Advertisement

ತರಗತಿಯಲ್ಲಿ ನಡೆಯಿತು ಉಪನ್ಯಾಸಕರ ಸರ್ಜಿಕಲ್‌ ಸ್ಟ್ರೈಕ್‌!

07:23 PM Apr 08, 2019 | Hari Prasad |

ಕೆಲವು ಹುಡುಗರು “ಗುಪ್ತಚರ’ರಂತೆ, ಕ್ಲಾಸಿನಲ್ಲಿ ನಡೆಯುವ ಚಟುವಟಿಕೆಗಳನ್ನು ಉಪನ್ಯಾಸಕರಿಗೆ ತಲುಪಿಸುತ್ತಿದ್ದರು. ಅವರು ನೀಡಿದ “ಇಂಟೆಲಿಜೆನ್ಸ್‌ ರಿಪೋರ್ಟ್‌’ಸಿಕ್ಕ ಮೇಲೆ, ಉಪನ್ಯಾಸಕರು ನಮ್ಮ ಮೇಲೆ ಒಂದು ಕಣ್ಣಿಟ್ಟಿದ್ದರು. ಆ ವಿಷಯ ನಮಗೆ ಗೊತ್ತೇ ಇರಲಿಲ್ಲ!

Advertisement

ಪಿಯುಸಿಯಲ್ಲಿ ನಮ್ಮ ಭೂಗೋಳಶಾಸ್ತ್ರದ ಉಪನ್ಯಾಸಕರು, ಪಾಠ ಮಾಡುವಾಗ ಕೆಲವು ಪದಗಳನ್ನು ಪದೇ ಪದೆ ಹೇಳುತ್ತಿದ್ದರು. ಅವುಗಳಲ್ಲಿ “ಅಷ್ಟೇ ಅಲ್ಲ’ ಎಂಬ ಪದವೂ ಒಂದು. ಒಂದು ಕ್ಲಾಸ್‌ನಲ್ಲಿ ಅವರು ಒಂದು ಪದವನ್ನು ಎಷ್ಟು ಬಾರಿ ಬಳಸುತ್ತಾರೆ ಎಂದು ಕೌಂಟ್‌ ಮಾಡುವುದೇ ಒಂದು ಆಟ ನಮಗೆ. ನಾನೊಬ್ಬನೇ ಅಲ್ಲ, ನಾಲ್ಕೈದು ಸ್ನೇಹಿತರು ಜೊತೆಗೆ ಸೇರಿ ಅದನ್ನು ಲೆಕ್ಕ ಹಾಕುತ್ತಿದ್ದೆವು. ಪಾಠ ಏನೂ ಅರ್ಥವಾಗುತ್ತಿರಲಿಲ್ಲ. ಯಾಕಂದ್ರೆ ನಮ್ಮ ಗಮನ ಕೇವಲ ಅವರು ಯಾವ ಪದವನ್ನು, ಎಷ್ಟು ಬಾರಿ ಬಳಸುತ್ತಾರೆ ಎಂಬುದರ ಮೇಲಷ್ಟೇ ಇರುತ್ತಿತ್ತು. ತರಗತಿ ಮುಗಿದ ನಂತರ, ನಮ್ಮ ಲೆಕ್ಕ ಸರಿ ಇದೆಯೇ ಎಂದು ಪರಸ್ಪರ ತಾಳೆ ಹಾಕಿ, ತಮಾಷೆ ಮಾಡುತ್ತಿದ್ದೆವು.

ಅವತ್ತು ಹಿಮಾಲಯ ಪರ್ವತದ ಬಗ್ಗೆ ಪಾಠ ನಡೆಯುತ್ತಿತ್ತು. ಒಂದು ಗಂಟೆಯ ಉಪನ್ಯಾಸದಲ್ಲಿ ಉಪನ್ಯಾಸಕರು ನೂರಕ್ಕೂ ಹೆಚ್ಚು ಬಾರಿ “ಅಷ್ಟೇ ಅಲ್ಲ’ ಎಂದು ಬಳಸಿದರು. ಆ ಪದದತ್ತಲೇ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ, ಲೆಕ್ಕ ಹಾಕುತ್ತಾ ಕುಳಿತಿದ್ದೆವು. ಲೆಕ್ಕ ಹಾಕಲು ಸುಲಭವಾಗಲೆಂದು ನೋಟ್‌ಬುಕ್‌ನಲ್ಲಿ ಅದನ್ನು ಗುರುತು ಹಾಕಿಕೊಳ್ಳತೊಡಗಿದೆವು. ಅವರು ಬೋರ್ಡ್‌ ಮೇಲೆ ಬರೆದಿದ್ದನ್ನು ನೋಟ್‌ಬುಕ್‌ನಲ್ಲಿ ಬರೆದುಕೊಳ್ಳುತ್ತಿರುವವರಂತೆ ನಟಿಸುತ್ತಾ, ಅಷ್ಟೇ ಅಲ್ಲ ಅಂತ ಅವರು ಹೇಳಿದಾಗ “ಪ್ಲಸ್‌ ಮಾರ್ಕ್‌’ ಬರೆಯುತ್ತಾ ಲೆಕ್ಕ ಇಡತೊಡಗಿದೆವು.

