌ ಡಿಸ್ಕ್, 4 ಪಾಸ್‌ಪೋರ್ಟ್‌ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 

ಈ ಕಾರ್ಯಾಚರಣೆಯು ಮಂಗಳೂರಿನಲ್ಲಿ ಶಂಕಿತ ಉಗ್ರರ ನೆಲೆ ಇತ್ತೆಂಬುದನ್ನು ಬಹಿರಂಗಪಡಿಸಿತ್ತು. ಮಂಗಳೂರು ಮತ್ತು ಸುತ್ತಮುತ್ತ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಸುಳಿವು ಲಭ್ಯವಾಗಿತ್ತು. ಇಂಡಿಯನ್‌ ಮುಜಾಹಿದೀನ್‌ನ ಸಹ ಸ್ಥಾಪಕ ರಿಯಾಜ್‌ ಭಟ್ಕಳ ಮತ್ತು ಇತರ ಶಂಕಿತ ಉಗ್ರರ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿತ್ತು. ಆಗ ಪಶ್ಚಿಮ ವಲಯದ ಐಜಿಪಿ ಆಗಿದ್ದ ಎ.ಎಂ. ಪ್ರಸಾದ್‌ ಮಾರ್ಗದರ್ಶನದಲ್ಲಿ ದ.ಕ. ಜಿಲ್ಲಾ ಎಸ್‌ಪಿ ಸತೀಶ್‌ ಕುಮಾರ್‌ ನೇತೃತ್ವದಲ್ಲಿ ನೂರಕ್ಕೂ ಮಿಕ್ಕಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು. ಡಿಸಿಐಬಿ ಇನ್ಸ್‌ಪೆಕ್ಟರ್‌ ಆಗಿದ್ದ ಡಾ| ಎಚ್‌.ಎನ್‌. ವೆಂಕಟೇಶ ಪ್ರಸನ್ನ ಪ್ರಕರಣ ದಾಖಲಿ
ಸಿದ್ದರು. ಆಗ ಉಳ್ಳಾಲ ಪಿಎಸ್‌ಐ ಆಗಿದ್ದ ಶಿವ ಪ್ರಕಾಶ್‌ ಪ್ರಾಥಮಿಕ ತನಿಖೆಯನ್ನು ಹಾಗೂ ಅನಂತರದ ತನಿಖೆಯನ್ನು ಪಣಂಬೂರು ಡಿವೈಎಸ್‌ಪಿ ಆಗಿದ್ದ ಜಯಂತ್‌ ವಿ. ಶೆಟ್ಟಿ ಅವರು ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಾರಾಯಣ ಶೇರಿಗಾರ್‌ ವಾದ ಮಂಡಿಸಿದರು.

ವರ್ಷದೊಳಗೆ ತೀರ್ಪು
ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನು 1 ವರ್ಷದೊಳಗೆ ಇತ್ಯರ್ಥಪಡಿಸಬೇಕೆಂದು ಕಳೆದ ವರ್ಷ ಆದೇಶ ನೀಡಿದ್ದು ಇದೀಗ ವರ್ಷ ಪೂರೈಸಲು ಒಂದು ತಿಂಗಳು ಇರುವಾಗಲೇ ತೀರ್ಪು ಹೊರಬಿದ್ದಿದೆ. ಜಿಲ್ಲಾಧಿಕಾರಿಗಳಾದ ಪೊನ್ನುರಾಜ್‌ ಮತ್ತು ಮಹೇಶ್ವರ ರಾವ್‌ ಹಾಗೂ ಅಂಡರ್‌ ಸೆಕ್ರೆಟರಿ ಶಿವರಾಮ ಭಟ್‌ ಸಾಕ್ಷ  ನುಡಿದಿದ್ದರು.  62 ಸಾಕ್ಷಿಗಳು, 122 ದಾಖಲೆಗಳು, 157 ವಸ್ತುಗಳು
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 88 ಸಾಕ್ಷಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 62 ಮಂದಿಯನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸಿದೆ. 122 ದಾಖಲಾತಿಗಳನ್ನು ಮತ್ತು 157 ವಸ್ತುಗಳನ್ನು ಗುರುತಿಸಿದೆ.

ನೆಮ್ಮದಿ ತಂದಿದೆ
ನಾವು ಸಾಕಷ್ಟು ಸಾಕ್ಷಾಧಾರಗಳ ಸಮೇತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದೆವು. ಈಗ ಮೂವರ ಆರೋಪ ಸಾಬೀತಾಗಿ ಅಪರಾಧಿಗಳೆಂದು ತೀರ್ಪು ಬಂದಿರುವುದು ನೆಮ್ಮದಿ ತಂದಿದೆ.
ಜಯಂತ್‌ ವಿ. ಶೆಟ್ಟಿ, ನಿವೃತ್ತ ಡಿವೈಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next