Advertisement
ಸದಾ ನಗುಮುಖ, ಗೆಲುವಾಗಲಿ ಸೋಲಾಗಲಿ ಯಾವುದಕ್ಕೂ ಅತಿಯಾಗಿ ಪ್ರತಿಕ್ರಿಯಿಸದ ಶಾಂತಮೂರ್ತಿ, ಎದುರು ನಿಂತು ತಂಡವನ್ನು ಮುನ್ನಡೆಸುವ ಲೀಡರ್ .. ಹೀಗೆ ಹೇಳುತ್ತಾ ಹೋದರೆ ಕೇನ್ ವಿಲಿಯಮ್ಸನ್ ಗುಣಗಾನಕ್ಕೆ ವಿಶೇಷಣಗಳು ಸಾಲದು. ಅಂತಹ ವ್ಯಕ್ತಿತ್ವ ಆತನದ್ದು.
Related Articles
Advertisement
ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಗೆ ತಂಡವನ್ನು ಕೊಂಡೊಯ್ದಿದ್ದ ವಿಲಿಯಮ್ಸನ್ ಕಪ್ ಗೆಲ್ಲಲಾಗದೆ ಹತಾಶನಾಗಿದ್ದ. ವಿಶ್ವಕಪ್ ಹಿಡಿದು ಸಂಭ್ರಮಿಸಬೇಕು ಎಂದೆಣಿಸಿದ್ದ ಕಪ್ಪು ಕುದುರೆಗಳಿಗೆ ಆ ಸೂಪರ್ ಓವರ್ ನಲ್ಲಿ ಏನಾಯಿತೆಂದು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು. ವಿವಾದ, ವಿಷಾದ, ಗೊಂದಲಗಳಿಗೆ ಕಾರಣವಾದ ವಿಶ್ವಕಪ್ ಫೈನಲ್ ನಂತರ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಏನು ಹೇಳದೆ, ಅದೇ ಮಂದಸ್ಮಿತನಾಗಿ ನಿಂತಿದ್ದ. ಒಂದು ಚೂರು ಕೂಗಾಡಲಿಲ್ಲ, ಅತಿರೇಕದ ಹತಾಶೆ ವ್ಯಕ್ತಪಡಿಸಲಿಲ್ಲ, ಆಟಗಾರರ ಮೇಲೆ ಕೋಪ ತೋರಲಿಲ್ಲ. ವಿಶ್ವಕಪ್ ಎತ್ತಲಾಗಲಿಲ್ಲ ಎಂಬ ಬೇಸರ ಬಿಟ್ಟರೆ ಬೇರೇನೂ ಹೇಳಲಿಲ್ಲ. ಕಪ್ ಗೆಲ್ಲಲಾಗದಿದ್ದರೂ ಕೇನ್ ವಿಲಿಯಮ್ಸನ್ ವಿಶ್ವವನ್ನೇ ಗೆದ್ದಿದ್ದ.
ಮತ್ತೊಂದು ಸೂಪರ್ ಓವರ್, ಮತ್ತೊಂದು ಹೋರಾಟ, ಮತ್ತೊಂದು ಸೋಲುಏಕದಿನ ವಿಶ್ವಕಪ್ ಸೂಪರ್ ಓವರ್ ಸೋಲಿನ ಸುಮಾರು 7 ತಿಂಗಳ ಬಳಿಕ ವಿಲಿಯಮ್ಸನ್ ಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಯಿತು. ತವರಿನಲ್ಲಿ ಟಿ20 ಸರಣಿ ಉಳಿಸಿಕೊಳ್ಳುವ ಸವಾಲು. ಮೊದಲೆರಡು ಪಂದ್ಯ ಸೋತಿದ್ದರಿಂದ ಮೂರನೇ ಪಂದ್ಯವನ್ನು ಶತಾಯಗತಾಯ ಗೆಲ್ಲಲೇ ಬೇಕೆಂಬ ಒತ್ತಡ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಗಳಿಸಿದ್ದು 179 ರನ್. ಹ್ಯಾಮಿಲ್ಟನ್ ಅಂಗಳದಲ್ಲಿ ಇದು ಕಡಿಮೆಯೇ. ಪಂದ್ಯ ಗೆಲ್ಲಲೇ ಬೇಕೆಂದು ಹಠ ಹಿಡಿದಂತೆ ಆಡಿದ ವಿಲಿಯಮ್ಸನ್ ಅಂತಿಮ ಓವರ್ ತನಕ ಹೋರಾಡಿದರು. ಇನ್ನೇನು ಗೆಲುವಿಗೆ ಎರಡು ರನ್ ಬೇಕಾಗಿದ್ದಾಗ ಔಟ್. 95 ರನ್ ಗಳಿಸಿದ್ದ ವಿಲಿಯಮ್ಸನ್ ಗೆ ಶತಕ ವಂಚಿತ ಆದೆ ಎಂಬ ಬೇಸರ ಎಳ್ಳಷ್ಟು ಇರಲಿಲ್ಲ. ಆದರೆ ಇಷ್ಟು ಹೋರಾಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಾಗಲಿಲ್ಲ ಎಂಬ ಬೇಸರದಿಂದಲೇ ಸೂಪರ್ ಓವರ್ ಗೆ ಸಿದ್ದರಾಗಿದ್ದರು.