Advertisement

ಎದುರಾಳಿಗಳು ಇಲ್ಲದಿದ್ದರೆ ಮಾತ್ರ ಯಶಸ್ಸು ಸುಲಭ

12:48 PM Jun 04, 2019 | Suhan S |

ವ್ಯಾಪಾರದಲ್ಲಿ ಗೆಲ್ಲಬೇಕು ಎನ್ನುವವರು, ಪ್ರತಿಸ್ಪರ್ಧಿಗಳು ಇಲ್ಲದ ಜಾಗ ನೋಡಿಕೊಂಡೇ ಬ್ಯುಸಿನೆಸ್‌ ಆರಂಭಿಸಬೇಕು. ಹತ್ತರ ಜೊತೆಗೆ ಹನ್ನೊಂದು ಎಂಬಂಥ ಬ್ಯುಸಿನೆಸ್‌ಗೆ ತೊಡಗುವ ಬದಲು, ಉಳಿದವರು ಕೈ ಹಾಕದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷಿಸಬೇಕು…

Advertisement

ಆಸೆ ಮತ್ತು ಅಸೂಯೆ-ಪ್ರತಿಯೊಬ್ಬ ಮನುಷ್ಯನೊಳಗೂ ಕಡ್ಡಾಯವಾಗಿ ಇರುವ ಗುಣಗಳಿವು. ನಾನು, “ಅವನಂತೆಯೇ’ಗುರಿ ತಲುಪಬೇಕು, ಹಣ-ಆಸ್ತಿ, ಹೆಸರು, ಗೌರವ ಎಲ್ಲವನ್ನೂ ಪಡೆಯಬೇಕು ಎಂಬುದು ಆಸೆ. ಜೊತೆಗಿದ್ದವನು, ನನಗಿಂತ ಬೇಗ ಉದ್ಧಾರ ಆಗಿಬಿಟ್ಟನಲ್ಲ; ಅವನಷ್ಟೇ ಎಫ‌ರ್ಟ್‌ ಹಾಕಿದರೂ ನಾನು ದೊಡ್ಡದೊಂದು ಸಾಧನೆ ಮಾಡಲು ಆಗಲಿಲ್ಲವಲ್ಲ; ಅವನಂತೆ ಯಶಸ್ಸು ಕಾಣದಿದ್ದರೆ ಅಷ್ಟೇ ಹೋಯ್ತು. ಅವನ ಯಶಸ್ಸಿಗೆ, ಗೆಲುವಿನ ನಾಗಲೋಟಕ್ಕೆ ಸ್ವಲ್ಪ ಮಟ್ಟಿಗಿನ ತಡೆಯನ್ನಾದರೂ ಒಡ್ಡಬೇಕು ಎಂದು ಯೋಚಿಸುವುದು ಅಸೂಯೆ. ಆಸೆಯೇ ದುಃಖಕ್ಕೆ ಮೂಲ, ಅಸೂಯೆ ಕಷ್ಟಕ್ಕೆ ಮೂಲ ಎಂಬ ಮಾತು ಪದೇ ಪದೆ ನಿಜವಾಗುತ್ತಿದ್ದರೂ ಆಸೆ ಮತ್ತು ಅಸೂಯೆಯ ವರ್ತುಲದಿಂದ ಆಚೆ ಏರಲು ಯಾರಿಗೂ ಸಾಧ್ಯವಾಗುತ್ತಿಲ್ಲ.

ಹಣ ಸಂಪಾದನೆಯ ಅಥವಾ ಯಾವುದಾದರೂ ಬ್ಯುಸಿನೆಸ್‌ನ ವಿಷಯಕ್ಕೆ ಬಂದಾಗ ಈ ಆಸೆ ಅಥವಾ ಅಸೂಯೆ ,ನಮ್ಮನ್ನು ಬಹುಬಗೆಯಲ್ಲಿ, ಬಹುದಿನಗಳ ಕಾಲ ಕಾಡುವುದುಂಟು. ನಾವು ಇನ್ನೊಬ್ಬರಂತೆ ಯಶಸ್ಸು ಪಡೆಯಲು ಸಾಧ್ಯವಿಲ್ಲವಾ ಎಂಬುದು ಹಲವರ ಪ್ರಶ್ನೆ. ಖಂಡಿತ ಸಾಧ್ಯವಿದೆ. ಆದರೆ, ಅದಕ್ಕಾಗಿ ಒಂದಷ್ಟು ಪೂರ್ವ ಸಿದ್ಧತೆ, ದೂರದೃಷ್ಟಿ, ಸಾವಧಾನದಿಂದ ಕಾಯುವಂಥ ತಾಳ್ಮೆ…. ಇದೆಲ್ಲ ಅಗತ್ಯ.

