Advertisement

ಸುಳ್ಯ ನ.ಪಂ.: 4ನೇ ಬಾರಿ ಗದ್ದುಗೆ ಏರಿದ ಬಿಜೆಪಿ

10:03 PM May 31, 2019 | Team Udayavani |

ಸುಳ್ಯ: ನಗರ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸತತ ನಾಲ್ಕನೆ ಬಾರಿಗೆ ಅಧಿಕಾರದ ಗದ್ದುಗೆಯೇರಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ ಮತ್ತೂಮ್ಮೆ ಮುಖಭಂಗ ಅನುಭವಿಸಿದೆ. 20 ವಾರ್ಡ್‌ಗಳಲ್ಲಿ ಬಿಜೆಪಿ 14, ಕಾಂಗ್ರೆಸ್‌ 4 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಖಾತೆ ತೆರೆಯಲು ವಿಫಲವಾಗಿದೆ. ಜೆಡಿಎಸ್‌, ಆಮ್‌ ಆದ್ಮಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

Advertisement

ಬಿಜೆಪಿಗೆ ಲಾಭ: ಕಾಂಗ್ರೆಸ್‌ಗೆ ನಷ್ಟ
ಕಳೆದ ಬಾರಿ 18 ವಾರ್ಡ್‌ಗಳಲ್ಲಿ 12 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 20 ವಾರ್ಡ್‌ಗಳಲ್ಲಿ 14 ಸ್ಥಾನ ಪಡೆದಿದೆ. ಹೊಸದಾಗಿ ರಚನೆಗೊಂಡ ಎರಡು ವಾರ್ಡ್‌ನಲ್ಲಿ ಬಿಜೆಪಿ ಗೆಲುವು ಪಡೆದಿದೆ. ಕಾಂಗ್ರೆಸ್‌ 4 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಒಂದು ಸ್ಥಾನ ಕಳೆದುಕೊಂಡಿದೆ. ಈ ಹಿಂದೆ 1 ಸ್ಥಾನ ಹೊಂದಿದ್ದ ಎಸ್‌ಡಿಪಿಐ ಎರಡು ಕ್ಷೇತ್ರಗಳಲ್ಲಿ ಮುಗ್ಗರಿಸಿದೆ. ಕಾಂಗ್ರೆಸ್‌ ಗೆಲುವು ಕಂಡಿದ್ದ ಎರಡು ಕ್ಷೇತ್ರಗಳು ಈ ಬಾರಿ ಪಕ್ಷೇತರರ ಪಾಲಾಗಿವೆ.

ಬಂಡೆದ್ದು ಗೆದ್ದ ರಿಯಾಜ್‌!
ಬಂಡಾಯ ಸ್ಪರ್ಧೆಯಿಂದಾಗಿ ಬೂಡು ವಾರ್ಡ್‌ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಬೂಡುವಿನಿಂದ ಸ್ಪರ್ಧಿಸಿದ್ದ ರಿಯಾಜ್‌ ಕಟ್ಟೆಕ್ಕಾರ್‌ ಅವರು ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದ ನ.ಪಂ. ಮಾಜಿ ಸದಸ್ಯ ಗೋಕುಲ್‌ದಾಸ್‌ ಕೇವಲ 22 ಮತ ಗಳಿಸಲು ಶಕ್ತರಾದರು. ಇಲ್ಲಿ ರಿಯಾಜ್‌ ಅವರು 188 ಮತ ಪಡೆದು 54 ಮತಗಳ ಅಂತರದಿಂದ ಗೆಲುವು ಪಡೆದರು.

ಸೋಲಿಲ್ಲದ ಸರದಾರನಿಗೆ ಸೋಲು!
ಸತತ ಐದು ಬಾರಿ ಗೆದ್ದಿದ್ದ ಕಾಂಗ್ರೆಸ್‌ ಮುಖಂಡ ಮುಸ್ತಾಫ ಕೆ.ಎಂ. ಅವರು ಸೋಲು ಕಂಡಿದ್ದಾರೆ. ಬೋರುಗುಡ್ಡೆ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಮುಸ್ತಾಫ ಅವರು 15 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಉಮ್ಮರ್‌ ಕೆ.ಎಸ್‌. ಅವರ ವಿರುದ್ಧ ಪರಾಜಿತಗೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದೆ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದ ಆರ್‌.ಕೆ. ಮಹಮ್ಮದ್‌ ಅವರು 34 ಮತ ಗಳಿಸಿರುವುದು ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಗೆಲುವು ಕಸಿದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಬಂಡಾಯ ಗೆದ್ದ ಬಿಜೆಪಿ!
ಟಿಕೆಟ್‌ ಹಂಚಿಕೆ ಸಂದರ್ಭ ಪುರಭವನ, ಶಾಂತಿನಗರ, ಮಿಲಿಟ್ರಿ ಗ್ರೌಂಡ್‌, ಕಾನತ್ತಿಲ ವಾರ್ಡ್‌ಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿತ್ತು. ಪುರಭವನ 10ನೇ ವಾರ್ಡ್‌ ನಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ವಿನಯ ಕುಮಾರ್‌ ಕಂದಡ್ಕ ಅವರ ವಿರುದ್ಧ ಸುನೀಲ್‌ ಕುಮಾರ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರಿಗೆ ಸ್ವ ಪಕ್ಷದವರೇ ಬೆಂಬಲ ಸೂಚಿಸಿದ್ದರು. ಆದರೆ ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡ ಕಾರಣ ಬಿಜೆಪಿ ನಿಟ್ಟುಸಿರುಬಿಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next