Advertisement

ಗುಂಜನದೊಳಗೆ ಮೊರೆದು ನಲಿದ ಸುಮೇಧಾ

12:39 PM Nov 03, 2017 | |

ಕಲೆಗೂ-ಕಲಿಕೆಗೂ ಎತ್ತಣದ ಸಂಬಂಧ…! ಕಲಿಕೆಯೆಂದರೆ ಒಂದರ್ಥದಲ್ಲಿ ಸಾಮಾನ್ಯ ಕಲಿಕೆ; ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ನಾನಾ ರೂಪದಲ್ಲಿ ಬೇರೂರಿರುವ ವಿದ್ಯಾರ್ಜನೆ. “ಕಲೆ’ಗಳು ಅದರಿಂದ ಬಹು ಭಿನ್ನವಾಗಿ ನಿಲ್ಲುವುದಿಲ್ಲವಾದರೂ, ಜನಾಭಿಪ್ರಾಯದಲ್ಲಿ ಅವೆರಡರ ಸ್ತರಗಳು ಪ್ರತ್ಯೇಕ. ಹೀಗೆಯೇ ಕಾಲಾನುಕ್ರಮದಿಂದ ನಂಬಿರುವಂಥ ಸನ್ನಿವೇಶದಲ್ಲಿ ಆ “ಕಲೆ’ಗಳ ಕಲಿಕೆ ಹಾಗೂ ಸಾಮಾನ್ಯ ಕಲಿಕೆಗಳ ಮಿಲನವಾಗಿ ಎರಡರಲ್ಲೂ ತಮ್ಮದೇ ಆದ ಛಾಪನ್ನೊತ್ತುವ ಕಲಾವಿದ – ವೈದ್ಯರು, ಕಲಾವಿದ- ಎಂಜಿನಿಯರ್‌ಗಳು ಅಥವಾ ಬೇರೆ ಬೇರೆ ರೀತಿಯ ವೃತ್ತಿ-ಪ್ರವೃತ್ತಿ ಪರರು ಇತ್ಯಾದಿ ಅಲ್ಲಲ್ಲಿ ಗೋಚರಿಸುತ್ತಾರೆ ಮತ್ತು ಅಂಥವರ ವೃತ್ತಿ-ಪ್ರವೃತ್ತಿಗಳಲ್ಲಿನ ತಾದಾತ್ಮé ಸಾಮಾನ್ಯ ರಸಿಕರನ್ನು ಬೆರಗುಗೊಳಿಸುತ್ತದೆ! ಹೀಗೆಯೇ ವೃತ್ತಿಕಲಿಕೆಯನ್ನು ಎಂಜಿನಿಯರಿಂಗ್‌ ಆಗಿ ಸ್ವೀಕರಿಸಿ, ಪ್ರವೃತ್ತಿಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಿ, ಭರತನಾಟ್ಯದಲ್ಲಿ, ಅದರ ಅರ್ಚನೆ-ಅರ್ಜನೆಯಲ್ಲಿ ತನ್ನನ್ನು ತೊಡಗಿಸಿಕೊಂಡಾಕೆ ಮಣಿಪಾಲ ಎಂ.ಐ.ಟಿ.ಯ ಬಿ.ಟೆಕ್‌ (ಕಂಪ್ಯೂಸೈನ್ಸ್‌) ಅಂತಿಮ ಘಟ್ಟದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮೇಧಾ ಜಿ.ಕೆ. ಭರತನಾಟ್ಯ ಕಲಾಗುರುಗಳಾದ ವಿ| ಲಕ್ಷ್ಮೀ ಗುರುರಾಜ್‌ ಇವರ ಗರಡಿಯಲ್ಲಿ ಪಳಗಿ ತನ್ನ ವಿದ್ವತ್ತಿನ ಮೊದಲ ಹಂತವನ್ನು ತೇರ್ಗಡೆಯಾಗಿರುವ ಈಕೆ ದೂರದರ್ಶನ ಬೆಂಗಳೂರು ಇದರ “ಬಿ’ ಗ್ರೇಡ್‌ ಕಲಾವಿದೆಯೂ ಹೌದು. ಗುರುಗಳ ತಂಡದೊಂದಿಗೆ ತನ್ನನ್ನು ರಾಜ್ಯ-ಹೊರರಾಜ್ಯ ಪ್ರದರ್ಶನಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿರುವ ಸುಮೇಧಾಳ ಕಲಾಬದ್ಧತೆಯು ಆಕೆಯು ಇತ್ತೀಚೆಗೆ ಎಂ.ಐ.ಟಿ. ಲೈಬ್ರರಿ ಆಡಿಟೋರಿಯಂನಲ್ಲಿ, ಸಂಸ್ಥೆಯ “ಸಾಂಸ್ಕೃತಿಕ ಸಂಘಟನಾ ಮಂಡಳಿ’ ಇದರಾಶ್ರಯದಲ್ಲಿ “ಗುಂಜನ್‌’ ಎನ್ನುವ ಶೀರ್ಷಿಕೆಯಡಿ ನೀಡಿದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನದಲ್ಲಿ ಅನಾವರಣಗೊಂಡಿತು.

