Advertisement

3 ದಶಕಗಳ ದೋಣಿ ಸಂಚಾರಕ್ಕೆ ಸಿಗಲಿದೆ ಮುಕ್ತಿ

09:29 PM Jan 16, 2020 | Sriram |

ಸೂರ್ಗೋಳಿ ಸೇತುವೆ ಕನಸು ಕೊನೆಗೂ ಸಾಕಾರಾವಾಗುವ ಹೊತ್ತು ಸನಿಹದಲ್ಲಿದೆ. ಇದರಿಂದ ನಿತ್ಯ ಸಂಚಾರಿಗಳಿಗೆ ನೆರವಾಗುವುದರೊಂದಿಗೆ ಜಿಲ್ಲಾಕೇಂದ್ರಕ್ಕೆ ತೆರಳುವುದೂ ಈ ಭಾಗದವರಿಗೆ ಸುಲಭವಾಗಲಿದೆ.

Advertisement

ಗೋಳಿಯಂಗಡಿ: ಕುಂದಾಪುರ ಮತ್ತು ಉಡುಪಿ ವಿಧಾನಸಭೆ ಕ್ಷೇತ್ರಗಳ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆಯೊಂದು ಸೂರ್ಗೋಳಿಯಲ್ಲಿ ನಿರ್ಮಾಣವಾಗುತ್ತಿದೆ. 3 ದಶಕಗಳಿಗೂ ಹೆಚ್ಚು ಕಾಲದಿಂದ ಈ ಭಾಗದ ಜನರಿಗೆ ಸೇತುವೆಯಿಲ್ಲದ ಕಾರಣ ನದಿ ದಾಟಲು ದೋಣಿಯೇ ಆಸರೆಯಾಗಿದ್ದು, ಈಗ ಸೇತುವೆ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಸೂರ್ಗೋಳಿಯಿಂದ ನಂಚಾರು, ಮೀಯಾರು, ಕೊಕ್ಕರ್ಣೆ, ಮುದ್ದೂರು ಮತ್ತಿತರ ಊರುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಲೋಕೋಪಯೋಗಿ ಇಲಾಖೆಯಿಂದ 8.25 ಕೋ.ರೂ. ಮಂಜೂರು ಮಾಡಿಸಿದ್ದರು. ಹಿಂದಿನ ಅವಧಿಯಲ್ಲಿ ಉಡುಪಿಯ ಶಾಸಕರಾಗಿದ್ದ ಪ್ರಮೋದ್‌ ಮಧ್ವರಾಜ್‌ ಅವರ ಪ್ರಯತ್ನವೂ ಇದರಲ್ಲಿ ಸೇರಿತ್ತು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆ.

25 ವರ್ಷಗಳ ಬೇಡಿಕೆ
ಸೀತಾನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಾಣವಾಗುತ್ತಿದ್ದು, ಕಳೆದ ವರ್ಷದ ಎಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಂಡಿದೆ. ಈ ವರ್ಷದ ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಈ ಭಾಗದ ಜನರ 25 ವರ್ಷಗಳ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ.

ಯಾರಿಗೆಲ್ಲ ಪ್ರಯೋಜನ?
ಬೆಳ್ವೆ, ಸೂರ್ಗೋಳಿಯಿಂದ ನಾಲ್ಕೂರು, ಮೀಯಾರು, ಮುದ್ದೂರು, ಕೊಕ್ಕರ್ಣೆ, ನಂಚಾರಿಗೆ ಹೋಗಲು ಹತ್ತಿರವಾಗಲಿದೆ. ಹೆಂಗವಳ್ಳಿ, ಅಮಾಸೆಬೈಲು, ಬೆಳ್ವೆ, ಗೋಳಿಯಂಗಡಿಯವರಿಗೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ, ಆಸ್ಪತ್ರೆಗಳಿಗೆಲ್ಲ ಹೋಗಲು ಹತ್ತಿರವಾಗಲಿದೆ.

