Advertisement

ಶಂಕಿತ ನಕ್ಸಲ್‌ ಮುಖಂಡ ರೂಪೇಶ್‌ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

10:39 AM Apr 28, 2019 | Team Udayavani |

ಮಡಿಕೇರಿ: ಶಂಕಿತ ನಕ್ಸಲ್‌ ಮುಖಂಡ, 2010ರಲ್ಲಿ ಭಾಗ ಮಂಡಲ ವ್ಯಾಪ್ತಿಯ ಮುಂಡ್ರೋಟು ವಿನ ಮಾಂಗುಡಿಮಲೆಯಲ್ಲಿ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿರುವ ರೂಪೇಶ್‌ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Advertisement

ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿಡಲಾಗಿದ್ದ ರೂಪೇಶ್‌ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್‌ ಕಮಾಂಡೋಗಳು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆ ತಂದರು. ಪೊಲೀಸ್‌ ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆಯೇ “ನಕ್ಸಲ್‌ ಬಾರಿ ಜಿಂದಾಬಾದ್‌, ಮಾವೋವಾದಿಗಳು ಅಪರಾಧಿಗಳಲ್ಲ, ಹುತಾತ್ಮ ನಕ್ಸಲರು ಅಮರವಾಗಲಿ’ ಎಂದು ಘೋಷಣೆ ಕೂಗಿದ.

ಜಿಲ್ಲಾ ನ್ಯಾಯಾಲಯದ ನ್ಯಾಯಾ ಧೀಶರಾದ ವೀರಪ್ಪ ವಿ. ಮಲ್ಲಾಪುರ ಅವರು ರಜೆಯಲ್ಲಿರುವುದರಿಂದ 1ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್‌ ಮುಂದೆ ಹಾಜರುಪಡಿಸಲಾಯಿತು. ಶನಿವಾರ ಸರಕಾರಿ ವಕೀಲರು ಹಾಜರಿಲ್ಲವಾದ್ದರಿಂದ ಅವರಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗದಿಗೊಳಿಸಿ ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಲಾಯಿತು.

ಪ್ರಕರಣದ ಹಿನ್ನೆಲೆ
ರೂಪೇಶ್‌ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಸಹಿತ ಒಟ್ಟು 38 ಪ್ರಕರಣಗಳಿವೆ. ಈತನ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳೂ ದಾಖಲಾಗಿವೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಈತನನ್ನು 6ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ಆತನನ್ನು ಕೇರಳಕ್ಕೆ ಕರೆದೊಯ್ಯಲಾಯಿತು. ನ್ಯಾಯಾಲಯದ ಹೊರಭಾಗ ನಗರ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next