Advertisement

ಗಡಿನಾಡಿನ ಹೆಮ್ಮೆಯ ಮಿಮಿಕ್ರಿ ಪ್ರತಿಭೆ ಸುರೇಶ್‌ ಯಾದವ್‌ ಮುಳ್ಳೇರಿಯ

06:25 AM Apr 22, 2018 | Team Udayavani |

ಶಾಲಾ ಪರಿಸರದಲ್ಲಿ ಕಾಗೆಗಳ ಚೀರಾಟವನ್ನು ಕೇಳಿದ ಅಧ್ಯಾಪಕರೊಬ್ಬರು ಕಿಟಕಿ ಮೂಲಕ ಇಣುಕಿ ನೋಡಿದಾಗ ಮಕ್ಕಳ ಗುಂಪೊಂದನ್ನು ಕಂಡರು. ಆ ಗುಂಪಿನ ಮಧ್ಯದಿಂದ ಈ ಕೂಗು ಚೀರಾಟಗಳು ಕೇಳಿಸುತ್ತಿತ್ತು. ಮಕ್ಕಳು ಸೇರಿ ಕಾಗೆಯನ್ನು ಹಿಡಿದು ಉಪದ್ರವಿಸುತ್ತಾರೆಂದು ಭಾವಿಸಿದ ಅಧ್ಯಾಪಕರು ಸ್ಕೇಲೊಂದನ್ನು ಹಿಡಿದು ಗದರಿಸಿಕೊಂಡು ಗುಂಪಿನತ್ತ ಹೋಗುವಾಗ ಮಕ್ಕಳ ಸದ್ದಡಗಿತು. ಜೊತೆಗೆ ಕಾಗೆಯ ಕೂಗೂ ನಿಂತಿತು. ಅಧ್ಯಾಪಕರು ಗುಂಪಿಗೆ ನುಗ್ಗಿ “ಯಾರೋ ಕಾಗೆಯನ್ನು ಹಿಡಿದದ್ದು’ ಎಂದು ಕೇಳಿದಾಗ ಮಕ್ಕಳು “ಅದು ಕಾಗೆ ಅಲ್ಲ ಸಾ…ಅದು ಸುರೇಸಾ…’ ಎಂದಾಗ ಅಧ್ಯಾಪಕರು ಆ ಹುಡುಗನನ್ನೊಮ್ಮೆ ದಿಟ್ಟಿಸಿ ನೋಡಿದರು. ನೀನು ಸ್ಟಾಫ್‌ ರೂಮಿಗೆ ಬಾ ಎಂದಾಗ ಹುಡುಗನ ಕೈಕಾಲು ನಡುಗಿತು ಹಾಗೂ ಹೀಗೂ ಸ್ಟಾಫ್‌ ರೂಮಿಗೆ ತಲುಪಿಯಾಯಿತು ಆರನೇ ತರಗತಿಯ ಆ ಪೋರ. ನಡೆದ ವಿಷಯವನ್ನು ಇತರ ಅಧ್ಯಾಪಕರು ತಿಳಿದಾಗ ಇನ್ನೊಮ್ಮೆ ಕೂಗು ಅಂದರು. ಆವಾಗ ಅಲ್ಲಿ ಕಾಗೆಗಳು, ಬೆಕ್ಕು, ನಾಯಿಗಳು, ಪಕ್ಷಿಗಳ ಧ್ವನಿಗಳು ಮೊಳಗಿದವು. ಅಲ್ಲಿಂದ ಬೆನ್ನು ತಟ್ಟಿದ ಅಧ್ಯಾಪಕರಿಂದಾಗಿ ಇಂದು ನಾಡಿನ ತುಂಬಾ ಹೆಸರಾಗಿ ಬಿಟ್ಟಿದ್ದಾರೆ ಮಿಮಿಕ್ರಿ ಎಂದೇ ಕರೆಯಲ್ಪಡುವ ಸುರೇಶ್‌ ಯಾದವ್‌ ಮುಳ್ಳೇರಿಯ.

Advertisement

ಮುಳ್ಳೇರಿಯಾ ಸಮೀಪದ ಜಯನಗರ ಗೋಪಾಲ ಮಣಿಯಾಣಿ-ಜಾನಕಿ ಅಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲಿ ಕಿರಿಯ ಪುತ್ರ ಸುರೇಶ್‌ ಯಾದವ್‌ ಮುಳ್ಳೇರಿಯ.

