Advertisement

ಸುಮಲತಾ ಗೆಲ್ಲಿಸಿದ ಒಕ್ಕಲಿಗೇತರ ಶಕ್ತಿಗಳು

09:32 AM May 27, 2019 | Suhan S |

ಮಂಡ್ಯ: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಅಲ್ಪಸಂಖ್ಯಾತ ಸಮುದಾಯವನ್ನು ಹೊರತುಪಡಿಸಿ ಒಕ್ಕಲಿಗೇತರ ಶಕ್ತಿಗಳ ಮತಬ್ಯಾಂಕ್‌ ಸಂಘಟಿತವಾಗಿ ಚುನಾವಣಾ ಹೋರಾಟವನ್ನು ನಡೆಸಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದು ಚುನಾವಣೋತ್ತರ ಜಾತಿ ಸಮೀಕ್ಷೆಯಿಂದ ತಿಳಿದುಬಂದಿದೆ.

Advertisement

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಂಡ ದಿಗ್ವಿಜಯವನ್ನು ಸಾಧಿಸಿದ್ದ ಜೆಡಿಎಸ್‌, ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲೂ ಜಯಭೇರಿಯನ್ನು ಬಾರಿಸುವ ಮೂಲಕ ಜಿಲ್ಲೆಯಲ್ಲಿ ತನ್ನ ರಾಜಕೀಯ ಅಧಿಪತ್ಯವನ್ನು ಪ್ರತಿಷ್ಠಾಪಿಸಿಕೊಂಡಿತ್ತು. ಆದರೆ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ವಿರುದ್ಧವಾದ ಫಲಿತಾಂಶ ಬಂದಿರುವುದು ಸಹಜವಾಗಿ ಜೆಡಿಎಸ್‌ನಲ್ಲಿ ತಳಮಳ ಉಂಟಾಗಿದೆ.

ಲಿಂಗಾಯತ ಸಮುದಾಯ ಕೂಡ ಸಾಥ್‌: 2018ರ ವಿಧಾನ ಸಭಾ ಚುನಾವಣೆಯಲ್ಲಿ ಇದ್ದ ಪರಿಸ್ಥಿತಿಯ ಪ್ರಕಾರ ಜೆಡಿಎಸ್‌ಗೆ ರಾಜಕೀಯವಾಗಿ ಬಲವನ್ನು ತುಂಬುವ ಛಲಗಾರಿಕೆ ವಿಶೇಷವಾಗಿ ಒಕ್ಕಲಿಗ ಸಮುದಾಯದಲ್ಲಿತ್ತು. ಎಚ್.ಡಿ. ಕುಮಾರಸ್ವಾಮಿ ಯವರನ್ನು ಮುಖ್ಯಮಂತ್ರಿ ಮಾಡಲೇಬೇಕೆಂಬ ಉತ್ಕಟತೆ ಆ ಸಮುದಾಯದಲ್ಲಿ ಇದ್ದ ಕಾರಣ ಇಡೀ ಚುನಾವಣೆ ಒಕ್ಕಲಿಗ ಸಮುದಾಯದ ನಾಯಕತ್ವದಲ್ಲಿ ನಡೆದು ಅದಕ್ಕೆ ಪೂರಕವಾಗಿ ಲಿಂಗಾಯತ ಸಮುದಾಯ ಕೂಡ ಸಾಥ್‌ ನೀಡಿತ್ತು.

