Advertisement

ಸುಳ್ಯ: ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕೆ ಸಭೆ 

12:51 PM May 25, 2018 | Team Udayavani |

ಸುಳ್ಯ: ಕೇರಳ ರಾಜ್ಯದ ಗಡಿ ಭಾಗದಲ್ಲಿರುವ ಸುಳ್ಯದಲ್ಲಿ ನಿಫಾ ವೈರಾಣು ಜ್ವರ ಹರಡದಂತೆ ನಿಗಾ ಇರಿಸಲು ಪುತ್ತೂರು
ಉಪವಿಭಾಗದ ಸಹಾಯಕ ಆಯುಕ್ತ ಎಚ್‌. ಕೆ. ಕೃಷ್ಣಮೂರ್ತಿ ಅವರು ಆರೋಗ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸಹಾಯಕ ಆಯುಕ್ತರ ಅಧ್ಯಕ್ಷತೆ ಯಲ್ಲಿ ನಡೆದ ಪಾಕೃತಿಕ ವಿಕೋಪ ಮುನ್ನೆಚ್ಚೆರಿಕೆ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ವಿವಿಧ ಸಲಹೆ-ಸೂಚನೆ ನೀಡಿದರು.

Advertisement

ಕೇರಳ ರಾಜ್ಯದಿಂದ ಸುಳ್ಯ ಮೊದಲಾದ ಭಾಗಗಳಿಗೆ ಬಂದಿರುವ ವ್ಯಕ್ತಿಗಳಲ್ಲಿ ಜ್ವರದ ಲಕ್ಷಣ ಕಂಡು ಬಂದರೆ ತಪಾಸಣೆ ನಡೆಸಬೇಕು. ತುರ್ತು ಸಂದರ್ಭಕ್ಕಾಗಿ ಪ್ರತ್ಯೇಕ ವಾರ್ಡ್‌ ತೆರೆಯಬೇಕು. ನಿಫಾ ಜ್ವರ ಬಾಧೆಯಿಂದ ದೂರ ಇರಲು ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಕರಪತ್ರ ಸಿದ್ಧಪಡಿಸಿ ಹಂಚುತ್ತಿರುವುದು ಒಳ್ಳೆಯ ಬೆಳವಣಿಗೆ. ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಗಳು ಇಲ್ಲಿನ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಕಾರಣ, ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಇತರ ಇಲಾ ಖೆಗಳ ಸಹಯೋಗದೊಂದಿಗೆ ಕಾರ್ಯನ್ಮುಖವಾಗಬೇಕು ಎಂದರು.

ಮಕ್ಕಳಿಗೆ ಸೂಚನೆ ನೀಡಿ
ಸಾಂಕ್ರಾಮಿಕ ರೋಗ ತಡೆಗಟ್ಟಲು ಮಕ್ಕಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಖ್ಯಗುರುಗಳ ಮೂಲಕ ಜಾಗೃತಿ ಮೂಡಿಸಬೇಕು. ಶಾಲೆಯಲ್ಲಿ ಅಗತ್ಯ ಸಂದರ್ಭದಲ್ಲಿ ಬಳಕೆಗೆ ಹೆಲ್ತ್‌ ಕಿಟ್‌ ಇರಿಸುವಂತೆ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲಿಂಗರಾಜೇ ಅರಸ್‌ ಮಾಹಿತಿ ನೀಡಿ, ಎಂಟು ಶಾಲೆಗಳನ್ನು ದುರಸ್ತಿಗೆ ಗುರುತಿಸಿ, ಅಂದಾಜುಪಟ್ಟಿ ತಯಾರಿಸಿ ಜಿ.ಪಂ.ಗೆ ಕಳುಹಿಸಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಹಾರ ದಾಸ್ತಾನು ಕೊಠಡಿ ಶುಚಿತ್ವ, ಕುಡಿಯುವ ನೀರಿನ ಬಗ್ಗೆಯು ಗಮನ ಹರಿಸಲು ತಿಳಿಸಲಾಗಿದೆ ಎಂದರು.

ತೀವ್ರ ಮಳೆಯಾದಾಗ ಪರಿಸ್ಥಿತಿ ಅವಲೋಕಿಸಿ ರಜೆ ನೀಡುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕು. ರಜೆ ಘೋಷಿಸುವ ಮೊದಲು ಡಿಡಿಪಿಐ, ಡಿಸಿ ಅವರ ಗಮನಕ್ಕೆ ತರಬೇಕು ಎಂದು ಕೃಷ್ಣಮೂರ್ತಿ ಹೇಳಿದರು.

Advertisement

ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯ ಲ್ಲಿರುವ ಮರಗಳನ್ನು ಗುರುತಿಸಿ ಅದನ್ನು ಪಟ್ಟಿ ಮಾಡಬೇಕು. ಅರಣ್ಯ ಇಲಾಖೆ ಅದನ್ನು ತೆರವುಗೊಳಿಸಿ, ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎಂದು ಸಹಾಯಕ ಆಯುಕ್ತರು ತಿಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಇರುವ ಕಲ್ಲು ಕೋರೆಗಳು ಮಳೆಗಾಲದಲ್ಲಿ ಅಪಾಯ ತರುತ್ತದೆ. ಅವುಗಳಿಗೆ ರಕ್ಷಣಾ ಬೇಲಿ ಅಳವಡಿಸಬೇಕು. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸುರಕ್ಷಾ ಕ್ರಮ ಕೈಗೊಳ್ಳದ ಮಾಲಕರ ಮೇಲೆ ನಿರ್ಧಾಕ್ಷಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಚರಂಡಿ ಸರಿಪಡಿಸಿ
ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ರಸ್ತೆ ಇಕ್ಕೆಲೆಗಳಲ್ಲಿನ ಚರಂಡಿಯನ್ನು ಮಳೆ ನೀರು ಹರಿದುಹೋಗಲು ಅನುಕೂಲವಾಗುವ ತರಹ ದುರಸ್ತಿಪಡಿಸುವ ಬಗ್ಗೆ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. 

