Advertisement

Subhramanya: ಹೆದ್ದಾರಿಗಳು ಜಲಾವೃತ, ಸ್ನಾನಘಟ್ಟ ಮುಳುಗಡೆ

01:10 AM Jul 31, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರ ಸೇರಿದಂತೆ ಪಶ್ಚಿಮ ಘಟ್ಟ ಮತ್ತು ಘಟ್ಟ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆಯಾಗಿದ್ದು, ಕುಕ್ಕೆ ಸಂಪರ್ಕದ ಮೂರು ಕಡೆಗಳಲ್ಲಿ ಹೆದ್ದಾರಿಗೆ ನೀರು ನುಗ್ಗಿ ಸಂಚಾರ ಕಡಿತಗೊಂಡ ಘಟನೆ ಸಂಭವಿಸಿದೆ.

Advertisement

ಕುಮಾರಧಾರದ ಸುಬ್ರಹ್ಮಣ್ಯ -ಪುತ್ತೂರು ಸಂಪರ್ಕ ರಸ್ತೆ ಮತ್ತು ಸೇತುವೆ ಸುಬ್ರಹ್ಮಣ್ಯದಲ್ಲಿ ನದಿ ನೀರು ನುಗ್ಗಿ ಹೆದ್ದಾರಿ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಸುಬ್ರಹ್ಮಣ್ಯ- ನೆಟ್ಟಣ-ಉಪ್ಪಿನಂಗಡಿ- ಮಂಗಳೂರು ಹೆದ್ದಾರಿಯ ಬಿಳಿನೆಲೆ ಗ್ರಾಮದ ಕೈಕಂಬದ ಕೋಟೆಸಾರ್‌ ಹೊಳೆಗೆ ಅಡ್ಡಲಾಗಿರುವ ಸೇತುವೆ ಮುಳುಗಡೆಗೊಂಡು ಸಂಚಾರ ಕಡಿತಗೊಂಡಿತು. ಪರಿಣಾಮ ಎರಡೂ ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಬ್ರಹ್ಮಣ್ಯ- ಕೈಕಂಬ-ಗುಂಡ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ಹೆದ್ದಾರಿಗೆ ಸಮೀಪದ ಹೊಳೆಯ ನೀರು ನುಗ್ಗಿ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತು.

ಸ್ನಾನಘಟ್ಟ ಮುಳುಗಡೆ
ನೆರೆ ನೀರಿಗೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಗೊಂಡಿದ್ದು, ನದಿ ತೀರದಲ್ಲಿರುವ ಶ್ರೀ ದೇವರ ಜಳಕದ ಕಟ್ಟೆ ಮುಳುಗಡೆಗೊಂಡಿದೆ. ಇಲ್ಲಿನ ಶೌಚಾಲಯ ಕಟ್ಟಡ ಮುಕ್ಕಾಲು ಭಾಗ ಮುಳುಗಡೆಗೊಂಡಿದೆ. ಡ್ರೆಸ್ಸಿಂಗ್‌ ಕೊಠಡಿಗಳು, ಲಗೇಜ್‌ ಕೊಠಡಿ, ಅಂಗಡಿಗಳು ಜಲಾವೃತಗೊಂಡಿವೆ.

ಮಳೆಗೆ ಶಾಲೆಗೆ ರಜೆ
ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಸಂಸ್ಥೆಗೆ ಗ್ರಾಮೀಣ ಭಾಗದ ದೂರ ದೂರುಗಳಿಂದ ವಿದ್ಯಾರ್ಥಿಗಳು ಆಗಮಿಸುವುದರಿಂದ ಮುಂಜಾಗ್ರತ ಕ್ರಮವಾಗಿ ಸುಬ್ರಹ್ಮಣ್ಯ ಪರಿಸರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಭಾರೀ ಮಳೆಯಿಂದಾಗಿ ಕುಕ್ಕೆ ದೇಗುಲದಲ್ಲಿ ಭಕ್ತರ ಸಂಖ್ಯೆ ವಿರಳಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next