Advertisement

ರುಕ್ಮಾಪುರದಲ್ಲಿ ನೀರವ ಮೌನ

12:52 PM Sep 09, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ: ಕಾರ್ತಿಕ್‌ ಬಡಗಾ ಜನಿಸಿದ ರುಕ್ಮಾಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಕಾರ್ತಿಕನ ತಂದೆ ಕೀರಪ್ಪ, ತಾಯಿ ಭಾರತಿ ಬಡಗಾ ದುಃಖ ಮಡುಗಟ್ಟಿತ್ತು. ಒತ್ತರಿಸಿ ಬರುತ್ತಿದ್ದ ಅಶ್ರುಧಾರೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಮಗನ ಅಂಗಾಂಗಗಳು ಆರು ಜೀವ ಉಳಿಸಿದವು ಎನ್ನುವ ಧನ್ಯತಾಭಾವ ಅವರ ಮೊಗದಲ್ಲಿತ್ತು.

Advertisement

ಪಾಲಕರನ್ನು ಸಮಾಧಾನ ಪಡಿಸಲು ಬಂಧು-ಬಳಗದವರು, ನೆರೆಹೊರೆಯವರು ಸಾಲುಗಟ್ಟಿ ಬರುತ್ತಿದ್ದರು. ಈ ವೇಳೆ ಇವರೆಲ್ಲ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ಕಾರ್ತಿಕ್‌ನ ತಂದೆ-ತಾಯಿ ಪರಿತಪಿಸುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು.

ಚಿಕಿತ್ಸೆ ತಡವಾಗಿದ್ದೇ ಸಾವಿಗೆ ಕಾರಣ: ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರೆ ಕಾರ್ತಿಕ್‌ ಬದುಕುಳಿಯ ಬಹುದಾಗಿತ್ತು. ಕೊನೆ ಹಂತದಲ್ಲಿ ಬಂದಿದ್ದರಿಂದ ನಾವೆಷ್ಟೆ ಪ್ರಯತ್ನ ಮಾಡಿದ್ದರೂ ಚಿಕಿತ್ಸೆಗೆ ದೇಹ ಸ್ಪಂದಿಸಲಿಲ್ಲ. ಇದರಿಂದ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಸೊಲ್ಲಾಪುರ ಯೋಶಧರಾ ಆಸ್ಪತ್ರೆ ಡೀನ್‌ ಡಾ| ಬಸವರಾಜ ಕೊಳ್ಳೂರ ಮೊಬೈಲ್ ಮೂಲಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜಾಗೃತಿ ಅಗತ್ಯ: ಕಾರ್ತಿಕ್‌ನನ್ನು ಆವರಿಸಿಕೊಂಡಿದ್ದ ‘ಸರೆಬ್ರಲ್ ವೇನೆಸಿಸ್‌ ಟ್ರೋಮೊrಸಿಸ್‌’ ಎನ್ನುವ ಈ ರೋಗ ಅತ್ಯಂತ ಅಪಾಯಕಾರಿಯಾಗಿತ್ತು. ಈ ರೋಗ ಮೆದುಳಿನ ರಕ್ತ ಪರಿಚಲನೆ ನಿಲ್ಲಿಸುತ್ತದೆ. ಈ ರೋಗದ ಬಗ್ಗೆ ಜನ ಜಾಗೃತಿ ಅವಶ್ಯ ಎಂದು ಸೊಲ್ಲಾಪುರ ಯಶೋಧರಾ ಆಸ್ಪತ್ರೆ ವೈದ್ಯ ಡಾ| ನೀಲರೋಹಿತ ಪಾಕೆ ತಿಳಿಸಿದ್ದಾರೆ.

ಕುಟುಂಬದ ಆರ್ಥಿಕ ಸ್ಥಿತಿ ಗಂಭೀರ: ಈಗಾಗಲೇ ಎರಡು ಮಕ್ಕಳನ್ನು ಕಳೆದುಕೊಂಡಿದ್ದ ಬಡಗಾ ಕುಟುಂಬಕ್ಕೆ ಇದು ಇನ್ನೊಂದು ಆಘಾತ. ಈ ಕುಟುಂಬ ತೀರಾ ಬಡತನದಲ್ಲಿದೆ. ಜೀವನಕ್ಕೆ ಆಧಾರ ಆಗಬೇಕಿದ್ದ ಕಾರ್ತಿಕ್‌ ಸಾವಿನಿಂದ ಕುಟುಂಬ ಕಂಗೆಟ್ಟಿದೆ. ಮಗನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಬಡಗಾ ಕುಟುಂಬಕ್ಕೆ ಸರ್ಕಾರ ಸರಕಾರಿ ನೌಕರಿ ಕೊಡಬೇಕು. ಕುಟುಂಬದ ಆರ್ಥಿಕ ಸ್ಥಿತಿಗೆ ನೆರವಾಗಬೇಕು ಎಂದು ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next