ಜೆಡಿಎಸ್‌ಗೆ ಜೈಕಾರ ಹಾಕಿದ್ದ ಬಿಜೆಪಿಗರು: ಈ ವಿಧಾನ ಸಭಾ ಚುನಾವಣಾ ಹಂತದಲ್ಲಿ ಎರಡು ಪ್ರಬಲ ಮತ್ತು ರಾಜಕೀಯ ಪ್ರಜ್ಞಾವಂತ ಸಮುದಾ ಯಗಳ ನಾಯಕತ್ವದಲ್ಲಿ ಇತರೆ ಸಮುದಾಯಗಳು ಜೆಡಿಎಸ್‌ಗೆ ವಾಲಿದವು. ವಿಶೇಷವಾಗಿ ಮಂಡ್ಯದಲ್ಲಿ ಬಿಜೆಪಿಯ ಕಾಯಂ ಮತದಾರರು ಕಾಂಗ್ರೆಸ್‌ ಸೋಲಿಸುವ ರಾಜಕಾರಣಕ್ಕೆ ಮುಂದಾಗಿ ಜೆಡಿಎಸ್‌ಗೆ ಜೈಕಾರ ಹಾಕಲಾಯಿತು. ಅಲ್ಲದೆ, ಕಾಂಗ್ರೆಸ್‌ನ ಶಾಶ್ವತ ಮತ ಬ್ಯಾಂಕ್‌ ಆಗಿದ್ದ ಅಹಿಂದಾ ಮತಗಳೂ ಕೂಡ ವಿಭಜನೆಯಾದವು. ಅಲ್ಪಸಂಖ್ಯಾತರು ಕಾಂಗ್ರೆಸ್‌ ಬೆಂಬಲಕ್ಕೆ ನಿಂತರೆ, ದಲಿತ ಮತ್ತು ಹಿಂದುಳಿದ ವರ್ಗದ ಮತಗಳು ವಿಭಜನೆಯಾಗಿ ಸಹಜವಾಗಿ ಜೆಡಿಎಸ್‌ಗೆ ಪ್ರಚಂಡ ಗೆಲುವು ಸಾಧ್ಯವಾಯಿತು.

ಜೆಡಿಎಸ್‌ಗೆ ಮೊದಲ ನಷ್ಟ: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ವಿಧಾನ ಸಭಾ ಚುನಾವಣೆಗೆ ವ್ಯತಿರಿಕ್ತವಾದ ವಾತಾವರಣ ಸೃಷ್ಠಿಯಾಗಿತ್ತು. ಜೆಡಿಎಸ್‌ನ ನಂಬಿಕಸ್ತ ಮತ್ತು ಶಾಶ್ವತ ಮತಬ್ಯಾಂಕ್‌ ಆದ ಒಕ್ಕಲಿಗರ ಮತಗಳು ಜೆಡಿಎಸ್‌ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಶೇ. 65-35ರ ಅನುಪಾತದಲ್ಲಿ ವಿಭಜನೆಗೊಂಡರೆ, ಅದೇ ಸಮುದಾಯದ ಮಹಿಳಾ ಮತಗಳು ಶೇ. 60ರಷ್ಟು ಸುಮಲತಾ ಪರ ವಾಲಿದ್ದು ಜೆಡಿಎಸ್‌ಗೆ ಮೊದಲ ನಷ್ಟವಾಗಿ ಪರಿಣಮಿಸಿತ್ತು.

Advertisement

ಸುಮಲತಾ ಬೆನ್ನಿಗೆ ನಿಂತ ಕೈ ಮುಖಂಡರು: ಸುಮಲತಾ ಅಂಬರೀಶ್‌ಗೆ ಬಿಜೆಪಿ ಬೆಂಬಲ ನೀಡಿದ್ದ ಹಿನ್ನಲೆಯಲ್ಲಿ ಅವರು ಫಲಿತಾಂಶದ ನಂತರ ಬಿಜೆಪಿಗೆ ಸೇರುತ್ತಾರೆಂಬ ರಾಜಕೀಯ ಗಾಸಿಪ್‌ನಿಂದಾಗಿ ಅಲ್ಪಸಂಖ್ಯಾತ ಮತವರ್ಗ, ಸುಮಲತಾ ಅವರಿಂದ ದೂರ ಸರಿದವು. ಒಂದು ಅಂದಾಜಿನ ಪ್ರಕಾರ ಶೇ. 80ರಷ್ಟು ಮತಗಳು ಜೆಡಿಎಸ್‌ ಪರವಾಗಿ ನಿಂತರೆ, ಉಳಿದಂತೆ ಅಂಬರೀಶ್‌ ಅನುಯಾಯಿಗಳು ಮತ್ತು ಪರಾಜಿತ ಕಾಂಗ್ರೆಸ್‌ ನಾಯಕರ ಬೆಂಬಲಿತ ಮತಗಳು ಮಾತ್ರ ಸುಮಲತಾ ಬೆನ್ನಿಗೆ ನಿಂತದ್ದು ಸ್ಪಷ್ಟವಾಗಿದೆ.

