Advertisement

ತೊಡಿಕಾನ ಹಸಿರ ಸಿರಿಯ ಮಧ್ಯೆ ಕನ್ನಡ ಭುವನೇಶ್ವರಿಯ ಮೆರವಣಿಗೆ

11:15 AM Dec 10, 2018 | Team Udayavani |

ಅರಂತೋಡು: ಸುಳ್ಯ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಿನ ಗ್ರಾಮೀಣ ಪ್ರದೇಶವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ವಠಾರದಲ್ಲಿ ನಡೆಯಿತು. ಕನ್ನಡ ಭುವನೇಶ್ವರಿಯ ವೈಭವದ ಮೆರವಣಿಗೆ ಸಮ್ಮೇಳನದ ಕಳೆಯುನ್ನು ಹೆಚ್ಚಿಸಿತು. ಸಾಹಿತ್ಯ ಸಮ್ಮೇಳನ ಸಂಘಟನ ಸಮಿತಿ, ತಾಲೂಕು, ಜಿಲ್ಲಾ ಸಾಹಿತ್ಯ ಪರಿಷತ್‌, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ವತಿಯಿಂದ ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಹಾರ ಹಾಕಿ ಸಮ್ಮೇಳಾಧ್ಯಕ್ಷರನ್ನು ಸ್ವಾಗತಿಸಿದರು.

Advertisement

ಸ್ಕೌಟ್ಸ್‌ ಮತ್ತು ಗೈಡ್ಸ್‌ ಬ್ಯಾಂಡ್‌, ನಾಸಿಕ್‌ ಬ್ಯಾಂಡ್‌, ಕೇರಳ ಚೆಂಡೆ ವಾದನಗಳ ಸದ್ದು ಮೈನವಿರೇಳಿಸುತ್ತಿತ್ತು. ಸಮ್ಮೇಳಾಧ್ಯಕ್ಷರನ್ನು ಶಾಲೆಯ ಬಳಿಯಿಂದ ತೆರೆದ ವಾಹನದಲ್ಲಿ ವೇದಿಕೆಯವರೆಗೆ ಕರೆದೊಯ್ಯಲಾಯಿತು. ಮೆರವಣಿಗೆಯನ್ನು ಸಂಘಟನ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. 

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕುಡ, ತಾಲೂಕು ಅಧ್ಯಕ್ಷ ಹರಪ್ರಸಾದ್‌ ತುದಿಯಡ್ಕ, ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಗೌಡ, ಸಂಘಟನ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕುತ್ತಮೊಟ್ಟೆ, ಕೋಶಾಧಿಕಾರಿ ಆನಂದ ಕಲ್ಲಗದ್ದೆ, ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೇರಾಲ್‌, ಗೌರವ ಕೋಶಾಧ್ಯಕ್ಷ ದಯಾನಂದ ಆಳ್ವ, ಸಂಘಟನ ಸಮಿತಿ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಇದ್ದರು.

ಅರಂತೋಡು ಗ್ರಾ.ಪಂ. ಅಧ್ಯಕ್ಷೆ ನೀಲಾವತಿ ಕೊಡಂಕೇರಿ ರಾಷ್ಟ ಧ್ವಜಾರೋಹಣ ಮಾಡಿದರು.ಪ್ರದೀಪ್‌ ಕುಮಾರ್‌ ಕಲ್ಕೂರ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಹರಪ್ರಸಾದ್‌ ತುದಿಯಡ್ಕ ಕನ್ನಡ ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ವಸ್ತು ಪ್ರದರ್ಶನ ಉದ್ಘಾಟಿಸಿದರು. ಪುಷ್ಪಾ ಮೇದಪ್ಪ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.

ತೇಜೇಶ್ವರ್‌ ಕುಂದಲ್ಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next