Advertisement

ಸುಬ್ರಹ್ಮಣ್ಯ: ನೆರೆ ಏರಿಳಿತ 

12:45 PM Aug 18, 2018 | |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಲ್ಲಿ ಮಳೆ ಮುಂದುವರೆದಿದೆ. ನದಿಮೂಲಗಳಲ್ಲಿ ನೆರೆ ಏರಿಳಿತವಾಗುತ್ತಿದೆ. ಕುಮಾರಧಾರ ನದಿಯಲ್ಲಿ ನೆರೆ ಶುಕ್ರವಾರ ಕೊಂಚ ಇಳಿದಿತ್ತು. ಸುಬ್ರಹ್ಮಣ್ಯ-ಮಂಜೇಶ್ವರ ಸೇತುವೆ ಮುಳುಗಡೆ ಸ್ಥಿತಿಯಲ್ಲಿತ್ತು.

Advertisement

ನೆರೆ ಸಂತ್ರಸ್ತ ಕುಲ್ಕುಂದ ಕಾಲನಿ, ಕುದುರೆಮಜಲು, ಬೀಡಿನಗದ್ದೆ, ನೂಚಿಲಬೈಲು ಪರಿಸರದ ಸಂತ್ರಸ್ಥರು ಕುಲ್ಕುಂದ ಪರಿಹಾರ ಕೇಂದ್ರದಲ್ಲಿ ಮತ್ತು ಕುಮಾರಧಾರಾ, ದೋಣಿಮನೆ ಪರಿಸರದವರು ದೋಣಿಮಕ್ಕಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದಾರೆ. ಎರಡು ದಿನಗಳಿಂದ ಈ ಎರಡು ಕೇಂದ್ರಗಳಿಗೆ ದೇಗುಲದಿಂದ ಊಟ ಮತ್ತು ಉಪಾಹಾರವನ್ನು ಪೂರೈಸಲಾಗುತ್ತಿದೆ.

ಶುಕ್ರವಾರ ಪರಿಹಾರ ಕೇಂದ್ರಗಳ ನೆರೆ ಸಂತ್ರಸ್ತರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಪಂಜ ಮತ್ತು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆರೋಗ್ಯ ಕಾರ್ಯಕರ್ತೆಯರು ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.

ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಬಾಳುಗೋಡು, ಐನಕಿದು, ಗುತ್ತಿಗಾರು, ಮಡಪ್ಪಾಡಿ, ದೇವಚಳ್ಳ, ನಾಲ್ಕೂರು, ಕಮಿಲ, ಪಂಜ, ಬಳ್ಪ, ಯೇನೆಕಲ್ಲು ಈ ಭಾಗಗಳಲ್ಲಿ ಮಳೆ ಮುಂದುವರೆದಿದ್ದು, ನದಿ ಪಾತ್ರದ ಪ್ರದೇಶಗಳಲ್ಲಿ ನೆರೆ ಇನ್ನು ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ನೆರೆ ಸಂತ್ರಸ್ಥ ಸ್ಥಳಗಳಿಗೆ ಶುಕ್ರವಾರ ತಹಶೀಲ್ದಾರ್‌ ಹಾಗೂ ವಿಪತ್ತು ನಿರ್ವಹಣೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ತುರ್ತು ಅವಶ್ಯಕತೆಗಳ ಕಡೆಗೆ ಗಮನಹರಿಸಿದರು.

ಮಳೆ ಮುಂದುವರೆದಿದ್ದು ಭೂಕುಸಿತ, ಮನೆ ಕುಸಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೃಷಿಕರ ತೋಟಗಳು ಜಲಾವೃತವಾಗಿದ್ದು, ಭಾರೀ ನಷ್ಟ ಸಂಭವಿಸಿದೆ. ಶಿರಾಡಿ ಘಾಟಿ ಪ್ರದೇಶ ಹಾಗೂ ಪುಷ್ಪಗಿರಿ ಬೆಟ್ಟ ಭಾಗದಲ್ಲಿ ಭೂಕುಸಿತ ಉಂಟಾಗಿದೆ. ಕುಮಾರಧಾರಾ ಸಹಿತ ಈ ಭಾಗದ ಎಲ್ಲ ನದಿಗಳು ಕೆಸರು ಮಿಶ್ರಿತ ಕೆಂಬಣ್ಣದ ನೀರಿನಿಂದ ಹರಿಯುತ್ತಿವೆ. ನೆರೆ ಆವರಿಸಿದ ಸೇತುವೆ ಹಾಗೂ ರಸ್ತೆಗಳ ಮೇಲೆ ಭಾರಿ ಪ್ರಮಾಣದ ಕೆಸರು ಸಂಗ್ರಹಗೊಂಡಿದೆ.