ಸುಮಗೆ ಪೂರ್ಣ ಬೆಂಬಲ ನೀಡಿದ ಬಿಜೆಪಿ: ಬಿಜೆಪಿಯ ವೋಟ್ಬ್ಯಾಂಕ್‌ ಎಂದೇ ಬಿಂಭಿತವಾ ಗಿರುವ ಲಿಂಗಾಯತರು, ಬ್ರಾಹ್ಮಣರು, ಜೈನರು ಮತ್ತಿತರ ಮೇಲ್ವರ್ಗದ ಮತದಾರರು ಬಿಜೆಪಿಯ ಅಧಿಕೃತ ಅಭ್ಯರ್ಥಿ ಇಲ್ಲದೇ ಇದ್ದುದ್ದರಿಂದ ಶೇ. 90ರಷ್ಟು ಸುಮಲತಾ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ.

ಶೇ.80ರಷ್ಟು ಸುಮಲತಾಗೆ ಮತ: ಕಾಂಗ್ರೆಸ್‌ನ ಶಾಶ್ವತ ಮತಬ್ಯಾಂಕ್‌ ಆದ ಹಿಂದುಳಿದ ವರ್ಗದ ಕುರುಬ ಸಮುದಾಯ ಕೂಡ ಸಿದ್ದರಾಮಯ್ಯ ಅವರ ಚುನಾವಣಾ ಸೋಲಿನ ಸೇಡನ್ನು ತೀರಿಸಿ ಕೊಂಡಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಉಳಿದಂತೆ ಅತೀ ಹಿಂದುಳಿದ ಸಮುದಾಯಗಳಾದ ಕುಂಬಾರ, ಮಡಿವಾಳ, ಗಾಣಿಗ, ಸವಿತಾ, ವಿಶ್ವಕರ್ಮ, ಗಂಗಾಮತ, ಉಪ್ಪಾರ, ನೇಕಾರ, ಭಾವಸಾರ ಕ್ಷತ್ರಿಯ ಸೇರಿದಂತೆ ಹಲವು ಸಮುದಾಯಗಳು ಸೇರಿದಂತೆ ಮೂರು ಲಕ್ಷಕ್ಕೂ ಅಧಿಕ ಮತದಾರರಲ್ಲಿ ಶೇ. 80ರಷ್ಟು ಸುಮಲತಾ ಪರ ಮತಚಲಾವಣೆ ಮಾಡಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.

ಬಹುಪಾಲು ಪಕ್ಷೇತರ ಅಭ್ಯರ್ಥಿ ಪರ: ದಲಿತ ಮತದಾರರ ಮನಸ್ಥಿತಿಯನ್ನು ಅವಲೋಕಿಸುವು ದಾದರೆ, ಬಿಎಸ್ಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರು ಪಕ್ಷಕ್ಕೆ ವಿಭಜನೆಯಾಗುತ್ತಿದ್ದ ಮತಗಳಲ್ಲಿ ಈ ಬಾರಿ ಬಿಎಸ್ಪಿ ಅಭ್ಯರ್ಥಿ ಕೇವಲ 12 ಸಾವಿರ ಮತಗಳನ್ನು ಪಡೆದಿರುವುದನ್ನು ಗಮನಿಸಿದರೆ ದಲಿತ ಮತದಾರರು ಕೂಡ ಸುಮಲತಾ ಮತ್ತು ನಿಖೀಲ್ ನಡುವೆ ಚುನಾವಣಾ ಚದುರಂಗದಾಟವನ್ನೇ ಆಡಿದ್ದು, ಅವರಲ್ಲಿಯೂ ಬಹುಪಾಲು ಮತದಾರರು ಪಕ್ಷೇತರ ಅಭ್ಯರ್ಥಿ ಪರವಾಗಿದ್ದಾರೆ ಎನ್ನಲಾಗಿದೆ.

