Advertisement

ಹೆದ್ದಾರಿ ಪಕ್ಕ ರೆಸಾರ್ಟ್‌ ನಿರ್ಮಾಣಕ್ಕೆ ಸಬ್ಸಿಡಿ

10:11 AM Dec 16, 2019 | mahesh |

ಬೆಂಗಳೂರು: ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಎರಡೂ ಬದಿ ಹೊಟೇಲ್‌ ಸೇರಿದಂತೆ ಪ್ರವಾಸಿಗರಿಗೆ ಪೂರಕವಾದ ಸೌಲಭ್ಯ ನಿರ್ಮಿಸಲು ಮುಂದೆ ಬರುವವರಿಗೆ ವಿಶೇಷ ಸಬ್ಸಿಡಿ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

Advertisement

ರಾಜ್ಯಾದ್ಯಂತ ಪ್ರವಾಸಿ ತಾಣಗಳಿಗೆ ಸಂಪರ್ಕ
ಕಲ್ಪಿಸುವ ಸುಮಾರು 4,800 ಕಿ.ಮೀ. ಹೆದ್ದಾರಿ ಯನ್ನು ಗುರುತಿಸಲಾಗಿದೆ. ಆ ಹೆದ್ದಾರಿಗಳಿಂದ 2-3 ಕಿ.ಮೀ. ಆಸುಪಾಸಿನಲ್ಲಿ ಪೆಟ್ರೋಲ್‌ ಬಂಕ್‌ಗಳ ಮಾದರಿಯಲ್ಲಿ ಹೊಟೇಲ್‌, ರೆಸಾರ್ಟ್‌ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಆಯಾ ಮಾರ್ಗದಲ್ಲಿ ಭೇಟಿ ನೀಡುವ ಪ್ರವಾಸಿ ವರ್ಗಕ್ಕೆ ಅನುಗುಣವಾಗಿ ಈ ಸೌಕರ್ಯಗಳು ಸಿಗಲಿವೆ. ಅವುಗಳ ನಿರ್ಮಾಣಕ್ಕೆ ಮುಂದೆ ಬರುವವರಿಗೆ ಇಲಾಖೆಯಿಂದ ಸಬ್ಸಿಡಿ ನೀಡ ಲಾಗುವುದು ಎಂದಿದ್ದಾರೆ.

“ಉದಯವಾಣಿ’ ಕಚೇರಿಗೆ ಶನಿವಾರ ಭೇಟಿ ನೀಡಿ ಪ್ರವಾಸೋದ್ಯಮ ಅಭಿವೃದ್ಧಿಯ ರೂಪುರೇಷೆಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿದ ಅವರು, ಹೆದ್ದಾರಿ ಪಕ್ಕದಲ್ಲಿ ಜಾಗ ಇರುವವರಿಗೆ ಇದು ಅನ್ವಯ ಆಗಲಿದ್ದು, ಕನಿಷ್ಠ 10 ಲಕ್ಷ ರೂ.ಗಳಿಂದ ಗರಿಷ್ಠ ಒಂದೂವರೆ ಕೋಟಿ ರೂ.ವರೆಗೂ ಸಬ್ಸಿಡಿ ನೀಡಲಾಗುವುದು. ಪ್ರಸ್ತುತ ಬರೀ ಬೆಂಗಳೂರಿನಲ್ಲಿ ಮಾತ್ರ ಹೀಗೆ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದೂ ತಿಳಿಸಿದರು. ಜತೆಗೆ ಸದ್ಯಕ್ಕೆ ಪ್ರವಾಸಿ ವಾಹನಗಳಿಗೆ ಸಬ್ಸಿಡಿ ಇದೆ. ಇದನ್ನು ಪ್ರವಾಸಿಗರು, ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ಚಟುವಟಿಕೆಗಳಿಗೂ ವಿಸ್ತರಿಸುವ ಯೋಚನೆ ಇದೆ. ಉದಾಹರಣೆಗೆ, ಮೊಬೈಲ್‌ ಕ್ಯಾಂಟೀನ್‌, ಮೊಬೈಲ್‌ ಶೌಚಾಲಯ, ಜಲ ಸಾಹಸ ಕ್ರೀಡೆಗಳಿಗೆ ಸಂಬಂಧಿಸಿದ ಉಪಕರಣಗಳ ಖರೀದಿಗೂ ಸಬ್ಸಿಡಿ ನೀಡಲಾಗುವುದು. ಹೀಗೆ ಪ್ರವಾಸೋದ್ಯಮಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗುವ ಎಲ್ಲ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು.