Advertisement

ಅಮೃತವರ್ಷಿಣಿ ರಾಗದ ಪುಷ್ಪಾಂಜಲಿಯಿಂದ ತನ್ನ ನೃತ್ಯಪ್ರದರ್ಶನದ “ಶ್ರೀಗಣೇಶ’ಗೈದ ಸುಮೇಧಾ, ಚಿಕ್ಕ-ಚೊಕ್ಕ ಸಾಹಿತ್ಯ ಭಾಗವನ್ನು ಹೊಂದಿದ್ದ ಅದನ್ನು, ತೀವ್ರಗತಿಯ ಅಡವುಗಳಿಂದ ಸಮಾಪನಗೊಳಿಸಿದಳು. ಪ್ರದರ್ಶನದ ಎರಡನೆಯ ಪ್ರಸ್ತುತಿಯಾಗಿ ಆಕೆ ಆಯ್ದುಕೊಂಡದ್ದು “ನರಸಿಂಹ ಕೌತ್ವಂ’. ಸಾಮಾನ್ಯವಾಗಿ ಕೌತ್ವಂಗಳು ನಟರಾಜ, ಸುಬ್ರಹ್ಮಣ್ಯ, ವಿನಾಯಕರ ಮೇಲೆ ಚಿತ್ರಿತವಾಗಿರುತ್ತವೆ. ಈ ವಿಭಿನ್ನ ರೀತಿಯ “ನರಸಿಂಹ ಕೌತ್ವಂ’ನಲ್ಲಿ ನರ್ತಕಿ ವಿಷ್ಣುವಿನ ಅವತಾರವಾದ ನರಸಿಂಹನು ಅಸುರನಾದ ಹಿರಣ್ಯಕಶ್ಯಪುವಿನನ್ನು ಮರ್ದಿಸಿ, ಬಾಲಪ್ರಹ್ಲಾದನನ್ನು ರಕ್ಷಿಸುವ ಕಥಾನಕವನ್ನು ಪರಿಣಾಮಕಾರಿಯಾಗಿ ಸಂಚಾರಿಯ ಮೂಲಕ ಪ್ರೇಕ್ಷಕರಿಗೆ ಉಣಬಡಿಸಿದಳು. ಅಲ್ಲಲ್ಲಿ ಸಣ್ಣ ಸಣ್ಣ ಭ್ರಮರಿಗಳು ಮತ್ತು ವೇಗದ ಅಡವುಗಳಿಂದೊಳಗೊಂಡ ಇದರಲ್ಲಿ ಅಭಿನಯದ ಸಾಂದರ್ಭಿಕತೆ ಅಚ್ಚುಕಟ್ಟಾಗಿತ್ತು. ಮುಂದಿನ ನೃತ್ಯ, ರಾಗಮಾಲಿಕೆ ಹಾಗೂ ಖಂಡಛಾಪು ತಾಳಕ್ಕಳವಡಿಸಲಾದ ಹಾಡು “ಜಯತು ಭಕೊ¤àದ್ಧಾರ’ವನ್ನೂ ವಿಷಯದ ಹದವರಿತು, ತನ್ನ ಅಭಿನಯ ಮತ್ತು ಪಕ್ವ ಆಂಗಿಕಗಳಿಂದ ಪರಿಪೂರ್ಣಗೊಳಿಸಿದಳು.

