Advertisement

ಕೃಷಿ ಬಗ್ಗೆ ತಿಳಿಯಲು ರೈತರ ಮನೆಬಾಗಿಲಿಗೆ ಬಂದ ವಿದ್ಯಾರ್ಥಿಗಳು

10:04 AM Feb 16, 2020 | sudhir |

ಕೋಟ: ಕೃಷಿ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೈಜ ಕೃಷಿಯ ಅನುಭವವಾದ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಲಿಕೋತ್ಸವ ಎನ್ನುವ 21ದಿನಗಳ ವಿಶೇಷ ಗ್ರಾಮವಾಸ್ತವ್ಯ ಕಾರ್ಯಕ್ರವೊಂದು ನಡೆಯುತ್ತಿದೆ. ಈ ಮೂಲಕ ಕೃಷಿ ವಿಚಾರ ವಿನಿಮಯ ನಡೆಯುತ್ತದೆ.

Advertisement

ಕೃಷಿಯ ಸಮಗ್ರ ಪರಿಚಯ
ಈ 21ದಿನಗಳಲ್ಲಿ ರೈತರಿಗೆ ಶೂನ್ಯ ಬಂಡವಾಳದ ಕೃಷಿ, ಎರೆಹುಳು ಗೊಬ್ಬರ ತಯಾರಿ, ನೈಸರ್ಗಿಕ ಕೃಷಿ, ಜೀವಾಮೃತ, ಬೀಜಾಮೃತ ತಯಾರಿ ಹಾಗೂ ತೋಟಗಾರಿಕೆ ಕುರಿತು ಮಾಹಿತಿ, ಮೇಲ್ಛಾವಣಿ ಕೃಷಿ,ಯಾಂತ್ರೀಕರಣ, ಮಣ್ಣು ಪರೀಕ್ಷೆ, ಲಾಭದಾಯಕ ಕೃಷಿ ವಿಧಾನ.230. ಹೀಗೆ ಹತ್ತು ಹಲವು ವಿಚಾರಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಕೃಷಿ ಮೇಳದ ರೀತಿ ಸಮಾರೋಪ
ಶಿಬಿರದ ಕೊನೆಯ 21ನೇ ದಿನ ಸಮಾರೋಪದ ಮೂಲಕ ಕಲಿಕೋತ್ಸವವನ್ನು ಅಂತ್ಯಗೊಳಿಸಲಾಗುತ್ತದೆ. ಈ ಬಾರಿ ಶಿಬಿರದ ಸಮಾರೋಪ ಫೆ.14ರಂದು ಗುಂಡ್ಮಿ ಮೊಗವೀರ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವಿದ್ಯಾರ್ಥಿಗಳೇ ಸಾಕಷ್ಟು ಶ್ರಮವಹಿಸಿ ರಚಿಸಿದ ಶೂನ್ಯ ಬಂಡಾವಳದ ನೈಸರ್ಗಿಕ ಕೃಷಿ, ತೋಟಗಾರಿಕೆ, ಯಾಂತ್ರೀಕರಣ ಕೃಷಿ, ಗ್ರಾಮೀಣ ಭಾಗದ ಕೃಷಿ ಸಲಕರಣೆ ಮುಂತಾದ ವಿಚಾರದ ಕುರಿತು ಮಾದರಿ ವಸ್ತುಪ್ರದರ್ಶನ ಅತ್ಯಂತ ಆಕರ್ಷಕವಾಗಿ ಮೂಡಿಬಂತು. ಕೃಷಿಕರು ಬೆಳೆದ ವಿಶೇಷವಾದ ಹಣ್ಣು, ತರಕಾರಿಗಳನ್ನು ಪ್ರದರ್ಶಿಸಲಾಯಿತು. ವಿವಿಧ ಬಗೆಯ ದ್ವಿದಳ ಧಾನ್ಯ, ಭತ್ತ, ತೋಟಗಾರಿಕೆಯ ಬೀಜಗಳ ಪ್ರದರ್ಶನ ಗಮನಸೆಳೆದವು.

