Advertisement

IT ತೊರೆದು ವಿಟಿ ಕೈ ಹಿಡಿದಾಕೆ: ಭರಾಟೆಯ ಜೀವನ ಬಿಟ್ಟು ಪ್ರಾಚೀನ ಮೂಲಸೆಲೆಗೆ ಸುಲೇಖಾ ಆಚಾರ್ಯ

11:03 AM Feb 24, 2022 | Team Udayavani |

ಪಡುಬಿದ್ರಿ : ಕಲಿತದ್ದು ಐಟಿ (ಇನ್‌ಫಾರ್ಮೇಶನ್‌ ಟೆಕ್ನಾಲಜಿ). ಬೆಳೆದದ್ದು ಬೆಂಗಳೂರಿನಲ್ಲಿ. ಬಿಇ ಮುಗಿಸಿ ಜಗತ್ಪ್ರಸಿದ್ದ ಐಟಿ ಕಂಪೆನಿ ಇನ್ಫೋಸಿಸ್‌ಗೆ ಉದ್ಯೋಗಕ್ಕಾಗಿ ಸೇರಿದಾಕೆ ಇದೆಲ್ಲ ತ್ಯಜಿಸಿ ಈಕೆ ಕೈಹಿಡಿದದ್ದು ವಿಟಿ(ವೇದಿಕ್‌ ಟೆಕ್ನಾಲಜಿ)ಯನ್ನು.

Advertisement

ಇನ್ಫೋಸಿಸ್‌ ಕೆಲಸ, ಆಧುನಿಕ ಭರಾಟೆಯ ಜೀವನ ಬಿಟ್ಟು ಪ್ರಾಚೀನ ಮೂಲಸೆಲೆಗೆ ಸೇರಿದಾಕೆ ಸುಲೇಖಾ ಆಚಾರ್ಯ. ಐಟಿ ಶಿಕ್ಷಣದವರೆಗೂ ಪ್ರತಿಭಾವಂತರಾಗಿದ್ದ ಇವರು ಸಂಸ್ಕೃತ ಪ್ರಥಮ, ದ್ವಿತೀಯ ಹಾಗೂ ತೃತೀಯ ಪರೀಕ್ಷೆಗಳನ್ನೂ ಪೂರೈಸಿದ್ದಾರೆ. ಇವರು ಬೆಂಗಳೂರು ಪುಟ್ಟಪರ್ತಿ ವಿದ್ಯಾಸಂಸ್ಥೆಯ ಪ್ರಾಧ್ಯಾಪಕ ಡಾ|ಎನ್‌. ವೆಂಕಟೇಶಾಚಾರ್ಯರ ಪುತ್ರಿ.
ಪತಿ ಹೆಜಮಾಡಿಯ ಸುಧೀಂದ್ರ ಆಚಾರ್ಯ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಮನೆತನದವರು. ಇವರು ಉಡುಪಿಯಲ್ಲಿ ಬಿಕಾಂ, ಮಂಗಳೂರಿನಲ್ಲಿ ಎಂಬಿಎ ಓದಿ ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಲೌಕಿಕ ಶಿಕ್ಷಣದ ಜತೆಗೆ ಉಡುಪಿ ಪುತ್ತಿಗೆ ಮಠದಲ್ಲಿದ್ದು ವೇದಶಾಸ್ತ್ರ, ಪೌರೋಹಿತ್ಯವನ್ನು ಓದಿದರು. ಉಡುಪಿ ಸಂಸ್ಕೃತ ಕಾಲೇಜಿನಲ್ಲಿಯೂ ಸಂಸ್ಕೃತದ ಸಾಹಿತ್ಯ ಭಾಗವನ್ನು ಓದಿದರು. ಇವರ ಪೂಜೆಯ ಅವಧಿಯಲ್ಲಿ ದೇವಸ್ಥಾನದ ಪೂಜೆ ಮುಗಿಸಿ ಕೆಲಸಕ್ಕೆ ತೆರಳುತ್ತಾರೆ. ಮುಂದೆ ಪುತ್ತಿಗೆ ಮಠದ ಪರ್ಯಾಯ ಅವಧಿಯಲ್ಲಿ ಕೆಲಸ ಬಿಟ್ಟು ಶಾಸ್ತ್ರಾಭ್ಯಾಸ ನಡೆಸಬೇಕೆಂದುಕೊಂಡಿದ್ದಾರೆ.

