Advertisement

ಸುಳ್ಯ: 134 ಅನರ್ಹ ಪಡಿತರ ಚೀಟಿ ಪತ್ತೆ

12:25 AM Nov 04, 2019 | Sriram |

ಸುಳ್ಯ: ಸರಕಾರದ ಮಾನ ದಂಡಗಳಿಗೆ ವಿರುದ್ಧವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ತಾಲೂಕಿನ 134 ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ದಂಡ ವಸೂಲಿ ಮಾಡ ಲಾಗಿದೆ. ಇನ್ನುಳಿದ ಅನರ್ಹ ಪಡಿತರ ಚೀಟಿದಾರರನ್ನು ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

Advertisement

ಈ ತನಕ 64 ಮಂದಿ ಸ್ವಯಂಪ್ರೇರಿತರಾಗಿ ಪಡಿತರ ಚೀಟಿ ಒಪ್ಪಿಸಿದ್ದು, ಬಾಕಿ ಕಾರ್ಡ್‌ ಪತ್ತೆ ಆಹಾರ ಇಲಾಖೆ ಮೂಲಕ ನಡೆಯುತ್ತಿದೆ.

134 ಅನರ್ಹ ಪಡಿತರ ಚೀಟಿ
ತಾಲೂಕಿನಲ್ಲಿ ನಿಯಮ ಮೀರಿ 134 ಕುಟುಂಬಗಳು ಬಿಪಿಎಲ್‌ (ಆದ್ಯತಾ ಪಡಿತರ ಚೀಟಿ) ಪಡಿತರ ಚೀಟಿ ಪಡೆದು, ಅದರ ಸವಲತ್ತುಗಳನ್ನು ಉಪ ಯೋಗಿಸುತ್ತಿರುವುದು ಪತ್ತೆ ಆಗಿದೆ. ತಾಲೂಕಿನಲ್ಲಿ 29,766 ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿದ್ದು, 10,314 ಎಪಿಎಲ್‌ ಪಡಿತರ ಚೀಟಿ, 19,452 ಬಿಪಿಎಲ್‌ ಪಡಿತರ ಚೀಟಿ, 1,562 ಅಂತ್ಯೋದಯ ಪಡಿ ತರ ಚೀಟಿ ದಾರರಿದ್ದಾರೆ. ಇವರಲ್ಲಿ ಉಳಿದ ಅನರ್ಹ ಕಾರ್ಡ್‌ದಾರರ ಪತ್ತೆ ನಡೆಯುತ್ತಿದೆ.

1,81,476 ರೂ.ದಂಡ ವಸೂಲಿ
ಅನರ್ಹ ಪಡಿತರ ಚೀಟಿ ಪತ್ತೆ ಮಾಡಿ, ತಾಲೂಕಿನಲ್ಲಿ ಈ ತನಕ 1,81,476 ರೂ. ದಂಡ ವಸೂಲಿ ಮಾಡಲಾಗಿದೆ. 64 ಮಂದಿ ಸರಕಾರದ ಗಡುವಿನಲ್ಲಿ ಸ್ವಯಂಪ್ರೇರಿತರಾಗಿ ಕಾರ್ಡ್‌ ಒಪ್ಪಿಸಿದ ಕಾರಣ ಅವರು ದಂಡದಿಂದ ವಿನಾಯಿತಿ ಪಡೆದಿದ್ದಾರೆ. ಬಿಪಿಎಲ್‌ ಪಡಿತರ ಕಾರ್ಡ್‌ ಅನ್ನು ಆ ಕುಟುಂಬ ಯಾವಾಗ ಪಡೆದುಕೊಂಡಿತು ಮತ್ತು ಸರಕಾರದ ಸವಲತ್ತು ಉಪಯೋಗಿಸಿದ ಪ್ರಮಾಣ ಆಧರಿಸಿ ದಂಡ ವಿಧಿಸಲಾ ಗುತ್ತದೆ. ಇಲಾಖೆ ವಿಧಿಸಿದ ದಂಡವನ್ನು ಎ. 2ರ ಒಳಗೆ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಈ ವರೆಗೆ ಕುಟುಂಬವೊಂದಕ್ಕೆ 20 ಸಾವಿರ ರೂ. ದಂಡ ವಿಧಿಸಿರುವುದೇ ಗರಿಷ್ಠ ಮೊತ್ತ ಎಂದು ಇಲಾಖೆ ಮಾಹಿತಿ ನೀಡಿದೆ.

ಎರಡು ಬಾರಿ ಅವಕಾಶ
ಸರಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದರೆ ದಂಡ ರಹಿತವಾಗಿ 2019 ಸೆ. 3ರೊಳಗೆ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಗೆ ತೆರಳಿ ಪಡಿತರ ಚೀಟಿ ಒಪ್ಪಿಸಿ, ರದ್ದು ಮಾಡುವಂತೆ ಸರಕಾರ ಸೂಚನೆ ನೀಡಿತ್ತು. ಆ ಬಳಿಕ ಅ. 15ರ ತನಕ ಅವಧಿ ವಿಸ್ತರಿಸಿತು. ಎರಡು ಬಾರಿ ನೀಡಿದ ಅವಕಾಶದಲ್ಲಿ ಪಡಿತರ ಚೀಟಿ ರದ್ದು ಮಾಡದೆ ಇದ್ದ ಅನರ್ಹ ಪಡಿತರ ಚೀಟಿದಾರರು ಸರಕಾರದ ನಿಯಮ ದಂತೆ ದಂಡ ಕಟ್ಟಬೇಕಿದೆ.