ಹೀಗಿರುವಾಗ, ನಮ್ಮ ತಂಡದ ಕಾರ್ಯತಂತ್ರ ವನ್ನು ಅರಿತಿದ್ದ ಕೆಲವು ಹುಡುಗರು “ಗುಪ್ತಚರ’ ರಂತೆ, ಕ್ಲಾಸಿನಲ್ಲಿ ನಡೆಯುವ ಚಟು­ವಟಿಕೆಗಳನ್ನು ಉಪನ್ಯಾಸಕರಿಗೆ ತಲುಪಿಸುತ್ತಿದ್ರು. ಅವರು ನೀಡಿದ “ಇಂಟಲಿಜೆನ್ಸ್‌ ರಿಪೋರ್ಟ್‌’ನಲ್ಲಿ ನಾವು ತರಗತಿಯಲ್ಲಿ ಪಾಠ ಕೇಳದೆ, ಬೇರೆ ಕಾರ್ಯದಲ್ಲಿ ಮಗ್ನರಾಗಿರುತ್ತೇವೆ ಎಂಬ ಮಾಹಿತಿ ಸಿಕ್ಕ ಮೇಲೆ, ಉಪನ್ಯಾಸಕರು ನಮ್ಮ ಮೇಲೆ ಒಂದು ಕಣ್ಣಿಟ್ಟಿದ್ದರು. ಆ ವಿಷಯ ನಮಗೆ ಗೊತ್ತಾಗಿರಲಿಲ್ಲ. ಆದರೆ, ಅವತ್ತು, ನೋಟ್ಸ್‌ ಬರೆದುಕೊಳ್ಳುವವರಂತೆ ನಟಿಸಿ, ಅವರಿಂದ ತಪ್ಪಿಸಿಕೊಂಡಿದ್ದೆವು.

ಕೆಲವು ದಿನಗಳ ನಂತರ, ಭಾರತದ ಬೆಳೆಗಳ ಬಗ್ಗೆ ಉಪನ್ಯಾಸ ನೀಡುವಾಗ, ಕಬ್ಬು, ಹೊಗೆಸೊಪ್ಪು, ಭತ್ತ, ಗೋಧಿ, ಜೋಳ, ಕಾಫಿ, ಚಹ ಇತ್ಯಾದಿ ಬೆಳೆಗಳನ್ನು ಹೆಸರಿಸುತ್ತಾ “ಅಷ್ಟೇ ಅಲ್ಲ’ ಎಂಬ ಪದವನ್ನು ಪದೇ ಪದೆ ಹೇಳತೊಡಗಿದರು. ನಾವು ಮೆಲ್ಲಗೆ ನೋಟ್‌ಬುಕ್‌ ತೆರೆದು, ಅದನ್ನು ಗುರುತು ಹಾಕಿಕೊಳ್ಳತೊಡಗಿದೆವು. ಹದಿನೈದು ನಿಮಿಷ ಆಗಿತ್ತು ಉಪನ್ಯಾಸ ಪ್ರಾರಂಭಿಸಿ. ಬೋರ್ಡ್‌ ಮೇಲೆ ಕೆಲವು ಪಾಯಿಂಟ್‌ಗಳನ್ನು ಬರೆದು, “ಇವನ್ನೆಲ್ಲಾ ಬರೆದುಕೊಳ್ಳಿ’ಎಂದರು. ಇದು ನಮ್ಮನ್ನು ಖೆಡ್ಡಾಕ್ಕೆ ಕೆಡವಲು ಮಾಡಿದ “ಬೋರ್ಡ್‌ ಬರಹ’ ಎಂದು ನಮಗೆ ಹೇಗೆ ಗೊತ್ತಾಗಬೇಕು?

