Advertisement

ಶಿಕ್ಷಕರು ಹುದ್ದೆಯ ಘನತೆ ಕಾಪಾಡಲಿ

01:32 PM Sep 15, 2019 | Naveen |

ಸುರಪುರ: ಸಮಾಜದಲ್ಲಿ ಶಿಕ್ಷಕರನ್ನು ಪೂಜ್ಯನೀಯ ಭಾವದಿಂದ ನೋಡಲಾಗುತ್ತಿದೆ. ಈ ಪರಂಪರೆ ಹಿಂದಿನಿಂದಲು ಬೆಳೆದು ಬಂದಿದೆ. ಅವರಿಗಿರುವ ಘನತೆ ಗೌರವ ಬೇರಾವುದೆ ಹುದ್ದೆಯವರಿಗಿಲ್ಲ. ಕಾರಣ ಶಿಕ್ಷಕರು ತಮ್ಮ ಹುದ್ದೆ ಘನತೆ ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

Advertisement

ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಶಿಕ್ಷಕರ ಸಂಘ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬದಲಾದ ಕಾಲಗಟ್ಟದಲ್ಲಿ ಶಿಕ್ಷಕರು ಬದಲಾಗಬೇಕಾಗಿದೆ. ವಿದ್ಯಾರ್ಥಿಗಳನ್ನು ಗೆಳೆಯರಂತೆ ಪರಿಗಣಿಸಿ ಪಾಠ ಮಾಡಬೇಕಾಗಿದೆ ಎಂದರು.

ಯೋಜನೆಗಳ ಅನುಷ್ಠಾನ, ಕಚೇರಿ ಕೆಲಸಗಳ ಒತ್ತಡದಿಗಳಿಂದ ಶಿಕ್ಷಕರಿಗೆ ಪಾಠ ಪ್ರವಚನಕ್ಕೆ ಹೆಚ್ಚಿನ ಸಮಯ ಸಿಗದಿರುವುದು ವಾಸ್ತವ ಸಂಗತಿ, ಇವುಗಳ ನಡುವೆ ಶಿಕ್ಷಕರು ಸಮಯ ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯ ಉಜ್ವಲಗೊಳಿಸುವ ಪ್ರಯತ್ನ ಮಾಡಬೇಕು. ಕಳೆದ ಬಾರಿ ಹತ್ತನೇ ತರಗತಿ ಫಲಿತಾಂಶ ಬೇಸರ ಮೂಡಿಸಿದೆ. ಇದನ್ನು ಸರಿದೂಗಿಸಲು ಹೆಚ್ಚುವರಿ ತರಗತಿಗಳನ್ನು ನಡೆಸಿ ಈ ಬಾರಿ ಪ್ರತಿಶತ ಫಲಿತಾಂಶ ತರಲು ತಾಲೂಕಿನ ಎಲ್ಲಾ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರ ಕೊರತೆ ನೀಗಿಸಿ ಸಮರ್ಪಕ ಶಿಕ್ಷಕರನ್ನು ಒದಗಿಸುವಂತೆ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯಿಸಿದ್ದೆ. ನೇಮಕಾತಿ ನಂತರ ಶಿಕ್ಷಕರನ್ನು ಒದಗಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ. ಬಿಇಒ ಕಚೇರಿ ಮತ್ತು ಕೆಲ ಕಡೆ ಅರ್ಧಕ್ಕೆ ನಿಂತಿರುವ ಶಾಲಾ ಕಟ್ಟಡಗಳ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳುತ್ತೇನೆ. ಶಿಕ್ಷಕರ ಬಗ್ಗೆ ನನಗೆ ಅಪಾರ ಗೌರವ ಇದೆ. ಸಮಸ್ಯೆ ಇದ್ದಲ್ಲಿ ನೇರವಾಗಿ ಭೇಟಿಯಾಗಿ ತಿಳಿಸಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್ ಮಾತನಾಡಿ, ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದರೂ ಕೂಡ ಫಲಿತಾಂಶ ಮಾತ್ರ ಅಷ್ಟೊಂದು ನೆಮ್ಮದಿ ತರುತ್ತಿಲ್ಲ. ಆದ್ದರಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮ ವಹಿಸಬೇಕು ಎಂದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೇಕಾರ ಮಾತನಾಡಿ, ಶಿಕ್ಷಕ ಸಮುದಾಯದ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಅದನ್ನು ಅರಿತು ಶಿಕ್ಷಕರು ಪ್ರಜ್ಞೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಸೂಚಿಸಿದರು.

ಇದೇ ವೇಳೆ ನಿವೃತ್ತರಿಗೆ, ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಲಕ್ಷ್ಮೀಪುರ ಶ್ರೀಗಿರಿ ಮಠದ ಬಸವಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಶಾರದಾ ಬೇವಿನಾಳ, ಜಿಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ, ಪ್ರಮುಖರಾದ ರಾಜಾ ಹಣಮಪ್ಪ ನಾಯಕ ತಾತಾ, ಯಲ್ಲಪ್ಪ ಕುರುಕುಂದಿ, ಡಾ| ಸುರೇಶ ಸಜ್ಜನ್‌, ಹೆಚ್.ಸಿ. ಪಾಟೀಲ, ಕಿಶೋರ ಚಂದ್‌ ಜೈನ್‌, ದೊಡ್ಡ ದೇಸಾಯಿ ದೇವರಗೋನಾಲ, ಪ್ರಕಾಶ ಸಜ್ಜನ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ಪ್ರಾ.ಶಾ.ಶಿ.ಸಂ. ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ, ತಾಲೂಕು ಅಧ್ಯಕ್ಷ ಸೋಮರೆಡ್ಡಿ ಮಂಗ್ಯಾಳ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ದರಬಾರಿ, ಶರಣು ಗಚ್ಚಿನ, ಯಲ್ಲಪ್ಪ ಕಾಡ್ಲೂರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next