Advertisement

ಯಕ್ಷೋತ್ಸಾಹಿ ಅಧ್ಯಯನ ಕೇಂದ್ರದ ಪ್ರಶಂಸಾರ್ಹ ಸುದರ್ಶನ ವಿಜಯ 

12:30 AM Feb 01, 2019 | |

ಇತ್ತೀಚೆಗೆ ರಾಜಾಂಗಣದಲ್ಲಿ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯರು ವಾರ್ಷಿಕೋತ್ಸವ ಸಂದರ್ಭದಲ್ಲಿ ಗಣೇಶ ಕೊಲೆಕಾಡಿ ಇವರಿಗೆ “ಯಕ್ಷ ವಿಭೂಷಣ’ ಮತ್ತು ಕಿಶೋರ ಯಕ್ಷ ಕಲಾವಿದ ಕಿಶನ್‌ ಅಗ್ಗಿತ್ತಾಯರಿಗೆ “ಯಕ್ಷೊತ್ಸಾಹಿ’ ಪ್ರಶಸ್ತಿಯನ್ನಿತ್ತು ಗೌರವಿಸಿದರು. ಬಳಿಕ ತಂಡದ ಸದಸ್ಯರು ಪ್ರದರ್ಶಿಸಿದ “ಸುದರ್ಶನ ವಿಜಯ’ ವಿವಿಧ ಕಾರಣಗಳಿಗಾಗಿ ಅಭಿನಂದನಾರ್ಹವಾಗಿತ್ತು. ಆ ಕಾರಣಗಳನ್ನು ಹೀಗೆ ಪಟ್ಟಿಮಾಡಬಹುದು: 

Advertisement

ಪ್ರಸಂಗದುದ್ದಕ್ಕೂ ಕುಣಿತ, ಅಭಿನಯ, ದೃಶ್ಯ ಸಂಯೋಜನೆ, ಮಾತುಗಾರಿಕೆ ಹಾಗೂ ಪಾತ್ರಗಳ ಆಹಾರ್ಯ ಇತ್ಯಾದಿಗಳು ಸಾಂಪ್ರದಾಯಿಕತೆಯ ಸೊಗಸು ಮತ್ತು ಆಧುನಿಕ ನಿರ್ದೇಶನದ ತಂತ್ರಗಳು ಕಣ್ಣು ಮತ್ತು ಮನಸ್ಸುಗಳಿಗೆ ಮುದ ನೀಡುವಂತೆ ಪರಸ್ಪರ ಸಾಂಗತ್ಯದಲ್ಲಿದ್ದವು. ಈ ಸಾಂಗತ್ಯವು ಚಂಡೆ ಮದ್ದಳೆಗಳ ನುಡಿತ ಹಾಗೂ ಪಾತ್ರಧಾರಿಗಳ ಕುಣಿತಗಳಲ್ಲಿಯೂ ವ್ಯಕ್ತವಾಗಿತ್ತು.

ಯಕ್ಷಗಾನದ ಅನನ್ಯತೆ ಮುಖ್ಯವಾಗಿ ಇರುವುದು ಅದರ ರೂಪ ವಿಲಕ್ಷಣತೆಯಲ್ಲಿ, ಅದನ್ನು ಪ್ರಸ್ತುತ ಪಡಿಸುವ ಶೈಲಿಯಲ್ಲಿ. ಪುರಾಣ ಕತೆಯ ವಸ್ತು ಅನ್ಯಕಲಾ ಪ್ರಕಾರಗಳಲ್ಲೂ ಇದೆ. ಆದರೆ ಅದು ಯಕ್ಷಗಾನೀಯವಾಗುವುದು ಹೇಗೆ ಎಂಬ ಅರಿವು ಕಲಾವಿದರಿಗೆ ಇರಬೇಕು. ಯಕ್ಷಗಾನದ ಅಭಿವ್ಯಕ್ತಿ ವಿಧಾನವನ್ನು ಈ ತಂಡದ ಕಲಾವಿದರು “ದೇಹಗತ’ ಮಾಡಿಕೊಂಡಿದ್ದರಿಂದಲೇ ಇವರ ನೃತ್ಯವು ಮೆಚ್ಚುಗೆಯನ್ನು ಪಡೆಯಿತು. ಒಟ್ಟು ಪ್ರದರ್ಶನದ ಎಲ್ಲ ಅಂಗಗಳಲ್ಲಿ ಒಪ್ಪ, ಓರಣ, ಅಚ್ಚುಕಟ್ಟುತನ ಯಶಸ್ಸಿಗೆ ಕಾರಣವಾಯಿತೆನ್ನಬಹುದು. ವಿಶಾಲ ವೇದಿಕೆಯಲ್ಲಿ ಬೆಳಕನ್ನು ಕೇವಲ ರಂಗಸ್ಥಳದ ವ್ಯಾಪ್ತಿಗಷ್ಟೇ ಸೀಮಿತಗೊಳಿಸಿ, ಇತರ ಪ್ರದೇಶದಲ್ಲಿ ಸಾಕಷ್ಟು ಕತ್ತಲೆ ತುಂಬಿರುವಂತೆ ಮಾಡಿರುವುದರಿಂದ ವೇಷಗಳು ಹೆಚ್ಚು ಸುಂದರವಾಗಿ ಕಾಣಲು ಸಾಧ್ಯವಾಗಿತ್ತು.

