Advertisement

ಎಂಟು‌ ಸಾವಿರ ಶಿಕ್ಷಕರಿಗೆ ಹಿಂಬಡ್ತಿ: ಯಾವುದೇ ಶಿಕ್ಷಕರು‌ ಆತಂಕ ಪಡಬೇಕಿಲ್ಲ :ಸುರೇಶ್ ಕುಮಾರ್

08:05 PM May 29, 2021 | Team Udayavani |

ಬೆಂಗಳೂರು : ಎಂಟು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಹಿಂಬಡ್ತಿಯೆಂಬ ಸುದ್ದಿಗಳ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಇನ್ನಷ್ಟು ವಿಸ್ತೃತವಾಗಿ ಗಮನಿಸಬೇಕಿದೆ ಎಂದು ಶಿಕ್ಷಣ‌ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Advertisement

ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೇಳಿಕೆ‌ಯನ್ನು ಬಿಡುಗಡೆ‌ ಮಾಡಿರುವ ಸಚಿವರು, ನ್ಯಾಯಾಲಯದ ತೀರ್ಪನ್ನು ಇನ್ನಷ್ಟು ತಾಂತ್ರಿಕವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದ್ದು ಈ ಹಂತದಲ್ಲಿ ಯಾವುದೇ ಶಿಕ್ಷಕರೂ ಅನಗತ್ಯ ಗೊಂದಲಕ್ಕೀಡಾಗುವುದು ಬೇಡ ಎಂದಿದ್ದಾರೆ.

ಪ್ರೌಢಶಾಲಾ ಶಿಕ್ಷಕರ ವೃಂದ ನಿಯಮಗಳಂತೆ ನೇರ ನೇಮಕಾತಿಯ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಬಡ್ತಿಗೆ ನಿಗದಿ ಇರುವ ಅನುಪಾತದಂತೆ ಬಡ್ತಿ ಮುಖಾಂತರದಲ್ಲಿಯೂ ಪ್ರೌಢಶಾಲಾ ಶಿಕ್ಷಕ ಹುದ್ದೆಗಳನ್ನು ತುಂಬಲು ಅವಕಾಶವಿದೆ.

ಈವರೆವಿಗೂ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಎಂದರೆ ಏಕ ರೂಪದಲ್ಲಿ ಇದ್ದ 1 ರಿಂದ 7 ನೇ ತರಗತಿ ಶಿಕ್ಷಕ ವೃಂದವಾಗಿತ್ತು. ರಾಷ್ಟ್ರ ವ್ಯಾಪಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ಹುದ್ದೆಗೆ ಇರಬೇಕಾದ ವಿದ್ಯಾರ್ಹತೆಯನ್ನು ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು ( ಎನ್.ಸಿ.ಟಿ.ಇ) ನಿಯಮಿಸುವ ಅಧಿಕಾರವನ್ನು ಹೊಂದಿದ್ದು ಸದರಿ ನಿಯಮಗಳಂತೆ ಮತ್ತು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ 6ರಿಂದ 8ನೇ ತರಗತಿಗಳಿಗೆ ಪ್ರತ್ಯೇಕವಾದ ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕ ವೃಂದವನ್ನು ಹೊಂದಬೇಕಾಗಿರುತ್ತದೆ. ಅದರಂತೆ 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ನಿಯಮಗಳನ್ನು ಪರಿಷ್ಕರಿಸಿ ಪ್ರಾಥಮಿಕ ಶಿಕ್ಷಕ 1 ರಿಂದ 7ನೇ ತರಗತಿಯ ಒಟ್ಟಾರೆ 188000 ವೃಂದ ಬಲದಲ್ಲಿಯೇ ಕಡಿತಗೊಳಿಸಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಗತ್ಯವಿರುವಂತೆ ಒಟ್ಟಾರೆ 52000 ಬಲದ 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಮೂಲ ವೃಂದದಲ್ಲಿಯೂ ಪದವೀಧರ ವಿದ್ಯಾರ್ಹತೆಯುಳ್ಳ ಶಿಕ್ಷಕರು ಇದ್ದು ಸದರಿಯವರಿಗೆ 6 ರಿಂದ 8ನೇ ತರಗತಿ ವೃಂದಕ್ಕೆ ಪರೀಕ್ಷೆ ಮುಖಾಂತರದಲ್ಲಿ ಸೇರ್ಪಡೆಗೊಳ್ಳಲು ಸದರಿ ನಿಯಮಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 42444 ಜನ ಗುಣಮುಖ; 20628 ಹೊಸ ಪ್ರಕರಣ ಪತ್ತೆ

