Advertisement

Sudha Murty; ಸರಳತೆಯ ಸಾಕಾರ ಮೂರ್ತಿಯ ಮುಡಿಗೆ ಮತ್ತೊಂದು ಗರಿ

10:18 AM Oct 29, 2023 | Team Udayavani |

“ಸಾಧನೆ ಮಾಡಬೇಕು ಎನ್ನುವುದು ಒಳ್ಳೆಯ ವಿಚಾರ. ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡುತ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ” ಎಂದು ಹಲವಾರು ಪ್ರೇರಣಾದಾಯಕ ಮಾತುಗಳನ್ನಾಡಿ, ನುಡಿದಂತೆ ನಡೆಯುತ್ತಾ ಜನರ ಮನಸ್ಸಿನಲ್ಲಿ ಮನೆ ಮಾಡಿದವರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ. ಹೆಸರಿನಲ್ಲೇ ಏನೋ ಒಂದು ಶಕ್ತಿ ಇದೆ. ಇವರು ಬರೆದ ಪುಸ್ತಕಗಳು, ಇವರ ಸಾಧನೆ, ಸಮಾಜಕಾರ್ಯ ಒಂದಲ್ಲ ಎರಡಲ್ಲ. ಎಲ್ಲಾ ಕ್ಷೇತ್ರದಲ್ಲೂ ಕೈಯಾಡಿಸಿದವರು. ಕಪಟವಿಲ್ಲದ ನಗುಮುಖದಿಂದ, ಸರಳತೆಯನ್ನೇ ಶ್ರೀಮಂತಿಕೆಯನ್ನಾಗಿಸಿಕೊಂಡು, ‘ಹಣದ ಹಿಂದೆ ಓಡುವ ಬದಲಾಗಿ ಕೆಲಸದತ್ತ ಕಠಿಣ ಪರಿಶ್ರಮವನ್ನು ತೋರಿದರೆ ಗೆಲುವು ನಿಶ್ಚಿತ ಎಂದು ಯುವಜನರನ್ನು ಪ್ರೇರೇಪಿಸಿದವರು. ಸರಳ ಸಜ್ಜನಿಕೆಯ ರೂವಾರಿ, ಪ್ರತಿಫಲ ಬಯಸದೆ ಸಹಾಯ ಮಾಡುವ ಶಕ್ತಿ, ಯುವಉತ್ಸಾಹಿಗಳಿಗೆ ಸ್ಫೂರ್ತಿಯ ಚಿಲುಮೆಯಷ್ಟೇ ಅಲ್ಲದೆ ಇವರು ಕನ್ನಡನಾಡಿನ ಹೆಮ್ಮೆಯೂ ಹೌದು. ಇವರ ಜೀವನವನ್ನೇ ಬದಲಿಸುವ ಮಾತುಗಳಿಂದ ಪ್ರೇರೇಪಿತರಾದವರಲ್ಲಿ ನಾನೂ ಒಬ್ಬಳು. ಸುಧಾ ಮೂರ್ತಿಯವರು ಮಾತನಾಡುವ ಪ್ರತಿಯೊಂದು ಮಾತಿಗೂ ಬೆಟ್ಟದಷ್ಟು ಅರ್ಥವಿರುತ್ತದೆ. ಅವರು ಹೇಳುವ ಇನ್ನೊಂದು ಮಾತೆಂದರೆ ‘ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು “ಎಂಬುದು. ಇವರು ಯುವಜನತೆಗೆ ರಿಯಲ್ ಇನ್ಸ್ಪಿರೇಷನ್.

Advertisement

ಲೋಕೋಪಕಾರಿಯಾದ ಇವರು ಟೊರೊಂಟೊದಲ್ಲಿ ನಡೆದ ಭವ್ಯವಾದ ಇಂಡೋ-ಕೆನಡಿಯನ್ ಗಾಲಾದಲ್ಲಿ ಪ್ರತಿಷ್ಠಿತ ಗ್ಲೋಬಲ್ ಇಂಡಿಯನ್ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯರಿಗೆ ಖಂಡಿತವಾಗಿಯೂ ಹೆಮ್ಮೆಯ ವಿಚಾರ. ಸುಧಾ ಮೂರ್ತಿ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡ ಭಾರತದ ಮೊದಲ ಮಹಿಳೆಯೂ ಹೌದು. 2014ರಲ್ಲಿ ಸುಧಾ ಮೂರ್ತಿಯವರ ಪತಿ ನಾರಾಯಣ ಮೂರ್ತಿಯವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 2023ರಲ್ಲಿ ಈ ಪ್ರಶಸ್ತಿ ಸುಧಾ ಮೂರ್ತಿಯವರ ಮುಡಿಗೇರಿದೆ. ಹಾಗಾಗಿ ಇವರು ಗ್ಲೋಬಲ್ ಇಂಡಿಯನ್ ಪ್ರಶಸ್ತಿ ಪಡೆದ ಭಾರತ ಮೊದಲ ದಂಪತಿ ಎಂಬ ಮನ್ನಣೆಗೂ ಪಾತ್ರರಾಗಿದ್ದಾರೆ.

