Advertisement

ಕಾಳಸಂತೆ ಪಡಿತರ ಅಕ್ಕಿ ತಡೆಗೆ ಶಾಸಕರ ಸವಾಲು

12:50 PM May 07, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಪಡಿತರ ಅಕ್ಕಿ ವ್ಯಾಪಕವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ನಿಯಂತ್ರಿಸಲು ನಿಮ್ಮಿಂದ (ಅಧಿಕಾರಿಗಳಿಂದ) ಸಾಧ್ಯವೇ ಇಲ್ಲ. ರೈಸ್‌ಮಿಲ್‌ಗ‌ಳಿಗೆ ಹೋದರೆ ಲೋಡ್‌ ಗಟ್ಟಲೆ ಪಡಿತರ ಅಕ್ಕಿ ಸಿಗುತ್ತದೆ. ಈಗಲೇ ತೋರಿಸುತ್ತೇನೆ ನನ್ನೊಂದಿಗೆ ಬರುತ್ತೀರಾ? ಹೀಗೆಂದು ಅಧಿಕಾರಿಗಳಿಗೆ ಸವಾಲು ಹಾಕಿದವರು ಜಗಳೂರು ಕ್ಷೇತ್ರದ ಶಾಸಕ ಎಸ್‌.ವಿ. ರಾಮಚಂದ್ರ.

Advertisement

ಶುಕ್ರವಾರ ಜಿಪಂ ಸಭಾಭವನದಲ್ಲಿ ನಡೆದ ಕೆಡಿಪಿ ನಾಲ್ಕನೇ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ರೀತಿ ಸವಾಲು ಹಾಕಿದರು. ಆದರೆ, ಆಹಾರ ಇಲಾಖೆ ಅಧಿಕಾರಿ ಸವಾಲು ಸ್ವೀಕರಿಸದೇ ತಮ್ಮ ಸಬೂಬು ಮುಂದುವರಿಸಿದರು.

ನ್ಯಾಯಬೆಲೆ ಅಂಗಡಿಗಳಿಗೆ ಹೋಗಬೇಕಾದ ಪಡಿತರ ಅಕ್ಕಿ ಲೋಡ್‌ ಗಟ್ಟಲೆ ರೈಸ್‌ ಮಿಲ್‌ಗ‌ಳಿಗೆ ನೇರವಾಗಿ ಹೋಗುತ್ತಿವೆ. ಇದನ್ನು ತಡೆಯುವುದನ್ನು ಬಿಟ್ಟು ಅಧಿಕಾರಿಗಳು, ಮನೆ ಮನೆಗೆ ಹೋಗಿ ಸಂಗ್ರಹಿಸಿದ 5-10ಕೆ.ಜಿ. ಅಕ್ಕಿ ಹಿಡಿದು, ಹೆಸರಿಗಾಗಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಹರಿಹರ ಶಾಸಕ ಎಸ್‌. ರಾಮಪ್ಪ ಸಹ ಧ್ವನಿಗೂಡಿಸಿ, ದೊಡ್ಡ ಪ್ರಮಾಣದ ಅಕ್ರಮ ಕೈಬಿಟ್ಟು ಅಧಿಕಾರಿಗಳು ಸಣ್ಣಪುಟ್ಟ ಪ್ರಕರಣ ದಾಖಲಿಸಿ, ಪತ್ರಿಕೆ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ ಎಂದರು.

