Advertisement

ಹದಗೆಟ್ಟ  ಸುಳ್ಯ- ಗುರುಂಪು- ಆಲೆಟ್ಟಿ  ಅಂತಾರಾಜ್ಯ ರಸ್ತೆ

03:27 PM Jan 07, 2018 | Team Udayavani |

ಸುಳ್ಯ: ಸುಳ್ಯ- ಗುರುಂಪು ನಾಗಪಟ್ಟಣ ಸೇತುವೆಯಾಗಿ ಕೇರಳ ಸಂಪರ್ಕಿಸುವ ಅಂತಾರಾಜ್ಯ ರಸ್ತೆ ತೀವ್ರ ಹದಗೆಟ್ಟಿದ್ದು, ರಿಕ್ಷಾ ಚಾಲಕ ಸಂಘದವರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.

Advertisement

ಸುಳ್ಯ ಗುರುಂಪುವಿನಿಂದ ಆಲೆಟ್ಟಿ ಮೂಲಕ ಕಲ್ಲಪಳ್ಳಿ – ಕಾಸರಗೋಡು ಸೇರುವ ಲೋಕೋಪಯೋಗಿ ರಸ್ತೆ ಸುಳ್ಯ ನಗರದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ನಾಗಪಟ್ಟಣ ಸೇತುವೆ ವರೆಗೆ ತೀವ್ರ ಹದಗೆಟ್ಟಿದೆ. ಬಾಡಿಗೆ ರಿಕ್ಷಾದವರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಜನಪ್ರತಿನಿಧಿಗಳು ಇದರಲ್ಲೇ ಓಡಾಡುತ್ತಿದ್ದರೂ ರಸ್ತೆ ಹೊಂಡಗಳಿಗೆ ತೇಪೆ ಹಾಕಿಸುವಷ್ಟು ಆಸಕ್ತಿ ವಹಿಸಿಲ್ಲ. ನಮ್ಮ ನೋವು ಕೇಳುವವರಿಲ್ಲ ಎಂದು ಗಾಂಧಿನಗರದ ರಿಕ್ಷಾ ಚಾಲಕ ಚಂದ್ರಶೇಖರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಯ ನಗರದಿಂದ ಆಲೆಟ್ಟಿಗೆ ಹೋಗುವ ಆರಂಭಿಕ 600 ಮೀಟರ್‌ನಷ್ಟು ರಸ್ತೆಯಲ್ಲಿ ಸ್ವಲ್ಪ ಭಾಗ ಕಾಂಕ್ರೀಟ್‌ ಇದೆ. ಉಳಿದಂತೆ ರಸ್ತೆಯಲ್ಲಿ ಹೊಂಡ ಗುಂಡಿಗಳೇ ತುಂಬಿವೆ. ಇಕ್ಕಟ್ಟಾದ ರಸ್ತೆಯ ಅಂಚು ಹಾಳಾಗಿದ್ದು, ಗುಂಡಿ ತಪ್ಪಿಸುವ ಭರದಲ್ಲಿ ರಸ್ತೆಯಂಚಿಗೆ ಸರಿದರೂ ಆಳವಾದ ಹೊಂಡ ವಾಹನಗಳನ್ನು ಸ್ವಾಗತಿಸುತ್ತದೆ. ಎದುರಿನಿಂದ ವಾಹನಗಳು ಬಂದಾಗ ಸೈಡ್‌ ಕೊಡಲು ಹರಸಾಹಸ ಪಡಬೇಕು.

ರಸ್ತೆ ಅಂಚು ಅತಿಕ್ರಮಣ
ರಸ್ತೆ ಅಂಚಿನ ಗುಡ್ಡವನ್ನು ಕಡಿದು ತಮ್ಮ ಜಾಗಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದರಿಂದ ರಸ್ತೆ ಅಗಲವನ್ನು ಕಿರಿದಾಗಿಸಿದೆ. ರಸ್ತೆ ವಿಸ್ತರಣೆಗೂ ಅವಕಾಶವಿಲ್ಲದಾಗಿದೆ. ಸುಳ್ಯ ಗಾಂಧಿನಗರ ಕ್ರಾಸ್‌ ಬಳಿಯಿಂದ ಸೇತುವೆವರೆಗೆ ರಸ್ತೆ ತೀವ್ರ ಇಕ್ಕಟ್ಟಾಗಿದ್ದು, ಕುಗ್ರಾಮದ ರಸ್ತೆಗಿಂತಲೂ ಕಡೆಯೆನಿಸಿದೆ.

