Advertisement

‘ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ?’

09:12 AM Apr 01, 2019 | Hari Prasad |

ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್‌ ಕುಮಾರಸ್ವಾಮಿ ಮತ್ತು ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಕಣದಲ್ಲಿರುವ ಪ್ರತಿಷ್ಠಿತ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಲು ಕುಮಾರಸ್ವಾಮಿ ಅವರು ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಇದರಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರ ಭಾಗೀದಾರಿಯೂ ಇದೆ ಎಂಬ ಗಂಭೀರ ಆರೋಪವನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದಾರೆ.

Advertisement

ಸುಮಲತಾ ಅಂಬರೀಷ್‌ ಅವರು ನಾಮಪತ್ರವನ್ನು ಸಲ್ಲಿಸಿದ ದಿನ ಜಿಲ್ಲೆಯಾದ್ಯಂತ ವಿದ್ಯುತ್‌ ಮತ್ತು ಕೇಬಲ್‌ ಅನ್ನು ಕಡಿತಗೊಳಿಸಿರುವುದೂ ಸೇರಿದಂತೆ ಹಲವಾರು ರೀತಿಯಲ್ಲಿ ನನ್ನ ಪ್ರಜಾಸತ್ತಾತ್ಮಕ ಸ್ಪರ್ಧೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಸುಮಲತಾ ಅವರು ಆರೋಪಿಸಿದರು. ನಿಖಿಲ್‌ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ ದಿನವೇ ಮುಖ್ಯಮಂತ್ರಿಯವರು ನಿಖಿಲ್‌ ಅವರ ಅಭ್ಯರ್ಥಿ ಕ್ರಮಾಂಕ ಕ್ರಮಾಂಕ 1 ಎಂದು ಘೋಷಿಸುತ್ತಾರೆ. ಆದರೆ ನನಗೆ ಇನ್ನೂ ಅಭ್ಯರ್ಥಿ ಕ್ರಮಾಂಕವನ್ನು ತಿಳಿಸಿಲ್ಲ. ಈ ಕುರಿತಾಗಿ ಜಿಲ್ಲಾಧಿಕಾರಿಯವರಲ್ಲಿ ವಿಚಾರಿಸಿದರೆ ಅವರು ದೆಹಲಿಯತ್ತ ಕೈತೋರಿಸುತ್ತಾರೆ. ಈ ರೀತಿ ಮಾಡುವ ಮೂಲಕ ಒಬ್ಬ ನಿರ್ಧಿಷ್ಟ ಅಭ್ಯರ್ಥಿಗೆ ಈ ಚುನಾವಣೆಯಲ್ಲಿ ಅನುಕೂಲ ವಾತಾವರಣವನ್ನು ನಿರ್ಮಿಸಿಕೊಡುವ ಕೆಲಸವನ್ನು ಜಿಲ್ಲಾಧಿಕಾರಿಗಳು ಸೇರಿದಂತೆ ಇಲ್ಲಿನ ಅಧಿಕಾರ ವರ್ಗವೇ ಮಾಡುತ್ತಿದೆ ಎಂದು ಸುಮಲತಾ ಆರೋಪಿಸಿದರು.

ಇನ್ನು ನಿಖಿಲ್‌ ಅವರ ನಾಮಪತ್ರದಲ್ಲಿ ದೋಷವಿದೆ ಎಂದು ನಾವು ಲಿಖಿತ ದೂರು ನೀಡಿದ್ದರೂ ಈ ಕುರಿತಾಗಿ ಆಧಾರವನ್ನು ಕೇಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಆಧಾರಗಳನ್ನೂ ನಾವು ಒದಗಿಸಿದ್ದೇವೆ ಆದರೆ ಈ ಕುರಿತಾಗಿಯೂ ತೃಪ್ತಿಕರ ಕ್ರಮ ಕೈಗೊಂಡಿಲ್ಲ ಎಂದು ಸುಮಲತಾ ಅವರು ಸರಣಿ ಆರೋಪಗಳನ್ನು ಮಾಡಿದರು. ಅಂದು ಮಾಡಿದಂತೆ ಇವತ್ತು ಪತ್ರಿಕಾಗೋಷ್ಠಿ ಸಂದರ್ಭದಲ್ಲೂ ಸಹ ವಿದ್ಯುತ್‌ ಮತ್ತು ಕೇಬಲ್‌ ಕಡಿತಗೊಳಿಸಿದ್ದಾರೆ. ನಮಗೆ ನ್ಯಾಯ ಸಿಗುವುದಿಲ್ಲ ಎಂದು 99 ಪ್ರತಿಶತ ಖಾತ್ರಿಯಾಗಿದೆ. ಇದಕ್ಕೆ ಜಿಲ್ಲೆಯ ಮತದಾರರೇ ಸೂಕ್ತ ಉತ್ತರವನ್ನು ನೀಡಲಿದ್ದಾರೆ ಎಂದು ಬಿ.ಜೆ.ಪಿ. ಬೆಂಬಲಿತ ಪಕ್ಷೇತರ ಅಭ್ಯರ್ಥಿ ತನ್ನ ನೋವನ್ನು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next