Advertisement

ವಿದ್ಯಾರ್ಥಿಗಳು,ಹೆತ್ತವರಿಂದ ಪ್ರತಿಭಟನೆ

06:00 AM Jul 31, 2018 | |

ಕುಂಬಳೆ: ಮಂಗಲ್ಪಾಡಿ ಸರಕಾರಿ ಹೈಯರ್‌ ಸೆಕೆಂಡರಿ ವಿದ್ಯಾಲಯದಲ್ಲಿ ಹೈಸ್ಕೂಲ್‌ ತರಗತಿಗೆ  ಕನ್ನಡ ಅರಿಯದ ಗಣಿತ ಅಧ್ಯಾಪಕರನ್ನು ನೇಮಕಗೊಳಿಸಿದ ವಿರುದ್ಧ ಶಾಲೆಯ ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು. ವಿದ್ಯಾರ್ಥಿಗಳ ರಕ್ಷಕರು ಶಾಲೆಗೆ ಆಗಮಿಸಿ ಪ್ರತಿಭಟನೆಯನ್ನು ಬೆಂಬಲಿಸಿದರು. 

Advertisement

ವಿದ್ಯಾಲಯದ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇರಳದ ಮಲಪ್ಪುರಂನಲ್ಲಿನ ಸುನಿಲ್‌ ಅವರನ್ನು  ಪಿ.ಎಸ್‌. ಸಿ. ರ್‍ಯಾಂಕ್‌  ಪಟ್ಟಿ ಮೂಲಕ ಆಯ್ಕೆ ಮಾಡಿ ಸಹಾಯಕ ನಿರ್ದೇಶಕರು ಅಧ್ಯಾಪಕರಾಗಿ ನೇಮಕ ಗೊಳಿಸಿದ್ದರು. ಅದರಂತೆ ಕಳೆದ ಜು. 23ರಂದು ಈ ಅಧ್ಯಾಪಕರು ತರಗತಿಗೆ ಹಾಜರಾಗಿದ್ದರು. ಆದರೆ ಇವರಿಗೆ ಕನ್ನಡದ ಗಂಧಗಾಳಿ ಅರಿಯದ ಕಾರಣ ವಿದ್ಯಾರ್ಥಿಗಳಿಗೆ ಕರಿಹಲಗೆಯಲ್ಲಿ  ಕೇವಲ ಬರೆದು ತೋರಿಸುತ್ತಿದ್ದರು. ಇವರ ಪಾಠ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಕಾಯಿಯಾಗಿದ್ದು. ವಿದ್ಯಾರ್ಥಿಗಳು ಇದನ್ನು ಪ್ರತಿಭಟಿಸಿ ಇದೀಗ ಹೋರಾಟ ರಂಗಕ್ಕೆ ಇಳಿದಿದ್ದಾರೆ. ಮಕ್ಕಳ ರಕ್ಷಕರು ಪ್ರತಿಭಟನೆಗೆ ಅಣಿಯಾಗಿ ಸೋಮವಾರ ಶಾಲೆಗೆ ಆಗಮಿಸಿ ಶಾಲೆಯ ಮುಖ್ಯಶಿಕ್ಷಕಿಯವರಲ್ಲಿ ಸಮಸ್ಯೆ ಯನ್ನು ತಿಳಿಸಿ ಬದಲಿ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು. ಇಲ್ಲದಿದ್ದಲ್ಲಿ  ಮುಂದೆ ಹೋರಾಟ ವನ್ನು ಉಗ್ರಗೊಳಿಸುವುದಾಗಿ ಎಚ್ಚರಿಸಿದರು.

