Advertisement

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

09:23 AM Feb 23, 2022 | Team Udayavani |

ಕಲಬುರಗಿ: ಕಠಿಣ ಪರಿಶ್ರಮದಿಂದ ಕಂಡ ಕನಸನ್ನು ನನಸು ಮಾಡಲು ಸಾಧ್ಯ, ಹೀಗಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನದ ಚಟುವಟಿಕೆಯಲ್ಲಿ ತೊಡಗಿರಬೇಕೆಂದು ಇಸ್ರೋದ ನಿವೃತ್ತ ವಿಜ್ಞಾನಿ ನಾರಾಯಣ ಇನಾಂದಾರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ರಾಷ್ಟ್ರೀಯ ವಿಜ್ಞಾನ ಸಪ್ತಾಹ ಹಾಗೂ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಕುರಿತು ಫಲಕಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಕ್ಷಿಪಣಿ ತಜ್ಞ ಹಾಗೂ ಮಾಜಿ ರಾಷ್ಟ್ರಪತಿಗಳಾದ ಡಾ| ಎ.ಪಿ.ಜೆ ಅಬ್ದುಲ್‌ ಕಲಾಂ ಮಾತಿನಂತೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊಡ್ಡ ಗುರಿ, ಜ್ಞಾನದ ಸಂಪಾದನೆ, ಕಠಿಣ ಪರಿಶ್ರಮ ಹಾಗೂ ದೃಢವಾದ ಸತತ ಪ್ರಯತ್ನ ಎಂಬ ನಾಲ್ಕು ಅಂಶಗಳನ್ನು ಅಳವಡಿಸಿಕೊಂಡು ಸಾಗಿದಲ್ಲಿ ಕಂಡ ಕನಸುಗಳನ್ನು ನನಸಾಗಿಸಲು ಸಾಧ್ಯ ಎಂದರು.

ಜೀವನದಲ್ಲಿ ಧನಾತ್ಮಕ ಚಿಂತನೆ ಅಳವಡಿಸಿಕೊಂಡು ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವತ್ತ ಗಮನಹರಿಸಬೇಕು.ನಿಮ್ಮ ಸಾಧನೆಗೆ ದೇಶ ಕಾಯುತ್ತಿದೆ ಎಂದ ಅವರು, ಉತ್ತಮ ಗುಣಗಳನ್ನು ರೂಢಿಸಿಕೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು. ಸ್ವಾತಂತ್ರ್ಯಕ್ಕೂ ಪೂರ್ವ ನಮ್ಮಲ್ಲಿ ತಂತ್ರಜ್ಞಾನದ ಉಪಕರಣಗಳ ಲಭ್ಯವಿರಲಿಲ್ಲ. ಇದೀಗ ಬಾಹ್ಯಾಕಾಶ, ರಕ್ಷಣಾ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಇಂದು ವಿಶ್ವದ ಬಲಿಷ್ಠ 4 ದೇಶಗಳಲ್ಲಿ ಪ್ರಮುಖ ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ| ಎಂ.ವಿ.ಎನ್‌. ಅಂಬಿಕಾ ಪ್ರಸಾದ್‌ ಮಾತನಾಡಿ, 75 ವರ್ಷಗಳಲ್ಲಿ ಭಾರತ ಮಹೋನ್ನತ ಸಾಧನೆ ಮಾಡಿದೆ. ಇದಕ್ಕೆ ಬಾಬಾ ಹೋಮಿ ಜಹಾಂಗೀರ್‌, ವಿಕ್ರಂ ಸಾರಾಭಾಯಿ, ಡಾ| ಸಿ.ವಿ.ರಾಮನ್‌, ಡಾ| ಎ.ಪಿ.ಜೆ.ಅಬ್ದುಲ್‌ ಕಲಾಂ ಸೇರಿದಂತೆ ಹಲವಾರು ವಿಜ್ಞಾನಿಗಳ ಸೇವೆ ಸ್ಮರಣೀಯವಾಗಿದೆ ಎಂದರು.

Advertisement

ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್‌. ಲಕ್ಷ್ಮೀನಾರಾಯಣ ಮಾತನಾಡಿದರು. ಸಹಾಯಕ ಶಿಕ್ಷಣಾಧಿಕಾರಿ ಪೊನ್ನರಸನ್‌ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಕುರಿತು ನಡೆದ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ದೇಶದ ವೈಜ್ಞಾನಿಕ ಪರಂಪರೆ, ಸ್ವತಂತ್ರ ಭಾರತ, ಕೃಷಿ, ನೀರಾವರಿ, ಕೈಗಾರಿಕೆ, ಶಕ್ತಿ ಉತ್ಪಾದನೆ, ಪರಮಾಣು ಸಾಮರ್ಥ್ಯ, ಬಾಹ್ಯಾಕಾಶ ತಂತ್ರಜ್ಞಾನ, ರಕ್ಷಣಾ ಸಂಶೋಧನೆ, ಟೆಲಿಕಾಂ ಮತ್ತು ಎಲೆಕ್ಟ್ರಾನಿಕ್‌ ಕ್ರಾಂತಿ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ಆರೋಗ್ಯ, ಜೈವಿಕ ತಂತ್ರಜ್ಞಾನ, ಸಾಗರ ವಿಜ್ಞಾನ, ಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಬಳಕೆ ಮತ್ತಿತರ ಅಂಶಗಳ ಕುರಿತಾಗಿ ಫಲಕಗಳು ಪ್ರದರ್ಶಿಸಲಾಯಿತು.

ಭಾರತ ದೇಶವು ವಿಶ್ವಕ್ಕೆ ಅನೇಕ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡಿದೆ, ಆದರೂ ಸಹ ನೋಬೆಲ್‌ ಪ್ರಶಸ್ತಿ ಬೆರಳಣಿಕೆಯಲ್ಲಿ ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಶ್ರೇಷ್ಠ ಪ್ರಶಸ್ತಿ ಪಡೆಯಲು ವಿದ್ಯಾರ್ಥಿಗಳು ಪಣ ತೊಡಬೇಕು. -ನಾರಾಯಣ ಇನಾಂದಾರ, ಇಸ್ರೋದ ನಿವೃತ್ತ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next