ಜನತಾ ಫಿಶ್‌ಮಿಲ್‌ನ ಆಗ್ರೋಪ್ರೊಡಕ್ಟ್ ಹಾಗೂ ಕೃಷಿ ಯಂತ್ರಗಳ ಮಳಿಗೆ ವಿಶೇಷವಾಗಿತ್ತು. ರೈತವಿಜ್ಞಾನಿಗಳೊಂದಿಗೆ ಸಂವಾದ, ಗ್ರಾಮೀಣ ಕೃಷಿ ಕಲಿಕೆ ಅನುಭವದ ಕುರಿತು ಮಾಹಿತಿ ವಿನಿಮಯ ಮುಂತಾದ ಕಾರ್ಯಕ್ರಮಗಳು ನಡೆದವು. ಭಾಗವಹಿಸಿದ ರೈತರು ಇದೊಂದು ಕೃಷಿ ಮೇಳದ ರೀತಿಯಲ್ಲಿ ಸಂಘಟಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರೊಂದಿಗೆ ನೇರ ಸಂಪರ್ಕ
ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ನೇರವಾಗಿ ರೈತರೊಂದಿಗೆ ಸಂಪರ್ಕ ಬೆಳೆಯಬೇಕು. ಹಲವಾರು ವಿಚಾರಗಳ ಅನುಭವವಾಗಬೇಕು. ಕೃಷಿ ವಿಜ್ಞಾನಿಗಳು ತಮ್ಮ ಜ್ಞಾನವನ್ನು ರೈತರಿಗೆ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜು ಈ ಕಾರ್ಯಕ್ರಮವನ್ನು ಕಳೆದ ಐದು ವರ್ಷದಿಂದ ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದೆ. ರೈತರು ಹಾಗೂ ವಿದ್ಯಾರ್ಥಿಗಳು ಶಿಬಿರದಿಂದ ಸಾಕಷ್ಟು ಖುಷಿಪಡುತ್ತಿದ್ದಾರೆ.
-ಡಾ| ಸುಧೀರ್‌ ಕಾಮತ್‌, ಪ್ರಾಂಶುಪಾಲರು ಡಿಪ್ಲೋಮಾ ಕಾಲೇಜು ಬ್ರಹ್ಮಾವರ

Advertisement

ಏನಿದು ಗ್ರಾಮೀಣ ಕಲಿಕೋತ್ಸವ ?
ಎನ್‌.ಎಸ್‌.ಎಸ್‌. ಮಾದರಿಯಲ್ಲೇ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಶಿಬಿರ ನಡೆಸಲಾಗುತ್ತದೆ. ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ 21ದಿನ ವಾಸ್ತವ್ಯವಿರುವ ವಿದ್ಯಾರ್ಥಿಗಳು ಆರಂಭದಲ್ಲಿ ಗ್ರಾಮದ ಮನೆ-ಮನೆಗೆ ತೆರಳಿ ರೈತರ ಕೃಷಿ ಕುರಿತು ಅಂಕಿ ಅಂಶ ಸಂಗ್ರಹಿಸುತ್ತಾರೆ. ಅನಂತರ ತರಕಾರಿ, ಧಾನ್ಯ ಮುಂತಾದ ಬೀಜಗಳನ್ನು ಅವರ ಜಮೀನಿನಲ್ಲಿ ನಾಟಿ ಮಾಡುವುದರ ಮೂಲಕ ಬೀಜ ನಾಟಿ, ನಿರ್ವಹಣೆಯ ಕುರಿತು ಮಾಹಿತಿ ನೀಡುತ್ತಾರೆ. ಊರಿನ ರೈತರನ್ನು ಸಭೆ ಸೇರಿಸಿ ಆಧುನಿಕ ಕೃಷಿ ಪದ್ಧತಿ, ಕೃಷಿ ಬೆಳೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತದೆ . ಪ್ರಗತಿಪರ ರೈತರನ್ನು ಭೇಟಿಯಾಗಿ ಅವರಿಂದ ಕೃಷಿ ಅನುಭವಗಳನ್ನು ಪಡೆಯುತ್ತಾರೆ. ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಕೃಷಿಯ ಕುರಿತು ಆಸಕ್ತಿ ಮೂಡಿಸಲಾಗುತ್ತದೆ.

ಬಿಡುವಿನ ಅವಧಿಯಲ್ಲಿ ಊರಿನ ಸ್ವತ್ಛತೆ, ಶ್ರಮದಾನದಲ್ಲೂ ತೊಡಗಿಸಿಕೊಳ್ಳುತ್ತಾರೆ. ಈ ರೀತಿ ರೈತರೊಂದಿಗೆ ನೇರವಾಗಿ ಸಂಪರ್ಕವಿರಿಸಿಕೊಂಡು ಕೃಷಿಯ ಕುರಿತು ಅಧ್ಯಯನ ನಡೆಸಲಾಗುತ್ತದೆ. ಈ ಬಾರಿ ಕೋಟ ಹೋಬಳಿಯ ಪಾರಂಪಳ್ಳಿ, ಗುಂಡ್ಮಿ, ಪಾಂಡೇಶ್ವರ, ಚಿತ್ರಪಾಡಿ, ಕಾರ್ಕಡ ಗ್ರಾಮದಲ್ಲಿ ಈ ಶಿಬಿರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next