Advertisement

ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ಆರಂಭ: ಡಾ|ಪ್ರಭಂಜನ್‌

02:56 PM Dec 11, 2017 | Team Udayavani |

ಬಳ್ಳಾರಿ: ನಗರದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಉತ್ತಮ ಗುಣಮಟ್ಟದ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಹೊಂದಿರುತ್ತದೆ ಎಂದು ವಿಮ್ಸ್‌ ನಿರ್ದೇಶಕ ಡಾ| ಪ್ರಭಂಜನ್‌ ಕುಮಾರ್‌ ತಿಳಿಸಿದರು.

Advertisement

ನಗರದ ವಿಮ್ಸ್‌ ಶಿಕ್ಷಕರ ಭವನದಲ್ಲಿ ಇಂಡಿಯನ್‌ ಅಸೋಸಿಯೆಷನ್‌ ಫಾರ್‌ ಪೇಡಿಯಾಟ್ರಿಕ್‌ ಸರ್ಜರಿಯ ಬಳ್ಳಾರಿ ಜಿಲ್ಲಾ ಘಟಕ, ವಿಮ್ಸ್‌ ಸಂಸ್ಥೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಮಕ್ಕಳ ಶಸ್ತ್ರಚಿಕಿತ್ಸಕರ ಸಂಘದ ಬಳ್ಳಾರಿ ಘಟಕಗಳ ಆಶ್ರಯದಲ್ಲಿ 
ಆಯೋಜಿಸಿರುವ 12ನೇ ರಾಜ್ಯ ಮಟ್ಟದ ಮಕ್ಕಳ ಶಸ್ತ್ರಚಿಕಿತ್ಸಕರ ಸಮ್ಮೇಳನ-ಪೆಸುಕಾನ್‌-2017 ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವುದರ ಮೂಲಕ ತಜ್ಞರ ವಿಶೇಷ ಉಪನ್ಯಾಸಗಳನ್ನು ಆಲಿಸುವ ಮೂಲಕ ವೈದ್ಯಕೀಯ ಜ್ಞಾನದ ಉನ್ನತೀಕರಣ ಮಾಡಿಕೊಳ್ಳಬಹುದಾಗಿದೆ ಎಂದರು. 

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್‌ ಅಸೋಸಿಯೆಷನ್‌ ಫಾರ್‌ ಪೇಡಿಯಾಟ್ರಿಕ್‌ ಸರ್ಜರಿಯ ರಾಷ್ಟ್ರ ಘಟಕದ
ಅಧ್ಯಕ್ಷರಾಗಿ ಆಯ್ಕೆಯಾದ ಇಂದಿರಾ ಗಾಂಧಿ  ಇನ್ಸ್‌ಟಿಟ್ಯೂಟ್‌ ಆಫ್‌ ಚೈಲ್ಡ್‌ ಹೆಲ್ತ್‌ನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಎಸ್‌. ರಮೇಶ್‌, ವೆಲ್ಲೂರಿನ ಸಿಎಂಸಿ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಹಿರಿಯ ಮಕ್ಕಳ ಶಸ್ತ್ರ ಚಿಕಿತ್ಸಕ ಡಾ| ಸುದೀಪ್ತ ಸೇನ್‌, ಬೆಂಗಳೂರಿನ ನಾರಾಯಣ ಹಾಸ್ಪಿಟಲ್‌ನ ಡಾ| ಆಶ್ಲೇ ಡಿಕ್ರೂಜ್‌ ಅವರನ್ನು ಆಯೋಜಕರು ಸನ್ಮಾನಿಸಿದರು. ಭಾರತೀಯ ಮಕ್ಕಳ ಶಸ್ತ್ರಚಿಕಿತ್ಸರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂಜಯ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳನದ ಆಯೋಜಕ, ವಿಮ್ಸ್‌ನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್‌ ಡಾ| ಗಡ್ಡಿ ದಿವಾಕರ್‌ ಸ್ವಾಗತಿಸಿದರು. ಸಮಾರಂಭದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ 150ಕ್ಕೂ ಹೆಚ್ಚು ಮಕ್ಕಳ ಶಸ್ತ್ರಚಿಕಿತ್ಸಾ, ಸಾಮಾನ್ಯ ಶಸ್ತ್ರಚಿಕಿತ್ಸಾ ತಜ್ಞರು, ವಿಮ್ಸ್‌ನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರೊಫೆಸರ್‌ಗಳು, ಸ್ನಾತಕೋತ್ತರ, 
ವೈದ್ಯಕೀಯ ವಿದ್ಯಾರ್ಥಿಗಳು, ಘಟಕದ ಕಾರ್ಯದರ್ಶಿ ಡಾ| ದೀಪ್ತಿ, ವಿಮ್ಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಡಿ. ಕೃಷ್ಣಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next