ಈಗಾಗಲೇ ಪ್ರಕೃತಿಯಲ್ಲಿ ಬರುವ ವಿವಿಧ ಶಬ್ದಗಳೂ, ಸಿನಿಮಾ ನಟರು, ಮಂತ್ರಿಮಹೋದಯರುಗಳ ಶಬ್ದ ಗಳೂ ಹೊರಡುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಸಾಕ್ಷಾತ್ಕರಿ ಸುವಾಗ ಕರತಾಡನಗಳು ಗಗನಕ್ಕೇರುತ್ತಿವೆ. ಮಕ್ಕಳ ಸ್ವರ ತೆಗೆದರೆ ಅದು ಒಂದು ಅಂಗನವಾಡಿಯೇ ಸರಿ. ಜೊತೆಗೆ ಅಲ್ಲಿನ ಅಧ್ಯಾಪಕಿಯ ಹಾಡುಗಳೂ ಕೇಳಿಸುತ್ತಿವೆ. ಯಕ್ಷಗಾನ ಕ್ಷೇತ್ರಕ್ಕೆ ಹೋದರೆ ಅಲ್ಲೊಂದು ಬಯಲಾಟವೇ ನಡೆದಂತೆ ಭಾಗವತರಾದ ದಿನೇಶ ಅಮ್ಮಣ್ಣಾಯ, ಸತ್ಯನಾರಾಯಣ ಪುಣಿಂಚತ್ತಾಯ, ಕಾವ್ಯಶ್ರೀ ಅಜೇರು ಅವರ ತಾಜಾ ಸ್ವರಗಳೂ ಹೊರಡುತ್ತಿವೆ ಆ ನೀಳ ಕಾಯದ ದೇಹದಿಂದ.

ಅವರ ಕಲಾ ಪ್ರೌಢಿಮೆಯನ್ನು ಮನಗಂಡು ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಈ ವರ್ಷದ ಪ್ರಶಸ್ತಿಯನ್ನಿತ್ತು ಪುರಸ್ಕರಿಸಿದೆ. ಇತ್ತೀಚೆಗೆ ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ ಜರಗಿದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣ-6 ಸಮಾರಂಭದಲ್ಲಿ ಕರ್ನಾಟಕ ಸಾರಿಗೆ ಸಚಿವರಾದ ಎಚ್‌.ಎಂ.ರೇವಣ್ಣರಿಂದ ಪ್ರಶಸ್ತಿಯನ್ನು ಸ್ವೀಕರಿಸಿದಾಗ ಈ ಪ್ರಶಸ್ತಿಯು ತನ್ನ ಅಮ್ಮನಿಗೆ ಸಮರ್ಪಣೆ ಎಂದು ಬಯಸಿತು ತನ್ನ 10ನೇ ವಯಸ್ಸಿ ನಲ್ಲಿ ಅಮ್ಮನನ್ನು ಕಳಕೊಂಡ ಆ ಹೃದಯ. ಜೊತೆಗೆ ಕೃತಜ್ಞತಾ ಭಾವವಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಗೆ  ಮತ್ತು ಅವಕಾಶಗಳನ್ನಿತ್ತು ಬೆನ್ನು ತಟ್ಟಿಯೂ, ಹಸ್ತ ಚಾಚಿಯೂ, ಕೈಚಪ್ಪಾಳೆಯೊಂದಿಗೂ ಪ್ರೋತ್ಸಾಹಿಸಿದ ಈ ಪುಣ್ಯ ಮಣ್ಣಿನ ಕಲಾಜಗತ್ತಿಗೆ ಹಾಗೂ ಅಮ್ಮನಾಗಿ ಮುತ್ತಿಕ್ಕಿ ತಲೆ ಬಾಚಿದ ಅಕ್ಕ ಸರೋಜಿನಿಗೆ.

ಶಾಲಾ ಜೀವನದಲ್ಲಿಯೇ ಶಾಲಾ ಮಟ್ಟದ ಮಿಮಿಕ್ರಿ ಸ್ಪರ್ಧೆಯಲ್ಲಿ ಭಾಗವಹಿಸಿ ಉಪಜಿಲ್ಲೆ, ಜಿಲ್ಲಾ ಮಟ್ಟದಲ್ಲಿಯೂ ಪ್ರಥಮ ಬಹುಮಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ದೆಯಲ್ಲಿಯೂ ಭಾಗವಹಿಸಿರುವರು ಹಾಗೂ ಕೇರಳ್ಳೋತ್ಸವದ ಸ್ಪರ್ಧೆಗಳಲ್ಲಿ ಕಾರಡ್ಕ ಗ್ರಾ.ಪಂ.ನಲ್ಲಿ ನವ ದುರ್ಗಾ ಆರ್ಟ್ಸ್ ಆ್ಯಂಡ್‌ ನ್ಪೋರ್ಟ್ಸ್ ಕ್ಲಬ್‌ ಬೀರಂಗೋಲು, ಶಿವಶಕ್ತಿ ವಿವೇಕಾ ನಂದನಗರ ಮುಳ್ಳೇರಿಯ, ಪೌರ್ಣಮಿ ಅಡ್ಕಂ ಎಂಬೀ ಸಂಘಗಳನ್ನು ಪ್ರತಿನಿಧೀಕರಿಸಿ ಪಂಚಾಯತ್‌, ಬ್ಲಾಕ್‌ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ವಿಜಯಿಯಾಗಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿರುವರು.