Advertisement

ಸ್ವಲ್ಪ ಹೊತ್ತಿನ ನಂತರ, ಎಲ್ಲ ವಿದ್ಯಾರ್ಥಿಗಳ ನೋಟ್‌ಬುಕ್‌ ಚೆಕ್‌ ಮಾಡುತ್ತೇನೆಂದು, ನೇರವಾಗಿ ನಮ್ಮ ಡೆಸ್ಕ್ ಕಡೆ ಬಂದರು. ನಮ್ಮ ನೋಟ್‌ಬುಕ್‌ನಲ್ಲಿ “ಅಷ್ಟೇ ಅಲ್ಲ’ ಎಂಬ ಪದ ಮತ್ತದರ ಮುಂದೆ ಪ್ಲಸ್‌ ಮಾರ್ಕ್‌ ಗಳು ಮಾತ್ರ ಇದ್ದವು. ಅದನ್ನು ನೋಡಿದವರೇ, ಕಪಾಳಕ್ಕೆ ಛಟಾರನೆ ಬಾರಿಸಿ, ನಮ್ಮ ತಂಡವನ್ನು ಡೆಸ್ಕ್ನ ಆಚೆ ಎಳೆದು ಚೆನ್ನಾಗಿ ಥಳಿಸಿದರು. ನಂತರ ನಮ್ಮನ್ನು ಪ್ರಾಂಶುಪಾಲರ ಹತ್ತಿರ ಕರೆದುಕೊಂಡು ಹೋಗಿ, “ಇವರಿಗೆ ಟಿ.ಸಿ. ಕೊಟ್ಟು ಕಳಿಸಿ. ತರಗತಿಯಲ್ಲಿ ಪಾಠ ಕೇಳದೆ ಕಪಿಚೇಷ್ಟೆ ಮಾಡುತ್ತಿರುತ್ತಾರೆ’ ಎಂದು ದೂರಿದರು’. “ಗುಪ್ತಚರ ದಳ’ದಿಂದ ಮೊದಲೇ ಮಾಹಿತಿ ಪಡೆದಿದ್ದ ಪ್ರಾಂಶುಪಾಲರು, ಹೆತ್ತವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದರು. ಅಲ್ಲಿಯವರೆಗೆ, “ಏನೂ ಆಗಲ್ಲ’ ಎಂದು ಭಾವಿಸಿದ್ದ ನಮಗೆ ಪರಿಸ್ಥಿತಿ ಬಿಗಡಾಯಿಸಿದೆ ಅಂತ ಅರಿವಾಯ್ತು.

ತಕ್ಷಣವೇ ಗೆಳೆಯನೊಬ್ಬ ಪ್ರಾಂಶುಪಾಲರ ಕಾಲು ಹಿಡಿದು ಜೋರಾಗಿ ಅಳತೊಡಗಿದ. ಅವನು ಪ್ರಾಂಶುಪಾಲರ ದೂರದ ಸಂಬಂಧಿ ಆಗಿದ್ದ. ಇನ್ಮುಂದೆ ಈ ರೀತಿ ಮಾಡಲ್ಲ ಎಂದು ಅವನು ಅಳುತ್ತಿದ್ದರೆ, ನಾವು ಸಹ ಅಳುವಿನ ನಾಟಕ ಶುರು ಮಾಡಿದೆವು. ಕೊನೆಗೆ ಅವರು ನಮ್ಮ ಅಳುವಿಗೆ ಕರಗಿ, ನಮ್ಮ ಕಡೆಯಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡು, ಮತ್ತೂಮ್ಮೆ “ವಾರ್ನಿಂಗ್‌’ ಕೊಟ್ಟು ತರಗತಿಗೆ ಕಳಿಸಿದರು. ಉಪನ್ಯಾಸಕರ ದಾಳಿ ಒಂದು ರೀತಿಯಲ್ಲಿ “ಸರ್ಜಿಕಲ್‌ ಸ್ಟ್ರೈಕ್‌’ ನಂತಿತ್ತು. ಅಂದಿನಿಂದ ನಮ್ಮ ಗುಂಪನ್ನು ಚದುರಿಸಿ, ಬೇರೆ ಬೇರೆ ಡೆಸ್ಕ್ಗಳಲ್ಲಿ ಕುಳಿತುಕೊಳ್ಳಲು ಆದೇಶಿಸಿದರು.
ಆನಂತರದ ತರಗತಿಗಳಲ್ಲಿ ಭೂಗೋಳಶಾಸ್ತ್ರದ ಉಪನ್ಯಾಸಕರು ಆಗಾಗ ನಮ್ಮ ಡೆಸ್ಕ್ನ ಬಳಿ ಬಂದು ಪರೀಕ್ಷಿಸುತ್ತಿದ್ದರು. ಅವರು ಬಂದಾಗಲೆಲ್ಲ, ಮತ್ತೆಲ್ಲಿ ಬಾರಿಸುತ್ತಾರೋ ಎಂಬ ಭಯ ನಮ್ಮನ್ನು ಕಾಡುತ್ತಿತ್ತು. ಶಿಕ್ಷಕರು ಪದೇಪದೆ ಬಳಸುವ ಪದವನ್ನು ಕೌಂಟ್‌ ಮಾಡುವುದು, ಹೈಸ್ಕೂಲ್‌ನಿಂದ ನಮ್ಮ ಗುಂಪು ನಡೆಸಿಕೊಂಡು ಬಂದ ಅಭ್ಯಾಸ. ಆದರೆ, ಆ ಕಳ್ಳಾಟ ಕಾಲೇಜಿನಲ್ಲಿ ನಡೆಯಲೇ ಇಲ್ಲ!

— ಮಲ್ಲಪ್ಪ ಫ‌. ಕರೇಣ್ಣನವರ

Advertisement

Udayavani is now on Telegram. Click here to join our channel and stay updated with the latest news.

Next