Advertisement

ರಾಘಣ್ಣ ಬೆಳ್ಳಿ ಸಂಭ್ರಮ

10:03 AM Mar 30, 2019 | mahesh |

“ಅಮ್ಮನ ಮನೆ’ ಕಲಾವಿದನಾಗಿ ಮರುಹುಟ್ಟು ನೀಡಿದೆ. ಆ ಚಿತ್ರದ ಬಳಿಕ ಹಲವು ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿವೆ ಎನ್ನುವ ರಾಘಣ್ಣ, “ಆಡಿಸಿದಾತ’ ಚಿತ್ರದಲ್ಲೂ ಅಂಥದ್ದೇ ಒಂದು ವಿಶೇಷ ಪಾತ್ರವಿದೆ. ಇದರಲ್ಲೊಂದು ಸಂದೇಶವಿದೆ. ಮೌಲ್ಯವಿದೆ ಜೊತೆಗೆ ನೋಡುಗರಿಗೆ ಮನರಂಜನೆ ಕೂಡ ಇದೆ ಎನ್ನುತ್ತಾರೆ.

Advertisement

ಇತ್ತೀಚೆಗಷ್ಟೇ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ನಾಯಕ ನಟನಾಗಿ ಕಾಣಿಸಿಕೊಂಡಿದ್ದ “ಅಮ್ಮನ ಮನೆ’ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಸುಮಾರು ಹದಿಮೂರು ವರ್ಷಗಳ ನಂತರ ಬಣ್ಣ ಹಚ್ಚಿದ ರಾಘಣ್ಣ ಅವರ ಪಾತ್ರಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನ ಹಿಂದೆಯೇ ರಾಘಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ತ್ರಯಂಬಕಂ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆಯೇ ರಾಘವೇಂದ್ರ ರಾಜಕುಮಾರ್‌ “ಆಡಿಸಿದಾತ’ ಎನ್ನುವ ಮತ್ತೂಂದು ಚಿತ್ರಕ್ಕೆ ಬಣ್ಣ ಹಚ್ಚುವ ಸಿದ್ಧತೆಯಲ್ಲಿದ್ದಾರೆ.

ಹೌದು, ಅಭಿನಯದಲ್ಲಿ ಮತ್ತೆ ಸಕ್ರಿಯವಾಗಿರುವ ರಾಘಣ್ಣ ಸದ್ಯ ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಆಧಾರಿತ ಕಥೆಯನ್ನು ಹೊಂದಿರುವ “ಆಡಿಸಿದಾತ’ ಚಿತ್ರದಲ್ಲಿ ಡಿಫ‌ರೆಂಟ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ಸನ್ನಾಹದಲ್ಲಿದ್ದಾರೆ. ಇತ್ತೀಚೆಗೆ ರಾಘಣ್ಣನ ಯಂಗ್‌ ಅಂಡ್‌ ಸ್ಟೈಲಿಶ್‌ ಗೆಟಪ್‌ನಲ್ಲಿರುವ ಕೆಲ ಲುಕ್‌ಗಳು ಹೊರಬಿದ್ದಿವೆ. ಮೈಮೇಲೆ ಕಪ್ಪು ಕೋಟ್‌, ಕಣ್ಣಿಗೆ ಸೂಪರ್‌ ಸನ್‌ಗಾÉಸ್‌, ಕೊರಳಲ್ಲಿ ಡಾಲರ್‌ ಹಾಕಿ ಸೋಫಾ ಸೆಟ್‌ ಮೇಲೆ ಕೂತು ಖಡಕ್‌ ಪೋಸ್‌ ಕೊಟ್ಟಿದ್ದಾರೆ ರಾಘಣ್ಣ. ಅಂದಹಾಗೆ, “ಆಡಿಸಿದಾತ’ ರಾಘಣ್ಣ ಸಿನಿ ಕೆರಿಯರ್‌ನ 25ನೇ ಚಿತ್ರ. ಹಾಗಾದರೆ, ಈ ಚಿತ್ರದಲ್ಲಿ ರಾಘಣ್ಣ ಅವರ ಪಾತ್ರವೇನು ಎಂಬ ಪ್ರೇಕ್ಷಕರ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.