ಸಂಶೋಧನ ಸೇವಾ ನಿರತೆ
ಪುತ್ತಿಗೆ ಮಠದ ಕಳೆದ ಶತಮಾನದ ಪೀಠಾಧಿಪತಿ, ಶತಾಯುಷಿ ಶ್ರೀಸುಧೀಂದ್ರತೀರ್ಥರು ಪೂರ್ವಾಶ್ರಮದಲ್ಲಿ ಹೆಜಮಾಡಿಯ ಈ ಮನೆತನಕ್ಕೆ ಸೇರಿದವರು. ಹೀಗಾಗಿ ಶತಾಯುಷಿ ಸುಧೀಂದ್ರತೀರ್ಥ ಪ್ರತಿಷ್ಠಾನದಡಿ ಕರಾವಳಿಯ ಪ್ರಾಚೀನ ಮಠಗಳ ಹಿಂದಿನ ಸ್ವಾಮೀಜಿಯವರ ವೃಂದಾವನಗಳ ಶೋಧ ಕಾರ್ಯದಲ್ಲಿ ಸುಲೇಖಾ ತೊಡಗಿದ್ದಾರೆ. ನೂರಾರು ವರ್ಷಗಳ ಹಿಂದಿನ ಸ್ವಾಮೀಜಿಯವರು ಇದ್ದ, ಗತಿಸಿದ ಅವಧಿ, ವೃಂದಾವನ ಸ್ಥಳಗಳನ್ನು ಕರಾರುವಾಕ್ಕಾಗಿ ಹೇಳು ವಷ್ಟು ಸಂಶೋಧನೆ ನಡೆಸುತ್ತಿದ್ದಾರೆ. ಶೇ.25ರಷ್ಟು ಮಾತ್ರ ಕೆಲಸವಾಗಿದೆ. ಆಗಬೇಕಾದ ಕೆಲಸಗಳು ಬಹಳಷ್ಟಿವೆ. ಗತವೈಭವದ ಬಗ್ಗೆ ಯುವಪೀಳಿಗೆಗೆ ಮಾಹಿತಿ ಸಿಗಬೇಕಾಗಿದೆ ಎನ್ನುತ್ತಾರೆ ಸುಲೇಖಾ.

ಇದನ್ನೂ ಓದಿ : ಯುದ್ಧ ಘೋಷಣೆ ಬೆನ್ನಲ್ಲೇ ಕೈವ್ ನಗರದಲ್ಲಿ ಸ್ಫೋಟ; ಯುದ್ದ ತಡೆಯಿರಿ ಎಂದು ಉಕ್ರೇನ್ ಮನವಿ

ಸುಲೇಖಾ ಅವರು ತನ್ನ ಸಂಶೋಧನೆ ಯಿಂದ ಶೈಕ್ಷಣಿಕವಾಗಿ ಬೆಳೆಯುವ ಹಂಬಲವಿರಿಸಿಕೊಂಡಿಲ್ಲ. ಯಾವುದೇ ಪದವಿಯನ್ನು ಬಯಸಿ ಇವುಗಳನ್ನು ಮಾಡುತ್ತಿಲ್ಲ. ಇತಿಹಾಸದ ದಾಖಲೀಕರಣ ಘಟ್ಟದ ಮೇಲಿನ ಪ್ರದೇಶಗಳಲ್ಲಿರುವಂತೆ ಕರಾವಳಿ ಪ್ರಾಂತದ ಮಠ ಪರಂಪರೆ ಗಳಲ್ಲಿ ಕಾಣುವುದಿಲ್ಲ. ಆದ್ದರಿಂದಲೇ ಇಲ್ಲಿನ ಮಠದ ಇತಿಹಾಸದ ಪರಂ ಪರೆಯ ಲಿಂಕ್‌ ಕೆಲವೆಡೆ ತಪ್ಪಿದಂತೆ ಕಾಣುತ್ತಿದೆ. ಇದುವರೆಗೆ 15 ವೀಡಿಯೋ ದಾಖಲೀಕರಣ ಮಾಡಿದ್ದೇನೆ ಎಂದು ಸುಲೇಖಾ ಆಚಾರ್ಯ ಹೇಳುತ್ತಾರೆ.

Advertisement

ಅಮ್ಮನ ಹಾದಿಯಲ್ಲಿ ಮಗಳು
ಇಬ್ಬರು ಪುತ್ರಿಯರನ್ನು ಹೊಂದಿರುವ ಸುಲೇಖಾ ಅವರ ಹಿರಿಯ ಪುತ್ರಿ, ಯುಕೆಜಿ ವಿದ್ಯಾರ್ಥಿನಿ ಸುಧಾ ಕೂಡ ಈಗ ತಾಯಿಯ ದಾರಿಯಲ್ಲೇ ನಡೆದಿದ್ದಾಳೆ. ಮಂಗಳಾಷ್ಟಕ, ವಿಷ್ಣು ಸಹಸ್ರನಾಮ, ಲಕ್ಷ್ಮೀ ಶೋಭಾನೆ, ದಶಾವತಾರ ಸ್ತೋತ್ರ, ಶ್ರೀಶ ಗುಣದರ್ಪಣ ಮೊದಲಾದ ಸ್ತೋತ್ರ ಸಾಹಿತ್ಯಗಳನ್ನು ಪಟಪಟ ಹೇಳುತ್ತಾಳೆ. ಐದೂವರೆ ವರ್ಷದ ಈಕೆ 1000ದವರೆಗಿನ ಅಂಕೆಗಳನ್ನೂ ಬರೆಯುತ್ತಾಳೆ.

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next