Advertisement

ರೈತ ಹೋರಾಟ ಬೆಂಬಲಿಸಿ ದೆಹಲಿ ಪಾದಯಾತ್ರೆ 

06:08 PM Aug 03, 2021 | Team Udayavani |

ಹುಬ್ಬಳ್ಳಿ: ಕೇಂದ್ರ ಸರಕಾರದ ಕೃಷಿ ಕಾಯ್ದೆ ರದ್ಧತಿ ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಖಾತ್ರಿ ಕಾನೂನು ರೂಪಣೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಚಾಮರಾಜನಗರ ಜಿಲ್ಲೆಯಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿರುವ ನಾಗರಾಜ ಕುಲ್ಕುಟಕರ್‌ ಅವರನ್ನು ನಗರದಲ್ಲಿ ವಿವಿಧ ಹೋರಾಟಗಾರರು ಸ್ವಾಗತಿಸಿದರು.

Advertisement

ನಾಗರಾಜ ಕುಲ್ಕುಟಕರ ಬಾಗಲಕೊಟೆ ಜಿಲ್ಲೆ ಚಿತ್ತರಗಿಯವರಾಗಿದ್ದು, ಎಂಎಸ್ಸಿ, ಎಂಟೆಕ್‌ ಪದವೀಧರಾಗಿದ್ದಾರೆ. ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ರೈತರ ಹೋರಾಟ ಬೆಂಬಲಿಸಿ ಚಾಮರಾಜನಗರ ಜಿಲ್ಲೆ ಮಲೆಮಾದೇಶ್ವರ ಬೆಟ್ಟದಿಂದ ಏಕಾಂಗಿಯಾಗಿ ದೆಹಲಿ ಚಲೋ ಪಾದಯಾತ್ರೆ ಕೈಗೊಂಡಿದ್ದಾರೆ.

ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಅವರನ್ನು ಸ್ವಾಗತಿಸಿ ಮಾತನಾಡಿದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಮಹದಾಯಿ ವಿಚಾರದಲ್ಲಿ ರಾಜ್ಯ ಸರಕಾರ ಯಾವುದೇ ಪ್ರಸ್ತಾವನೆ ಕಳುಹಿಸದೆ ಸುಳ್ಳು ಹೇಳಿದೆ. ಕೋರ್ಟ್‌ ಆದೇಶದಂತೆ ಸರಕಾರ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಮಹೇಶ ಪತ್ತಾರ ಮಾತನಾಡಿ, ಸುಮಾರು 7 ಸಾವಿರ ಕಿಮೀ ದೂರ ಪಾದಯಾತ್ರೆ ನಡೆಸುವ ಮೂಲಕ ನಾಗರಾಜ ಅವರು ರೈತರಲ್ಲಿ ಜಾಗೃತಿ ಮೂಡಿಸುವ ಹಾಗೂ ರೈತ ಹೋರಾಟಕ್ಕೆ ಮಹತ್ವದ ಬೆಂಬಲಕ್ಕೆ ಮುಂದಾಗಿದ್ದಾರೆ ಎಂದರು. ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ಪುಂಡಲೀಕ ಬಡಿಗೇರ, ಪ್ರಕಾಶ ಉಳ್ಳಾಗಡ್ಡಿ , ಕಿರ್ಶೋ ಶೆಟಿ, ಶಿವಣ್ಣ ಅಸೂಟಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next