Advertisement

ಉಪನಗರ ರೈಲು; ಪರಿಷ್ಕೃತ ಡಿಪಿಆರ್‌ ಸಿದ್ಧ

09:42 AM Jul 24, 2019 | Suhan S |

ಬೆಂಗಳೂರು: ಪ್ರಧಾನಿ ಕಚೇರಿಯಿಂದ ಬೆಂಗಳೂರು ಉಪನಗರ ರೈಲು ಯೋಜನೆ ಕುರಿತು ಮರುಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಕೆ-ರೈಡ್‌ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ) ಮತ್ತು ರೈಟ್ಸ್‌ ಸಂಸ್ಥೆಯು ಪರಿಷ್ಕೃತ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು, ಅದರಂತೆ ರೈಲು ಮಾರ್ಗದ ಉದ್ದ 148 ಕಿ.ಮೀ.ಗೆ ಸೀಮಿತವಾಗಿದೆ. ಈ ಮೊದಲು 19,500 ಕೋಟಿ ರೂ. ವೆಚ್ಚದಲ್ಲಿ 161 ಕಿ.ಮೀ. ಉದ್ದದ ಉಪನಗರ ರೈಲು ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಈಗ 13 ಕಿ.ಮೀ. ಮಾರ್ಗಕ್ಕೆ ಕತ್ತರಿ ಹಾಕಿದ್ದು, ಚಿಕ್ಕಬಾಣಾವರದಿಂದ ನೆಲಮಂಗಲ ನಡುವಿನ ಮಾರ್ಗವನ್ನು ಕೈಬಿಡಲಾಗಿದೆ. ಅಲ್ಲದೆ ಭೂಸ್ವಾಧೀನ ಪ್ರಮಾಣ ಕಡಿಮೆ ಮಾಡಿರುವುದು ಸೇರಿದಂತೆ ಹಲವು ಮಾರ್ಪಾಡುಗಳಿಂದ ಸುಮಾರು ಮೂರೂವರೆ ಸಾವಿರ ಕೋಟಿ ರೂ. ಯೋಜನಾ ವೆಚ್ಚವನ್ನೂ ಕಡಿಮೆ ಮಾಡಲಾಗಿದೆ. ಇದರಿಂದಾಗಿ ಅಂದಾಜು ವೆಚ್ಚ ಈಗ 16 ಸಾವಿರ ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ‘ನಮ್ಮ ಮೆಟ್ರೋ’ ಮತ್ತು ಉಪನಗರ ರೈಲು ಮಾರ್ಗಗಳು ಒಂದೇ ಕಡೆ ಸಂಧಿಸುವಂತಾಗಬಾರದು. ಈ ನಿಟ್ಟಿನಲ್ಲಿ ಉದ್ದೇಶಿತ ಯೋಜನೆಯನ್ನು ಮರುಪರಿಶೀಲಿಸುವಂತೆ ಪ್ರಧಾನಿ ಕಚೇರಿಯು ಮೂರು ತಿಂಗಳ ಹಿಂದೆ ರೈಲ್ವೆ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ವರದಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಇದನ್ನು ರೈಲ್ವೆ ಮಂಡಳಿಗೆ ಸಲ್ಲಿಸಿ ನಂತರ ರೈಲ್ವೆ ಸಚಿವಾಲಯದ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ.

