Advertisement

ಕಿರುತೆರೆಯತ್ತ ಚಿರಯೌವ್ವನೆ ಸುಮನ್‌

12:30 AM Feb 03, 2019 | |

ಕನ್ನಡ ಚಿತ್ರರಂಗದ ಚಿರಯೌವ್ವನೆ, ಸದಾ ತರುಣಿ ಖ್ಯಾತಿಯ ಸುಮನ್‌ ರಂಗನಾಥ್‌ ದಶಕಗಳು ಉರುಳಿದರೂ ಇಂದಿಗೂ ತನ್ನದೇ ಆದ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ. ವರ್ಷಕ್ಕೆ ಕನಿಷ್ಠ ಒಂದೆರಡು ಚಿತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಂಡು ಸಿನಿಪ್ರಿಯರ ಮನರಂಜಿಸುತ್ತ ಬಂದಿರುವ ಸುಮನ್‌ ರಂಗನಾಥ್‌ಗೆ ಹಿರಿತೆರೆಯಷ್ಟೇ, ಕಿರುತೆರೆಯಲ್ಲೂ ತುಂಬಾನೇ ಬೇಡಿಕೆಯಿದೆ. ಸದ್ಯ ಸಿನೆಮಾ, ಮಾಡೆಲಿಂಗ್‌, ಫ್ಯಾಮಿಲಿ ಲೈಫ್ ಅಂತ ಬ್ಯುಸಿಯಾಗಿರುವ ಸುಮನ್‌ ಈಗ ಮತ್ತೆ ಕಿರುತೆರೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 

Advertisement

ಹೌದು, ಸುಮಾರು ಎಂಟು ವರ್ಷಗಳ ನಂತರ ಮತ್ತೆ ಸುಮನ್‌ ರಂಗನಾಥ್‌ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಇದೇ ಫೆಬ್ರವರಿ ಮೊದಲ ವಾರದಿಂದ ಕಲರ್ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ತಕಧಿಮಿತ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಸುಮನ್‌ ರಂಗನಾಥ್‌, “ಬಹಳ ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಬರುವುದಕ್ಕೆ ಖುಷಿಯಾಗುತ್ತಿದೆ. ಕೆರಿಯರ್‌ನಲ್ಲಿ ಸ್ವಲ್ಪ ಬದಲಾವಣೆ ಇರಲಿ ಮತ್ತು ನನಗೂ ಮೊದಲಿನಿಂದಲೂ ಡ್ಯಾನ್ಸ್‌ ಕಡೆಗೆ ತುಂಬಾ ಆಸಕ್ತಿ ಇರುವುದರಿಂದ ಈ ರಿಯಾಲಿಟಿ ಶೋನಲ್ಲಿ ತೀರ್ಪುಗಾರಳಾಗಿ ಭಾಗವಹಿಸುವುದಕ್ಕೆ ಒಪ್ಪಿಕೊಂಡೆ. ಸೆಲೆಬ್ರಿಟಿಗಳು ಮತ್ತು ಕಾಮನ್‌ ಮ್ಯಾನ್‌ ಇಬ್ಬರೂ ಸೇರಿ ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರಿಂದ, ನೋಡುಗರಿಗೂ ಈ ರಿಯಾಲಿಟಿ ಶೋ ಇಷ್ಟವಾಗಲಿದೆ ಎನ್ನುವ ನಂಬಿಕೆ ನನ್ನದು’ ಎನ್ನುತ್ತಾರೆ. 

ಸುಮನ್‌ ಅವರೇ ಹೇಳುವಂತೆ, “ಇವತ್ತು ಸಿನಿಮಾದಷ್ಟೇ ಹೊಸ ಪ್ರಯೋಗಗಳು ಕಿರುತೆರೆಯಲ್ಲೂ ನಡೆಯುತ್ತಿರುವುದರಿಂದ, ಅದರ ವ್ಯಾಪ್ತಿ ಕೂಡ ವಿಸ್ತರಿಸಿರುವುದರಿಂದ ಎರಡಕ್ಕೂ ಸಾಕಷ್ಟು ಸಾಮ್ಯತೆ ಇದೆ. ಸಿನಿಮಾದಲ್ಲಿ ನಾವೇನು ಮಾಡಿದ್ದೇವೆ, ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಿದ್ದೇವೆ ಅನ್ನೋದು ಅದು ಥಿಯೇಟರ್‌ಗೆ ಬಂದ ಮೇಲಷ್ಟೇ ಗೊತ್ತಾಗುತ್ತದೆ. ಅಲ್ಲಿ ನಮ್ಮ ತಪ್ಪೇನಾದರೂ ಇದ್ದರೆ, ಅದನ್ನು ತಿದ್ದಿಕೊಳ್ಳಲು ಕೂಡ ಅವಕಾಶವಿರುವುದಿಲ್ಲ. ಆದರೆ ಕಿರುತೆರೆಯಲ್ಲಿ ಹಾಗಲ್ಲ. ನಾವೇನು ಮಾಡುತ್ತಿದ್ದೇವೆ ಅನ್ನೋದನ್ನ ಆಡಿಯನ್ಸ್‌ ಸೂಕ್ಷ್ಮವಾಗಿ ಗಮನಿಸುವುದರಿಂದ ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸುತ್ತಾರೆ. ನಮ್ಮ ಸರಿ-ತಪ್ಪುಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿರುತ್ತವೆ. ಇನ್ನು ರಿಯಾಲಿಟಿ ಶೋದಂತಹ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುವುದು ತುಂಬ ದೊಡ್ಡ ಜವಾಬ್ದಾರಿ ಕೂಡ. ಒಬ್ಬರ ಪ್ರತಿಭೆಯನ್ನು ಅಳೆದು ಅದರ ಬಗ್ಗೆ ತೀರ್ಪು ಕೊಡುವುದು ದೊಡ್ಡ ಕೆಲಸ. ಎಲ್ಲರಿಗೂ ಅವರದ್ದೇ ಆದ ವಿಶಿಷ್ಟ ಪ್ರತಿಭೆ ಇರುತ್ತದೆ. ಅಂತಹ ಹತ್ತಾರು ಪ್ರತಿಭೆಗಳನ್ನು ಗುರುತಿಸುವುದೇ ನಮಗೊಂದು ಬಿಗ್‌ ಚಾಲೆಂಜ್‌’ ಎನ್ನುತ್ತಾರೆ. 

ಒಟ್ಟಾರೆ ಲಾಂಗ್‌ ಗ್ಯಾಪ್‌ ನಂತರ ಕಿರುತೆರೆಗೆ ಬರುತ್ತಿರುವ ಸುಮನ್‌ ರಂಗನಾಥ್‌, ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಎಷ್ಟರ ಮಟ್ಟಿಗೆ ಪ್ರೇಕ್ಷಕರು ಮತ್ತು ಸ್ಪರ್ಧಿಗಳ ಮನಗೆಲ್ಲಲಿದ್ದಾರೆ ಅನ್ನೋದು ಇನ್ನೇನು ಕೆಲ ದಿನಗಳಲ್ಲೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next