Advertisement

ಮಳೆಕೊಯ್ಲು ಅಳವಡಿಸುವತ್ತ ಜನರನ್ನು ಪ್ರೇರೇಪಿಸಿದ ಯಶೋಗಾಥೆಗಳು

11:23 PM Jun 17, 2019 | mahesh |

ಮಹಾನಗರ: ನಗರದಲ್ಲಿ ಅಂತರ್ಜಲವೃದ್ಧಿ ಮತ್ತು ಭವಿಷ್ಯದಲ್ಲಿ ನೀರಿನ ಬವಣೆ ತಪ್ಪಿಸುವುದಕ್ಕೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವಂತೆ ಕೋರಿ ಸುದಿನವು “ಮನೆ ಮನೆಗೆ ಮಳೆಕೊಯ್ಲು’ ಎನ್ನುವ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಅಭಿಯಾನಕ್ಕೆ ನಗರವಾಸಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗುವ ಜತೆಗೆ ಅದು ಹಲವರನ್ನು ಈಗ ಮಳೆಕೊಯ್ಲು ಅಳವಡಿಸುವತ್ತ ಪ್ರೇರೇಪಿಸಿದೆ. ಅದಕ್ಕೆ ಮುಖ್ಯ ಕಾರಣ, ಮಳೆಕೊಯ್ಲನ್ನು ಈಗಾಗಲೇ ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವವರ ಯಶೋಗಾಥೆಗಳು.

Advertisement

ಮನೆಗಳಿಂದ ಹಿಡಿದು ಶಾಲೆ-ಆಸ್ಪತ್ರೆ-ಸರಕಾರಿ ಕಚೇರಿಗಳವರೆಗೆ ಈಗಾಗಲೇ ಮಳೆಕೊಯ್ಲು ಅನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಆ ಮೂಲಕ, ನೀರಿನ ಸಮಸ್ಯೆ ನೀಗಿಸಿಕೊಂಡಿರುವ ಹತ್ತಾರು ನಿದರ್ಶನಗಳನ್ನು ಈಗಾಗಲೇ ಈ ಅಭಿಯಾನದಲ್ಲಿ ಪ್ರಕಟಿಸಲಾಗಿದೆ. ಅವುಗಳು ಆ ವ್ಯವಸ್ಥೆಯಿಂದ ಪ್ರಯೋಜನ ಆಗಬಹುದೇ ಎನ್ನುವ ಗೊಂದಲದಲ್ಲಿದ್ದವರಿಗೆ ಸ್ಪಷ್ಟ ಚಿತ್ರಣ ನೀಡುವಲ್ಲಿ ಸಹಕಾರಿಯಾಗಿದೆ. ಜತೆಗೆ ನಗರ ಪ್ರದೇಶದಲ್ಲಿ ಅದು ಅಷ್ಟೊಂದು ಯಶಸ್ವಿಯಾಗಿ ಅಳವಡಿಸಲು ಸಾಧ್ಯವಿಲ್ಲ ಎಂಬಿತ್ಯಾದಿ ತಪ್ಪು ಕಲ್ಪನೆ ಹೊಂದಿದ್ದವರಲ್ಲಿಯೂ ಜಾಗೃತಿ ಮೂಡಿಸುವುದಕ್ಕೆ ಇಂಥ ಯಶೋಗಾಥೆಗಳು ನೆರವಾಗಿವೆ.

ಈ ವರ್ಷ ಯಥೇಚ್ಛ ನೀರು
ಚಿಲಿಂಬಿ ಹಿಲ್ಸ್‌ ನಿವಾಸಿ ಎಂ.ಎಂ. ಪ್ರಭು ಅವರು ಮೂರು ವರ್ಷಗಳ ಹಿಂದೆ ಅಳವಡಿಸಿದ ಮಳೆಕೊಯ್ಲು ವ್ಯವಸ್ಥೆಯ ಪರಿಣಾಮ ಈ ವರ್ಷದ ಬೇಸಗೆಯಲ್ಲಿ ಯಥೇತ್ಛ ನೀರು ಪಡೆದುಕೊಂಡಿದ್ದಾರೆ. ಇದರಿಂದ ನೀರಿಗಾಗಿ ಪರಿತಪಿಸಬೇಕಾದ ಪ್ರಮೇಯವೇ ಬರಲಿಲ್ಲ ಎಂದು ಖುಷಿಯಿಂದಲೇ ಹೇಳುತ್ತಾರೆ ಅವರು.