Advertisement

ಅದೇ ರೀತಿಯಲ್ಲಿಯೇ ಪ್ರೌಢಶಾಲಾ ಶಿಕ್ಷಕ ವೃಂದಕ್ಕೆ ಇರುವ ಬಡ್ತಿ ನಿಯಮಗಳಿಗೂ 1 ರಿಂದ 5 ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ ಮತ್ತು 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದವರಿಗೆ ಆಯಾ ವೃಂದ ಬಲದ ಆಧಾರದಲ್ಲಿ ಬಡ್ತಿ ಪ್ರಮಾಣವನ್ನು ನಿರ್ಧರಿಸಿ ನಿಯಮಿಸಬೇಕಾಗಿದೆ. ಈ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಮೇಲಿನ ನ್ಯಾಯಾಲಯ ಆದೇಶ ಹೊರಬಿದ್ದಿದೆ ಎಂದರು.

ಸದರಿ ನ್ಯಾಯಾಲಯ ಆದೇಶದಲ್ಲಿಯೂ ವೃಂದ ನಿಯಮಗಳಿಗೆ ತಿದ್ದುಪಡಿ ತಂದು 1ರಿಂದ 5ನೇ ತರಗತಿ ವೃಂದದಲ್ಲಿ ಅರ್ಹರಿಗೆ ಬಡ್ತಿಗೆ ಅವಕಾಶ ನೀಡಬಹುದಾಗಿದೆ ಎಂಬುದಾಗಿ ಇದೆ. ಜಾರಿಯಲ್ಲಿರುವ ವೃಂದ ನಿಯಮಗಳಲ್ಲಿ 1ರಿಂದ 5 ಮತ್ತು 6 ರಿಂದ 8 ಎಂಬುದನ್ನು ಪ್ರಸ್ತಾಪಿಸಿರುವುದಿಲ್ಲವಾದ್ದರಿಂದ 6 ರಿಂದ 8 ವೃಂದದಿಂದ ಬಡ್ತಿ ಸೂಕ್ತ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹಾಗಾಗಿ 1ರಿಂದ 5ನೇ ತರಗತಿ ವೃಂದ ಬಡ್ತಿಗಳ ಬಗ್ಗೆ ಪ್ರಶ್ನೆ ಎತ್ತಿದೆ.

ಇದು ತಾಂತ್ರಿಕವಾದ ವಿಷಯವಾಗಿದ್ದು 1967ರಿಂದಲೂ ವೃಂದ ನಿಯಮಗಳು ಜಾರಿ ಇದ್ದು 2017ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ಪೂರ್ವದಲ್ಲಿ 1ರಿಂದ 7ನೇ ತರಗತಿ ಶಿಕ್ಷಕ ವೃಂದ ಮತ್ತು ಇದೀಗ 1ರಿಂದ 5ನೇ ತರಗತಿ ಶಿಕ್ಷಕ ವೃಂದ ಎಂದು ನಾಮಾಂತನಗೊಂಡ ವೃಂದವೇ ಆಗಿದೆ. 2017ರ ನಂತರದಲ್ಲಿ ಈ ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಎಲ್ಲ ಕಾಲದ ಬಡ್ತಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next