Advertisement

Muddebihala: ಗುತ್ತಿಗೆದಾರರ ದಿಢೀರ್ ಪ್ರತಿಭಟನೆ:ತಾ.ಪಂ ಕಚೇರಿ ಗೇಟ್‌ಗೆ ಬೀಗ ಜಡಿದು ಆಕ್ರೋಶ

05:42 PM Jan 19, 2024 | Team Udayavani |

ಮುದ್ದೇಬಿಹಾಳ: ಮುದ್ದೇಬಿಹಾಳ ಗ್ರಾಮಂ ವ್ಯಾಪ್ತಿಯ ಉದ್ಯೋಗ ಖಾತ್ರಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಅಗತ್ಯವಾಗಿರುವ ಎಫ್ಟಿಪಿಯನ್ನು ಏಕಾಏಕಿ ಡಿಲೀಟ್ ಮಾಡಿರುವುದನ್ನು ಆಕ್ಷೇಪಿಸಿ ಗುತ್ತಿಗೆದಾರರು ಇಲ್ಲಿನ ತಾಪಂ ಕಚೇರಿ ಎದುರು ಮುಖ್ಯ ಗೇಟಗೆ ಬೀಗ ಜಡಿದು ದಿಢಿರ್ ಪ್ರತಿಭಟನೆ ನಡೆಸಿದರು. ಈ ಸಂದರ್ಬ ಕಚೇರಿಗೆ ಬಂದ ಸಹಾಯಕ ನಿರ್ದೇಶಕ ಖುಬಾಸಿಂಗ್ ಜಾಧವಗೆ ಘೇರಾವ್ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡರು. ಸಿಟ್ಟಿಗೆದ್ದ ಜಾಧವ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾತಿನ ಚಕಮಕಿ ನಡೆಯಿತು.

Advertisement

ಗೇಟ್ ಎದುರು ಧರಣಿ ಕುಳಿತ ಗುತ್ತಿಗೆದಾರರು ಜಿಪಂ ಸಿಇಓ, ತಾಪಂ ಇಓ, ಎಡಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ವಿಷಯ ತಿಳಿದು ಪಿಎಸೈ ಸಂಜಯ್ ತಿಪರಡ್ಡಿ ಸ್ಥಳಕ್ಕಾಗಮಿಸಿ ಬೀಗ ತೆರೆಯುವಂತೆ ಮನವೊಲಿಸುವ ಪ್ರಯತ್ನಕ್ಕೆ ಸ್ಪಂಧನೆ ಸಿಗಲಿಲ್ಲ. ಈ ವೇಳೆ ಜಿಪಂ ಸಿಇಓ, ತಾಪಂ ಇಓ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಗುತ್ತಿಗೆದಾರರು ಪಟ್ಟು ಹಿಡಿದರು. ಪಿಎಸೈ ಎಡಿ, ಇಓ ಜೊತೆ ಮಾತನಾಡಿ ಸ್ಥಳಕ್ಕೆ ಬರುವಂತೆ ತಿಳಿಸಿ ಗೇಟ್ ಬೀಗ ತೆಗೆಸಿದರು. ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡ ಅವರು ಗುತ್ತಿಗೆದಾರರ ಬಿಲ್ ತಡೆಹಿಡಿಯದೆ ಕೊಡುವಂತೆ ತಿಳಿಸಿದ್ದರೂ ಅಧಿಕಾರಿಗಳು ಅವರ ಮಾತಿಗೂ ಕಿಮ್ಮತ್ತು ಕೊಡದೆ ಗುರುವಾರ ರಾತ್ರಿ ಎಫ್ಟಿಪಿ ಡಿಲೀಟ್ ಮಾಡಿದ್ದಾರೆ.

ಇಂದು ಶುಕ್ರವಾರ ಸಂಜೆಯೊಳಗೆ ಎಫ್ಟಿಪಿ ಅನುಮೋದನೆ ಆಗದಿದ್ದರೆ ಮತ್ತೇ ಎರಡು ವರ್ಷ ಬಿಲ್ ಸಿಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಗೋಳು ತೋಡಿಕೊಂಡರು. ಶನಿವಾರ ಸಂಜೆ 5 ಗಂಟೆಯೊಳಗೆ ಅನುಮೋದನೆ ಆಗದಿದ್ದರೆ ತಾಲೂಕಿನ ಎಲ್ಲ 21 ಪಂಚಾಯಿತಿ ವ್ಯಾಪ್ತಿಯ ಕೋಟ್ಯಾಂತರ ಮೊತ್ತದ ಬಿಲ್ ಬಿಡುಗಡೆ ಆಗುವುದಿಲ್ಲ‌. ಜಿಲ್ಲೆಯ ಎಲ್ಲ ತಾಲೂಕುಗಲಿಗೆ ಬಿಡುಗಡೆ ಆಗಿದೆ. ಆದರೆ ಮುದ್ದೇಬಿಹಾಳ ತಾಲೂಕಿಗೆ ಮಾತ್ರ ಈ ಸಮಸ್ಯೆ ಎದುರಾಗಿದೆ. ಎಂಐಎಸ್ ಕೋಆರ್ಡಿನೇಟರ್ ಮಲ್ಲಿಕಾರ್ಜುನ ಎಂಬಾತನ ಮೂಲಕ ಇಓ ಇದನ್ನು ಮಾಡಿಸಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದರು. ಕಾಮಗಾರಿಗೆ ಸಾಮಗ್ರಿ ವೆಚ್ಚ ಎಫ್ & ಎಫ್ ಎಂದು ಕೊಡುತ್ತಾರೆ. ಈಗ ಡಿಲೀಟ್ ಆಗಿದ್ದು ಏನೂ ಮಾಡಲಾಗೊಲ್ಲ. ಈ ಅನುದಾನ ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ಬರುತ್ತದೆ. ಈಗ ನಮ್ಮ ಗೋಳು ಯಾರಿಗೆ ಹೇಳಬೇಕು ಎಂದು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next