Advertisement

ಸುಳ್ಯ 22ನೇ ತಾಲೂಕು ಕನ್ನಡ ನುಡಿ ಜಾತ್ರೆ ಸಮಾರೋಪ

03:48 PM Jan 15, 2018 | Team Udayavani |

ಸುಬ್ರಹ್ಮಣ್ಯ : ದೇಶದಲ್ಲಿ ಶಿಕ್ಷಣ, ಜಲ, ಉದ್ಯೋಗ ಕ್ಷೇತ್ರಗಳಲ್ಲಿ ಏಕನೀತಿ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಚಲನಚಿತ್ರ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು. ಅವರು, ದುಗಲಡ್ಕ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಸುಳ್ಯ ತಾಲೂಕು 22ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡುತ್ತಿದ್ದರು.

Advertisement

ಸಂವಿಧಾನದಲ್ಲಿ ಹಲವು ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಆಯಾ ಪ್ರದೇಶದಲ್ಲಿ ಆಡಳಿತ ಭಾಷೆಯಾಗಿಯೂ ಅವುಗಳು ಜಾರಿಯಲ್ಲಿವೆ. ಅವುಗಳು ತಪ್ಪು ಎಂದಲ್ಲ. ಆದರೆ ಸಮಗ್ರ ಚಿಂತನೆಯ ಭಾಷಾ ಪ್ರೇಮ ಮೂಡಿಬರಬೇಕು, ಏಕೀಕೃತ ನೀತಿಗಳ ಮೂಲಕ ಸರ್ವರಿಗೂ ಸಮಪಾಲು ದೊರಕಬೇಕು ಎಂದರು.

ಭಾಷೆ ಕುರಿತು ಕೀಳರಿಮೆ ಬೇಡ
ಕನ್ನಡ ಶಾಲೆಗಳ ಉಳಿಸಿ, ಬೆಳೆಸುವ ಕೆಲಸ ಆಗಬೇಕು. ಕನ್ನಡ ಭಾಷೆಗೆ ಸೊಗಡು ಇದೆ. ಇಂಗ್ಲಿಷ್‌ ವ್ಯಾಮೋಹವನ್ನು ಬಿಟ್ಟು ಕನ್ನಡವನ್ನು ಬೆಳೆಸಿ, ಭಾಷೆಯನ್ನು ಕೀಳಾಗಿ ನೋಡದೆ ಮಾಧ್ಯಮ ಭಾಷೆಯಾಗಿ ಬೆಳೆಸಬೇಕು. ನಮ್ಮಲ್ಲಿ ಇಚ್ಛಾಶಕ್ತಿ ಇದ್ದರೆ ಕನ್ನಡ ಭಾಷೆಯ ಮೂಲಕ ಉನ್ನತ ಪದವಿ ಪಡೆಯಬಹುದು ಎಂದು ಹೇಳಿದರು.

ಭಾವೈಕ್ಯತೆ ಅಗತ್ಯ
ಕನ್ನಡದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಮಾತನಾಡಿ ಕನ್ನಡ ಭಾಷೆಗೆ ಇಚ್ಛಾಶಕ್ತಿ ಇದೆ. ಆದರೆ ಇವತ್ತು ಇಂಗ್ಲಿಷ್‌ನ ದಾಸರಾಗಿ ಜೀವನ ನಡೆಸುತ್ತಿದ್ದೇವೆ. ನಮ್ಮದು ಸಂಸ್ಕಾರಯುತ ದೇಶ. ಈ ಕಾರಣದಿಂದ ನಾವು ಕನ್ನಡದ ಮೂಲಕ ಭಾವೈಕ್ಯ ನೆಲೆಸುವಂತೆ ಮಾಡಬೇಕು. ಕನ್ನಡವನ್ನು ಭಾಷೆಯನ್ನಾಗಿ ಕಲಿಸಬೇಕು. ಮಕ್ಕಳಿಗೆ ಕನ್ನಡವನ್ನು ಕಲಿಸುವ ಕೆಲಸ ಹೆತ್ತವರು ಮಾಡಬೇಕು ಎಂದರು.

