Advertisement

ಸುಮನಹಳ್ಳಿ ಸೇತುವೆ ಸೋಮವಾರ ಸಂಚಾರಕ್ಕೆ ಮುಕ್ತ

10:44 AM Nov 16, 2019 | Team Udayavani |

ಬೆಂಗಳೂರು: ಹೊರವರ್ತುಲ ರಸ್ತೆಯ ಮಾಗಡಿ ರಸ್ತೆ ಮೇಲೆ ಹಾದುಹೋಗಿರುವ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬಿದ್ದಿದ್ದ ಗುಂಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸಿದ್ಧಗೊಂಡಿರುವ ಮಾರ್ಗದಲ್ಲಿ ಸೋಮವಾರ  ದಿಂದ ಮತ್ತೆ ಸಂಚಾರ ಆರಂಭವಾಗಲಿದೆ ಎಂದು ಬಿಬಿಎಂಬಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಗರದ ಹೊವರ್ತುಲ ರಸ್ತೆಯ ಸುಮನಹಳ್ಳಿಯ ಮೇಲ್ಸೇತುವೆ ಮೇಲ್ಭಾಗದಲ್ಲಿ ದೊಡ್ಡ ಗುಂಡಿ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ 15 ದಿನಗಳಿಂದ ನಾಗರಬಾವಿ-ಗೊರಗುಂಟೆ ಪಾಳ್ಯ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಿವಿಎಲ್‌-ಎಡ್‌ ಟೆಕ್ನೋಕ್ಲೀನಿಕ್‌ ಸಂಸ್ಥೆಯ ತಜ್ಞರ ತಂಡ ಪರಿಶೀಲನೆ ಮಾಡಿ ನೀಡಿದ ಮಧ್ಯಂತರ ವರದಿ ಅನುಗುಣವಾಗಿ ವಿದೇಶದ ವಿಶೇಷ ಸಿಮೆಂಟ್‌ ನಿಂದ ಗುಂಡಿ ಭರ್ತಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ರಾಜರಾಜೇಶ್ವರಿ ವಲಯದ ಮುಖ್ಯ ಎಂಜಿನಿಯರ್‌ ವಿಜಯ್‌ ಕುಮಾರ್‌ ಹೇಳಿದರು.

ಸೇತುವೆ ಸುರಕ್ಷತೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ. ನಾಗರಬಾವಿಯಿಂದ ಗೊರಗುಂಟೆ ಪಾಳ್ಯ ಮಾರ್ಗದ ಸೇತುವೆಯ ಒಂದು ಪಥವನ್ನು ಮರು ಡಾಂಬಾರಿಕರಣ ಮಾಡಲಾಗುತ್ತಿದೆ. ಡಾಂಬಾರಿಕರಣ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಮುಂದುವರಿದ ಸೇತುವೆ ಪರಿಶೀಲನೆ: ನಾಗರಬಾವಿಯಿಂದ ಗೊರಗುಂಟೆಪಾಳ್ಯ ಮಾರ್ಗದ ಸೇತುವೆಯ ಒಂದು ಪಥದಲ್ಲಿ ಗುಂಡಿ ಸೃಷ್ಟಿಯಾಗಿ ಇಡೀ ಸೇತುವೆಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಡೀ ಸೇತುವೆಯ ಸ್ಟ್ರಕ್ಚರಲ್‌ ಅಡಿಟ್‌ ನಡೆಸುವುದಕ್ಕೆ ಸಿವಿಲ್‌-ಎಡ್‌ ಸಂಸ್ಥೆಗೆ ಬಿಬಿಎಂಪಿ ಸೂಚನೆ ನೀಡಿತ್ತು. ಅದರಂತೆ ಸಂಸ್ಥೆಯ ತಜ್ಞರು ಸೇತುವೆ ಪರಿಶೀಲನೆ ನಡೆಸುತ್ತಿದ್ದಾರೆ.

ಸೇತುವೆ ದುರಸ್ತಿ ಕಾರ್ಯ ಮುಗಿದಿದೆ. ಆದರೆ, ಸೇತುವೆ ಮೇಲೆ ಭಾರೀ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೇ ಬೇಡವೇ ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.  –ವಿಜಯ್‌ ಕುಮಾರ್‌, ಮುಖ್ಯ ಎಂಜಿನಿಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next