ಒಡೆದ ನೀರಿನ ಪೈಪು
ನ.ಪಂ.ನಿಂದ ಪೂರೈಕೆಯಾಗುವ ಕುಡಿಯುವ ನೀರಿನ ಪೈಪು ಒಡೆದು ಗುರುಂಪು ಬಳಿ ನೀರು ಹರಿಯುತ್ತಿದ್ದು, ಪಕ್ಕದ ತೋಟವೊಂದಕ್ಕೆ ಸೇರುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿದರೆ., ಒಡೆದ ಪೈಪನ್ನು ಸರಿಪಡಿಸಿದ್ದೇವೆ. ಅಲ್ಲಿ ನೀರು ಹರಿಯುತ್ತಿರುವುದು ಚರಂಡಿಯದ್ದು ಎನ್ನುತ್ತಿದ್ದಾರೆ.

Advertisement

ಸೂಕ್ತ ಚರಂಡಿಯೂ ಇಲ್ಲ
ಸುಮಾರು ಅರ್ಧ ಕಿ.ಮೀ. ಉದ್ದದ ಇಕ್ಕಟ್ಟಾದ ರಸ್ತೆಯಲ್ಲಿ ಚರಂಡಿಯೇ ಇಲ್ಲ. ನೀರು ರಸ್ತೆಯಲ್ಲಿ ಹರಿದು ಚರಂಡಿ ಸಹಿತ
ರಸ್ತೆ ಪೂರ್ತಿ ಹದಗೆಟ್ಟಿದೆ. ಪಾದಚಾರಿಗಳಿಗೆ ನಡೆದಾಡಲೂ ಅಸಾಧ್ಯವಾಗಿದೆ.

ಸಾಧ್ಯವಿಲ್ಲವೇಕೆ?
ಒಂದು ಬಾರಿ ಡಾಮರೀಕರಣಗೊಂಡಿದ್ದ ಬಳಿಕ ಒಂದೆರಡು ಬಾರಿಯಷ್ಟೇ ರಸ್ತೆಗೆ ತೇಪೆ ಹಾಕಲಾಗಿದೆ. ಅಂತಾರಾಜ್ಯ
ರಸ್ತೆಯಾಗಿರುವ ಇದನ್ನು ಅಭಿವೃದ್ಧಿಪಡಿಸುವ ಬದಲು ಸಮರ್ಪಕವಾಗಿ ದುರಸ್ತಿಗೊಳಿಸಲು ಜನಪ್ರತಿನಿಧಿಗಳಿಗೆ ಸಾಧ್ಯವಿಲ್ಲವೇಕೆ?
ರಾಧಾಕೃಷ್ಣ ಪರಿವಾರಕಾನ
  ತಾ.ಪಂ. ನಾಮನಿರ್ದೇಶಿತ ಸದಸ್ಯ

ತೇಪೆ ಕಾರ್ಯ ಶೀಘ್ರ
ರಸ್ತೆ ದುರಸ್ತಿಗೆಂದು ನ.ಪಂ. 18 ಲಕ್ಷ ರೂಪಾಯಿ ಅನುದಾನವಿರಿಸಿದ್ದು, ಟೆಂಡರ್‌ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವರ್ಷದಂತೆ ಜನವರಿ ತಿಂಗಳ ಬಳಿಕ ತೇಪೆ ಕಾರ್ಯ ನಡೆಯಲಿದೆ. ನ.ಪಂ.ನಿಂದ ಹೆಚ್ಚು ಅನುದಾನ ಲಭ್ಯವಿಲ್ಲದಿದ್ದರಿಂದ ಮತ್ತು ಲೋಕೋಪಯೋಗಿ ರಸ್ತೆಯಾಗಿರುವುದ ರಿಂದ ಶಾಸಕರು ಅಥವಾ ಸಂಸದರ ಅನುದಾನವೇ ಅಗತ್ಯ.
– ಉಮ್ಮರ್‌, ನ.ಪಂ. ವಾರ್ಡ್‌ ಸದಸ್ಯ 

ನ.ಪಂ.ಗೆ ಮನವಿ
ಕಳೆದ ಬಾರಿ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು. ಶ್ರಮದಾನದ ಮೂಲಕ ರಿಕ್ಷಾ ಚಾಲಕರೇ ಸೇರಿ ದುರಸ್ತಿಪಡಿಸಿದ್ದೆವು. ಈ ಬಾರಿ ಕನಿಷ್ಠ ತೇಪೆಯೂ ನಡೆದಿಲ್ಲ. ನ.ಪಂ.ಗೆ ಮನವಿ ಸಲ್ಲಿಸಲಿದ್ದು, ವಾರದೊಳಗಾಗಿ ಕ್ರಮ
ಕೈಗೊಳ್ಳದಿದ್ದರೆ ರಿಕ್ಷಾ ಚಾಲಕರ ಸಂಘ ಪ್ರತಿಭಟನೆ ನಡೆಸಲಿದೆ.
ರಾಧಾಕೃಷ್ಣ
  ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ 

  ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next