ಎಷ್ಟೇ ದೊಡ್ಡವರಿದ್ದರೂ ಕ್ರಮ ಕೈಗೊಳ್ಳಿ

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಮಾತನಾಡಿ, ಆಹಾರ ಇಲಾಖೆಯವರಿಗೆ ಅಕ್ಕಿ ನೋಡಿದಾಕ್ಷಣ ಅದು ಪಡಿತರ ಅಕ್ಕಿ ಹೌದೋ ಅಲ್ಲವೋ ಎಂಬುದು ತಿಳಿಯುವ ಅನುಭವ ಇರಬೇಕು. ಚೀಲ ಇದ್ದರೆ ಮಾತ್ರ ಅಕ್ಕಿ ಗುರುತಿಸುವುದಾದರೆ ಇದು ಅಕ್ರಮಕ್ಕೆ ಅಧಿಕಾರಿಗಳೇ ಇಂಬು ಕೊಟ್ಟಂತಾಗುತ್ತದೆ. ಅಧಿಕಾರಿಗಳು ಇಂಥ ಸಬೂಬುಗಳನ್ನು ನೀಡದೆ ಪಡಿತರ ಅಕ್ಕಿ ಅಕ್ರಮ ಕಡಿವಾಣ ಹಾಕಲು ಪೊಲೀಸರ ಸಹಕಾರದೊಂದಿಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಎಷ್ಟೇ ದೊಡ್ಡವರಿದ್ದರೂ ಅವರ ಮೇಲೆ ಪ್ರಕರಣ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು.

Advertisement

ವ್ಯಾಪಾರಿಗಳ ರಾಗಿ ಖರೀದಿಸಬೇಡಿ

ರಾಗಿ ಖರೀದಿ ವಿಚಾರವಾಗಿ ಮಾತನಾಡಿದ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಖರೀದಿ ಕೇಂದ್ರದ ಅಧಿಕಾರಿಯೇ ಕೆಲವು ವ್ಯಾಪಾರಿಗಳನ್ನು ಕರೆದುಕೊಂಡು ಬಂದು ರೈತರ ಹೆಸರಲ್ಲಿ ರಾಗಿ ಖರೀದಿಸುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಭೈರತಿ ಬಸವರಾಜ್‌, ಸಂಸದ ಜಿ.ಎಂ. ಸಿದ್ದೇಶ್ವರ, ರೈತರಿಗೆ ಅನುಕೂಲ ಕಲ್ಪಿಸುವ ಯೋಜನೆ ಮಧ್ಯವರ್ತಿಗಳ ಪಾಲಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ರೈತರಿಂದ ದೂರು ಬಂದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ನೀರಿನ ಸಮಸ್ಯೆ ಇಲ್ಲ

ಕುಡಿಯುವ ನೀರಿನ ಕುರಿತು ಮಾತನಾಡಿದ ಜಿಪಂ ಸಿಇಒ ಡಾ| ಎ.ಚನ್ನಪ್ಪ, ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿ, ಟ್ಯಾಂಕರ್‌ ಮೂಲಕ ನೀರು ಒದಗಿಸುವಷ್ಟು ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. ಜಲಜೀವನ ಮಿಷನ್‌ ಯೋಜನೆ ಮೂಲಕ ಮನೆಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ಮೊದಲ ಹಂತದಲ್ಲಿ 188 ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು. ಶಾಸಕ ರಾಮಪ್ಪ, ಭಾನುವಳ್ಳಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಕೋರಿದರು. ಜಿಪಂ ಸಿಇಒ ಕೂಡಲೇ ಸ್ಪಂದಿಸುವ ಭರವಸೆ ನೀಡಿದರು.