48 ಗಂಟೆಯೊಳಗೆ ಪರಿಹಾರ
ಪಾಕೃತಿಕ ವಿಕೋಪದಿಂದ ಮನೆ ಪೂರ್ಣ ಅಥವಾ ಭಾಗಶಃ ಹಾನಿ ಉಂಟಾದರೆ 48 ಗಂಟೆಯೊಳಗೆ ಪರಿಹಾರ ವಿತರಿಸಬೇಕು. ಯಾವುದೇ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತತ್‌ಕ್ಷಣ ಸ್ಥಳದಲ್ಲಿ ಇರಬೇಕು. ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಹಾಯಕ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

1912 ಟೋಲ್‌ ಫ್ರೀ ನಂಬರ್‌
ಚುನಾವಣೆ ಸಂದರ್ಭದಲ್ಲಿ ಮೆಸ್ಕಾಂ ಉತ್ತಮ ಸೇವೆ ಸಲ್ಲಿಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಹಾಯಕ ಆಯುಕ್ತರು, ಮಳೆಗಾಲದಲ್ಲಿ ಮೆಸ್ಕಾಂ ಜವಬ್ದಾರಿ ಹೆಚ್ಚಿದೆ. ಕಂಬ, ಲೈನ್‌ ಪರಿಶೀಲಿಸಿ, ಅದರ ಗುಣಮಟ್ಟವನ್ನು ಗಮನಿಸಬೇಕು. ಪೂರ್ವಭಾವಿ ಸಿದ್ಧತೆಗಳನ್ನು ತತ್‌ಕ್ಷಣ ಮಾಡಬೇಕು ಎಂದು ಅವರು ಸೂಚಿಸಿದರು. 

ಮೆಸ್ಕಾಂ ಜೂನಿಯರ್‌ ಎಂಜಿನಿಯರ್‌ ಪ್ರಸಾದ್‌ ಉತ್ತರಿಸಿ, ಮೆಸ್ಕಾಂ ಕಂಬ ಅಳವಡಿಸುವ ಕಾರ್ಯದಲ್ಲಿ ತೊಡಗಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 1912 ಟೋಲ್‌ಫ್ರೀ  ನಂಬರ್‌ಗೆ ಕರೆ ಮಾಡಬಹುದು ಎಂದರು. ಸಭೆಯಲ್ಲಿ ತಹಶೀಲ್ದಾರ್‌ ಕುಂಞಮ್ಮ ಉಪಸ್ಥಿತರಿದ್ದರು.

ಹಣ್ಣಿನ ಗಿಡ ನೆಡಿ
ರಸ್ತೆ ಬದಿಯಲ್ಲಿನ ಅಪಾಯಕಾರಿ ಮರ ತೆರವು ಮಾಡಿದ ಸ್ಥಳದಲ್ಲಿ ಒಂದು ಮರದ ಬದಲಾಗಿ ನಾಲ್ಕು ಹಣ್ಣಿನ ಗಿಡ ನೆಡುವಂತೆ ಅರಣ್ಯ ಇಲಾಖೆಗೆ ಸಲಹೆ ನೀಡಿದ ಸಹಾಯಕ ಆಯುಕ್ತರು, ಪರಿಸರ ಸಂರಕ್ಷಣೆ ಕುರಿತಂತೆ ಇಲಾಖೆಗಳ
ಪಾತ್ರಗಳ ಬಗ್ಗೆಯು ಗಮನ ಸೆಳೆದರು.

ನಿರ್ವಹಣೆ ಮುಖ್ಯ
ಮಳೆಗಾಲದ ನಿರ್ವಹಣೆ ನಮಗೆ ದೊಡ್ಡ ಸವಾಲು. ವಿಕೋಪ ಆಗದಂತೆ ತಡೆಗಟ್ಟವುದು ಮತ್ತು ಘಟನೆಗೆ ಸ್ಪಂದಿಸುವುದು ಇವೆರೆಡಕ್ಕೂ ನಾವು ಸಿದ್ಧರಾಗಬೇಕು. ಪಾಕೃತಿಕ ವಿಕೋಪವನ್ನು ಪೂರ್ವಭಾವಿಯಾಗಿ ತಡೆಗಟ್ಟಲು ನಾವು ಹಾಕುವ ಶ್ರಮದಿಂದ ನಿರ್ಲಕ್ಷ್ಯದ ಅಪಾಯಗಳನ್ನು ದೂರವಿರಿಸಬಹುದು. ಆಯಾ ಇಲಾಖೆಯವರು, ತಾಲೂಕಿನ ಎಲ್ಲ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಸಹಾಯಕ ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು.

ಕಂಟ್ರೋಲ್‌ ರೂಂ
ತಾಲೂಕು ಕಚೇರಿ, ತಾ.ಪಂ, ನ.ಪಂ., ಪೊಲೀಸ್‌ ಠಾಣೆಗಳಲ್ಲಿ ಕಂಟ್ರೋಲ್  ರೂಂ ತೆರೆಯಬೇಕು. ಅಗತ್ಯ ಸಂದರ್ಭದಲ್ಲಿ ಜನರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ಮಾಧ್ಯಮದ ಮೂಲಕ ಪ್ರಚುರಪಡಿಸಬೇಕು ಎಂದು ಸಹಾಯಕ ಆಯುಕ್ತ ಕೃಷ್ಣಮೂರ್ತಿ ಅವರು ಇಲಾಖೆಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next