“ಆಡಿಸಿದಾತ’ ಚಿತ್ರದಲ್ಲಿ ರಾಘಣ್ಣ ಅವರದ್ದು ರಿಂಗ್‌ ಮಾಸ್ಟರ್‌ ಥರದ ಪಾತ್ರವಂತೆ. ಪ್ರತಿ ಸನ್ನಿವೇಶದಲ್ಲೂ ಒಂದೊಂದು ಸಂಗತಿಗಳನ್ನು ಇಟ್ಟುಕೊಂಡು ರಾಘಣ್ಣ ಅವರ ಪಾತ್ರ ಇತರ ಪಾತ್ರಗಳನ್ನು ಆಡಿಸಲಿದೆ­ಯಂತೆ. ಅಂತಿಮ­ವಾಗಿ ತಮ್ಮ ಪಾತ್ರವನ್ನು ಯಾರು ಆಡಿಸುತ್ತಾರೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್‌ ಎನ್ನುವುದು ರಾಘಣ್ಣ ಮಾತು.

“ಅಮ್ಮನ ಮನೆ’ ಕಲಾವಿದನಾಗಿ ಮರುಹುಟ್ಟು ನೀಡಿದೆ. ಆ ಚಿತ್ರದ ಬಳಿಕ ಹಲವು ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿವೆ ಎನ್ನುವ ರಾಘಣ್ಣ, “ಆಡಿಸಿದಾತ’ ಚಿತ್ರದಲ್ಲೂ ಅಂಥದ್ದೇ ಒಂದು ವಿಶೇಷ ಪಾತ್ರವಿದೆ. ಇದರಲ್ಲೊಂದು ಸಂದೇಶವಿದೆ. ಮೌಲ್ಯವಿದೆ ಜೊತೆಗೆ ನೋಡುಗರಿಗೆ ಮನರಂಜನೆ ಕೂಡ ಇದೆ ಎನ್ನುತ್ತಾರೆ.

Advertisement

ಇನ್ನು ಇತ್ತೀಚೆಗಷ್ಟೇ “ಆಡಿಸಿದಾತ’ ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಮುಹೂರ್ತ ಸಮಾರಂಭವನ್ನು ನೆರವೇರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಶೂಟಿಂಗ್‌ ನಡೆಸಲು ತಯಾರಿ ನಡೆಸಿಕೊಂಡಿರುವ ಈ ಚಿತ್ರಕ್ಕೆ ಫ‌ಣೀಶ್‌ ಭಾರದ್ವಾಜ್‌ ನಿರ್ದೇಶನವಿದೆ. ಈಗಾಗಲೇ ಚಿತ್ರ ತನ್ನ ಟೈಟಲ್‌, ಫ‌ಸ್ಟ್‌ಲುಕ್‌ ಮೂಲಕ ಒಂದಷ್ಟು ಕುತೂಹಲ ಮೂಡಿಸಿದ್ದು, ಚಿತ್ರದಲ್ಲಿ ರಾಘಣ್ಣ ಅವರಿಗೆ ನಾಯಕಿಯಾಗಿ ಯಾರು ಜೋಡಿಯಾಗಲಿದ್ದಾರೆ ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಬಿ.ಎಂ ಚೇತನ್‌ “ಆಡಿಸಿದಾತ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಉದಯ್‌ ಬಲ್ಲಾಳ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಬೆಳ್ಳಿ ಸಂಭ್ರಮದಲ್ಲಿರುವ ರಾಘಣ್ಣ ಬೆಳ್ಳಿತೆರೆಮೇಲೆ ಹೇಗೆ ಕಾಣಲಿದ್ದಾರೆ ಅನ್ನೋದನ್ನ ನೋಡಬೇಕಾದರೆ “ಆಡಿಸಿದಾತ’ ತೆರೆಮೇಲೆ ಬರುವವರೆಗೂ ಕಾಯಬೇಕು.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next