ದೂರು ಬಂದರೆ ಶಿಸ್ತುಕ್ರಮ ಎಚ್ಚರಿಕೆ

ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು ಎಲ್ಲರಿಗೂ ಎರಡು ಡೋಸ್‌ ಲಸಿಕೆ ಆಗಿರುವ ಬಗೆಗೆ ಖಾತ್ರಿ ಪಡಿಸಿಕೊಳ್ಳಬೇಕು. ಶೇ.100ರಷ್ಟು ಎಲ್ಲರಿಗೂ ಲಸಿಕೆ, ಬೂಸ್ಟರ್‌ ಡೋಸ್‌ ಲಸಿಕೆ ಆಗಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ, ಗೊಬ್ಬರ ಕೊರತೆ ಉಂಟಾಗದಂತೆ ಕ್ರವವಹಿಸಬೇಕು. ಶಾಲಾರಂಭಗೊಳ್ಳುವ ಮೊದಲೇ ವಿದ್ಯಾಥಿ ವಸತಿ ನಿಲಯಗಳನ್ನು ಶುಚಿಗೊಳಿಸಬೇಕು. ತೀರಾ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ನರೇಗಾದಡಿ ದುರಸ್ತಿಗೆ ಕ್ರಮವಹಿಸಬೇಕು. ಅಧಿಕಾರಿಗಳು ತಮ್ಮ ಇಲಾಖೆಗೆ ನೀಡಿದ ಅನುದಾನ ಸಮರ್ಪಕ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಅನಿರೀಕ್ಷಿತವಾಗಿ ಭೇಟಿ ನೀಡಿ ನಾನು ಪರಿಶೀಲಿಸುತ್ತೇನೆ. ಆಗ ತಪ್ಪು ಕಂಡು ಬಂದರೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಸಚಿವ ಭೈರತಿ ಬಸವರಾಜ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌ ನವೀನ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಹಸುಗಳಿಗೆ ಸಮಸ್ಯೆ ಗೊತ್ತಾಗುತ್ತಾ?

ಪಶು ಆಸ್ಪತ್ರೆಗಳಲ್ಲಿ ವೈದ್ಯರೇ ಇರುವುದಿಲ್ಲ ಎಂದು ಶಾಸಕ ರಾಮಚಂದ್ರ ಸಭೆಯಲ್ಲಿ ದೂರಿದರು. ಆಗ ಪಶು ಇಲಾಖಾಧಿಕಾರಿ, ಸಿಬ್ಬಂದಿ ಕೊರತೆ ಬಹಳ ಇದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಮಚಂದ್ರ, ವೈದ್ಯರಿಲ್ಲ ಎಂಬುದು ಮನುಷ್ಯರಾದ ನಮಗೆ ಗೊತ್ತಾಗುತ್ತದೆ. ಆದರೆ, ಹಸು-ಎತ್ತುಗಳಿಗೆ ಸಮಸ್ಯೆ ಗೊತ್ತಾಗುತ್ತದೆಯೇ? ಎಲ್ಲಿ ಹೆಚ್ಚು ಬೇಡಿಕೆ ಇದೆಯೋ ಅಲ್ಲಿಗೆ ಬೇರೆ ಕಡೆಯಿಂದ ವೈದ್ಯರನ್ನು ನಿಯೋಜಿಸುವ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಅಕ್ಕಿ ಗುರುತಿಸದ ಆಹಾರ ಅಧಿಕಾರಿಗಳು!

ಪಡಿತರ ಅಕ್ಕಿ ಅಕ್ರಮ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಪಡಿತರ ಅಕ್ಕಿ ಅಕ್ರಮ ದಾಸ್ತಾನು ಬಗ್ಗೆ ಅಧಿಕಾರಿಗಳು ದೂರು ಕೊಡಲು ಮುಂದೆ ಬರಬೇಕು. ದೂರು ಕೊಟ್ಟಾಗ ಮಾತ್ರ ನಾವು ಮುಂದುವರಿಯಲು ಸಾಧ್ಯ. ಇನ್ನು ಹಿಡಿದಿರುವ ಅಕ್ಕಿ ಪಡಿತರ ಅಕ್ಕಿ ಹೌದೋ ಅಲ್ಲವೋ ಎಂಬುದನ್ನು ಗುರುತಿಸುವಲ್ಲಿಯೂ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಪಡಿತರ ಅಕ್ಕಿ ಹೌದೋ ಅಲ್ಲವೋ ಎಂಬುದಕ್ಕೆ ಅಕ್ಕಿಯ ಚೀಲದ ಮೇಲೆ ಮುದ್ರಿತ ಚಿಹ್ನೆ ನೋಡಬೇಕು ಎನ್ನುತ್ತಾರೆ. ಪತ್ತೆ ಹಚ್ಚಿದ ಅಕ್ಕಿಗೆ ಮೂಲ ಚೀಲವೇ ಇರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next