ಪ್ರಭು ಅವರ ಮನೆಯಲ್ಲಿ 60 ಅಡಿ ಆಳದ ಬಾವಿ ಇದ್ದು, 2016ರಲ್ಲಿ ಬಾವಿಯಲ್ಲಿ ನೀರಿನ ಸಮಸ್ಯೆ ತಲೆದೋರಿತು. ಇದರಿಂದಾಗಿ ಮನೆಯಲ್ಲಿ ಮಳೆಕೊಯ್ಲು ಅಳವಡಿಸಲು ಚಿಂತಿಸಿ ಕಾರ್ಯೋನ್ಮುಖರಾದರು. ಅದರಂತೆ, ಮನೆಯ ಛಾವಣಿಯಿಂದ ಫಿಲ್ಟರ್‌ ಮಾಡಿದ ನೀರು ಪೈಪ್‌ ಮುಖಾಂತರ ಬಾವಿಗೆ ಬೀಳುವಂತೆ ಮಾಡಿದರು. ಮೊದಲ ಎರಡು ವರ್ಷ ಅವರಿಗೆ ಫಲಿತಾಂಶ ದೊರೆಯಲಿಲ್ಲ. ಆದರೆ, ಈ ವರ್ಷ ಬಾವಿಯಲ್ಲಿ 5 ಅಡಿಯಷ್ಟು ನೀರು ಸಿಕ್ಕಿದ್ದು, ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಎದುರಾಗಿಲ್ಲ.

ಸುತ್ತಮುತ್ತಲಿನ ಬಾವಿ ನೀರಿನ ಮಟ್ಟ ಏರಿಕೆ
ರಥಬೀದಿ ಸರಕಾರಿ ಹೆಣ್ಮಕ್ಕಳ ಪ್ರೌಢಶಾಲೆ ಶಾಲೆಯ ಟೆರೇಸ್‌ನ ಮೇಲೆ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ಮಳೆಕೊಯ್ಲು ಮಾಡಿದ ಪರಿಣಾಮ ಬೇಸಗೆಯಲ್ಲೂ ಶಾಲೆಯ ಬಳಕೆಗೆ ಬೇಕಾದಷ್ಟು ನೀರು ಸಿಗುತ್ತದೆ. ಆ ಭಾಗದ ಇತರ ಬಾವಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕಿ ಲಲಿತಾ ರಾವ್‌. ಪ್ರೌಢಶಾಲಾ ವಿಭಾಗದಲ್ಲಿ ಮಳೆಕೊಯ್ಲು ಘಟಕವನ್ನು ವರ್ಷಗಳ ಹಿಂದೆ ರೋಟರಿ ಕ್ಲಬ್‌ ಮಂಗಳೂರು ಹಿಲ್‌ಸೈಡ್‌ ವತಿಯಿಂದ ಅಳವಡಿ ಸಲಾಗಿದೆ. ಶಾಲೆಯ ಪ್ರಯೋಗಾಲಯ, ಕ್ರೀಡಾಕೊಠಡಿ ಗಳ ಮೇಲೆ ಮಳೆ ಬಂದಾಗ ಬಿದ್ದ ನೀರನ್ನು ಸಂಗ್ರಹಿಸಿ ಪೈಪಗಳ ಮೂಲಕ ಸೋಸುವ ಘಟಕದ ಮೂಲಕ ಹಾಯಿಸಿ ಶುದ್ಧೀಕರಿಸಿ ಅನಂತರ ಸಮೀಪದಲ್ಲಿರುವ ಬಾವಿಗೆ ಬಿಡಲಾಗುತ್ತಿತ್ತು. ಇದರಿಂದ ಬಾವಿಯಲ್ಲಿ ನೀರಿನ ಮಟ್ಟ, ಸುತ್ತಮುತ್ತಲಿನ ಪ್ರದೇಶದ ನೀರಿನ ಮಟ್ಟ ಏರಿಕೆಗೂ ಸಹಕಾರಿಯಾಗಿದೆ ಎನ್ನುತ್ತಾರೆ ಅವರು.