ಕಾಪಿ ಮಾಡಿದರೆ ಕಷ್ಟ
ಯಾರೋ ಒಬ್ಬ ಆಸಾಮಿ ಅಂದುಕೊಳ್ಳಿ. ಅವನನ್ನು ರಾಮಣ್ಣ ಎಂದು ಕರೆಯೋಣ. ವೆರಿವೆರಿ ಆರ್ಡಿನರಿ ಮಿಡ್ಲ್ಕ್ಲಾಸ್‌ ಪರ್ಸನ್‌ ಅನ್ನಿಸಿಕೊಂಡಿದ್ದ ರಾಮಣ್ಣ, ಒಂದು ಹಳ್ಳಿಯಲ್ಲಿ ಅಥವಾ ನಗರದಲ್ಲಿ ಪ್ರಾವಿಷನ್‌ ಸ್ಟೋರ್‌ ಒಂದನ್ನು ಆರಂಭಿಸುತ್ತಾನೆ. ನಂತರದ ಏಳೆಂಟು ತಿಂಗಳಲ್ಲಿ ಒಂದಷ್ಟು ಲಾಭವೂ ಆಗುತ್ತದೆ. ಹೀಗೆ ಸಿಕ್ಕಿದ ಲಾಭದ ಜೊತೆಗೆ ಒಂದಷ್ಟು ಸಾಲ ಮಾಡಿ, ಹೊಸದೊಂದು ಬೈಕ್‌ ಖರೀದಿಸುತ್ತಾನೆ. ಯಾರಾದರೂ ಕೇಳಿದರೆ, ಅಂಗಡಿ ಕಡೆಯಿಂದ ಸ್ವಲ್ಪ ಲಾಭ ಬಂದಿತ್ತು… ಅಂತ ಮಾತಿಗೆ ಆರಂಭಿಸುತ್ತಾನೆ. ಅವನ ಮಾತುಗಳನ್ನು ಪೂರ್ತಿ ಕೇಳುವ ತಾಳ್ಮೆಯೇ ಎದುರಿಗಿದ್ದವರಿಗೆ ಇರುವುದಿಲ್ಲ. ಅವರು ಅವಸರದಲ್ಲೇ ಮಾತು ಮುಗಿಸಿ, ಇನ್ನೊಂದು ಕಡೆಗೆ ಬರುತ್ತಾರೆ. ಅಲ್ಲೇನಾದರೂ ರಾಮಣ್ಣನ ಪರಿಚಯದವರು ಕಾಣಿಸಿದರೆ- ಪರವಾಗಿಲ್ಲ ಕಣ್ರಿ ನಿಮ್ಮ ಫ್ರೆಂಡು… ಆರು ತಿಂಗಳ ಹಿಂದೆ ಅಂಗಡಿ ಓಪನ್‌ ಮಾಡಿ, ಅದರಿಂದ ಲಾಭ ಮಾಡಿಕೊಂಡು, ಆ ಹಣದಿಂದಲೇ ಒಂದು ಬೈಕನ್ನೂ ತಗೊಂಡಿದ್ದಾರೆ ! ಈಗಷ್ಟೇ ಅದನ್ನು ನೋಡಿಬಂದೆ, ಅಂದು ಬಿಡುತ್ತಾರೆ.