Advertisement

ಜೋಮ್ಲುವಿಗೂ ಹತ್ತಿರ
ಬೆಳ್ವೆ, ಗೋಳಿಯಂಗಡಿ, ಅಮಾಸೆಬೈಲು ಕಡೆಯಿಂದ ಪ್ರಸಿದ್ಧ ಜಲಪಾತ ಜೋಮ್ಲುತೀರ್ಥಕ್ಕೆ ಆವರ್ಸೆ – ನಂಚಾರು ಮಾರ್ಗವಾಗಿ ಸುಮಾರು 17 ಕಿ.ಮೀ. ಸಂಚರಿಸಬೇಕು. ಆದರೆ ಈ ಸೇತುವೆಯಾದರೆ ಗೋಳಿಯಂಗಡಿಯಿಂದ ಜೋಮ್ಲುತೀರ್ಥಕ್ಕೆ ಕೇವಲ 9 ಕಿ.ಮೀ. ದೂರವಾಗಲಿದೆ. ಈಗ ಸೂರ್ಗೋಳಿಯಿಂದ ಕೊಕ್ಕರ್ಣೆಗೆ 22 ಕಿ.ಮೀ. ದೂರವಿದ್ದು, ಅದೇ ಸೇತುವೆಯಾದರೆ ಕೇವಲ 13 ಕಿ.ಮೀ. ದೂರವಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಕ್ಕೆ ಹೋಗುವವರಿಗೆ ಬಹು ಸುಲಭವಾಗಲಿದೆ.

ದೋಣಿಯೇ ದಿಕ್ಕು
ಬೆಳ್ವೆ, ಸೂರ್ಗೋಳಿ ಭಾಗದ ಜನರಿಗೆ ಅದರಲ್ಲೂ ದಡದ ಈಚೆ ಇದ್ದ ತಾರಿಕಟ್ಟೆ, ಹಳ್ಳಿ ಊರಿನ ಜನರು ಯಾವುದೇ ಕೆಲಸಕ್ಕೆ ದೋಣಿ ಮೂಲಕ ಹೋಗಬೇಕಾಗಿತ್ತು. 1999 ರಿಂದ 2003 ರವರೆಗೆ ಸಂಸದರಾಗಿದ್ದ ವಿನಯ ಕುಮಾರ್‌ ಸೊರಕೆ ಅವರು ಆಗ ದೋಣಿ ನೀಡಿದ್ದರು. ಈಗಲೂ ಇಲ್ಲಿನ ಜನರಿಗೆ ನದಿ ದಾಟಲು ದೋಣಿಯೇ ಆಸರೆಯಾಗಿದೆ.

ಗ್ರಾಮಸ್ಥರು ಸುತ್ತುಬಳಸಿ ಹೋಗಬೇಕಾದ ದೊಡ್ಡ ಸಮಸ್ಯೆ ಇನ್ನು ಪರಿಹಾರವಾಗಲಿದೆ. ಸೊರ್ಗೋಳಿ-ನಂಚಾರು ಸಂಪರ್ಕ ಸೇತುವೆ ನಿರ್ಮಾಣವಾಗುತ್ತಿದ್ದು ಮಳೆಗಾಲ ಅಂತ್ಯದ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಿಂದ ದೋಣಿಯನ್ನೇ ಆಶ್ರಯಿಸಿದ್ದ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಲಿದೆ.

ಇನ್ನೂ ಹತ್ತಿರ
ಈ ಭಾಗದಲ್ಲಿರುವ ತಾರಿಕಟ್ಟೆ, ಹಳ್ಳಿ ಊರುಗಳು ಸೀತಾನದಿಯ ಆ ಬದಿಯ ನಾಲ್ಕೂರು ಗ್ರಾಮ ಪಂಚಾಯತ್‌ಗೆ ಸೇರುತ್ತವೆ. ಈ ಭಾಗದ ಜನರು ಪಂಚಾಯತ್‌ ಕೆಲಸಕ್ಕೆ, ಪಡಿತರ ತರಲು ಸುಮಾರು 15 ಕಿ.ಮೀ. ದೂರ ಕ್ರಮಿಸಬೇಕಿತ್ತು. ಆದರೆ ಸೇತುವೆಯಿಂದಾಗಿ ಇಲ್ಲಿನ ನೂರಾರು ಮಂದಿಗೆ ಕೇವಲ 3 ಕಿ.ಮೀ. ಮಾತ್ರ ದೂರವಾಗಲಿದೆ.

