Advertisement

ಕೃಷ್ಣ ದರ್ಶನ’ಪಡೆದ ಸುಮಲತಾ

12:30 AM Mar 16, 2019 | Team Udayavani |

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಹಿರಿಯ ನಾಯಕ ಎಸ್‌. ಎಂ.ಕೃಷ್ಣ ಅವರನ್ನು ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಸದಾಶಿವನಗರದಲ್ಲಿನ ಕೃಷ್ಣ ನಿವಾಸಕ್ಕೆ ಶುಕ್ರವಾರ ಮಧ್ಯಾಹ್ನ 12.10ರ ಹೊತ್ತಿಗೆ ಭೇಟಿ ನೀಡಿದ ಸುಮಲತಾ ಅವರು, ಕೃಷ್ಣ ಅವರೊಂದಿಗೆ ಅರ್ಧ ಗಂಟೆ ಮಾತುಕತೆ ನಡೆಸಿದರು. ಮಂಡ್ಯ ಜಿಲ್ಲೆಯಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ ಸುಮಲತಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮಾತುಕತೆ ಬಳಿಕ ಪ್ರತಿಕ್ರಿಯಿಸಿದ ಕೃಷ್ಣ ಅವರು, “ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ನಾಯಕರೊಂದಿಗೆ ಚರ್ಚಿಸಿ, ಮಾ.18ಕ್ಕೆ ತೀರ್ಮಾನ ತಿಳಿಸಲಿದ್ದೇನೆ. ಬಿಜೆಪಿ ಬೆಂಬಲ ನೀಡುತ್ತದೆಯೋ, ಇಲ್ಲವೋ ಎಂಬ ಬಗ್ಗೆಯೂ ಸದ್ಯದಲ್ಲೇ ತಿಳಿಸಲಾಗುವುದು. ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಸಿದ್ದರಾಮಯ್ಯ ಅವರು 2.5 ಲಕ್ಷ ಮತ ಪಡೆದಿದ್ದು, ಪಕ್ಷಕ್ಕೆ ಉತ್ತಮ ಸ್ಪಂದನೆ ಇದೆ. ಸುಮಲತಾ ಅವರು ಒಂದು ನಿಲುವು ಕೈಗೊಂಡ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಇದೇ ವೇಳೆ, “ವಂಶ ಪಾರಂಪರ್ಯವಾಗಿ ಕುಟುಂಬ ರಾಜಕಾರಣ ಮಾಡುವುದಕ್ಕೆ ನನ್ನ ವಿರೋಧವಿದೆ’ ಎಂದರು.

ಕೃಷ್ಣ ಆಶೀರ್ವಾದ ಕೋರಿದ್ದೇನೆ: ಸುಮಲತಾ ಪ್ರತಿಕ್ರಿಯಿಸಿ, “ಕೃಷ್ಣ ಅವರು ಹಿರಿಯ ನಾಯಕರು.ಮಂಡ್ಯ ಜಿಲ್ಲೆಯಿಂದ ಬಂದು ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ, ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಜತೆಗೆ, ಮಂಡ್ಯದ ರಾಜಕೀಯ ಬೆಳವಣಿಗೆ, ಸದ್ಯದ ಪರಿಸ್ಥಿತಿಯ ಬಗ್ಗೆ ವಿವರ ನೀಡಿದ್ದೇನೆ. ಈಗಾಗಲೇ ಕಾಂಗ್ರೆಸ್‌ ಪಕ್ಷವು ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದರಿಂದ ಆ ಬಗ್ಗೆ ಮಾತನಾಡುವುದಿಲ್ಲ. ನಾನು ಹಿರಿಯ ನಾಯಕರನ್ನು ಭೇಟಿಯಾಗಿ ಆಶೀರ್ವಾದ ಪಡೆಯಬೇಕಿದೆ. ಬಿಜೆಪಿಯಿಂದಲೂ ಯಾರೊಬ್ಬರು ಅಧಿಕೃತವಾಗಿ ಬೆಂಬಲ ನೀಡುವ ಬಗ್ಗೆ ಮಾತನಾಡಿಲ್ಲ. ನಾನು ಎಲ್ಲರ ಬೆಂಬಲ ನಿರೀಕ್ಷಿಸುತ್ತಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next