ಈ ಮಾತು ಕೇಳುತ್ತಿದ್ದಂತೆಯೇ ರಾಮಣ್ಣನ ಬಂಧು ಆಗಿದ್ದವನಿಗೆ ಚಡಪಡಿಕೆ ಶುರುವಾಗುತ್ತದೆ. ಆಸೆ ಮತ್ತು ಅಸೂಯೆ ಜೊತೆಯಾಗುತ್ತದೆ. ಬರೀ ಆರೇ ತಿಂಗಳು ಬ್ಯುಸಿನೆಸ್‌ ಮಾಡಿ, ಒಂದು ಬೈಕ್‌ ಖರೀದಿಗೆ ಆಗುವಷ್ಟು ಹಣ ಸಂಪಾದಿಸಿದ ಎಂದ ಮೇಲೆ ಅಂಥದೇ ವ್ಯವಹಾರವನ್ನು ನಾನೇಕೆ ಮಾಡಬಾರದು ಎಂದು ಹೆಚ್ಚಿನವರು ಯೋಚಿಸುತ್ತಾರೆ. ಅಷ್ಟೇ ಅಲ್ಲ; ಐದಾರು ಕಡೆ ಸಾಲ ಮಾಡಿ, ತಮ್ಮ ಪರಿಚಯದವನು ಇದ್ದ ಏರಿಯಾದಲ್ಲೇ, ತರಾತುರಿಯಲ್ಲಿ ತಾವೂ ಒಂದು ಪ್ರಾವಿಷನ್‌ ಸ್ಟೋರ್‌ ಆರಂಭಿಸಿಬಿಡುತ್ತಾರೆ!

Advertisement

ಎದುರಾಳಿ ಆಗಬಾರದು
ಬ್ಯುಸಿನೆಸ್‌ ಮಾಡಬೇಕು, ಅದರಿಂದ ಸಾಕಷ್ಟು ಲಾಭವನ್ನೂ ಮಾಡಬೇಕು ಎಂಬುದೇ ಉದ್ದೇಶವಾದಾಗ, ಮೊದಲಿಗೆ ನಾವು ಯಾರಿಗೂ ಪ್ರತಿಸ್ಪರ್ಧಿ ಆಗಬಾರದು. ಈಗಾಗಲೇ ಒಂದು ಅಂಗಡಿಯೋ, ಹೋಟೆಲ್ಲೋ, ಎಗ್‌ಸೆಂಟರೋ, ಹಾಲು ಮಾರಾಟ ಮಳಿಗೆಯೋ ಅಥವಾ ತರಕಾರಿ-ಹಣ್ಣು ಮಾರಾಟದ ಅಂಗಡಿಯೋ ಇರುವ ಕಡೆಯಲ್ಲಿ, ಮತ್ತೂಬ್ಬರು ಅಂಥದೇ ಅಂಗಡಿಯನ್ನು ತೆರೆದರೆ ಅದು ಖಂಡಿತ ಮೂರ್ಖತನ. ಬ್ಯುಸಿನೆಸ್‌ನ ವಿಷಯ ಬಂದಾಗ,ಆಪ್ತ ಸ್ನೇಹಿತನನ್ನು ಸಂಬಂಧಿಕರನ್ನು ಕೂಡ ಎದುರಾಳಿ ಎಂದೇ ಲೆಕ್ಕ ಹಾಕಲಾಗುತ್ತದೆ. ಹೀಗಿರುವಾಗ, ಒಂದು ಅಂಗಡಿ ಆಗಲೇ ಅಸ್ತಿತ್ವದಲ್ಲಿದ್ದು, ಅದು ಸ್ವಲ್ಪ ಮಟ್ಟಿಗೆ ಲಾಭದಲ್ಲೂ ನಡೆಯುತ್ತಿದೆ ಅನ್ನುವಾಗ, ಅಲ್ಲಿಯೇ ಅದದೇ ಉತ್ಪನ್ನಗಳ ಇನ್ನೊಂದು ಅಂಗಡಿ ತೆರೆಯುವುದು ಖಂಡಿತ ತಪ್ಪುನಡೆ. ಹೀಗೆ ಆದಾಗ, ಮೊದಲಿಗೆ ಪಕ್ಕದಲ್ಲಿ ಇಂತವನೇ ಶತ್ರುವಾಗುತ್ತಾನೆ. ನಿಮ್ಮನ್ನು ಹಣಿಯಲು ಅವನೂ, ಅವನನ್ನು ಹಣಿಯಲು ನೀವೂ ಪ್ರಯತ್ನ ಆರಂಭಿಸಿಬಿಡುತ್ತೀರಿ. ಸಮಯ ಸಿಕ್ಕಾಗೆಲ್ಲ ಪರಸ್ಪರರ ಮೇಲೆ ಸುಳ್ಳು ಸಂಗತಿಗಳನ್ನು ಹಬ್ಬಿಸಲು ಆರಂಭಿಸುತ್ತೀರಿ. ಆ ಕ್ಷಣದಿಂದಲೇ ಆಸೆಯೇ ದುಃಖಕ್ಕೆ ಮೂಲ, ಅಸೂಯೆಯು ಕಷ್ಟಕ್ಕೆ ಮೂಲ ಎಂಬುದು ನಿಜವಾಗುತ್ತಾ ಹೋಗುತ್ತದೆ.

