Advertisement

ಸೂಪರ್ ಓವರ್.. ನ್ಯೂಜಿಲ್ಯಾಂಡ್ ಮತ್ತು ವಿಲಿಯಮ್ಸನ್ ಎಂಬ ಹೃದಯವಂತ

09:49 AM Feb 01, 2020 | keerthan |

ವಿಶ್ವ ಕ್ರಿಕೆಟ್ ನಲ್ಲಿ ಆಧುನಿಕ ಫ್ಯಾಬ್ ಫೋರ್ ಎಂದು ಕರೆಸಿಕೊಂಡವರು ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಮತ್ತು ಜೋ ರೂಟ್‌. ಇವರೆಲ್ಲರೂ ತಮ್ಮ ಅದ್ಭುತ ಬ್ಯಾಟಿಂಗ್‌ ಕೌಶಲದಿಂದ ಮನ್ನಣೆ ಪಡೆದವರು. ಆದರೆ ಇವರಲ್ಲಿ ಬ್ಯಾಟಿಂಗ್‌ ಗಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ವಿಶ್ವದ ಹೃದಯ ಗೆದ್ದವರು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್.

Advertisement

ಸದಾ ನಗುಮುಖ, ಗೆಲುವಾಗಲಿ ಸೋಲಾಗಲಿ ಯಾವುದಕ್ಕೂ ಅತಿಯಾಗಿ ಪ್ರತಿಕ್ರಿಯಿಸದ ಶಾಂತಮೂರ್ತಿ, ಎದುರು ನಿಂತು ತಂಡವನ್ನು ಮುನ್ನಡೆಸುವ ಲೀಡರ್ .. ಹೀಗೆ ಹೇಳುತ್ತಾ ಹೋದರೆ ಕೇನ್ ವಿಲಿಯಮ್ಸನ್ ಗುಣಗಾನಕ್ಕೆ ವಿಶೇಷಣಗಳು ಸಾಲದು. ಅಂತಹ ವ್ಯಕ್ತಿತ್ವ ಆತನದ್ದು.

ನ್ಯೂಜಿಲ್ಯಾಂಡ್ ಕ್ರಿಕೆಟಿಗರು ಸದಾ ಶಾಂತ ಸ್ವಭಾವದವರು. ಎಂದೂ ಅತಿರೇಕ ಮಾಡಿದವರಲ್ಲ. ಬ್ಲ್ಯಾಕ್ ಕ್ಯಾಪ್ಸ್ ಎಂದು ಹೆಸರಿದ್ದರೂ ಎಂದೂ ಆಟಕ್ಕೆ ಕಪ್ಪು ಚುಕ್ಕೆ ಬರುವಂತೆ ಆಡಿದವರಲ್ಲ. ಜಂಟಲ್ ಮ್ಯಾನ್ ಆಟವನ್ನು ಜಂಟಲ್ ಮ್ಯಾನ್ ಗಳಂತೆಯೇ ಆಡಿದವರು ನ್ಯೂಜಿಲ್ಯಾಂಡ್ ಕ್ರಿಕೆಟಿಗರು.

2019ರ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯವನ್ನು ಯಾರು ತಾನೆ ಮರೆಯಲು ಸಾಧ್ಯ. ಅಂತಿಮ ಕ್ಷಣದವರೆಗೂ ಹೋರಾಡಿತ್ತು ವಿಲಿಯಮ್ಸನ್ ಬಳಗ. ಆ ಪಂದ್ಯದಲ್ಲಿ ಐಸಿಸಿ ನಿಯಮದಿಂದಾಗಿ ಇಂಗ್ಲೆಂಡ್ ವಿಜಯಿಯಾಗಿತ್ತೇ ವಿನಃ ನ್ಯೂಜಿಲ್ಯಾಂಡ್ ಅಂದು ಸೋತಿರಲಿಲ್ಲ.

Advertisement

ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಗೆ ತಂಡವನ್ನು ಕೊಂಡೊಯ್ದಿದ್ದ ವಿಲಿಯಮ್ಸನ್ ಕಪ್ ಗೆಲ್ಲಲಾಗದೆ ಹತಾಶನಾಗಿದ್ದ. ವಿಶ್ವಕಪ್ ಹಿಡಿದು ಸಂಭ್ರಮಿಸಬೇಕು ಎಂದೆಣಿಸಿದ್ದ ಕಪ್ಪು ಕುದುರೆಗಳಿಗೆ ಆ ಸೂಪರ್ ಓವರ್ ನಲ್ಲಿ ಏನಾಯಿತೆಂದು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು. ವಿವಾದ, ವಿಷಾದ, ಗೊಂದಲಗಳಿಗೆ ಕಾರಣವಾದ ವಿಶ್ವಕಪ್ ಫೈನಲ್ ನಂತರ ಕಿವೀಸ್  ನಾಯಕ ಕೇನ್ ವಿಲಿಯಮ್ಸನ್ ಏನು ಹೇಳದೆ, ಅದೇ ಮಂದಸ್ಮಿತನಾಗಿ ನಿಂತಿದ್ದ. ಒಂದು ಚೂರು ಕೂಗಾಡಲಿಲ್ಲ, ಅತಿರೇಕದ ಹತಾಶೆ ವ್ಯಕ್ತಪಡಿಸಲಿಲ್ಲ, ಆಟಗಾರರ ಮೇಲೆ ಕೋಪ ತೋರಲಿಲ್ಲ. ವಿಶ್ವಕಪ್ ಎತ್ತಲಾಗಲಿಲ್ಲ ಎಂಬ ಬೇಸರ ಬಿಟ್ಟರೆ ಬೇರೇನೂ ಹೇಳಲಿಲ್ಲ. ಕಪ್ ಗೆಲ್ಲಲಾಗದಿದ್ದರೂ ಕೇನ್ ವಿಲಿಯಮ್ಸನ್ ವಿಶ್ವವನ್ನೇ ಗೆದ್ದಿದ್ದ.