ಇದನ್ನು ಸಾಮಾನ್ಯವಾಗಿ ಆಯಾ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಮಹೋನ್ನತ ಭಾರತೀಯನಿಗೆ ನೀಡಲಾಗುತ್ತದೆ. ಇವರು 50,000 ರೂ ಮೌಲ್ಯವನ್ನು ಹೊಂದಿರುವ ಈ ಪ್ರಶಸ್ತಿಗೆ ಗೌರವ ಸ್ಪರ್ಶವನ್ನು ನೀಡಿದ  ಬಳಿಕ ಅದನ್ನು ಟೊರೊಂಟೊ ವಿಶ್ವವಿದ್ಯಾನಿಲಯದ ದಿ ಫೀಲ್ಡ್ ಇನ್ಸ್ಟಿಟ್ಯೂಟ್ ಗೆ  ದಾನ ಮಾಡಿದ್ದು ಅವರ ವ್ಯಕ್ತಿತ್ವ ಎಷ್ಟೊಂದು ಸರಳ ಎಂಬುದನ್ನು ಒತ್ತಿ ಹೇಳುತ್ತದೆ. ಎಷ್ಟೇ ಹಣವಿದ್ದರೂ ಇನ್ನೂ ಬೇಕು ಎನ್ನುವ ದನದಾಹಿಗಳ ನಡುವೆ ಸುಧಾ ಅಮ್ಮ ಪ್ರತ್ಯೇಕವಾಗಿ ನಿಲ್ಲುತ್ತಾರೆ.

ಸುಧಾ ಮೂರ್ತಿಯವರು ಸಾಹಿತ್ಯ, ಲೋಕೋಪಕಾರಕ್ಕೆ ನೀಡಿದ ಕೊಡುಗೆಗಳು ಅಷ್ಟಿಷ್ಟಲ್ಲ. ಅಸಾಧಾರಣ ಸಾಧಕಿಯಾದ ಇವರು ಸಮಾಜಕ್ಕೆ ನೀಡಿದ  ಸಮರ್ಪಣೆಯು ಅವರನ್ನು ಈ ಗೌರವಾನ್ವಿತ ಪ್ರಶಸ್ತಿಗೆ ಅರ್ಹರನ್ನಾಗಿ ಮಾಡಿದೆ ಎನ್ನಬಹುದು. ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಭವಿಷ್ಯದ ಪೀಳಿಗೆಗೆ ದಾರಿ ಮಾಡಿಕೊಡಲು ಕಳೆದವರು ಹಾಗೂ ಯುವಜನತೆ ಆಯ್ಕೆ ಮಾಡಿದ ಮಾರ್ಗಗಳಲ್ಲಿ ಉತ್ಕೃಷ್ಟರಾಗಲು ಅವರನ್ನು ಪ್ರೇರೇಪಿಸಿದವರು. ಲೋಕೋಪಕಾರ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಅವರ ನಿರಂತರ ಬದ್ಧತೆ ನಿಜವಾಗಿಯೂ ಶ್ಲಾಘನೀಯ.