Advertisement

ಆರು ವರ್ಷದ ಗುರಿ: ಪರಿಷ್ಕೃತ ವರದಿ ಪ್ರಕಾರ ನಾಲ್ಕು ಕಾರಿಡಾರ್‌ಗಳಲ್ಲಿ 148 ಕಿ.ಮೀ. ಉದ್ದದ ರೈಲ್ವೆ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ 55.5 ಕಿ.ಮೀ. ಎತ್ತರಿಸಿದ ಮಾರ್ಗ ಇರಲಿದ್ದು, ಒಟ್ಟಾರೆ 62 ನಿಲ್ದಾಣಗಳು ಬರಲಿದ್ದು, ಈ ಪೈಕಿ 22 ನಿಲ್ದಾಣಗಳು ಎತ್ತರಿಸಿದ ಮಾರ್ಗದಲ್ಲಿ ಬರಲಿವೆ. ಯೋಜನೆ ಅನುಷ್ಟಾನಕ್ಕಾಗಿ 28.64 ಹೆಕ್ಟೇರ್‌ ಯಾವುದೇ ಕಟ್ಟಡಗಳ ನಿರ್ಮಾಣ ಇಲ್ಲದ ಮುಕ್ತ ಖಾಸಗಿ ಭೂಮಿ ಹಾಗೂ 12.52 ಹೆಕ್ಟೇರ್‌ ನಿರ್ಮಿತ ಪ್ರದೇಶ ಆಗಿದ್ದು, ಒಟ್ಟಾರೆ 132.30 ಹೆಕ್ಟೇರ್‌ ಭೂಸ್ವಾಧೀನವಾಗಲಿದೆ. ಇನ್ನು ಭೂಸ್ವಾಧೀನ ಮತ್ತು ಪರಿಹಾರ ವೆಚ್ಚ 1,469.8 ಕೋಟಿ ರೂ. ಹಾಗೂ ಮೂಲಸೌಕರ್ಯ ನಿರ್ಮಾಣ ವೆಚ್ಚ 9,882.8 ಕೋಟಿ ರೂ. ಇರಲಿದೆ. ಮುಂದಿನ ಆರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಉಲ್ಲೇಖೀಸಲಾಗಿದೆ. ಈ ಮೊದಲು 161 ಕಿ.ಮೀ. ಉದ್ದದ ಮಾರ್ಗದಲ್ಲಿ ಈಗಾಗಲೇ ಇರುವ 31 ಹಾಗೂ ಹೊಸದಾಗಿ 50 ಸೇರಿ ಒಟ್ಟಾರೆ 81 ನಿಲ್ದಾಣಗಳಿದ್ದವು. ಯೋಜನಾ ವೆಚ್ಚ 19,500 ಕೋಟಿ ರೂ.ಗಳಲ್ಲಿ ಅಂದಾಜು 12 ಸಾವಿರ ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿ ವೆಚ್ಚ ಹಾಗೂ ಎರಡು ಸಾವಿರ ಕೋಟಿ ರೂ. ಭೂಸ್ವಾಧೀನ ಮತ್ತು ಪರಿಹಾರ ವೆಚ್ಚ ಆಗಲಿದೆ ಎಂದು ಲೆಕ್ಕಹಾಕಲಾಗಿತ್ತು. ಈ ಮಧ್ಯೆ ಅನುಮೋದನೆಗೊಂಡ ಪರಿಷ್ಕೃತ ಸಮಗ್ರ ಯೋಜನಾ ವರದಿಯು ಕೇವಲ ನಗರದ ಹೊರವಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅದರಾಚೆ ವಿಸ್ತರಣೆ ಆಗಬೇಕು. ಇಲ್ಲದಿದ್ದರೆ ಯೋಜನೆ ಉದ್ದೇಶ ಸಾಕಾರಗೊಳ್ಳುವುದಿಲ್ಲ ಎಂಬ ಕೂಗು ಕೂಡ ಕೇಳಿಬಂದಿತ್ತು.

ವರದಿಗೆ ಸ್ವಾಗತ: ಪರಿಷ್ಕೃತ ಸಮಗ್ರ ಯೋಜನಾ ವರದಿ ಸ್ವಾಗತಾರ್ಹ. ಇದರಿಂದ ತ್ವರಿತ ಗತಿಯಲ್ಲಿ ಯೋಜನೆ ಅನುಷ್ಟಾನಗೊಳ್ಳಲಿದೆ. ಕೇವಲ ಒಂದು ಮಾರ್ಗಕ್ಕೆ ಕತ್ತರಿ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನೂ ಕೈಗೆತ್ತಿಕೊಳ್ಳಲು ಅವಕಾಶ ಇರುತ್ತದೆ. ಕೇವಲ ಎರಡೂವರೆ ತಿಂಗಳಲ್ಲಿ ವರದಿ ಸಿದ್ಧಪಡಿಸುವಲ್ಲಿ ಕೆ-ರೈಡ್‌ ಮತ್ತು ರೈಟ್ಸ್‌ ಯಶಸ್ವಿಯಾಗಿದೆ. ಇದನ್ನು ಆದಷ್ಟು ಬೇಗ ರೈಲ್ವೆ ಮಂಡಳಿಗೆ ಕಳುಹಿಸಿ, ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರಜಾರಾಗ್‌ ಸಂಸ್ಥೆ ಸದಸ್ಯ ಸಂಜೀವ್‌ ದ್ಯಾಮಣ್ಣವರ ತಿಳಿಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ಸಂಪರ್ಕ:

ಉಪನಗರ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್‌ಆರ್‌)ನಿಂದ ದೇವನಹಳ್ಳಿ ಮಾರ್ಗದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ದೇವನಹಳ್ಳಿ ಬಳಿ ಇರುವ ರೈಲು ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ 5.5 ಕಿ.ಮೀ. ಉದ್ದ ರೈಲು ಮಾರ್ಗ ನಿರ್ಮಿಸಲಾಗುವುದು. ಇದು 0.5 ಕಿ.ಮೀ. ಉದ್ದದ ಎತ್ತರಿಸಿದ ರೈಲು ನಿಲ್ದಾಣವನ್ನೂ ಒಳಗೊಂಡಿರಲಿದೆ. 251.90 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಅಂದಾಜು 15.96 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next