Advertisement

ನೀರಿನ ಸಮಸ್ಯೆ ನಿವಾರಣೆಗೆ ಮಳೆಕೊಯ್ಲು
ಕದ್ರಿ ಜಾರ್ಜ್‌ ಮಾರ್ಟಿಸ್‌ ರಸ್ತೆಯಲ್ಲಿರುವ ಶಂಕರ್‌ ಭಟ್‌ ಅವರ ಮನೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಳೆಕೊಯ್ಲು ಅಳವಡಿಸಲಾಗಿದೆ. ಈ ಬೇಸಗೆಯಲ್ಲಿ ಐದಾರು ದಿನಗಳವರೆಗೂ ನೀರು ಬರುತ್ತಿರಲಿಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡಿದ ಹಿನ್ನೆಲೆಯಲ್ಲಿ ಅವರು ಮಳೆಕೊಯ್ಲು ಅಳವಡಿಸಿಕೊಳ್ಳಲು ಚಿಂತಿಸಿ ಕಾರ್ಯೋನ್ಮುಖರಾದರು. ಅದರಂತೆ ಮನೆಯ ಮೇಲ್ಛಾವಣಿ ನೀರನ್ನು ಪೈಪ್‌ ಮುಖಾಂತರ ಸಿಂಟೆಕ್ಸ್‌ಗೆ ಬಿಟ್ಟು ಅಲ್ಲಿಂದ ಶುದ್ಧೀಕೃತ ನೀರನ್ನು ಸಂಪ್‌ಗೆ ಬಿಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕದ್ರಿ ಮಂಜುನಾಥ ಕಾಲನಿಯಲ್ಲಿರುವ ಇನ್ನೊಂದು ಮನೆಯಲ್ಲೂ ಇದೇ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ಮಳೆ ನೀರು ಕೊಯ್ಲು ಅಳವಡಿಸಿದ್ದರಿಂದ ಮುಂದಿನ ದಿನಗಳಲ್ಲಿ ನೀರಿಗೆ ಸಮಸ್ಯೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಮನೆಯ ನಿವಾಸಿ ಮಂಗಳಾ ಭಟ್‌.

ಮಠದಲ್ಲಿ ಮಳೆಕೊಯ್ಲು
ಶರವು ಮಹಾಗಣಪತಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ಚಿತ್ರಾಪುರ ಮಠದಲ್ಲಿ ಎರಡು ವರ್ಷಗಳಿಂದ ಮಳೆಕೊಯ್ಲು ಪದ್ಧತಿ ಅಳವಡಿಸಲಾಗಿದ್ದು, ಬೇಸಗೆಯಲ್ಲಿ ಮಠದ ಎಲ್ಲ ಕೆಲಸಗಳಿಗೆ ಈ ನೀರೇ ಜೀವಜಲವಾಗಿ ಬಳಕೆಯಾಗುತ್ತಿದೆ.
ಮಠ ಆವರಣದಲ್ಲಿ ಬಾವಿ ಇದ್ದರೂ ಅದರಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಭವಿಷ್ಯದ ದಿನಗಳಲ್ಲಿ ಸಮಸ್ಯೆ ಜಟಿಲಗೊಳ್ಳಬಹುದು ಎಂಬ ಹಿನ್ನೆಲೆಯಲ್ಲಿ ಮುಂದಾಲೋಚನೆಯೊಂದಿಗೆ ಎರಡು ವರ್ಷಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಅಂತರ್ಜಲ ಮಟ್ಟವೂ ಏರಿಕೆಯಾಗಿದ್ದು, ನೀರಿನ ಅಭಾವ ಉಂಟಾಗದಂತೆ ತಡೆಯಲಾಗಿದೆ. ಪ್ರಸ್ತುತ ಬೇಸಗೆಯಲ್ಲಿಯೂ ನೀರಿಗೆ ಯಾವುದೇ ಸಮಸ್ಯೆಯಾಗಿಲ್ಲ.

ಹೊಸ ಮನೆಯಲ್ಲಿ ಮಳೆಕೊಯ್ಲು
ನೀರುಮಾರ್ಗ ಕುತ್ತಿಕ್ಕಳ ಶ್ರೀ ವಿನಾಯಕ ಗೋಮ್ಸ್‌ ಕಾಂಪೌಂಡ್‌ನ‌ ಜಯಂತ್‌ ಶಾಂತಿ ಅವರು ತಮ್ಮ ಹೊಸ ಮನೆ ನಿರ್ಮಾಣ ಮಾಡುವಾಗಲೇ ಅಂದರೆ ಆರು ತಿಂಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇದೀಗ ಮಳೆ ಆರಂಭವಾದಾಗ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗುವ ವಿಶ್ವಾಸದಲ್ಲಿದ್ದಾರೆ.