ಬೇರೆ ದಾರಿ ಹಿಡಿಯಿರಿ
ಈಗಾಗಲೇ ಒಂದು ಪ್ರದೇಶದಲ್ಲಿ ಹಾಲು ಮಾರಾಟದ ಮಳಿಗೆ ಮತ್ತು ಪ್ರಾವಿಜನ್‌ ಸ್ಟೋರ್‌ ಇದೆ ಅಂದುಕೊಳ್ಳಿ. ನಿಜವಾಗಿಯೂ ಈ ಎರಡೂ ಅಂಗಡಿಗಳ ಮಾಲೀಕರಂತೆಯೇ ಲಾಭ ಮಾಡಬೇಕು, ಬ್ಯುಸಿನೆಸ್‌ನಲ್ಲಿ ಗೆಲ್ಲಬೇಕು ಎಂಬು ಉದ್ದೇಶವಿದ್ದರೆ, ಅಲ್ಲಿ ಒಂದು ಹೋಟೆಲ್‌ ತೆರೆಯುವುದು ಜಾಣತನ. ಅಥವಾ ಪುಸ್ತಕ, ಸ್ಕೂಲ್‌ ಬ್ಯಾಗ್‌, ಜೆರಾಕ್ಸ್‌ ಅಂಗಡಿ ಒಳಗೊಂಡ ಶಾಪ್‌ ಆರಂಭಿಸುವುದೂ ಒಳ್ಳೆಯದೇ. ಹೀಗೆ, ಮಾಡಿದಾಗ, ಮೊದಲನೆಯದಾಗಿ ನಿಮಗೆ ಪ್ರತಿಸ್ಪರ್ಧಿ ಇರುವುದಿಲ್ಲ. ಎರಡನೆಯದಾಗಿ, ಅಕ್ಕಪಕ್ಕದವರು ನಿಮ್ಮ ವಿರುದ್ಧ ರೂಮರ್‌ ಹಬ್ಬಿಸುವುದಕ್ಕೂ ಸಾಧ್ಯವಿಲ್ಲ. ಅದರಲ್ಲೂ, ಐದಾರು ಅಂಗಡಿಗಳು ಇರುವ ಕಡೆಯಲ್ಲಿ ಹೋಟೆಲ್‌ ಇಲ್ಲದಿದ್ದರೆ, ಬರೀ ಕಾಫಿ-ಟೀ-ಬ್ರೆಡ್‌, ಬಿಸ್ಕತ್‌ ಮಾರಾಟದ ಹೋಟೆಲ್‌ ಆರಂಭಿಸಿದರೂ ಸಾಕು. ವ್ಯಾಪಾರ ಜೋರಾಗಿಯೇ ಆಗುತ್ತದೆ. ಪ್ರಾವಿಷನ್‌ ಸ್ಟೋರ್‌ಗೆ ಬಂದವರು, ಅಲ್ಲಿ ತಮ್ಮ ಖರೀದಿಯ ವಸ್ತುಗಳ ಲಿಸ್ಟ್‌ ಕೊಟ್ಟು, ಕಾಫಿ ಕುಡಿಯೋಣ ಎಂದು ಹೋಟೆಲಿನ ಕಡೆಗೆ ಹೆಜ್ಜೆ ಹಾಕುತ್ತಾರೆ ಅಥವಾ ಅಂಗಡಿಯಲ್ಲಿ ರಷ್‌ ಇದ್ದರೆ “ಐದು ನಿಮಿಷದಲ್ಲಿ ಎಲ್ಲವನ್ನೂ ಪ್ಯಾಕ್‌ ಮಾಡಿಸಿ ಇಟ್ಟಿತೇನೆ ಸಾರ್‌, ನೀವು ಕಾಫಿ ಕುಡಿದು ಬನ್ನಿ’ ಎಂದು ಅಂಗಡಿಯ ಮಾಲೀಕನೇ ಹೇಳಿರುತ್ತಾನೆ. ಅದರರ್ಥ ಇಷ್ಟೆ; ಲಾಭ ಮಾಡಬೇಕು, ಬ್ಯುಸಿನೆಸ್‌ನಲ್ಲಿ ಗೆಲ್ಲಬೇಕು ಎಂದು ಯೋಚಿಸಿದವನು, ಯಾವಾಗಲೂ ಎದುರಾಳಿಗಳು ಕಡಿಮೆ ಇರುವಂಥ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು.