ತದನಂತರದ ಭಾಗ; ನೃತ್ಯಪ್ರದರ್ಶನದ ಮುಖ್ಯಾಂಗವೆಂದೇ ಹೇಳಬಹುದಾದ ವರ್ಣಂ. “ಕೃಷ್ಣವರ್ಣಂ’ ಎಂದು ಹೆಸರಿಸಬಹುದಾದ ಇದು, ಶ್ರೀಕೃಷ್ಣಾಷ್ಟೋತ್ತರ ಸ್ತೋತ್ರಗಳು, “ವರ್ಣಂ’ ರೂಪಕ್ಕೊಳಪಟ್ಟು, “ಭಾಗವತ’ದ ಶ್ರೀಕೃಷ್ಣ ಜನನ-ಬಾಲಲೀಲೆಗಳನ್ನು ಆಂಶಿಕವಾಗಿ ಹೊಂದಿದ್ದು, ಮುಂದಕ್ಕೆ -“ಭಾರತ’ದ ದ್ರೌಪದಿ ವಸ್ತ್ರಾಪಹರಣ ಪ್ರಸಂಗದಲ್ಲಿ ಶ್ರೀಕೃಷ್ಣ ಆಕೆಗೆ ಅಪದ್ಭಾಂದವ-ಅಗ್ರಜ- ಅನಂತವಾಗಿ ರಕ್ಷಣೆಯನ್ನೀಯುವುದನ್ನು ಪ್ರಚುರಪಡಿಸುತ್ತದೆ. ಅಂತ್ಯಭಾಗದಲ್ಲಿ ಗೀತೋಪದೇಶದ ಸನ್ನಿವೇಶವನ್ನು ಹೊಂದಿದ್ದ ಈ ಪ್ರಸ್ತುತಿಯನ್ನು ಸುಮೇಧಾ ತನ್ನ ಉತ್ತಮ ಅಂಗಶುದ್ಧಿ ಮತ್ತು ಆಂಗಿಕಾಭಿನಯಗಳಿಂದ ನರ್ತಿಸಿದಳು. ರಣರಂಗದಲ್ಲಿನ ಅರ್ಜುನನ ಭಾವದ್ವಂದ್ವವನ್ನು ಪಡಿಮೂಡಿಸಿದ ಪರಿ ಚೆನ್ನಾಗಿತ್ತು. ತಿರುಮಲೈ ಶ್ರೀನಿವಾಸ ರಚಿತ “ರೀತಿಗೌಳ’ ರಾಗದ ಇದು, ಬಹುಪಾತ್ರ-ಭಾವಗಳ ಮಿಶ್ರಣವಾಗಿ “ಬಹುವರ್ಣಿತ’ವಾಗಿತ್ತೆನ್ನಬಹುದೇನೋ! ಅನಂತರ ಯಶೋಧಾ-ಕೃಷ್ಣರ ಸಂಭಾಷಣೆಯನ್ನು ಜನಪದೀಯ ನೆಲೆಯಲ್ಲಿ ನರ್ತಿಸುವ “ಮೂಡು ಮೈಕುಂ ಕಣ್ಣೆ’ ಮೂಡಿಬಂತು. ಯಮುನಾ ನದಿ ತೀರದಲ್ಲಿ, ಗೋವರ್ಧನ ಗಿರಿ – ತಪ್ಪಲಿನ ಕಾನನದಲ್ಲಿ ನಿರಾಳವಾಗಿ ಅಲೆಯುವ ಕೃಷ್ಣನ ವಾಂಛೆ, ಆದರೆ ಪುತ್ರನ ಹಿತರಕ್ಷಣಾದೃಷ್ಟಿಯಿಂದ ಭಯಭೀತಳಾಗಿ, ಅವನನ್ನು ತಡೆಯಲೋಸುಗ ಆತನಿಗೆ ಬೆಣ್ಣೆ, ಮೊಸರು, ಶರ್ಕರಗಳ ಆಮಿಷವೊಡ್ಡುವ ಯಶೋದೆ, ಆದರೂ ಮತ್ತೆಮತ್ತೆ ಮಾತೆಯನ್ನು ಓಲೈಸುವ ಬಾಲಕೃಷ್ಣನಾಟವನ್ನು ತನ್ನ ಇತಿಮಿತಿಯೊಳಗೆ ಪ್ರೇಕ್ಷಕರ ಮುಂದಿರಿಸಿದಳು ಸುಮೇಧಾ.