Advertisement

ಇತ್ತೀಚೆಗೆ ಕಾಸರಗೋಡಿನ ಬೋವಿಕಾನದಲ್ಲಿ ಜರಗಿದ ಫÉವರ್‌ ಚಾನೆಲ್‌ ಕೋಮಡಿ ಮಹೋತ್ಸವದಲ್ಲಿ ಭಾಗವಹಿಸಿ ಆಡಿಯೇಷನ್‌ ಆಯ್ಕೆ ಗೊಂಡಿರುವ ಸುರೇಶ್‌ ಯಾದವ್‌ ಆರ್ಥಿಕವಾಗಿ ಹಿಂದುಳಿದಿರುವ ಮಿಮಿಕ್ರಿ ಪ್ರತಿಭೆಗಳಿಗೆ ಅಗತ್ಯ ನಿರ್ದೇಶನಗಳನ್ನೂ, ತರಬೇತಿಯನ್ನೂ ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ನೀಡಲು ಸಿದ್ಧರಿರುವರು.

ತನ್ನ 11ನೇ ವಯಸ್ಸಿನಲ್ಲಿಯೇ ಪ್ರಕೃತಿಗೆ ರಾಗ ಸಂಯೋಜಿಸಲು ಹೊರಟಂತೆ ಯಕ್ಷಗಾನದಲ್ಲಿಯೂ ಆಸಕ್ತಿ ವಹಿಸಿ ಹಿರಿಯ ಹಾಗೂ ಪ್ರಸಿದ್ಧ  ಯಕ್ಷಗಾನ ಕಲಾವಿದರಾದ ಸಬ್ಬಣಕೋಡಿ ರಾಮ ಭಟ್‌ ಅವರ ನೇತೃತ್ವದಲ್ಲಿ ಮುಳ್ಳೇರಿಯ ಎಯುಪಿ ಶಾಲೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಗತಿಗೆ ಹೋಗಿ ನಾಟ್ಯವನ್ನು ಅಭ್ಯಸಿಸಿ ನೂರಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಮಾಜ ಸೇವೆಯಲ್ಲಿಯೂ ಮುಂಚೂಣಿಯಲ್ಲಿರುವಅವರು ಗಾಯಕ ರಾಗಿಯೂ, ಘಟಂ ವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ.
ವಿದೇಶದಲ್ಲಿ ನಾಲ್ಕು ವರ್ಷಗಳ ಕಾಲ ದುಡಿದ ಅವರು ಕಳೆದ ಆರು ವರ್ಷಗಳಿಂದ ಖಾಸಗಿ ಬಸ್ಸೊಂದರಲ್ಲಿ ಚಾಲಕರಾಗಿ  ದುಡಿಯುತ್ತಿದ್ದಾರೆ. ರಿಕ್ಷಾ ಚಾಲಕರಾಗಿಯೂ, ಆ್ಯಂಬುಲೆನ್ಸ್‌ ಚಾಲಕರಾಗಿಯೂ ದುಡಿದಿರುವ ಅವರು ಈಗಾಗಲೇ ನಾಲ್ಕು ಬಾರಿ ರಕ್ತದಾನ ಗೈದಿದ್ದಾರೆ. ನೂರಾರು ಕಡೆಗಳಲ್ಲಿ ಮಿಮಿಕ್ರಿ ಪ್ರದರ್ಶನ ನೀಡಿರುವ ಅವರನ್ನು ಹತ್ತು ಹಲವು ಪ್ರಶಸ್ತಿ, ಸಮ್ಮಾನ, ಪುರಸ್ಕಾರ ಅರಸಿಕೊಂಡು ಬಂದಿವೆ.

1980 ಎಪ್ರಿಲ್‌ 16ರಂದು ಜನಿಸಿದ ಸುರೇಶ್‌ ಯಾದವ್‌ ನಾಲ್ಕನೇ ತರಗತಿ ತನಕ ಮುಳ್ಳೇರಿಯ ಗಜಾನನ ಎಎಲ್‌ಪಿ ಶಾಲೆಯಲ್ಲಿ, ಏಳನೇ ತರಗತಿವರೆಗೆ ಎಯುಪಿ ಶಾಲೆ ಮುಳ್ಳೇರಿಯ, 10ನೇ ತರಗತಿಯನ್ನು ಮುಳ್ಳೇರಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಪೂರ್ತಿಗೊಳಿಸಿ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿದರು. ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಬೆಳಗಲಿ, ಪ್ರಶಸ್ತಿ, ಪುರಸ್ಕಾರಗಳು ಅರಸಿ ಬರಲಿ ಎಂದು ಹಾರೈಸೋಣ.

– ಬೀನಾ ಬಾರಡ್ಕ

Advertisement

Udayavani is now on Telegram. Click here to join our channel and stay updated with the latest news.

Next