ಏಜೆನ್ಸಿ ಕೊಡುವುದಿಲ್ಲ
ಒಂದು ಖಚಿತ ಉದಾಹರಣೆಯ ಮೂಲಕ, ಈ ಬರಹ ಮುಗಿಸಬಹುದು. ಈಗ ರೆಡಿಮೇಡ್‌ ಬಟ್ಟೆಗಳ ದರ್ಬಾರು ಎಲ್ಲೆಡೆಯೂ ಇದೆ. ಆದರೂ, ರೇಮಂಡ್ಸ್‌ ಬಟ್ಟೆಗಳಿಗೆ, ರೇಮಂಡ್ಸ್‌ ಉತ್ಪನ್ನಗಳಿಗೆ ಎಲ್ಲೆಡೆ ಬೇಡಿಕೆ ಇದ್ದೇ ಇದೆ. ಮೊದಲಿನಿಂದಲೂ ರೇಮಂಡ್ಸ್‌ನವರು ಒಂದು ನಿಯಮವನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಏನೆಂದರೆ, ಸಣ್ಣಪುಟ್ಟ ನಗರಗಳಲ್ಲಿ ಕನಿಷ್ಠ ಐದು ಕಿ.ಮೀಗಳ ಅಂತರ ಇರುವಾಗ ಮಾತ್ರ ತಮ್ಮ ಉತ್ಪನ್ನಗಳ ಮಳಿಗೆ ತೆರೆಯಲು ಅವಕಾಶ ನೀಡುತ್ತಾರೆ. ಈಗಲೂ ಬೇಕಿದ್ದರೆ ಚೆಕ್‌ ಮಾಡಿ ನೋಡಿ. ನಗರಗಳಲ್ಲಿ ಕೂಡ, ಒಂದೇ ಏರಿಯಾದಲ್ಲಿ ರೇಮಂಡ್ಸ್‌ ಉತ್ಪನ್ನಗಳ ಎರಡೆರಡು ಮಳಿಗೆಗಳು ಇರುವುದಿಲ್ಲ. (ಇದ್ದರೂ ಬಹಳ ವಿರಳ) ಇದರಿಂದ ಏನಾಗಿದೆಯೆಂದರೆ, ರೇಮಂಡ್ಸ್‌ ಡೀಲರ್‌ಶಿಪ್‌ ಪಡೆದವರಿಗೆ, ರೇಮಂಡ್ಸ್‌ ಸಂಸ್ಥೆಗೆ ಹೆಚ್ಚಿನ ಲಾಭವಾಗದಿದ್ದರೂ, ನಷ್ಟವಂತೂ ಆಗಿಲ್ಲ.

ಈಗ ಅರ್ಥವಾಯಿತಾ? ಎದುರಾಳಿ ಇಲ್ಲದ ಕಡೆಯಲ್ಲಿ ಹಣ ಹೂಡಿದರೆ, ಲಾಭ ಪಡೆಯಲು ಸಾಧ್ಯ. ಬ್ಯುಸಿನೆಸ್‌ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲೂ ಸಾಧ್ಯ.

ನೀಲಿಮಾ

Advertisement

Udayavani is now on Telegram. Click here to join our channel and stay updated with the latest news.

Next