ಅಭಿವೃದ್ಧಿ ಪಥ
ಸೂರ್ಗೋಳಿ ಸೇತುವೆಯು ಕುಂದಾಪುರ – ಉಡುಪಿ ಕ್ಷೇತ್ರಗಳನ್ನು ಬೆಸೆಯುವ ಸಂಪರ್ಕ ಕೊಂಡಿ.

ಎಲ್ಲರಿಗೂ ಅನುಕೂಲ
ಸೂರ್ಗೋಳಿಯಲ್ಲಿ ಸೇತುವೆ ನಿರ್ಮಾಣವಾಗುವುದರಿಂದ ಸಾವಿರಾರು ಜನರಿಗೆ ಪ್ರಯೋಜನವಾಗಲಿದೆ. ಹಿಂದೆ ಸೇತುವೆಯಿಲ್ಲದೆ ಸುತ್ತುಬಳಸಿ ಬರಬೇಕಿತ್ತು. ಇಲ್ಲದಿದ್ದರೆ ದೋಣಿ ಮೂಲಕ ಹೋಗಬೇಕಿತ್ತು. ಈಗ ನಾಲ್ಕೂರು, ನಂಚಾರು, ಮುದ್ದೂರು ಭಾಗದವರಿಗೆ ಗೋಳಿಯಂಗಡಿಯ ಕಾಲೇಜಿಗೆ ಬರಲು ಅನುಕೂಲವಾಗಲಿದೆ.
– ದಿನಕರ ನಾಯಕ್‌ ತಾರಿಕಟ್ಟೆ, ಸ್ಥಳೀಯರು

ಉಡುಪಿ,ಮಣಿಪಾಲ ಹತ್ತಿರ
ಇಷ್ಟು ವರ್ಷ ಈ ನದಿ ದಾಟಲು ಈ ಭಾಗದ ಜನರಿಗೆ ದೋಣಿಯೇ ಆಸರೆಯಾಗಿತ್ತು. ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ಗೋಳಿಯಂಗಡಿ, ಬೆಳ್ವೆ, ಸೂರ್ಗೋಳಿಯವರಿಗೆಲ್ಲ ಮಣಿಪಾಲ,ಉಡುಪಿ ಇನ್ನಷ್ಟು ಹತ್ತಿರವಾಗಲಿದೆ.
– ಚಂದ್ರಶೇಖರ ಶೆಟ್ಟಿ ಸೂರ್ಗೋಳಿ, ತಾ.ಪಂ. ಸದಸ್ಯರು

ಈ ವರ್ಷದೊಳಗೆ ಪೂರ್ಣ
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಸೇತುವೆಗೆ 8.25 ಕೋ.ರೂ. ಅನುದಾನ ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಈ ವರ್ಷದ ಸೆಪ್ಟಂಬರ್‌ನೊಳಗೆ ಸೇತುವೆ ಪೂರ್ಣಗೊಳ್ಳಬಹುದು. ಇದಕ್ಕೆ ಅಗತ್ಯವಿರುವ ಸಂಪರ್ಕ ರಸ್ತೆಗೆ ಭೂಮಿ ನೀಡಿದವರಿಗೆ ಪರಿಹಾರಕ್ಕೆ ಡಿಸಿಗೆ ದಾಖಲೆಗಳನ್ನು ಸಲ್ಲಿಸಲಾಗಿದೆ.
– ಸಂಗಮೇಶ್‌, ಸ.ಕಾ.ನಿ.ಎಂಜಿನಿಯರ್‌, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next