ಮೇಲ್ಕಂಡ ಸಮುದಾಯಗಳ ಒಲವನ್ನು ದೃಢೀಕರಿಸುವಂತೆ ಈಗಾಗಲೇ ಜಿಲ್ಲೆಯ ಹಲವು ಬೂತ್‌ಗಳಲ್ಲಿ ಮತಚಲಾವಣೆಯಾಗಿದೆ. ಉದಾಹ ರಣೆಗೆ ತಗ್ಗಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ತೆಗೆದುಕೊಳ್ಳುವುದಾದರೆ, ಒಕ್ಕಲಿಗ ಸಮುದಾಯ ಪ್ರಬಲವಾಗಿರುವ ಗ್ರಾಮಗಳಾದ ಕಾರಸವಾಡಿ, ಸೂನಗಹಳ್ಳಿ, ತಗ್ಗಹಳ್ಳಿ, ಹಳುವಾಡಿ, ಹೆಬ್ಬಕವಾಡಿ, ಕಡಿಲವಾಗಿಲು ಸೇರಿದಂತೆ ಕೆಲವು ಗ್ರಾಮಗಳಲ್ಲಿ ನಿಖೀಲ್ ಮತ್ತು ಸುಮಲತಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದು ಅಂತಿಮವಾಗಿ ನಿಖೀಲ್ಗೆ ಹೆಚ್ಚಿನ ಮತಗಳು ಬಂದಿದೆ.

ಸುಮಲತಾ ಬೆಂಬಲಕ್ಕೆ: ಉಳಿದಂತೆ ಇತರೆ ಸಮುದಾಯಗಳಿರುವ ಸಂತೆಕಸಲಗೆರೆ, ಲೋಕಸರ, ಪುರ, ಕೋಲಕಾರನದೊಡ್ಡಿ, ಚೀರನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಶೇ. 70ರಷ್ಟು ಮತದಾರರು ಸುಮಲತಾ ಅವರ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದೇ ರೀತಿ ಜಿಲ್ಲೆಯ ಹಲವು ಬೂತ್‌ಗಳಲ್ಲಿ ಮತ ಚಲಾವಣೆಯಾಗಿ ರುವುದನ್ನು ಗಮನಿಸಿದರೆ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗೇತರ ಶಕ್ತಿಗಳು ಒಗ್ಗೂಡಿ ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಫ‌ಲ ನೀಡದ ಜಾತಿ ಬ್ರಹ್ಮಾಸ್ತ್ರ: ವಿಧಾನ ಸಭಾ ಚುನಾವಣಾ ಫಲಿತಾಂಶವನ್ನು ಕೇಂದ್ರೀಕರಿಸಿ ಸಂಸದ ಎಲ್.ಆರ್‌. ಶಿವರಾಮೇಗೌಡ ಒಕ್ಕಲಿಗ ಸಮುದಾಯದ ಮತಗಳ ಕ್ರೋಢೀಕರಣಕ್ಕಾಗಿ ಸುಮಲತಾ ವಿರುದ್ಧ ನಾಯ್ಡು ಎಂಬ ಜಾತಿಯ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದರೆ, ಅದು ನಿರೀಕ್ಷಿತ ಫಲ ಕೊಡಲಿಲ್ಲ. ಬದಲಾಗಿ ಅಸಂಘಟಿತ ಇತರೆ ಸಮುದಾಗಳು ಒಗ್ಗೂಡಿ ಜೆಡಿಎಸ್‌ ವಿರುದ್ಧವೇ ಜಾತೀಯ ಅಸ್ತ್ರವನ್ನು ಮರು ಪ್ರಯೋಗಿಸುವುದರ ಮೂಲಕ ಸುಮಲತಾ ಅವರನ್ನು ಗೆಲ್ಲಿಸಿಕೊಂಡಿದ್ದಾರೆ ಎಂದು ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next