Advertisement

ಆ ಕನ್ನಡ ಇ ಕನ್ನಡ‌

10:15 AM Feb 10, 2020 | Hari Prasad |

ನೀವು ಏನೇ ಹೇಳಿ, ಪುಸ್ತಕದಲ್ಲಿ ಓದುವ ಖುಷಿ ಈ ಮೊಬೈಲ್‌ನಲ್ಲಿ, ಕಂಪ್ಯೂಟನರ್‌ನಲ್ಲಿ ಬರೋದಿಲ್ಲ’ ಈ ಮಾತನ್ನು ಸರ್ವೇಸಾಮಾನ್ಯವಾಗಿ ಎಲ್ಲರೂ ಆಡಿಯೇ ಆಡುತ್ತಾರೆ. ನಿಜ. ಕಥೆಯನ್ನಾಗಲಿ, ಕಾದಂಬರಿಯನ್ನಾಗಲಿ ಪುಸ್ತಕದಲ್ಲಿ ಓದುವ ಮಜಾವೇ ಬೇರೆ. ಒಂದು ಕೈಯಲ್ಲಿ ಪುಸ್ತಕವನ್ನು ಹಿಡಿದು, ಇನ್ನೊಂದು ಕೈಯನ್ನು ತಲೆಗಾನಿಸಿಕೊಂಡು ಸಾಕ್ಷಾತ್‌ ಶ್ರೀಮನ್ನಾರಾಯಣನ ಶೈಲಿಯಲ್ಲಿ ಪವಡಿಸಿ ಓದುತ್ತಿದ್ದರೆ ಅಂದಿನ ಕುವೆಂಪು, ಕಾರಂತ, ಬೇಂದ್ರೆ, ತೇಜಸ್ವಿಯವರಿಂದ ಹಿಡಿದು ಇಂದಿನ ಕಾಯ್ಕಿಣಿ, ಭೈರಪ್ಪ, ಜೋಗಿ, ಎಚ್ಚೆಸ್ವಿಯವರ ತನಕ ಎಲ್ಲರೂ ಕಣ್ಮುಂದೆಯೇ ಪ್ರತ್ಯಕ್ಷವಾಗಿ ಕಥೆ ಹೇಳಿದಂತೆ, ಕವನ ವಾಚಿಸಿದಂತೆ ರಸವತ್ತಾಗಿರುತ್ತದೆ.


ವಿನಾಯಕ ಅರಳುಸುರಳಿ ; vinayaka.mb@gmail.com

Advertisement

ಜೊತೆಗೊಂದು ಲೋಟ ಕಾಫಿಯಿದ್ದರಂತೂ ಆ ಸ್ವಾದವೇ ಬೇರೆ! ಒಂದೊಂದು ಪುಟ ಮುಂದಕ್ಕೆ ಹೋದಾಗಲೂ ಹಾಯಿದೋಣಿಯಲ್ಲಿ ಒಂದೊಂದು ಮೈಲು ಮುಂದೆ ತೇಲಿದಂತಿರುತ್ತದೆ. ಪುಸ್ತಕದ ಭೌತಿಕ ಸ್ಪರ್ಶ, ಪುಟಗಳ ಘಮಗಳೆಲ್ಲ ಮಿಶ್ರಿತವಾಗಿ ಕೊಡುವ ಅನುಭೂತಿ ಮೊಬೈಲ್‌, ಕಂಪ್ಯೂಟರ್‌ಗಳ ಪರದೆಯಲ್ಲಿ ಸಿಗುವುದಿಲ್ಲ.

ಆದರೆ, ಆಫೀಸು-ಟ್ರಾಫಿಕ್ಕು-ಮನೆಗಳ ನಡುವೆ ಹರಿದು ಹಂಚಿಹೋಗಿರುವ ಇಂದಿನ ಭಾಗ್‌ ದೌಡ್‌ ಬರೀ ಜೀವನದಲ್ಲಿ ಪುಸ್ತಕವನ್ನು ಕೊಂಡೊಯ್ಯುವ ತಾಳ್ಮೆ ಯಾರಿಗಿದೆ? ಹೇಳಿಕೇಳಿ ಇದು ಟ್ವೆಂಟಿ-ಟ್ವೆಂಟಿ ಕಾಲ. ಎಲ್ಲವೂ ಚುಟುಕಾಗಿ, ಸ್ವಾದಭರಿತವಾಗಿ, ಇಷ್ಟೇ ಇಷ್ಟಿರಬೇಕೆಂದು ಬಯಸುವ ‘ಚಿಕ್ಕ ಹಾಗೂ ಚೊಕ್ಕ’ದ ಕಾಲಘಟ್ಟವಿದು.