ದೇವೇಂದ್ರನ ಒಡ್ಡೋಲಗ, ಶತ್ರುಪ್ರಸೂದನ ದೇವೇಂದ್ರನನ್ನು ಸೋಲಿಸಿದ ಬಳಿಕ ತನ್ನ ಬಳಗದವರೊಂದಿಗೆ ಕುಣಿದು ಕುಪ್ಪಳಿಸಿ ವರ್ತುಲಾಕಾರದಲ್ಲಿ ನರ್ತಿಸುವುದು – ಮೊದಲಾದ ಸಂದರ್ಭಗಳು ನೇತ್ರರಂಜಕವಾಗಿದ್ದವು.ಸಾಮಾನ್ಯವಾಗಿ ವೃತ್ತಿ ಮೇಳಗಳಲ್ಲಿ ಈ ಪ್ರಸಂಗ ಪ್ರದರ್ಶನವಾಗುವುದು ವಿಷ್ಣು ಲಕ್ಷ್ಮೀಯರ ಸಂವಾದದಿಂದ. ಯಕ್ಷಗಾನದ ಸಾಂಪ್ರದಾಯಿ ಕತೆಯನ್ನು ಗೌರವಿಸುವುದಕ್ಕಾಗಿ ದೇವೇಂದ್ರನ ಒಡ್ಡೋಲಗದಿಂದ ಕಥಾರಂಭವಾದುದು ತಂಡದ ಕಾಳಜಿಯನ್ನು ಕಾಣಿಸುತ್ತಿತ್ತು. 

ಸುಮಾರು 14 ಕಲಾವಿದರು ಮೇಳೈಸಿ ಪ್ರಸಂಗ ಪ್ರದರ್ಶಿಸಿದರೂ ಕೆಲವು ಪಾತ್ರಗಳಿಗಷ್ಟೇ ಹೆಚ್ಚು ಅವಕಾಶ. ಮುಖ್ಯಪಾತ್ರಗಳು ವೃತ್ತಿ ಮೇಳದ ಕಲಾವಿದರಿಗಿಂತಲೂ ಹೆಚ್ಚಾಗಿ ಪ್ರೇಕ್ಷಕರ ಮೇಲೆ ಪರಿಣಾಮ ಬೀರಿದವು ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ. ಈ ಪರಿಣಾಮ ಬೀರುವುದರ ಹಿಂದೆ ಅಭ್ಯಾಸ, ಅಧ್ಯಯನ ಮತ್ತು ಶ್ರದ್ಧೆಗಳೊಂದಿಗೆ ನಿರ್ದೇಶನ ಕೌಶಲವೂ ಇದ್ದಿರಬೇಕು. ರಂಗ ತಾಲೀಮು ಮಾಡಿಯೇ ಇವರು ರಂಗಸ್ಥಳಕ್ಕೆ ಬಂದುದರಿಂದ ಎಲ್ಲರ ಕುಣಿತ ಮತ್ತು ರಂಗನಡೆಗಳು ಸ್ಪುಟವಾಗಿದ್ದವು. 

Advertisement

ಲಕ್ಷ್ಮೀ ಮತ್ತು ವಿಷ್ಣುವಿಗೆ ಪ್ರತ್ಯೇಕ ಒಡ್ಡೋಲಗ ನಿರ್ಮಾಣ ಮಾಡಿ ಲಕ್ಷ್ಮೀ ವಿಷ್ಣುವನ್ನು ಪುಷ್ಪಗಳಿಂದ ಆರಾಧಿಸುವ (ಅರ್ಧ ಇಳಿಸಿದ ಪರದೆಯ ಹಿಂದೆ) ದೃಶ್ಯ, ಯಕ್ಷಗಾನದಲ್ಲಿ ಹೇಗೆ ನಾವೀನ್ಯವನ್ನು ಸಾಧಿಸಬಹುದು ಎಂಬುದಕ್ಕೆ ದಿಕ್ಸೂಚಿಯಾಗಿತ್ತು. 