ಫಲಕ  ಹಿಡಿದು ಪ್ರತಿಭಟನೆ  
ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ  ಮಲಯಾಳ ಅಧ್ಯಾಪಕರ ನೇಮಕ ಬೇಡ, ಕನ್ನಡಬಲ್ಲ ಗಣಿತ ಅಧ್ಯಾಪಕರನ್ನು ನೇಮಕಗೊಳಿಸಬೇಕು. ನಾವು ಭಾಷಾ ದ್ವೇಷಿಗಳಲ್ಲ.  ಕನ್ನಡ ಬಲ್ಲ ಅಧ್ಯಾಪಕರು ನಮಗೆ ಬೇಕೆಂಬುದಾಗಿ ಫಲಕ ಹಿಡಿದು ಪ್ರತಿಭಟನೆ ಸಲ್ಲಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ , ಮಂಗಲ್ಪಾಡಿ ಗ್ರಾಮ ಪಂಚಾಯತ್‌ ಸದಸ್ಯ  ಬಾಲಕೃಷ್ಣ ಅಂಬಾರ್‌ ಮಾತನಾಡಿ ಕಳೆದ ಒಂದು ವಾರದಿಂದ ಸಮಸ್ಯೆಯ ವಿರುದ್ದ ಪ್ರತಿಭಟನೆ ನಡೆಸುವುದಲ್ಲದೆ, ಶಿಕ್ಷಣ ಅಧಿಕಾರಿಗಳ  ಗಮನ ಸೆಳೆದರೂ ಈ ತನಕ ಸಮಸ್ಯೆಗೆ ಪರಿಹಾರ ಕಾಣದೆ ಇರುವುದರಿಂದ ಇನ್ನು ಒಂದು ದಿನದ ಗಡುವು ನೀಡಲಾಗುವುದು. ಇಲ್ಲದಿದ್ದಲ್ಲಿ  ಬುಧವಾರದಿಂದ ಹೋರಾಟವನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು ಎಂಬುದಾಗಿ ಎಚ್ಚರಿಸಿದರು.

ಪಿ.ಟಿ.ಎ. ಪದಾಧಿಕಾರಿಗಳು, ಎಂ.ಪಿ. ಟಿ.ಎ. ಅಧ್ಯಕ್ಷೆ ಯಶೋದಾ ಪಿ. ಶೆಟ್ಟಿ ಮತ್ತು ಸದಸ್ಯೆಯರು, ಕನ್ನಡ ಸಂಘಟನೆಗಳ ನಾಯಕರಾದ ಎಂ.ವಿ. ಮಹಾಲಿಂಗೇಶ್ವರ ಭಟ್‌, ಗುರುಪ್ರಸಾದ್‌ ಕೋಟೆಕಣಿ, ಎಂ. ವಿಜಯ ಕುಮಾರ್‌ ರೈ, ಶ್ರೀಕಾಂತ್‌ ಕಾಸರಗೋಡು ಮಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪತ್ರಕರ್ತರ ಭೇಟಿಗೆ ನಿರಾಕರಣೆ 
ಮಂಗಲ್ಪಾಡಿ ಸರಕಾರಿ ಹೈಯರ್‌ ಸೆಕೆಂಡರಿ ವಿದ್ಯಾಲಯಕ್ಕೆ ಹೊಸದಾಗಿ ನೇಮಕಗೊಂಡ ಕನ್ನಡ ಬಲ್ಲವನೆನಿಸಿಕೊಳ್ಳುವ ಮಲಯಾಳಿ ಗಣಿತ ಅಧ್ಯಾಪಕರು ಪತ್ರಕರ್ತರೊಂದಿಗೆ ಮಾತನಾಡಲು ನಿರಾಕರಿಸಿ ಮಕ್ಕಳಿಲ್ಲದ ತರಗತಿಯೊಳಗೆ ಕುಳಿತು ಜಾಣ್ಮೆಯಿಂದ ಜಾರಿಕೊಂಡರು. ಪರೀಕ್ಷೆಯ ವೇಳೆ ಮತ್ತು ಶಾಲೆಯಲ್ಲಿ ಈತ ತಾನು ಕನ್ನಡ ಬಲ್ಲವನೆಂಬುದಾಗಿಯೂ ಕರ್ನಾಟಕದ ಕೆಲವು ಕೇಂದ್ರೀಯ ವಿದ್ಯಾಲಯದಲ್ಲಿ  ಈ ಹಿಂದೆ ತರಗತಿ ನಡೆಸಿರುವುದಾಗಿಯೂ ತಿಳಿಸಿದ್ದಾರಂತೆ. ಒಂದನೇ ತರಗತಿಯಿಂದ 10ನೇ ತರಗತಿ ತನಕ ಕನ್ನಡದಲ್ಲೇ ಕಲಿತಲ್ಲಿ ಅರ್ಹತೆ ಹೊಂದಬೇಕಾದ ಈ ವ್ಯಕ್ತಿ ಎಸ್‌ಎಸ್‌ಎಲ್‌ಸಿ ತನಕ ಮಲಯಾಳ ಮಾತ್ರ ಕಲಿತಿರುವುದಾಗಿದೆ. ರಾಜಕೀಯ ಮತ್ತು ಕಾಂಚಾಣದ ಬಲದಿಂದ ಯಾವುದನ್ನೂ ಸಾಧಿಸಲು ಸಾಧ್ಯವೆಂಬುದಾಗಿ ಇಂತಹ ನೇಮಕದಿಂದ ತಿಳಿಯಬಹುದೆಂಬ ಬಲವಾದ ಆರೋಪ ಕೇಳಿ ಬರುತ್ತಿದೆ.