ಆಫೀಸಿನಲ್ಲಿ ಬಾಸ್‌ ಎದ್ದುಹೋದಾಗ, ಟ್ರಾಫಿಕ್ಕಿನಲ್ಲಿ ಸಿಲುಕಿ ಚಲನೆಯೆಂಬ ಚಲನೆಯೇ ಕಾಣೆಯಾದಾಗ, ಬಸ್ಸಿನಲ್ಲಿ ನಿಂತು ನೇತಾಡುತ್ತಿರುವಾಗ… ಇಂತಹ ಕಿರು ಘಳಿಗೆಗಳಲ್ಲಿಯೇ ಓದು, ಬರಹ ಮುಂತಾದ ಸದಭಿರುಚಿಯ ಕೈಂಕರ್ಯಗಳು ಜರುಗಬೇಕು. ಹೀಗೆ ಆಗಾಗ ಕಿರು ವಿರಾಮ ದೊರೆತಾಗಲೆಲ್ಲ ಇಂತಿಂಥ ದಪ್ಪದ ಪುಸ್ತಕವನ್ನು ಹೊರತೆರೆದು ಓದಲು ಸಾಧ್ಯವೆ? ಖಂಡಿತ ಇಲ್ಲ! ಅದಕ್ಕಿರುವ ಏಕೈಕ ಸಾಧನ ಮೊಬೈಲ್.

ಇಂದಿನ ಬಿಡುವುರಹಿತ, ಒತ್ತಡಭರಿತ ಜೀವನದಲ್ಲಿ ಓದು-ಬರಹಗಳು ಮರೆಯಾಗಬಾರದೆಂದೇ ಮನುಷ್ಯ ಅವನ್ನು ಸದಾ ತನ್ನೊಂದಿಗಿರುವ ಮೊಬೈಲ್ – ಕಂಪ್ಯೂಟರ್‌ಗಳೊಳಗೆ ಸೇರಿಸಿಕೊಂಡಿದ್ದಾನೆ. ಓದು-ಬರಹಗಳು ಬ್ಲಾಗ್‌, ಸೋಶಿಯಲ್‌ ಮೀಡಿಯಾ, ಪಿಡಿಎಫ್ ಮುಂತಾದ ಆಧುನಿಕ ಅವತಾರಗಳನ್ನು ತಾಳಿ ಮತ್ತೆ ಮನುಷ್ಯನ ಅಂತರಂಗ ಸೇರಿಕೊಂಡಿವೆ. ಆದರೆ, ಇಷ್ಟೇ ಇಷ್ಟಿರುವ ಮೊಬೈಲ್‌ಗ‌ಳಿಂದಾದ ದುಷ್ಪರಿಣಾಮವೆಂದರೆ ಅವು ನಮ್ಮ ತಾಳ್ಮೆಯನ್ನೂ ತಮ್ಮ ಗಾತ್ರಕ್ಕೇ ಕುಗ್ಗಿಸಿರುವುದು.

Advertisement

ಎಲ್ಲವೂ ಚಿಕ್ಕ ಹಾಗೂ ಚೊಕ್ಕದಾಗಿರಬೇಕು, ಇಡೀ ಭಗವದ್ಗೀತೆಯೇ ನಾಲ್ಕು ಸಾಲಿನಲ್ಲಿ ಮುಗಿದುಹೋಗಬೇಕು, ಮಹಾಕಾವ್ಯಗಳೂ ಟೀ ವಿರಾಮದಲ್ಲಿ ಸಿಗುವ ಐದು ನಿಮಿಷದ ಬಿಡುವಿನಲ್ಲಿ ಓದುವಂತಿರಬೇಕು ಎಂಬ ಗಡಿಬಿಡಿಯೇ ಎಲ್ಲರಲ್ಲೂ. ಮುನ್ನೂರು ಪುಟದ ಪುಸ್ತಕವೊಂದನ್ನು ಹಿಡಿದಾಗ ಮನಸ್ಸಿನಲ್ಲಿದ್ದ ತಾಳ್ಮೆಯನ್ನು ಮೂರೂವರೆ ಇಂಚಿನ ಮೊಬೈಲ್‌ ಸದ್ದಿಲ್ಲದಂತೆ ನುಂಗುತ್ತಿರುವುದು ಅದನ್ನು ಕಂಡುಹಿಡಿದವನಾಣೆಗೂ ಸತ್ಯ!

ಜಗತ್ತಿನ ಹಲವಾರು ಭಾಷೆಗಳಂತೆ ಕನ್ನಡವೂ “ಇ’ ಮಾಧ್ಯಮಕ್ಕೆ ಹೊಂದಿಕೊಳ್ಳುತ್ತಿದೆ. ಇದನ್ನು, ಒಂದಾನೊಂದು ಕಾಲದಲ್ಲಿ ತಾಳೆಗರಿಯಲ್ಲಿದ್ದ ಲಿಪಿಯು ಪುಸ್ತಕ ಮಾಧ್ಯಮಕ್ಕೆ ತೇರ್ಗಡೆಯಾದ ಬೆಳವಣಿಗೆಗೆ ಹೋಲಿಸುವಂತಿಲ್ಲವಾದರೂ ಇಂದಿನ ಕಾಲಮಾನಕ್ಕಿದು ಸೂಕ್ತ ಬೆಳವಣಿಗೆಯೇ. ಯಾವ ಭಾಷೆ ಮನುಷ್ಯನ ಭಾವನೆಗಳ ಹರಿವಿನ ಮಾಧ್ಯಮವಾಗಿರುತ್ತದೋ ಆ ಭಾಷೆ ನಿರಂತರವಾಗಿರುತ್ತದೆ.