ಅರ್ಥಗಾರಿಕೆಯ ಮಾತುಗಳ ಅರ್ಥಪುಷ್ಟಿಗೆ ಆಂಗಿಕ ಅಭಿನಯವನ್ನು ಜೊತೆಗೂಡಿಸುವ ಕೌಶಲ ಲಕ್ಷ್ಮೀ ಪಾತ್ರಧಾರಿ ಅಶ#ಕ್‌ ಹುಸೈನ್‌ ಅವರಲ್ಲಿ ಎದ್ದು ಕಾಣುತ್ತಿತ್ತು. ವಿಷ್ಣು ಪಾತ್ರಧಾರಿ ದೀವಿತ್‌ ಪೆರಾಡಿಯವರಲ್ಲಿ ಈ ಅಭಿನಯ ಶೈಲಿ ಸ್ಪುಟವಾಗಿತ್ತು. ಸುದರ್ಶನ ಪಾತ್ರಧಾರಿ ಶಿವರಾಜ್‌ ಬಜಕೂಡ್ಲು ಪರಿಣತ ವೃತ್ತಿ ನಿರತ ಕಲಾವಿದರಂತೆ ಪುಂಡುವೇಷದ ಎಲ್ಲ ವೈವಿಧ್ಯಗಳಿಂದ ಪ್ರೇಕ್ಷಕರಲ್ಲಿ ಆಶ್ಚರ್ಯ ಮೂಡಿಸಿದರು. ದೇವೇಂದ್ರ ಪಾತ್ರಧಾರಿಯ (ಶ್ರೀಕಾಂತ ಎಂ. ಜಿ.) ನಿಧಾನಗತಿಯ ನಾಟ್ಯ ಆ ಪಾತ್ರಕ್ಕೆ ಉಚಿತವಾಗಿತ್ತು. ಸಾತ್ವಿಕ್‌ ನೆಲ್ಲಿತೀರ್ಥರ ಶತ್ರುಪ್ರಸೂದನ ಪಾತ್ರ ನಿರ್ವಹಣೆ ಸಾಂಪ್ರದಾಯಿಕ ಆಕರ್ಷಣೆಯಿಂದ ಕೂಡಿತ್ತು.

ಈ ಪ್ರಸಂಗದ ಒಂದು ಮುಖ್ಯ ಸಂದರ್ಭ ವಿಷ್ಣು, ಲಕ್ಷ್ಮೀ ಮತ್ತು ಸುದರ್ಶನದ ಸಂವಾದ ಭಾಗ. ಇಲ್ಲಿ ಅರ್ಥಗಾರಿಕೆ, ಅಭಿನಯ ಮತ್ತು ಕುಣಿತಗಳು ಉತ್ಕೃಷ್ಟ ಮಟ್ಟದಲ್ಲಿದ್ದವು. ವಿಷ್ಣುವಿನ ಪ್ರಾಸಬದ್ಧ ಮಾತುಗಾರಿಕೆ ಹಿರಿಯ ಕಲಾವಿದರ ಅನುಕರಣೆಯಂತೆ ತೋರಿದರೂ, “ಅನುಕರಣೆ’ಯನ್ನು ಬಿಟ್ಟು ‘ಅನುಸರಿಸು’ವ ಪ್ರಬುದ್ಧತೆ ಅಧ್ಯಯನದಿಂದ ಮತ್ತು ಅನುಭವದಿಂದ ಸಾಧಿತವಾಗಬೇಕು. ಆಗ ಸೃಜನಶೀಲತೆಯ ಸ್ವಂತಿಕೆಯ ಛಾಪು ಮೂಡಿಸಲು ಸಾಧ್ಯ. 

ಮುಮ್ಮೇಳದ ಕಲಾವಿದರ ಸಾಮರ್ಥ್ಯಕ್ಕೆ ಬಹಳ ಎಚ್ಚರಿಕೆಯಿಂದ ಉತ್ತಮ ಪೋಷಣೆ ನೀಡಿದವರು ಭಾಗವತರಾದ ಶ್ರೀನಿವಾಸ ಬಳ್ಳಮಂಜ ಮತ್ತು ಚಂಡೆ, ಮದ್ದಳೆ, ಚಕ್ರತಾಳದ ಮಯೂರ್‌ ನಾಯ್ಕ್, ಸವಿನಯ ನೆಲ್ಲಿತೀರ್ಥ, ಕಾರ್ತಿಕ್‌ ಇನ್ನಂಜೆ ಹಾಗೂ ಆನಂದ ಸಾಣೂರು. ಆಟದ ಯಶಸ್ಸಿನಲ್ಲಿ ಇವರಿಗೂ ಮುಖ್ಯ ಪಾಲಿದೆ.

ಪ್ರೊ| ಎಂ. ಎಲ್ ಸಾಮಗ 

Advertisement

Udayavani is now on Telegram. Click here to join our channel and stay updated with the latest news.

Next