ಮತ್ತೊಂದು ಸೂಪರ್ ಓವರ್, ಮತ್ತೊಂದು ಹೋರಾಟ, ಮತ್ತೊಂದು ಸೋಲು
ಏಕದಿನ ವಿಶ್ವಕಪ್ ಸೂಪರ್ ಓವರ್ ಸೋಲಿನ ಸುಮಾರು 7 ತಿಂಗಳ ಬಳಿಕ ವಿಲಿಯಮ್ಸನ್ ಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಯಿತು. ತವರಿನಲ್ಲಿ ಟಿ20 ಸರಣಿ ಉಳಿಸಿಕೊಳ್ಳುವ ಸವಾಲು. ಮೊದಲೆರಡು ಪಂದ್ಯ ಸೋತಿದ್ದರಿಂದ ಮೂರನೇ ಪಂದ್ಯವನ್ನು ಶತಾಯಗತಾಯ ಗೆಲ್ಲಲೇ ಬೇಕೆಂಬ ಒತ್ತಡ.

ಮೊದಲು ಬ್ಯಾಟಿಂಗ್ ಮಾಡಿದ್ದ  ಭಾರತ ಗಳಿಸಿದ್ದು 179 ರನ್. ಹ್ಯಾಮಿಲ್ಟನ್ ಅಂಗಳದಲ್ಲಿ ಇದು ಕಡಿಮೆಯೇ. ಪಂದ್ಯ ಗೆಲ್ಲಲೇ ಬೇಕೆಂದು ಹಠ ಹಿಡಿದಂತೆ ಆಡಿದ ವಿಲಿಯಮ್ಸನ್ ಅಂತಿಮ ಓವರ್ ತನಕ ಹೋರಾಡಿದರು. ಇನ್ನೇನು ಗೆಲುವಿಗೆ ಎರಡು ರನ್ ಬೇಕಾಗಿದ್ದಾಗ ಔಟ್. 95 ರನ್ ಗಳಿಸಿದ್ದ ವಿಲಿಯಮ್ಸನ್ ಗೆ ಶತಕ ವಂಚಿತ ಆದೆ ಎಂಬ ಬೇಸರ ಎಳ್ಳಷ್ಟು ಇರಲಿಲ್ಲ. ಆದರೆ ಇಷ್ಟು ಹೋರಾಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಾಗಲಿಲ್ಲ ಎಂಬ ಬೇಸರದಿಂದಲೇ ಸೂಪರ್ ಓವರ್ ಗೆ ಸಿದ್ದರಾಗಿದ್ದರು.

ಸೂಪರ್ ಓವರ್ ನಲ್ಲಿ ಕಿವೀಸ್ ಗಳಿಸಿದ್ದ 17 ರನ್ ಗಳಲ್ಲಿ 12 ರನ್ ವಿಲಿಯಮ್ಸನ್ ಒಬ್ಬರೇ ಬಾರಿಸಿದ್ದರು. ಆದರೆ ಸೂಪರ್ ಓವರ್ ಮತ್ತು ಕಿವೀಸ್ ಗೆ ಅದೇನೋ ಆಗದ ಸಂಬಂಧ. ಸೌಥಿಯಂತಹ ಶ್ರೇಷ್ಠ ಬೌಲರ್ ಇದ್ದರೂ ಗೆಲುವು ಸಾದ್ಯವಾಗಲಿಲ್ಲ. ಮತ್ತೊಮ್ಮೆ ಸೂಪರ್ ಓವರ್ ಅದೃಷ್ಟ ನ್ಯೂಜಿಲ್ಯಾಂಡ್ ಮತ್ತು ವಿಲಿಯಮ್ಸನ್ ಕೈಹಿಡಿಯಲಿಲ್ಲ.

ಕೇನ್ ವಿಲಿಯಮ್ಸನ್ ಕೇವಲ ತನ್ನ ಅದ್ಭುತ ಆಟದಿಂದ ಜನರ ಮನ ಗೆದ್ದಿರುವುದಲ್ಲ. ತಮ್ಮ ಸನ್ನಡತೆಯಿಂದ ವಿಶ್ವದ ಮನಸ್ಸನ್ನೇ ಗೆದ್ದಿದ್ದಾರೆ. ವಿಲಿಯಮ್ಸನ್ ಆಡಿರುವ ಆಟಕ್ಕೆ ನ್ಯೂಜಿಲ್ಯಾಂಡ್ ಗೆಲ್ಲಬೇಕಿತ್ತು. ಅವರು ಗೆಲುವಿಗೆ ಅರ್ಹರಾಗಿದ್ದರು ಎಂದು ಮೂರನೇ ಟಿ20 ಪಂದ್ಯದ ನಂತರ ಭಾರತೀಯ ನಾಯಕ ವಿರಾಟ್ ಕೊಹ್ಲಿಯೇ ಗುಣಗಾನ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು.

– ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next