Advertisement

ಮನೆಗೆ ನೋಟಿಸ್‌
ತಾಲೂಕು ಆಹಾರ ಇಲಾಖೆಯು ಕುಟುಂಬ ಗಳು ಹೊಂದಿ ರುವ ಬಿಪಿಎಲ್‌, ಅಂತ್ಯೋ ದಯ ಪಡಿತರ ಚೀಟಿಗಳ ಬಗ್ಗೆ ತನಿಖೆ ನಡೆಸುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಅನರ್ಹ ಪಡಿತರ ಚೀಟಿದಾರರು ರದ್ದುಪಡಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿಯಿಂದ ಆಯಾ ಪಡಿತರದಾರನ ಮನೆಗೆ ನೋಟಿಸ್‌ ಜಾರಿಯಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಆರ್‌ಟಿಒ, ಮೆಸ್ಕಾಂ ಮಾಹಿತಿ ಆಧರಿಸಿ ಅನರ್ಹ ಫಲಾನುಭವಿಗಳ ಪತ್ತೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರ ನೋಟಿಸ್‌ ಜಾರಿಯಾಗುವ ಸಾಧ್ಯತೆ ಇದೆ.

ದಂಡ ಕಟ್ಟುವುದು ಹೇಗೆ?
ಅನರ್ಹ ಪಡಿತರ ಚೀಟಿದಾರರು ತಾಲೂಕು ಕೇಂದ್ರದಲ್ಲಿರುವ ತಾಲೂಕು ಕಚೇರಿಯ ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ಸ್ವತಃ ತೆರಳಿ ಮಾಹಿತಿ ನೀಡಬೇಕಾಗಿದೆ.
ಈಗಲೂ ಸ್ವಯಂ ಪ್ರೇರಿತರಾಗಿ ಕಾರ್ಡ್‌ ಒಪ್ಪಿಸಿದರೆ ದಂಡ ಮೊತ್ತದಲ್ಲಿ ಸ್ವಲ್ಪ ವಿನಾಯಿತಿ ಸಿಗಲಿದೆ. ಇಲಾಖೆ ಪತ್ತೆ ಹಚ್ಚಿದ ಅನಂತರ ಕಾರ್ಡ್‌ ಒಪ್ಪಿಸಿದರೆ ಪೂರ್ಣ ಪ್ರಮಾಣದ ದಂಡ ಪಾವತಿಸಬೇಕು.

ಯಾರೆಲ್ಲ ಅನರ್ಹರು?
-ಕುಟುಂಬದಲ್ಲಿ ಸರಕಾರಿ ಅಥವಾ ಅರೆ ಸರಕಾರಿ ಉದ್ಯೋಗ ಹೊಂದಿರುವರು.
– ಆದಾಯ ತೆರಿಗೆ ಪಾವತಿಸುವವರು.
– ಪಡಿತರ ಚೀಟಿ ವಿಳಾಸದಲ್ಲಿ ವಾಸ್ತವ್ಯ ಇಲ್ಲದೇ ಇರುವವರು
– ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವವರು.
– ಮರಣ ಹೊಂದಿದವರ ಮತ್ತು ಕುಟುಂಬದಲ್ಲಿ ವಾಸ್ತವ್ಯವಿಲ್ಲದೇ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಉಳಿಸಿಕೊಂಡವರು.
– ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಭೂಮಿ ಹಾಗೂ ನಗರ ಪ್ರದೇಶಗಳಲ್ಲಿ 1,000 ಸಾವಿರ ಚ.ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಸ್ವಂತವಾಗಿ ಹೊಂದಿರುವವರು.
– ಸ್ವಂತ ಉಪಯೋಗಕ್ಕಾಗಿ ಕಾರು, ಲಾರಿ, ಜೆಸಿಬಿ ಇತ್ಯಾದಿ ವಾಹನ ಹೊಂದಿರುವನರು.
-ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತ ಅಧಿಕ ಇರುವ ಕುಟುಂಬಗಳು.

ನೋಟಿಸ್‌ ಜಾರಿ
ತಾಲೂಕಿನಲ್ಲಿ ಅ. 30ರ ವರೆಗೆ 134 ಕಾರ್ಡ್‌ದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. 64ಕ್ಕೂ ಹೆಚ್ಚು ಬಿಪಿಎಲ್‌ ಪಡಿತರ ಚೀಟಿದಾರರು ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ಸ್ವತಃ ಬಂದು ಕಾರ್ಡ್‌ ರದ್ದುಪಡಿಸಿ, ದಂಡ ಪಾವತಿಸಿದ್ದಾರೆ. ಈ ತನಕ 1,81,476 ರೂ. ದಂಡ ಸಂಗ್ರಹವಾಗಿದೆ. ಸ್ವಯಂಪ್ರೇರಿತರಾಗಿ ಕಾರ್ಡ್‌ ಒಪ್ಪಿಸಿದ್ದಲ್ಲಿ ಅವರಿಗೆ ವಿಧಿಸುವ ದಂಡದ ಮೊತ್ತದಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗುವುದು.
ಎನ್‌.ಎ. ಕುಂಞಿ ಅಹಮದ್‌
ತಹಶೀಲ್ದಾರ್‌, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next