ಸಮುದಾಯ ಕೇಂದ್ರ
ಇದಲ್ಲದೆ ಧರ್ಮಸ್ಥಳ, ಪಂಡರೀಪುರ, ಸವದತ್ತಿ ಕ್ಷೇತ್ರ ಸೇರಿದಂತೆ ರಾಜ್ಯದ ನಾನಾ ಧಾರ್ಮಿಕ ಸ್ಥಳಗಳಿಗೆ ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಅವರ ಅನುಕೂಲಕ್ಕಾಗಿ ಸಮುದಾಯ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ. ಇದರಿಂದ ಋತುವಿನಲ್ಲಿ ಭಕ್ತರು ಅಲ್ಲಿ ವಾಸ್ತವ್ಯ ಹೂಡಬಹುದು. ಉಳಿದ ಸಂದರ್ಭಗಳಲ್ಲಿ ಆ ಕೇಂದ್ರಗಳನ್ನು ಮದುವೆ ಮತ್ತಿತರ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಬಹುದು. ಇದರಿಂದ ಆದಾಯವೂ ಬರುತ್ತದೆ. ಈ ಸಂಬಂಧ ಸ್ಥಳೀಯರು ಮತ್ತು ಮುಜರಾಯಿ ಇಲಾಖೆಯ ನೆರವು ಅತ್ಯವಶ್ಯಕ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಅವುಗಳಿಗೆ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಿ ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಈಗ ಪ್ರವಾಸೋದ್ಯಮದ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ನೀತಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಜತೆಗೆ ಪಶ್ಚಿಮ ಘಟ್ಟಕ್ಕೆ ಮತ್ತು ಕರಾವಳಿ ಹಾಗೂ ಪಾರಂಪರಿಕ ಕಟ್ಟಡಗಳಿಗೂ ನೀತಿಗಳನ್ನು ತರುವ ಚಿಂತನೆಯಿದೆ. ಅಲ್ಲದೆ ಜಲಸಂಪನ್ಮೂಲ, ಮುಜರಾಯಿ, ಅರಣ್ಯ, ಪ್ರವಾಸೋದ್ಯಮ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಉದ್ಯಮಿಗಳಿಗೆ ಅಗತ್ಯ ಅನುಮತಿಗಳಿಗೆ ಏಕಗವಾಕ್ಷಿ ಪದ್ಧತಿ ತರಲಾಗುವುದು ಎಂದರು.

Advertisement

ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ?
ಜಾಗತಿಕ ಹೂಡಿಕೆದಾರರ ಸಮಾವೇಶದ ಮಾದರಿಯಲ್ಲೇ ಶೀಘ್ರದಲ್ಲೇ ವಿಶ್ವ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಸಚಿವ ಸಿ.ಟಿ. ರವಿ ತಿಳಿಸಿದರು. ಈ ಸಮಾ ವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಗಳನ್ನು ಆಹ್ವಾನಿಸಲಾಗುವುದು. ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ, ಹೂಡಿಕೆದಾರರ ಆಕರ್ಷಣೆಗೆ ಇದು ವೇದಿಕೆ ಆಗಲಿದೆ ಎಂದ ಅವರು, ಇದಕ್ಕೂ ಮುನ್ನ ಡಿ. 18 ಮತ್ತು 19ರಂದು ಪ್ರವಾಸೋದ್ಯಮ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹಿಂದಿನ ಪ್ರವಾಸೋದ್ಯಮ ಸಚಿವರು, ಇದೇ ಇಲಾಖೆಯಲ್ಲಿ ಸತತ ಎರಡು ವರ್ಷಗಳಿಗಿಂತ ಹೆಚ್ಚು ಅವಧಿ ಕಾರ್ಯನಿರ್ವಹಿಸಿದವರು, ಟ್ರಾವೆಲರ್, ಬ್ಲಾಗರ್ ಜತೆ ಸಂವಾದ ನಡೆಯಲಿದೆ ಎಂದರು.

ಶೇ. 23 ಜಿಎಸ್‌ಡಿಪಿ ಗುರಿ
ಪ್ರಸ್ತುತ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ (ಜಿಎಸ್‌ಡಿಪಿ)ಯಲ್ಲಿ ಪ್ರವಾಸೋದ್ಯಮದ ಪಾಲು ಶೇ. 14.5ರಷ್ಟಿದ್ದು, ಇದನ್ನು ಶೇ. 20ರಿಂದ 23ಕ್ಕೆ ಹೆಚ್ಚಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಮುಂದಿನ ಮೂರೂವರೆ ವರ್ಷಗಳಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
 320 ಕಿ.ಮೀ. ಕರಾವಳಿ ಮಾರ್ಗ
 5 ರಾಷ್ಟ್ರೀಯ ಉದ್ಯಾನಗಳು
 30 ವನ್ಯಜೀವಿಗಳ ತಾಣ
 40 ಜಲಪಾತಗಳು
 17 ಗಿರಿಶ್ರೇಣಿಗಳು
 1,453 ಭಾರತೀಯ ಪುರಾತತ್ವ ಇಲಾಖೆ ಅಡಿ ಬರುವ ಸ್ಮಾರಕಗಳು

ಕಂಬಳಕ್ಕೆ ಹೈಟೆಕ್‌ ಸ್ಪರ್ಶ?
ಕರಾವಳಿಯ ಪ್ರಮುಖ ದೇಶೀಯ ಕ್ರೀಡೆ ಕಂಬಳ, ಉತ್ತರ ಕರ್ನಾಟಕದ ಎತ್ತಿನ ಬಂಡಿ ಸ್ಪರ್ಧೆ, ಜಾನಪದ ಜಾತ್ರೆ, ದಸರಾದಂತಹ ಉತ್ಸವಗಳಿಗೆ ಮುಂದಿನ ದಿನಗಳಲ್ಲಿ ಹೈಟೆಕ್‌ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ. ಹಲವಾರು ವರ್ಷಗಳಿಂದ ಈ ಉತ್ಸವಗಳು ನಡೆಯುತ್ತಿವೆ. ಆದರೆ ಅವುಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಆಗುತ್ತಿಲ್ಲ. ಬೆಂಗಳೂರಿನಲ್ಲೇ 63 ದೇಶಗಳ ಸಾವಿರಾರು ಜನ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನೇ ರಾಯಭಾರಿಗಳನ್ನಾಗಿ ರೂಪಿಸಿ, ಆಯಾ ದೇಶಗಳಿಗೆ ಈ ಉತ್ಸವ ವೈಭವವನ್ನು ಪರಿಚಯಿಸಲಾಗುವುದು. ಆ ಮೂಲಕ ಇಲ್ಲಿಗೆ ವಿದೇಶಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತರುವ ಕೆಲಸ ಆಗಬೇಕಿದೆ ಎಂದು ಸಚಿವ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next