ಬೇಸಗೆಯಲ್ಲಿ ಬಾವಿಯಲ್ಲಿ ನೀರಿಲ್ಲದೆ, ವಿಪರೀತ ನೀರಿನ ಸಮಸ್ಯೆ ಎದುರಿಸಿದ್ದ ಜಯಂತ್‌ ಸನಿಹದ ಬೋರ್‌ವೆಲ್‌ ನೀರನ್ನೇ ಅವಲಂಬಿಸಬೇಕಾಗಿ ಬಂದಿತ್ತು. ಮುಂದಿನ ದಿನಗಳಲ್ಲಿ ಹೀಗಾದಂತೆ ತಡೆಯಲು
ತಮ್ಮ ಹೊಸ ಮನೆಯ ಬಾವಿಗೆ ಮಳೆಕೊಯ್ಲು ಮುಖಾಂತರ ಮಳೆಗಾಲದಲ್ಲಿ ನೀರು ವ್ಯರ್ಥವಾಗದಂತೆ
ಮಾಡಿದ್ದಾರೆ. ಛಾವಣಿಗೆ ಪೈಪ್‌ ಅಳವಡಿಸಿ ಸರಳ ವಿಧಾನದ ಮೂಲಕ ಬಾವಿಗೆ ನೀರು ಬೀಳುವಂತೆ ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸನಿಹದ ಮನೆಗಳಿಗೂ ತಮ್ಮ ಬಾವಿಯಿಂದ ನೀರೊದಗಿಸುತ್ತಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ನಿತ್ಯ ನೀರು
ಡಿಸೈನರ್‌ ಹೋಮ್ಸ್‌ ನವರು ಹೊಗೆಬಜಾರ್‌ ರೈಲ್ವೇ ಗೂಡ್ಸ್‌ ಶೆಡ್‌ ಸಮೀಪ ಕಟ್ಟಿಸಿದ ಆರು ಅಂತಸ್ತಿನ 18 ಮನೆಗಳನ್ನು ಹೊಂದಿರುವ ಸೀವಿಸ್ಟಾ ಅಪಾರ್ಟ್‌ಮೆಂಟ್‌ನಲ್ಲಿ ಮಳೆಕೊಯ್ಲು ವ್ಯವಸ್ಥೆಯಿಂದಾಗಿ ನೀರಿನ ಭಾವವೇ ಉಂಟಾಗಿಲ್ಲ. ಸುಮಾರು 2 ವರ್ಷಗಳ ಹಿಂದೆ ಅಪಾರ್ಟ್‌ಮೆಂಟ್‌ನಲ್ಲಿ ನೀರಿನ ಸಮಸ್ಯೆ ಉಂಟಾದಾಗ ಹೊಸದಾಗಿ ಬಾವಿ ಕೊರೆಯಲು ನಿರ್ಧರಿಸಲಾಯಿತು.

ಆದರೆ ಸ್ಥಳದ ಅಭಾವದಿಂದಾಗಿ ಸ್ವಲ್ಪ ಸಮಸ್ಯೆಯುಂಟಾಯಿತಾದರೂ, ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಂಡು ಅಪಾರ್ಟ್‌ಮೆಂಟ್‌ ಓನರ್ ಅಸೋಸಿಯೇಶನ್‌ನವರು ಬಾವಿ ಜತೆಗೆ 12 ಅಡಿ ಆಳ, 4.5 ಅಡಿ ಅಗಲದ ಇಂಗುಗುಂಡಿಯನ್ನೂ ನಿರ್ಮಾಣ ಮಾಡಿದರು. ಅದರಲ್ಲಿ ಮರಳು, ಇದ್ದಿಲು, ಜಲ್ಲಿಯನ್ನು ಕ್ರಮವಾಗಿ ಹಾಕಿ ಟೆರೇಸ್‌ ಮೇಲಿನ ನೀರು ಈ ಗುಂಡಿಗೆ ಬೀಳುವಂತೆ ನೋಡಿಕೊಳ್ಳಲಾಯಿತು. ಬಳಿಕ ಫಿಲ್ಟರ್‌ ಆಗುವ ನೀರು ಪಕ್ಕದಲ್ಲೇ ಇರುವ ಬಾವಿಗೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಮಳೆ ನೀರನ್ನು ಸಂಗ್ರಹಿಸಿಡಲು ವ್ಯವಸ್ಥೆ ಮಾಡಿದ್ದರಿಂದ ಕಳೆದ ಬೇಸಗೆಯಲ್ಲಿ ನೀರಿನ ಸಮಸ್ಯೆಯೇ ಉಂಟಾಗಿಲ್ಲ ಎನ್ನುತ್ತಾರೆ ಅಸೋಸಿಯೇಶನ್‌ನ ಖಜಾಂಚಿ ಕೆ. ಜೆ. ಪಿಂಟೋ. “ಅಪಾರ್ಟ್‌ಮೆಂಟ್‌ನಲ್ಲಿ ಇರುವವರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ, ಎಲ್ಲರೂ ಮನಸ್ಸು ಮಾಡಿ ಸಹಕರಿಸಿದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗಿ ಬರುವುದಿಲ್ಲ’ ಎನ್ನುತ್ತಾರೆ ಅವರು. ಅಪಾರ್ಟ್‌ಮೆಂಟ್‌ ವಾಚ್‌ಮನ್‌ ಬಸಪ್ಪ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next