Advertisement

ರೈತ ನಾರಿಯರಿಗೆ ಸೂರ್ಯಕಾಂತಿ ಬೀಜೋತ್ಪಾದನೆ ತರಬೇತಿ

03:03 PM Feb 01, 2022 | Team Udayavani |

ಶಹಾಪುರ: ಸಮೀಪದ ಭೀಮರಾಯನ ಗುಡಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸೂರ್ಯಕಾಂತಿ ಹೆಚ್ಚು ಇಳುವರಿ ಬರುವ ಸಂಕೀರ್ಣ ತಳಿ ಬೀಜೋತ್ಪಾದನೆ (ಆರ್‌ ಎಸ್‌ಎಫ್‌ಎಚ್‌ 1887) ಬಗ್ಗೆ ಸುಮಾರು 30 ರೈತ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಲಾಯಿತು.

Advertisement

ಕಲಬುರಗಿಯ ಪಾಕಲ ಗ್ರಾಮದಿಂದ ಆಗಮಿಸಿದ್ದ ಸುಮಾರು 30 ರೈತ ಮಹಿಳೆಯರಿಗೆ ಇಲ್ಲಿನ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಕಲ ವ್ಯವಸ್ಥೆ ಒದಗಿಸುವ ಮೂಲಕ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಮಾಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ದಯಾನಂದ, ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ತಂತ್ರಜ್ಞಾನ ಬಳಸಿಕೊಳ್ಳುವ ಅಗತ್ಯವಿದೆ. ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾಮಾನ್ಯ ಬೆಳೆ ಬಿಟ್ಟು ಲಾಭದಾಯಕವಾದ ವಿನೂತನ ಪದ್ಧತಿ ಅಳವಡಿಸಿಕೊಂಡು ಕೃಷಿ ಆದಾಯ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸೂರ್ಯಕಾಂತಿಯ ತಳಿಯ ಬೀಜೋತ್ಪಾದನಾ ತಾಕುಗಳ ಕುರಿತು ಮಾಹಿತಿ ನೀಡಲಾಯಿತು. ಬೀಜೋತ್ಪಾದನಾ ವಿಜ್ಞಾನಿ ಡಾ| ಬಸವರಾಜ ಗಾಣಿಗೇರ ಅವರು ರೈತರಿಗೆ ಬೀಜೋತ್ಪಾದನಾ ತಂತ್ರಜ್ಞಾನದ ಮಾಹಿತಿ ನೀಡಿ ರೈತರಿಗೂ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಆಗುವ ಲಾಭಗಳ ಕುರಿತು ತಿಳಿಸಿದರು.

ಸುವರ್ಣ ಹೊನ್ನಳ್ಳಿಯವರು ಮಾತನಾಡಿ, ರೈತರು ಮೇಲಿಂದ ಮೇಲೆ ಕೃಷಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ಉತ್ತಮ ಲಾಭದಾಯಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕೇಂದ್ರ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next