ತನ್ನ ನೃತ್ಯಪ್ರದರ್ಶನದ ಷಡಾಂಗವಾಗಿ ನರ್ತಕಿ ಕೈಗೆತ್ತಿಕೊಂಡದ್ದು ಎ. ಕೃಷ್ಣಮಾಚಾರ್ಯ ಅವರ, ಪೂರ್ವಿಕಲ್ಯಾಣಿ ರಾಗದ “ಪ್ರದೋಷ ಸಮಯದಿ ಪರಶಿವ ತಾಂಡವ’. ಪ್ರತೀ ಪಕ್ಷದ ಹದಿಮೂರನೆಯ ದಿನದ ಸೂರ್ಯಾಸ್ತಪೂರ್ವ ಒಂದೂವರೆ ಗಂಟೆ ಮತ್ತು ಸೂರ್ಯಾಸ್ತಪರ ಒಂದೂವರೆ ಗಂಟೆ- ಒಟ್ಟು ಮೂರು ಗಂಟೆಗಳ ಕಾಲದ ಪವಿತ್ರ ಸಮಯವು ಮಹಾದೇವ ಶಿವನನ್ನು ಪೂಜಿಸುವ ಪರಿಪಕ್ವ ಕಾಲವಾದ “ಪ್ರದೋಷಕಾಲ’ವೆಂದು ಹಿಂದೂ ಸಂಪ್ರದಾಯದಲ್ಲಿ ಪರಿಗಣಿಸಲಾಗುತ್ತದೆ. ನರ್ತಕಿಯು ಆಯ್ದುಕೊಂಡ ಈ ಕೃತಿಯಲ್ಲಿ ಶಿವತಾಂಡವವೇ ಮುಖ್ಯವಾಗಿದ್ದರೆ, ಅದರ ಹಿನ್ನೆಲೆಗಳಾಗಿ ಪಾರ್ವತಿಯ ಹಾಡು, ಗಣಪತಿಯ ತಾಳ ಅವಿಭಾಜ್ಯ ಅಂಗವಾಗಿರುತ್ತದೆ. ಶಿವತಾಂಡವದಿಂದ ಇಡೀ ಕೈಲಾಸವೇ ಭುವಿಗಿಳಿದು ಬಂದಂತೆ ಭಾಸವಾಗುವ ಈ ಪ್ರಸ್ತುತಿಯನ್ನು ಸುಮೇಧಾ ಬಹು ಅಂದದಿಂದ ವೇದಿಕೆಯ ಮೇಲೆ ತಂದಿರಿಸಿದಳು. ಅರೆಮಂಡಿಯ ಪಟುತ್ವವನ್ನು ಹೊಂದಿದ್ದ ಈ ಪುಟ್ಟ ಪ್ರಸ್ತುತಿ ಒಟ್ಟಾರೆ ಪ್ರದರ್ಶನದ ಕಣ್ಮಣಿಯಾಗಿತ್ತೆಂದರೆ ಆಭಾಸವಾಗಲಾರದು. “ಬೃಂದಾವನ ಸಾರಂಗಿ’ಯ ತಿಲ್ಲಾನ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದ ಸುಮೇಧಾ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ನರ್ತಿಸಿದ್ದು, ಜತೆಗೆ ಅದು ಆಕೆಯ “ಅಷ್ಟೊಂದು ದೀರ್ಘ‌ ಅವಧಿಯ ಏಕವ್ಯಕ್ತಿ ಪ್ರದರ್ಶನ’ ಪ್ರಥಮ ಪ್ರಯತ್ನವೂ ಆಗಿದ್ದು ಶ್ಲಾಘನೀಯವಾಗಿತ್ತು. ಇದನ್ನು ಆಕೆಯ ಗುರುಗಳಾದ ವಿ| ಲಕ್ಷ್ಮೀ ಗುರುರಾಜ್‌ ಅವರು ಆನಂದದಿಂದ ಅನುಮೋದಿಸುತ್ತಾರೆ. ನೇರ ಹಿಮ್ಮೇಳ- ನಟ್ಟುವಾಂಗಗಳಿಲ್ಲದಿದ್ದರೂ, ತನ್ನ  ನರ್ತನ-ನಡೆಗಳಿಂದ ತನಗೊಂದು ಅನುಪಮ ಭವಿತವ್ಯವಿದೆ ಎಂಬುದರ ಕುರುಹು ಗಳನ್ನು ತೋರ್ಪಡಿಸಿದ ಸುಮೇಧಾ ಜಿ. ಕೆ. ಇರುವ ಲೋಪ ದೋಷಗಳನ್ನು ಮೀರಿ ಬೆಳೆಯಬಲ್ಲ ಕಲಾವಿದೆಯೆಂಬುದನ್ನು ಹೆಮ್ಮೆಯಿಂದ ಹೇಳಬಹುದು.

ಸುಧಾ ಭಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next