Advertisement

ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರ ಸೂಚನೆ ಸರಿ: ಸುಪ್ರೀಂಕೋರ್ಟ್‌

11:30 PM Apr 14, 2020 | Hari Prasad |

ನವದೆಹಲಿ: ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ರಾಜ್ಯಪಾಲ ಲಾಲ್‌ಜಿ ಟಂಡನ್‌ ಸೂಚಿಸಿದ್ದು ಸರಿಯಾಗಿಯೇ ಇದೆ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ರಾಜ್ಯಪಾಲರಿಗೆ ಇಂಥ ಸೂಚನೆ ನೀಡಲು ಅಧಿಕಾರ ಇದೆ ಎಂದು ನ್ಯಾ.ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ.ಹೇಮಂತ್‌ ಗುಪ್ತಾ ನೇತೃತ್ವದ ನ್ಯಾಯಪೀಠ ಹೇಳಿದೆ.

Advertisement

1994ರ ಎಸ್‌.ಆರ್‌.ಬೊಮ್ಮಾಯಿ ಪ್ರಕರಣ ಉಲ್ಲೇಖೀಸಿದ ನ್ಯಾಯಪೀಠ, ಬಹುಮತ ಸಾಬೀತುಮಾಡುವಂತೆ ಮುಖ್ಯಮಂತ್ರಿಗೆ ಸೂಚಿಸಲು ರಾಜ್ಯಪಾಲರಿಗೆ ಅಧಿಕಾರ ಇದೆ ಎಂದು ಅಭಿಪ್ರಾಯಪಟ್ಟಿದೆ. ಕಮಲ್‌ನಾಥ್‌ ಪ್ರಕರಣದಲ್ಲಿ ಕೂಡ ರಾಜ್ಯಪಾಲ ಲಾಲ್‌ಜಿ ಟಂಡನ್‌ಗೆ ಅಂಥ ಅಧಿಕಾರವಿದೆ ಎಂದಿದೆ. ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡಲು ಸಿಎಂ ನಿರಾಕರಿಸಿದರು ಎಂದಾದರೆ ಮೇಲ್ನೋಟಕ್ಕೇ ಅವರಿಗೆ ಬಹುಮತ ಇಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖೀಸಿದ್ದ ಅಂಶವನ್ನು ನ್ಯಾಯಪೀಠ  ಮತ್ತೂಮ್ಮೆ ಪ್ರಸ್ತಾಪ ಮಾಡಿತು.

ಇದರಿಂದಾಗಿ ಸುಪ್ರೀಂ ಮೆಟ್ಟಿಲೇರಿದ್ದ ಮಾಜಿ ಸಿಎಂ ಕಮಲ್‌ನಾಥ್‌ಗೆ ಹಿನ್ನೆಡೆಯಾಗಿದೆ. ರಾಜ್ಯಪಾಲರಿಗೆ ವಿಶೇಷ ಅಧಿವೇಶನ ಕರೆಯಲು ಮಾತ್ರ ಅಧಿಕಾರವಿದೆ. ವಿಶ್ವಾಸಮತ ಸಾಬೀತು ಮಾಡಿ ಎಂದು ಹೇಳಲು ಅಧಿಕಾರವೇ ಇಲ್ಲ ಎಂದಿದ್ದರು. ಮಾ.19ರಂದು ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್‌ ಎನ್‌.ಪಿ.ಪ್ರಜಾಪತಿಗೆ ಮಾ.20 ವಿಶೇಷ ಅಧಿವೇಶನ ನಡೆಸಿ ಬಹುಮತ ಸಾಬೀತು ಮಾಡಲು ಅವಕಾಶ ಮಾಡುವಂತೆ ಸೂಚಿಸಿತ್ತು ಸುಪ್ರೀಂಕೋರ್ಟ್‌. ಅದೇ ದಿನ 15 ತಿಂಗಳು ಅಧಿಕಾರ ನಡೆಸಿ ಕಮಲ್‌ ರಾಜೀನಾಮೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next