Advertisement

ಸುಧಾ ಮೂರ್ತಿಯವರು ಮೊದಲಿನಿಂದಲೂ ಅನೇಕ ಸಮಾಜ ಸುಧಾರಣಾ ಕಾರ್ಯಗಳಿಗೆ ಹೆಸರಾದವರು. ಮಹಿಳೆಯರು ಮೌಲ್ಯವರ್ಧಿತ ಶಿಕ್ಷಣವನ್ನು ಪಡೆಯಬೇಕು ಹಾಗೂ ಅವರನ್ನು ಸಮಾಜದಲ್ಲಿ ಸಬಲರನ್ನಾಗಿ ಮಾಡಬೇಕು ಎಂಬುವುದು ಅವರ ಗುರಿ. ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಪ್ರಸ್ತುತ ಗ್ರಾಮೀಣ ಜನರಲ್ಲಿ  ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತಿತರ ವಿಷಯಗಳ ಕುರಿತು ಜಾಗೃತಿ ಮೂಡಿಸುವಲ್ಲಿಯೂ ನಿರತರಾಗುತ್ತಿದ್ದಾರೆ. ಸ್ವಚ್ಛ ಭಾರತದ ಅಗತ್ಯತೆಯನ್ನು ಅರ್ಥಮಾಡಿಕೊಂಡಿರುವ ಅವರು, ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುತ್ತಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುವುದರಲ್ಲೂ ಉತ್ಸಾಹದಿಂದ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ.

ಸುಧಾ ಮೂರ್ತಿಯವರು ಮಾಡುತ್ತಿರುವ ಸಮಾಜಕಾರ್ಯ ಒಂದಲ್ಲ ಎರಡಲ್ಲ. ಅವರು ಮಾಡಿದ ಕಾರ್ಯಗಳನ್ನು ಎಂದೂ ಹೇಳಿಕೊಂಡವರಂತೂ ಅಲ್ಲವೇ ಅಲ್ಲ. ಇವರನ್ನು ನೋಡಿದಾಗ ಇವರ ಮಾತುಗಳನ್ನು ಆಲಿಸಿದಾಗ ಒಬ್ಬ ಶ್ರೀಮಂತ ನಿಜವಾಗಿಯೂ ಇಷ್ಟು ಸರಳವಾಗಿರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದಂತೂ ನಿಜ. ತಮ್ಮ 73ರ ಇಳಿವಯಸ್ಸಿನಲ್ಲಿಯೂ, ಬಿಡುವಿಲ್ಲದ ಕೆಲಸದ ನಡುವೆಯೂ ನಾನಾ ಕ್ಷೇತ್ರಗಳಲ್ಲಿನ ಅವರ ಆಸಕ್ತಿ, ಸಮಾಜಕಾರ್ಯಕ್ಕಾಗಿ ಅವರ ತೊಡಗಿಸಿಕೊಳ್ಳುವಿಕೆ, ದೇಶದ ಅಭಿವೃದ್ಧಿಯತ್ತ ಅವರ ಉದಾತ್ತತೆ ಮೆಚ್ಚುವಂತಹದ್ದೇ ಸರಿ. ನಮ್ಮ ಜೀವನ ನೆಲೆಹೊಂದಿದರೆ ಸಾಕು, ನಾನೂ ನನ್ನ ಕುಟುಂಬ ಸುಖವಾಗಿದ್ದರೆ ಅದುವೇ ಸಂತೋಷ. ದಾನ ಧರ್ಮ ಮಾಡಿ ನಮಗೇನು ಸಾಧಿಸಬೇಕಿದೆ ಎಂದು ಕೈ ಕಟ್ಟಿ ಕೂರುತ್ತಿದ್ದರೆ ಬಹುಷಃ ಸುಧಾ ಮೂರ್ತಿಯವರಂತಹ ಜ್ಞಾನದ ದೀವಿಗೆ ನಮಗೆ ಸಿಗುತ್ತಿರಲಿಲ್ಲ. ನಾನು ನನ್ನದು ಎಂದು ಅವರು ಒಮ್ಮೆಯೂ ಯೋಚಿಸಿದವರಲ್ಲ ಎಂಬುವುದು ಅವರ ಸಮಾಜ ಕಾರ್ಯಗಳಿಂದಲೇ ತಿಳಿಯುತ್ತದೆ. ಪ್ರತಿಯೊಬ್ಬರೂ ಸಮಾಜದ ಚಿಂತನೆಯನ್ನು ಮಾಡಿದರೆ ದೇಶ ಅಭಿವೃದ್ಧಿಯಾಗುವುದಂತೂ ಖಂಡಿತ. ಜಗತ್ತಿಗೆ ಮಾದರಿಯಾದ ಇವರಿಗೆ ದೇವರು ಇನ್ನಷ್ಟು ಶಕ್ತಿ, ಅರೋಗ್ಯ ವನ್ನು ದಯಪಾಲಿಸಲಿ.

ಲಾವಣ್ಯ. ಎಸ್.

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next