ನಾವು ‘ಊಟ ಆಯ್ತಾ, ತಿಂಡಿ ಆಯ್ತಾ?’ ಗಳಿಂದ ಹಿಡಿದು ತತ್‌ಕ್ಷಣಕ್ಕೆ ಹೊಳೆವ ಯೋಚೆನೆಗಳ ತನಕ ಎಲ್ಲವನ್ನೂ ಕನ್ನಡದಲ್ಲೇ ಟೈಪಿಸಿ ಸೋಶಿಯಲ್‌ ಮೀಡಿಯಾದಲ್ಲೋ, ಮತ್ತೆಲ್ಲೋ ಸಂಭಾಷಿಸುತ್ತೇವೆ, ಅಂಟಿಸುತ್ತೇವೆ. ಅಷ್ಟರಮಟ್ಟಿಗೆ ಅದು ನಮ್ಮೊಳಗೆ ನಿರಂತರವಾಗಿದೆ.

ತೀರಾ ಪುಸ್ತಕವನ್ನೇ ತೆರೆಯದವರು ಸಹಾ ಮೊಬೈಲ್‌ನಲ್ಲಿ ಕಣ್ಣಿಗೆಟಕುವ ಬರಹಗಳೊಳಗೆ ಸಣ್ಣಗೊಂದು ಸುತ್ತು ಅಡ್ಡಾಡುತ್ತಾರೆ.
ಇನ್ನು ಪುಸ್ತಕದ ‘ಸ್ವಾದ’ವನ್ನರಿತವರು ಎರಡೂ ಮಾಧ್ಯಮಗಳಲ್ಲಿ ಓದಿಗೆ ತೊಡಗುತ್ತಾರೆ. ಹೀಗೆ “ಇ’ ಅವತರಣಿಕೆಯು ಕನ್ನಡದ ಹರಿವಿಗೆ ಹೊಸದಾದ ಉಪನದಿಯಂತಾಗಿದೆ.

ಇತ್ತೀಚೆಗೆ ಕನ್ನಡದ ಬಹಳ ಹಳೆಯ ಮಾಸಿಕ ಪತ್ರಿಕೆಯೊಂದು 1960-70ರ ದಶಕದ ಸಂಚಿಕೆಗಳೂ ಸೇರಿದಂತೆ ತನ್ನ ಅನೇಕ ಹಳೆಯ ಸಂಚಿಕೆಗಳ ಸ್ಕ್ಯಾನ್‌ ಪ್ರತಿಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು. ತೆರೆದೋದಿದವರಿಗೆ ಅವು ಆ ಕಾಲಘಟ್ಟವನ್ನು ಮರುಸೃಷ್ಟಿಸುವ ಪಳೆಯುಳಿಕೆಗಳಂತೆ ಭಾಸವಾಗುತ್ತವೆ. ಅಲ್ಲದೆ, ಮರುಮುದ್ರಣ ಕಾಣದ ಅದೆಷ್ಟೋ ಹಳೆಯ ಕೃತಿಗಳ ಪಿಡಿಎಫ್ ಪ್ರತಿಗಳು ದೇಹ ನಶಿಸಿದ ಮೇಲೂ ಉಳಿದ ಆತ್ಮಗಳಂತೆ ಅಂತರ್ಜಾಲದಲ್ಲಿ ಕುಳಿತಿವೆ.

ಇವೆಲ್ಲ ಸಾಧ್ಯವಾಗಿರುವುದು “ಇ’ ಮಾಧ್ಯಮದಿಂದ. ಹೀಗೆ ಮನುಷ್ಯ ತನ್ನ ಹೃದಯಕ್ಕೆ ತೀರಾ ಹತ್ತಿರದಲ್ಲಿಟ್ಟುಕೊಳ್ಳುವ ಮೊಬೈಲ್‌ನೊಳಗಿನಿಂದ ಕನ್ನಡವು ಚಿಗುರೊಡೆದಿರುವುದು ಸ್ವಾಗತಾರ್ಹವೇ. ಆದರೆ, ಪುಸ್ತಕಗಳು ದೂರಮಾಡಬಾರದಷ್ಟು ಅನಿವಾರ್ಯವಾದ ವ್ಯಕ್ತಿತ್ವದ ಅಂಗಗಳು. ಎರಡರಲ್ಲೂ ಇರುವುದು ಅಕ್ಷರಗಳೇ ಆದರೂ ಎರಡೂ ಉಂಟುಮಾಡುವ ಅನುಭೂತಿ ವಿಭಿನ್ನವಾದುದು. ತಮ್ಮತಮ್ಮ ಮಿತಿಯಲ್ಲೇ ಮನುಷ್ಯನ ವ್ಯಕ್ತಿತ್ವಕ್ಕೆ ನಿರಂತರ ಕಾವು ಕೊಡುತ್ತ ಈ ಎರಡೂ ಕವಲುಗಳೂ ಕನ್ನಡದ ಹೆಮ್ಮರವನ್ನು ಮತ್ತಷ್ಟು ಹಬ್ಬಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next