Advertisement

ಕುಸಿಯುತ್ತಲೇ ಇದೆ ಗುಡ್ಡ, ಮನೆ
ಕಲ್ಮಕಾರು ಎಸ್ಟೇಟ್‌ ಬಳಿಯ ಗುಳಿಕಕಾನ ಕಾಲನಿ ಬಳಿಯ ಗುಡ್ಡದಲ್ಲಿ ಗುಡ್ಡ ಮತ್ತೆ ಮತ್ತೆ ಕುಸಿಯುತ್ತಲೇ ಇದೆ. ತಳಭಾಗದ ಜನವಸತಿ ಪ್ರದೇಶಗಳ ಜನರು ಆತಂಕದಲ್ಲಿದ್ದಾರೆ. ಗುಡ್ಡ, ಕಾಡುಗಳಲ್ಲಿ ಅಲೆಯುತ್ತಾ ಸುರಕ್ಷಿತ ಸ್ಥಳಗಳಿಗೆ ತೆರಳುವ ಪ್ರಯತ್ನ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯದ ಮಾನಾಡು, ಬಾಳುಗೋಡಿನ ಕೊತ್ನಡ್ಕ ಪರಿಸರದಲ್ಲಿ ಭೂಕುಸಿತವಾಗಿದೆ. ಮಡಪ್ಪಾಡಿ ನಾರಾಯಣ ಅವರ ಮನೆ ಹಾಗೂ ಎರಡು ಎಕರೆ ಕೃಷಿ ತೋಟ ಜರಿದು ಬಿದ್ದಿದೆ. ಪಕ್ಕದ ಯಶೋಧರ ಅವರ ಮನೆ ಜರಿದಿದೆ. ಸೇತುವೆಗಳು ಕೊಚ್ಚಿ ಹೋಗಿದೆ ಮತ್ತು ಶಿಥಿಲ ಸ್ಥಿತಿಗೆ ತಲುಪಿದೆ.

ಕತ್ತಲಲ್ಲಿ ಗ್ರಾಮಾಂತರ
ಕುಮಾರಧಾರಾ ನದಿ ತುಂಬಿ ಹರಿದು ವಿದ್ಯುತ್‌ ಸಬ್‌ ಸ್ಟೇಶನ್‌ಗೆ ಗುರುವಾರ ನೆರೆ ನೀರು ನುಗ್ಗಿದೆ. ಇದರಿಂದ ಈ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ಸುಬ್ರಹ್ಮಣ್ಯ ಸಹಿತ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಐನಕಿದು ಭಾಗಗಳಿಗೆ ವಿದ್ಯುತ್‌ ಪೂರೈಕೆಯಾಗದೆ ಕತ್ತಲಲ್ಲಿ ರಾತ್ರಿಗಳನ್ನು ಕಳೆಯುವಂತಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ದೇಗುಲದಿಂದ ಆಹಾರ ಪೂರೈಕೆ
ನೆರೆ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವತಿಯಿಂದ ಮೂರು ಹೊತ್ತು ಉಪಾಹಾರ, ಊಟ ಕಾಫಿ, ತಿಂಡಿ ಪೂರೈಸಲಾಗುತ್ತಿದೆ. ಸಂತ್ರಸ್ತರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ.

ಯುವಕರ ತಂಡದ ಸಾಥ್‌
ಸುಬ್ರಹ್ಮಣ್ಯ ಪರಿಸರದಲ್ಲಿ ನೆರೆ ಉಂಟಾಗಿ ಹಲವು ಕುಟುಂಬಗಳು ಸಂಷ್ಟಕ್ಕೆ ಸಿಲುಕಿದ ವೇಳೆ ಸುಬ್ರಹ್ಮಣ್ಯದ ಗ್ರಾ.ಪಂ. ಸದಸ್ಯ ರಾಜೇಶ್‌ ಅವರ ನೇತೃತ್ವದಲ್ಲಿ ಯುವಕರ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಸಂತ್ರಸ್ತರ ಮತ್ತು ಮನೆಯ ಸಾಮಗ್ರಿಗಳ ಸ್ಥಳಾಂತರ, ಊಟ, ಉಪಚಾರ ಇತ್ಯಾದಿ ಪೂರೈಕೆಯಲ್ಲಿ ಹಗಲು ರಾತ್ರಿ ಎನ್ನದೆ ತೊಡಗಿಸಿಕೊಂಡಿದ್ದಾರೆ. ಗುರುಪ್ರಸಾದ ಪಂಜ, ಪ್ರಶಾಂತ ಆಚಾರ್ಯ, ಹೇಮಂತ್‌, ದಿನೇಶ್‌ ಮೊಗ್ರ, ದೀಪಕ್‌ ನಂಬಿಯಾರ್‌, ನಿತಿನ್‌ ಭಟ್‌ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next