Advertisement

ಅಧ್ಯಾಪಕರ ನೇಮಕಾತಿಯಲ್ಲಿ  ಅವ್ಯವಹಾರ  
ಕನ್ನಡ ತರಗತಿಗಳಿಗೆ ಮಲಯಾಳ ಅಧ್ಯಾಪಕರ ನೇಮಕ ಇದೇನೂ  ಹೊಸದಲ್ಲ. ಕಳೆದ ಹಲವು ವರ್ಷಗಳ ಹಿಂದೆ ಸೂರಂಬೈಲ್‌, ಬಂಗ್ರಮಂಜೇಶ್ವರ ಮುಂತಾದ ಕಾಸರಗೋಡು ಜಿಲ್ಲೆಯ ಅಚ್ಚ ಕನ್ನಡ ಶಾಲೆಗಳಿಗೆ  ಕನ್ನಡ ಜ್ಞಾನವಿಲ್ಲದ ಮಲಯಾಳಿ ಅಧ್ಯಾಪಕರನ್ನು  ನೇಮಕಗೊಳಿಸಿದ ಸಂಪ್ರದಾಯದಂತೆ ಇದು ಮುಂದುವರಿಯುತ್ತಿದೆ. ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಮಲಯಾಳ ಅಧ್ಯಾಪಕರು ಕನ್ನಡ ಬಲ್ಲವರೆಂಬುದಾಗಿ ಭಾಷಾ ತಜ್ಞರು ಅಂಕ ಹಾಕುವ ಕನ್ನಡಿಗರಿಂದಲೇ ಈ ಪ್ರಮಾದ ನಡೆಯುತ್ತಿದೆ. ರಾಜಕೀಯ ಒತ್ತಡ ಮತ್ತು ಸಂಘಟನೆಯ  ಬೆಂಬಲದಿಂದಲೂ ಅಯೋಗ್ಯರ ನೇಮಕ ನಡೆಯುತ್ತಿರುವ ಆರೋಪ ಸತ್ಯವಾಗುತ್ತಿದೆ. ಭಾರೀ ಪ್ರತಿಭಟನೆಯ ಬಳಿಕ ಈ ಶಾಲೆಗಳಿಂದ ಆಯಾ ಬ್ಲಾಕ್‌ ರಿಸೋರ್ಸ್‌ ಸೆಂಟರಿಗೆ ವರ್ಗಾಯಿಸಿ ಇವರನ್ನು  ರಿಸೋರ್  ಪರ್ಸನ್‌ ಆಗಿ ನೇಮಕಗೊಳಿಸಿ ಇವರ ಸ್ಥಾನ ಭದ್ರಗೊಳಿಸಲಾಗುವುದು.

ಕನ್ನಡದ ಸಹೋದರ ಭಾಷೆ ಮಲಯಾಳವಾಗಿದ್ದು ಇದನ್ನು ಕನ್ನಡಿಗರು ಪ್ರೀತಿಸುತ್ತಿ ದ್ದಾರೆ.  ಆದರೆ ಕನ್ನಡವನ್ನು ಹಂತ ಹಂತವಾಗಿ ನಿರ್ನಾಮಗೊಳಿಸುವ ಇಲಾಖೆಯ ನಿಲುವನ್ನು ಯಾವುದೇ ಬೆಲೆ ತೆತ್ತಾದರೂ ವಿರೋಧಿಸುತ್ತೇವೆ.
– ಕೆ.ಭಾಸ್ಕರ್‌ 
ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕನ್ನಡ ಹೋರಾಟ ಸಮಿತಿ 

ಚಿತ್ರ: ಶ್ರೀಕಾಂತ್‌ ಕಾಸರಗೋಡು    

Advertisement

Udayavani is now on Telegram. Click here to join our channel and stay updated with the latest news.

Next