ಮತೀಯ ವಿಚಾರ ಬದಿಗಿಡಿ
ಮತೀಯ ವಿಚಾರಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದೇ. ಸಾಹಿತ್ಯ ಸಮ್ಮೇಳನಗಳು ನಾವೆಲ್ಲರೂ ಒಂದೇ ಎನ್ನುವುದಕ್ಕೆ ವೇದಿಕೆ ಆಗಬೇಕು. ದಕ್ಷಿಣ ಕನ್ನಡದಲ್ಲಿ ಕನ್ನಡದೊಂದಿಗೆ ತುಳು ಭಾಷೆ ಬೆಳೆದಿದೆ. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು. ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿದರು. ಅಕಾಡೆಮಿ ಆಫ್ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಸಾಧಕರಿಗೆ ಕನ್ನಡ ಕಸ್ತೂರಿ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ವೆಂಕಟರಮಣ ಸೊಸೈಟಿ ಅಧ್ಯಕ್ಷ ಚಂದ್ರಾ ಕೋಲ್ಚಾರ್‌, ನಗರ ಪಂಚಾಯತ್‌ ಸದಸ್ಯೆ ಶಶಿಕಲಾ ನೀರಬಿದಿರೆ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಹರಪ್ರಸಾದ್‌ ತುದಿಯಡ್ಕ. ಎಂ.ಕೆ.ಪುರುಷೋತ್ತಮ ಗೌಡ ಮಾಣಿಬೆಟ್ಟು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ಕಾರ್ಯಾಧ್ಯಕ್ಷ ಎಂ.ಜೆ. ಶಶಿಧರ, ತೇಜಸ್ವಿ ಕಡಪಳ, ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ಸಿರಿಲ್‌ ಡಿಸೋಜಾ, ವೇದಿಕೆಯಲ್ಲಿ ಉಪಸ್ಥಿರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ.ವಿಶ್ವನಾಥ್‌ ಸ್ವಾಗತಿಸಿದರು, ಕೆ.ಎನ್‌. ಜಯರಾಮ್‌ ಶೆಟ್ಟಿ ವಂದಿಸಿದರು. ಪ್ರದೀಪ್‌ ಕುಮಾರ್‌ ರೈ ಪನ್ನೆ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ 
ಪಿ.ಸಿ ಜಯರಾಮ (ಸಹಕಾರ) ಲಲಿತಾಜ ಮಲ್ಲಾರ (ಸಾಹಿತ್ಯ), ನಾರಾಯಣ ರೈ ಪಿ. (ಗ್ರಾಮೀಣ ಸಾರಿಗೆ ಸೇವೆ), ಶಿವರಾಮ ಭಟ್‌ ಕುಂಬೆತ್ತಿಬನ (ಕೃಷಿ), ಸುಳ್ಯಕೋಡಿ ಮಾಧವ ಗೌಡ (ನಾಟಿವೈದ್ಯ), ನರಸಿಂಹ ಪರವ (ಜಾನಪದ), ಜಯಾನಂದ ಪಾನತ್ತಿಲ (ಕಲೆ) ತೀರ್ಥರಾಮ ಹೊಸೊಳಿಕೆ (ಆಡಳಿತ ಸೇವೆ) ದುರ್ಗಾಕುಮಾರ್‌ ನಾಯರ್‌ ಕೆರೆ (ಪತ್ರಿಕೋದ್ಯಮ), ಪುರುಷೋತ್ತಮ ದೇರಾಜೆ (ಯೋಗ ಪಟು) ಸುಮಾವತಿ ಬಿ.ಎನ್‌ (ಕ್ರೀಡೆ ) ಸಂಶೀರ್‌ ಜಯನಗರ (ಅಂತರಾಷ್ಟ್ರೀಯ ಯುವ ಕ್ರೀಡಾ ಪ್ರತಿಭೆ) ರವರಿಗೆ ಕನ್ನಡ ಕಸ್ತೂರಿ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.

ಸಾಹಿತ್ಯ ಸಮ್ಮೇಳನದ ನಿರ್ಣಯ
ಸಮ್ಮೇಳದನದಲ್ಲಿ ನಿರ್ಣಯಗಳನ್ನೂ ಕೈಗೊಳ್ಳಲಾಯಿತು. ಹೆಸರಾಂತ ಸಾಹಿತಿ ನಿರಂಜನ ಹೆಸರಿನಲ್ಲಿ ಸುಳ್ಯದಲ್ಲಿ ಸಾಂಸ್ಕೃತಿಕ ರಂಗಮಂದಿರ ನಿರ್ಮಾಣ, ಸುಳ್ಯದ ಕನ್ನಡ ಭವನದಲ್ಲಿ ಗ್ರಂಥಾಲಯ ಹೊಂದುವುದು, ಸುಳ್ಯ ತಾ| ಶಾಲೆಗಳಲ್ಲಿ ಕನ್ನಡದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಮಾಡುವುದು. ತಾಲೂಕಿನ ಗಡಿನಾಡ ಶಾಲೆಗಳಲ್ಲಿ ಹೆಚ್ಚು ಕನ್ನಡ ಶಿಕ್ಷಕರನ್ನು ನೇಮಕ ಮಾಡುವ ಕುರಿತು ಸರಕಾರ ಮಟ್ಟದಲ್ಲಿ ಒತ್ತಡ ತರುವುದು ಎಂದು ನಿರ್ಧರಿಸಲಾಯಿತು. 

ಚಂದ್ರು ಹಾಸ್ಯದ ಝಲಕ್‌
ನಟ ಮುಖ್ಯಮಂತ್ರಿ ಚಂದ್ರು ಅವರು ಲಘು ಹಾಸ್ಯ ಮಿಶ್ರಿತ ಧಾಟಿಯಲ್ಲೇ ಮಾತನಾಡಿದರು. ಕನ್ನಡಿಗರು ವಿವಿಧ ಪ್ರದೇಶದಲ್ಲಿ ಒಂದೇ ವಿಚಾರಕ್ಕೆ ಬೇರೆ ಬೇರೆ ಪದ ಬಳಕೆ ಮಾಡುತ್ತಾರೆ. ಕೆಲವು ಕೇಳಲು ಹಿತ, ಕೆಲವು ಮುಜುಗರ. ಆದರೆ ಅವರ ಭಾಷೆ ಯಥಾವತ್ತಾಗಿ ಬಳಕೆಯಲ್ಲಿರುವಂಥದ್ದು. ಅದರಲ್ಲಿ ಅಸಹ್ಯವೇನಿಲ್ಲ ಎಂದು ಉದಾಹರಣೆ ಸಮೇತ ಹೇಳಿದರು. ಇದು ಜನರನ್ನು ನಗೆಗಡಲಲ್ಲಿ ತೇಲಿಸಿತು. ಉದ್ಘೋಷಕರು ಸಮ್ಮಾನಕ್ಕೆ ಅವರ ಹೆಸರು ಕರೆದಾಗ ಬೇಡ್ರಪೋ ಎಂದು ಅನ್ಯ ಕಾರ್ಯ ನಿಮಿತ್ತ ಸಭೆಯಿಂದ
ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next